Tuesday, June 2, 2009

ನೈಸ್ ಕತೆಗಾರರ ತಳಿ

ಸಾಹಿತ್ಯವನ್ನು ಅಕೆಡಿಮಿಕ್ ಆಗಿ ಓದದ, ಆದರೆ ಕೇವಲ ಆಸಕ್ತಿಯಿಂದ ಮಾತ್ರ ಸಾಹಿತ್ಯವನ್ನು ಓದಿ ಕತೆಗಳನ್ನು ಬರೀತಿರೋರ ಗುಂಪು ಅಧಿಕವಾಗುತ್ತಾ ಇರುವ ಈ ಕಾಲದಲ್ಲಿ ಕತೆಗಾರನಿಗೆ ಸಾಹಿತ್ಯವನ್ನು ಮತ್ತು ತನ್ನ ಪರಂಪರೆಯನ್ನು ಓದುವ ಜವಾಬ್ದಾರಿ ಎಷ್ಟಿರಬೇಕು? ನಮ್ಮನ್ನು ಯಾರ ಪರಂಪರೆಗೂ ಸೇರಿಸಬೇಡಿ ನಮ್ಮ ಪಾಡಿಗೆ ಬಿಟ್ಟುಬಿಡಿ ಎಂದು ಪರಿಪರಿಯಾಗಿ ಎಷ್ಟೇ ಕೇಳಿಕೊಂಡರೂ ಈ ಕನ್ನಡದಲ್ಲಿ ಬರೆಯುವ ಕ್ರಿಯೆಯೇ ಇವರನ್ನು ಒಂದು ಪರಂಪರೆಗೆ ಸೇರಿಸಿಬಿಟ್ಟಿದೆ. ಈ ಪರಂಪರೆ ಇಲ್ಲಿಂದಲೇ ಸುರುವಾಯಿತು ಎಂದು ಹೇಳಿಕೊಳ್ಳುವುದು ಹುಂಬತನವಾಗುತ್ತದೆಯಾದ್ದರಿಂದ ಒಂದು ಜೀನ್‌ಪೂಲ್‌ಗೆ ಸೇರಿಕೊಳ್ಳುವುದು ಅನಿವಾರ್ಯವಾಗಿಬಿಡುತ್ತದೆ. ಆದರೆ, ಕಾಲಕಾಲಕ್ಕೆ ತಕ್ಕಂತೆ ಈ ಜೀನ್‌ಪೂಲ್‌ನಲ್ಲಿ ಕಾಲಸಹಜವಾದ ಮ್ಯುಟೇಶನ್‌ಗಳಾಗುತ್ತಿವೆ ಎಂದು ಮಾತ್ರ ನಾವು ಹೇಳಿಕೊಳ್ಳಬಹುದು. ಇದು ಈಗ ಸೃಷ್ಟಿಯಾದ ಪರಂಪರೆ ಖಂಡಿತಾ ಅಲ್ಲ.

ಈ ಮ್ಯುಟೇಶನ್‌ನ ಹೊಸತಳಿಯೆಂದರೆ ಕುಂವೀಯವರ ಭಾಷೆಯಲ್ಲಿ ಹೇಳಬೇಕಾದರೆ ‘ನೈಸ್ ಕತೆಗಾರರು’ ಕೊಂಚ ಅತಿರೇಕದಲ್ಲಿ ಈ ತಳಿಯನ್ನು ವಿವರಿಸುವುದೆಂದರೆ ಡಿಸೈನರ್ ಪ್ಯಾಂಟು ಶರಟು ಹಾಕಿಕೊಂಡು, ಮಲ್ಟಿನ್ಯಾಷನಲ್ ಕಂಪೆನಿಗಳಲ್ಲಿ ಕೆಲಸ ಮಾಡುತ್ತಾ, ದೇಶ ವಿದೇಶ ಪ್ರವಾಸಮಾಡುತ್ತಾ, ಏರ್‍ಪೋರ್ಟಿನ ಲೌಂಜಿನಲ್ಲಿ, ಕೆಲವೊಮ್ಮೆ ವಿಮಾನದ ಪ್ರಯಾಣದ ನಡುವೆ ಇವರು ಕತೆ ಬರೆಯುವವರು. ವಿಮರ್ಶಕರ ಪರಿಭಾಷೆಯಲ್ಲಿ ಹೇಳಬೇಕೆಂದರೂ ‘ನಗರ ಕೇಂದ್ರಿತ’ಕತೆಗಾರರು ಅನ್ನುವ ಪದಪುಂಜವೂ ಇವರುಗಳನ್ನು ವಿವರಿಸಲು ಸಾಧ್ಯವಿಲ್ಲ. ಇವರ ರೂಪಕಗಳೂ ಭಾಷೆಗಳೂ ಹೊಸದು, ಕಥಾ ವಸ್ತುವಿನ ಆಯ್ಕೆ ಪ್ರಾಯಶಃ ಸಾಂಪ್ರದಾಯಿಕ ಅನ್ನೋ ಕನ್ನಡ ಕತೆಗಳಿಗಿಂತ ಬೇರೆ. ಧ್ಯಾನಸ್ಥ ಸ್ಥಿತಿ ಅಥವಾ ಬೌದ್ಧಿಕತೆ ಇಂತ ಪದಗಳ ಬಗ್ಗೆಯೇ ಬಹಳ ಜನಕ್ಕೆ ನಂಬಿಕೆಯಿಲ್ಲ.

ಇದೇ ಕಾರಣಕ್ಕೋ ಏನೋ,ಬೇರೆ ಯಾರಿಗೂ ಯಾವಕಾಲದಲ್ಲಿಯೂ ಇಲ್ಲದ ಒಂದು ಎಚ್ಚರಿಕೆ ಅವರಿಗೆ ಬೇಕಾಗುತ್ತದೇನೋ ಅಂತ ನನಗೆ ಅನುಮಾನ. ಸಾರಾಸಗಟಾಗಿ ಜನಪದ ಹಿನ್ನೆಲೆಯಲ್ಲಿರೋ ಅಥವಾ ಸಾಂಪ್ರದಾಯಿಕವಾಗಿ ಡಿಫೈನ್ ಆದ ಕನ್ನಡದ ಲೋಕದಲ್ಲಿ ನಡೆಯೋ ಕಥೆಗಳಿಗಿಂತ ಇವು ರೂಪಕಶಕ್ತಿಯಲ್ಲಿ, ಭಾಷೆಯಲ್ಲಿ ಮತ್ತು ವಿನ್ಯಾಸ, ನೇಯ್ಗೆಯಲ್ಲಿ ಬೇರೆಯಾದರೂ ಕೆಲಸ ಮಾಡುತ್ತಾ ಇರೋ ಮನಸ್ಸು ಮಾತ್ರ ಕನ್ನಡದ್ದು. ಆದರೆ ನಮ್ಮ ಮನಸ್ಸು ಕನ್ನಡದ್ದು ಅನ್ನುವುದನ್ನು ಅಗಾಗ ಇವರುಗಳು ಈ ಗೋಚಾರಗಳಲ್ಲಿ ಪುರಾವೆಗಳನ್ನೊದಗಿಸಿ ತೋರಿಸಬೆಕಾಗಿದೆ.

ನಮ್ಮಲ್ಲಿರೋ ಈ ನೈಸ್ ಕತೆಗಾರರ ಕೆಲವು ಸಾಮಾನ್ಯ ಗುಣಗಳನ್ನು ಗಮನಿಸಬಹುದು. ಅವರು ಎಲ್ಲೇ ಈಗ ಇರಲಿ, ಪ್ರಾಥಮಿಕ ಶಿಕ್ಷಣವನ್ನು ಕನ್ನಡದಲ್ಲಿ ಓದಿರುತ್ತಾರೆ. ಕನ್ನಡ ಪುಸ್ತಕಗಳನ್ನು ಓದಿಯೋ, ಅಥವಾ ಕನ್ನಡದ ನಾಟಕಗಳನ್ನು ನೋಡಿಯೋ ಶಾಲಾದಿನಗಳಲ್ಲಿ ಕನ್ನಡದ ಬಗ್ಗೆ ಆಸಕ್ತಿ ಬೆಳೆಸಿಕೊಂಡಿರುತ್ತಾರೆ. ಚಿಕ್ಕ ವಯಸ್ಸಿನಲ್ಲಿಯೇ ಕತೆ ಬರೆಯಲು ರೂಢಿಸಿಕೊಂಡವರು ಬಹಳಷ್ಟು ತಮ್ಮ ಹಿರಿಯ ಲೇಖಕರನ್ನು ನೋಡಿ ಅವರ ಶೈಲಿಗೆ ಮನಸೋತು ಅವರ ಹಾಗೆ ಬರೆಯಬೇಕು ಅಂತ ಒಂದು ಮಟ್ಟದಲ್ಲಾದರೂ ಅಂದುಕೊಂಡು ಬರವಣಿಗೆಯನ್ನು ಶುರುಮಾಡಿ ನಂತರ ಬರೆಯುತ್ತಾ ಹೋಗಿ ಅವರದೇ ಶೈಲಿಯನ್ನು ರೂಢಿಸಿಕೊಂಡವರು. ಮುಖ್ಯವಾಗಿ ಇಲ್ಲಿ ಕತೆ ಅಥವಾ ಬರವಣಿಗೆ ಇಲ್ಲಿ ಬಹಳಷ್ಟು ಜನರ ವೃತ್ತಿಯಲ್ಲ. (ಕೆಲವೊಬ್ಬರನ್ನು ಬಿಟ್ಟು) ಬಹಳಷ್ಟು ಜನ ಯಾವ ಯುನಿವರ್ಸಿಟಿಯಲ್ಲಿಯೂ ಇಲ್ಲ. ಅವರ ಕಥೆಗೆ ಬೇಕಾದ ವಸ್ತುವನ್ನು ತಮ್ಮ ಬಾಲ್ಯದಿಂದ ಅಥವಾ ತಾವು ಈಗ ಆಯ್ದುಕೊಂಡ ವೃತ್ತಿಬದುಕು ಅಥವಾ ಇಂದಿನ ಅವರ ಲೋಕದಿಂದ ಹೆಕ್ಕಿಕೊಂಡವರು.

ಇಲ್ಲಿನ ಈ ಮೆಟಮಾರ್ಫಸಿಸ್ ಕ್ರಿಯೆಯಲ್ಲಿ ಮೂರು ಗುಣಗಳನ್ನು ಗಮನಿಸಬಹುದು. ಒಂದು ಹೊಸಲೋಕದ ಕುರಿತು ಬೆರಗು- ಅಂದರೆ ಉತ್ತರಕನ್ನಡದ ಯಾವುದೋ ಸಣ್ಣ ಊರಲ್ಲಿಯೋ ಬೆಳೆದ ವ್ಯಕ್ತಿ ಬೆಂಗಳೂರು, ಬಾಂಬೆ, ಡೆಲ್ಲಿ, ಅಮೆರಿಕಾ, ಇಂಗ್ಲೆಂಡು ಮತ್ತು ಬೇರೆಕಡೆ ಹೋದಾಗ ಯಾವುದೇ ವ್ಯಕ್ತಿ ಎದುರಿಸೋ ಸಾಮಾನ್ಯ ಬೆರಗು, ಆ ಬೆರಗು ಹುಟ್ಟಿಸೋ ಕತೆಗಳು ಬಹಳ ಇಂಪ್ರೆಶನಿಸ್ಟಿಕ್. ಇವು ನಿಜವಾದ ಭಾವನೆಗಳಲ್ಲ. ಹೊಸಲೋಕದ ಬೆರಗನ್ನು ಮಾತ್ರ ಅಕ್ಷರಗಳಲ್ಲಿ ಹಿಡಿದಿಡೋ ಆಸೆಯಿಂದ ಕೆಲವು ಕತೆಗಳು ಬರೆಯಲ್ಪಡುತ್ತವೆ. ಅದೂ ನಾವು ಕೆಲಸ ಮಾಡೋ ಪ್ರಪಂಚ ನಾವು ಬೆಳೆದ ಪ್ರಪಂಚಕ್ಕಿಂತಾ ಸಂಪೂರ್ಣವಾಗಿ ಬೇರೆಯಾಗಿದ್ದಾಗ ( ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ) ಆಗ ಈ ಬೆರಗಿನಿಂದ ಹೊರಗೆ ಬರಲು ಬಹಳಷ್ಟ ಕಾಲವೇ ಬೇಕಾಗುತ್ತದೆ. ನಂತರದ ಘಟ್ಟ, ಎರಡೂ ಪ್ರಪಂಚವನ್ನು ತುಲನಾತ್ಮಕವಾಗಿನೋಡೋದು. ಈ ಕಳೆದೆರಡು ದಶಕಗಳ ಪಲ್ಲಟ ನಮ್ಮಲ್ಲಿ ಸೃಷ್ಟಿಸಿರೋ ಒಂದು ಸಾಂಸ್ಕೃತಿಕ ಮತ್ತು ಸೋಷಿಯಾಲಜಕಿಲ್ ಗ್ಯಾಪ್ ಒದಗಿಸಿರೋ ತುಲನಾತ್ಮಕ ಶಕ್ತಿ ಅಸಾಧ್ಯವಾದದ್ದು. ನಾವು ಊಟ ಮಾಡೋದರಿಂದ ಹಿಡಿದು ಮಾತನಾಡುವ, ನಿಂತುಕೊಳ್ಳುವ ಬಾಡಿ ಲಾಂಗ್ವೇಜುಗಳು ಕೂಡ ಇಪ್ಪತ್ತು ವರ್ಷಗಳ ಹಿಂದೆ ಇದ್ದುದಕ್ಕಿಂತ ಬಹಳ ಬೇರೆಯಾಗಿವೆ. ಬೇಕಾದರೆ ಈಗ ನಲವತ್ತರ ಸುಮಾರಿನಲ್ಲಿರೋರು ಹದಿನೈದು ವರ್ಷದ ಹಿಂದಿನ ಮದುವೆಯ ಫೋಟೋವನ್ನು ಒಮ್ಮೆ ನೋಡಿಕೊಂಡರೆ ನಾನು ಹೇಳುತ್ತಾ ಇರೋ ಈ ಪಲ್ಲಟ ಅಂದರೆ ಏನು ಎಂದು ಕೊಂಚ ಸ್ಪಷ್ಟವಾಗಬಹುದು. ಈ ನಮ್ಮಲ್ಲಾಗಿರುವ ವ್ಯಕ್ತಿತ್ವದ ಬದಲಾವಣೆ ನೈಜವಾಗಿ ಆಗಿದೆಯೋ ಅಥವಾ ನಮ್ಮ ಸುತ್ತಮುತ್ತಲಿನ ವಿದ್ಯಮಾನಗಳನ್ನು ನಾವು ನಮ್ಮ ಮೇಲೆ ಆರೋಪಿಸಿಕೊಳ್ಳುತ್ತಾ ಇದೀವಾ ಅನ್ನೋದು ಒಂದು ದೊಡ್ಡ ಪ್ರಶ್ನೆ. ಅಂದರೆ, ನಮ್ಮ ಸಮಾಜದ ಈ ಪಲ್ಲಟ ಅಥವಾ ಸಾಂಸ್ಕೃತಿಕ ಬದಲಾವಣೆ ವ್ಯಕ್ತಿಯಿಂದ ಆಗುತ್ತಾ ಇದೆಯೋ ಅಥವಾ ವೈಸ್ ವರ್ಸಾ ನೋ ಅನ್ನೋದು ಒಂದು ದೊಡ್ದ ಪ್ರಶ್ನೆ.

ಕೆಲವು ತಿಂಗಳ ಯಾರದೋ ಒಂದು ಮದುವೇಗೆ ಹೋಗಿದ್ದೆ. ಧಾರೆ ಇತರೇ ಕಾರ್ಯಕ್ರಮಗಳು ಮುಗಿದಮೇಲೆ ಹೆಣ್ಣು ಒಪ್ಪಿಸೋ ಕಾಯುಕ್ರಮದ ಸಂದರ್ಭಕ್ಕೂ ಒಂದಿಷ್ಟು ಜನ ರೆಡಿಯಾಗ್ತಾ ಇದ್ದರು. ನಾನು ಹೇಳೋದು ಸಿನಿಕವಾಗಿ ಕಾಣಬಹುದು ಆದರೆ ಆ ಕಾರ್ಯಕ್ರಮಕ್ಕೆ ಅಂತಲೇ ಜನ ಸಿದ್ಧರಾಗುತ್ತಿದ್ದರು. ಅಂದರೆ, ಒಂದಿಷ್ಟು ಜನ ಹೆಂಗಸರು ತಮ್ಮ ಮೇಕಪ್ ಅನ್ನು ಬಿಚ್ಚಿಟ್ಟು “ಈಗ ಅಳೋ ಕಾರ್ಯಕ್ರಮ’ ಎಂದಂದು ಹೆಣ್ಣು ಒಪ್ಪಿಸಿ ಅರ್ಧಗಂಟೆ ಅತ್ತು ನಂತರ ರಿಸೆಪಷನ್‌ಗೆ ರೆಡಿಯಾದರು. ಒಂದಿಷ್ಟು ಜನ ಹುಡುಗರು ಬೆಟ್ ಕಟ್ತಾ ನಿಂತಿದ್ದರು ‘ ನಾನು ಈಗ ಹೇಳ್ತೀನಿ ನೋಡು ಈ ಆಂಟಿ ಅಳ್ತಾರೆ’ ಎಂತ. ಅಲ್ಲದೆ ಇಂತಿಂಥ ಗಂಡಸರೂ ಅಳ್ತಾರೆ ಅನ್ನೋದನ್ನು ಹುಡುಗರು ಮುಂಚೇನೇ ಊಹಿಸಿಕೊಳ್ಳುತ್ತಾ ನಿಂತಿದ್ದರು. ಯಾರೋ ಬೆಟ್ ಕೂಡ ಕಟ್ಟಿದ್ದರಂತೆ. ಹೀಗೆ ಅಳೋ ಕ್ರಿಯೇನೂ ಪ್ರೋಗ್ರಾಮ್ಡ್ ಆದಾಗ ನಮ್ಮ ಸಂವೇದನೆಗಳು ನಮ್ಮದಾ ಎನ್ನುವುದು ಒಂದು ದೊಡ್ಡ ಪ್ರಶ್ನೆ.

ಈ ರೀತಿ ನಾವೇ ಬೆಳೆಸಿಕೊಂಡ ವ್ಯಕ್ತಿತ್ವದ ಆಚೆ ನಿಂತು ನಮ್ಮನ್ನೇ ನೋಡಿಕೊಳ್ಳುವುದು ಮತ್ತು ಆ ವ್ಯಕ್ತಿತ್ವದ ಪರಿಧಿಯ ಒಳಗೆ ನಿಂತುಕೊಂಡು ಅದೇ ಜಗತ್ತನ್ನು ನೋಡೋದು ಮತ್ತೆ ಹೊರಗಿನ ಜಗತ್ತನ್ನು ಮತ್ತೆ ಬಾಲ್ಯವನ್ನು ನೋಡೋದು ಪ್ರಾಯಶಃ ಮುಂದಿನ ಘಟ್ಟ. ಆಗ ಬಾಲ್ಯ ಬಹಳ ಸುಂದರವಾಗಿ ಕಾಣುತ್ತಾ ಹೋಗುತ್ತೆ. ನಾವು ನಿಂತಿರೋ ಜಗತ್ತು ನಮ್ಮದಲ್ಲ ಅಥವಾ ನಮ್ಮದಲ್ಲದ ಜಗತ್ತಿನಲ್ಲಿ ನಾವು ಸೇರಿಕೊಂಡಿದ್ದೇವೆ ಅನ್ನೋ ಅನುಮಾನ ಬಂದಾಗ ಇವು ನಮ್ಮ ಸದ್ಯದ ಬದುಕಿನ ಬಗ್ಗೆ ಸಿನಿಕತನ ಮತ್ತು ನಿರಾಕರಣೆ, ಬಾಲ್ಯದ ಬಗ್ಗೆ ಅತಿಯಾದ ಪ್ರೀತಿ, ಬಾಲ್ಯದಲ್ಲಿ ನಾವು ಕಂಡ ಪಾತ್ರಗಳನ್ನು ತೀರ ನಾಟಕೀಯ ಮಾಡೋದು, ಪ್ರಾಮಾಣಿಕತೆಯ ಅಂಚಿನವರೆಗೂ ಹೋಗಿ ನಿಂತು ಫಿಕ್ಶನಲ್ ಯಾವುದು ಯಾವುದಲ್ಲ ಅನ್ನೋದನ್ನು ನೋಡೋದು ಶುರುವಾಗುತ್ತೆ. ಈ ಎಲ್ಲಾ ಭಾವನೆಗಳ ಮಿಶ್ರಣ ಒಂದು ರೀತಿಯ ಹೊಸಾ ಸಂವೇದನೆಯನ್ನು ನಮ್ಮ ಈ ನೈಸ್ ಕತೆಗಾರರಲ್ಲಿ ಸೃಷ್ರಿಸಿದೆ. ಕೆಲವರು ಏನು ಮಾಡಿದರೂ ಬಾಲ್ಯ ಬಿಟ್ಟು ಹೊರಗೆ ಬರೋಲ್ಲ ಅಂತ ಹಟ ಮಾಡ್ತಾ ಅಲ್ಲಿಯೇ ನಿಂತಿದ್ದಾರೆ. ಇನ್ನು ಕೆಲವರು ನಾನು ನೋಡ್ತಾ ಇರೋ ಈ ವರ್ತಮಾನವೇ ಸತ್ಯ ಎಂದು ತಿಳಕೊಂಡು ವರ್ತಮಾನವನ್ನು ಮಾತ್ರ ಬರೆಯೋದು. ಒಟ್ಟು ಎಲ್ಲರೂ ತಮ್ಮ ತಮ್ಮ ಸಣ್ಣ ಕೀ ಹೋಲ್ ಗಳ ಮೂಲಕ ಪ್ರಪಂಚವನ್ನು ನೋಡಿದಾಗ ಒಂದು ವಿಭಿನ್ನ ಕಥಾಲೋಕ ಸೃಷ್ಟಿಯಾಗುತ್ತದೆ.

ಈ ನೈಸ್ ಕತೆಗಾರರನ್ನು ಕನ್ನಡ ವಿಮರ್ಶಾವಲಯ ನೋಡುತ್ತಾ ಇರುವ ದೃಷ್ಟಿ ಕೂಡ ಬಹಳ ಕುತೂಹಲಕರವಾಗಿದೆ. ನಮ್ಮ ಪಲ್ಲಟಗಳು ನೈಸ್ ಕತೆಗಾರರನ್ನು ಸೃಷ್ಟಿಸಿದಂತೆ ನೈಸ್ ವಿಮರ್ಶಕರ ತಳಿ ಇನ್ನೂ ಸೃಷ್ಟಿಯಾಗಿಲ್ಲ. ಅಥವಾ ಈ ಪಲ್ಲಟ, ಬೆರಗುಗಳು ನೇರವಾಗಿ ವಿಮರ್ಶಕರನ್ನು ತಟ್ಟಿಲ್ಲ. ಹಾಗಾಗಿ ವಿಮರ್ಶಕರು ಒಂದು ತಳಿ ಹಿಂದೆ ಉಳಿದುಬಿಟ್ಟಿದ್ದಾರೆ. ನಮ್ಮ ವಿಮರ್ಶಕರಿಗಿರುವ ವಿಮರ್ಶೆಯ ಪಾಂಡಿತ್ಯದ ಬಗ್ಗೆ ನಾನು ಬಹಳ ಗೌರವವನ್ನಿಟ್ಟುಕೊಂಡೇ ನಾನು ಈ ಮಾತು ಹೇಳುತ್ತಿದ್ದೇನೆ. ಆದರೆ, ನನಗೆ ಪ್ರಾಮಾಣಿಕವಾಗಿ ಅನ್ನಿಸಿರುವುದೇನೆಂದರೆ ಹೊಸ ಭಾಷೆ, ಹೊಸ ಕಥಾವಸ್ತು, ಹೊಸ ನೇಯ್ಗೆ ಮತ್ತು ಈ ಹೊಸ ವೇಗ ಎಲ್ಲವೂ ವಿಮರ್ಶಕರಿಗೂ ಕೂಡ ಹೊಸದು. ಸಾಂಪ್ರದಾಯಿಕ ಥೀಮುಗಳನ್ನು ಭಾಷೆಯಲ್ಲಿ ಮತ್ತು ವಸ್ತುವಿನಲ್ಲಿ ಮುರಿದಾಗ ವಿಮರ್ಶಕರಿಗೆ ಈ ತಳಿಯಜತೆ ಒಂದು ರೀತಿ ‘ಲವ್ ಹೇಟ್’ ಸಂಬಂಧ ಶುರುವಾಗಿದೆ. ಕೆಲವೊಮ್ಮೆ ಅವುಗಳ ಪರಿಯನ್ನು ಸುಖಿಸುತ್ತಾ, ಸ್ವಾದಿಸುತ್ತಾ ಕೆಲವೊಮ್ಮೆ ಆರಾಧಿಸುತ್ತ ಒಂದು ರೀತಿ ‘ಸ್ಟಾಕ್‌ಹೋಮ್ ಸಿಂಡ್ರೋಮ್’ ಗೆ ಬಲಿಯಾಗಿದ್ದಾರೆ, (Preacher becoming the choir)ಇಲ್ಲವೇ ಈ ಭಾಷೆಯ ಒಗರನ್ನು, ಒರಟುತನವನ್ನು ಮತ್ತು ಕಥಾವಸ್ತುವಿನ ನಿರ್ಭಿಡೆಯನ್ನು ಪೋಸ್ಟ್ ಮಾಡ್ರನ್ ಫೋಸಿನ ಡೋಂಗೀ ವಿನ್ಯಾಸಗಳು ಎಂದು ರಿಜೆಕ್ಟ್ ಮಾಡುತ್ತಾರೆ. ಎರಡೂ ತುದಿಗಳು ಈ ಬರಹಗಾರರಿಗೆ ನ್ಯಾಯವನ್ನೊದಗಿಸುವುದಿಲ್ಲ. ಇದಕ್ಕೆ ಕಾರಣ ಕೊಡುವುದು ಬಹಳ ಕಷ್ಟ. ವಿಮರ್ಶೆ ಅಕೆಡಿಮಿಕ್ ಆಗಿ, ಮಾಸ್ತರುಗಳಿಂದಲೇ ಮಾಡಲ್ಪಡಬೇಕು ಎಂದು ಈ ನೈಸ್ ಮಂದಿ ಕೈಕಟ್ಟಿ ಕೂತಿರುವುದೂ ಒಂದು ಮುಖ್ಯ ಕಾರಣವಿರಬಹುದು.

ಈ ಗೋಚಾರಫಲ ಎಂದರೆ ಏನು ಎಂದು ನನಗೆ ಇಂದು ಸರಿಯಾಗಿ ಅರ್ಥವಾಗಿಲ್ಲ. ಕೆಲವೊಂದು ಸಭೆಗಳಲ್ಲಿ ಕತೆಗಾರರ ಗುಂಪುಗಾರಿಕೆ ಮತ್ತು ಕೆಲವರನ್ನು ಮಾತ್ರ ಸಾಹಿತಿಗಳೆಂದು ಬಿಂಬಿಸಲು ವ್ಯವಸ್ಥಿತವಾದ ಪ್ರಯತ್ನ ನಡೆಯುತ್ತಿದೆ ಎನ್ನುವ ಆರೋಪವನ್ನು ನಾವು ಕೇಳುತ್ತೇವೆ. ಇದನ್ನು ಹೆಚ್ಚು ಗಿಂಜದೇ ಹೇಳುವುದೆಂದರೆ, ಬರೇ ಸಾಹಿತ್ಯಕ್ಷೇತ್ರದಲ್ಲಲ್ಲ, ಯಾವತ್ತೂ ಎಲ್ಲ ಕ್ಷೇತ್ರದಲ್ಲಿಯೂ ಸಮಾನಮನಸ್ಕರ ಒಂದು ಗುಂಪಿದ್ದೇ ಇರುತ್ತದೆ. ಇದು ಯಾವಾಗ ಗುಂಪುಗಾರಿಕೆಯಾಗುತ್ತದೆಯೋ ಆಗ ಗುಂಪಿನ ಶಕ್ತಿ ಅರ್ಥಹೀನವಾಗುತ್ತದೆ.

ಮತ್ತೆ ಮೊದಲ ಪ್ರಶ್ನೆಗೆ ಬಂದರೆ, ನಮ್ಮನ್ನು ಪರಂಪರೆಗೆ ಸೇರಿಸಬೇಡಿ ಎಂದು ನಾವು ಕೇಳುವುದು ಪ್ರಾಯಶಃ ಪರಂಪರೆಯ ಬಗೆಗಿರುವ ಅಜ್ಞಾನದಿಂದಲೇ ಇರಬಹುದು. ಹೆಚ್ಚು ಓದಿಕೊಂಡಿರದ ಕನ್ನಡದ ಹಿಂದಿನ ಲೇಖಕರ ಜತೆ ನಿಲ್ಲಿಸಿದಾಗ ಅಥವಾ ಇವರ ಪರಂಪರೆಯ ಲೇಖಕ ಎಂದು ಯಾರಾದರೂ ಹೇಳಿದಾಗ ‘ದಯವಿಟ್ಟು ನಮ್ಮ ಪಾಡಿಗೆ ನಮ್ಮನ್ನು ಬಿಟ್ಟಿಬಿಡಿ’ ಎಂದು ಹೇಳುವುದು ನಮ್ಮ ದೌರ್ಬಲ್ಯವನ್ನು ಸಮರ್ಥಿಸಿಕೊಳ್ಳಲು ಮಾತ್ರವೇ ಇದ್ದಿರಬಹುದು. ಆದರೆ, ಕನ್ನಡದಲ್ಲಿ ಬರೆಯುತ್ತಿರುವುದರಿಂದ ನಾವೆಲ್ಲರೂ ಒಂದು ಪರಂಪರೆಗೆ ಸೇರಿದ್ದೇವೆ, ಅನ್ನಿಸುತ್ತದೆ. ಅದರಲ್ಲಿ ಉಡಾಳನಾಗಿ ಉಳಿಯುತ್ತೇವೋ ಅಥವಾ ವಂಶವೃಕ್ಷದೊಳಗೆ ಹಸನಾದ ಚಿಗುರಾಗುತ್ತೇವೋ ಅನ್ನುವುದು ಮಾತ್ರ ನಮ್ಮ ಕೈಯಲ್ಲಿ ಇದೆ.

Tuesday, May 19, 2009

ಸಾಹಿತಿಗಳ ಚಿತ್ರ

ಮನೆಯ ಹಿಂದಿನ ಡೆಕ್ಕಿನ ಮೇಲೆ ನಿಲ್ಲುತ್ತೇನೆ. ಈ ಶರಟು ಸರಿಯಿಲ್ಲ, ಬದಲಿಸಿಕೊಂಡು ಬಾ ಎನ್ನುತ್ತಾಳೆ, ಮಗಳು. ಪುಸ್ತಕದ ಹಿಂಬದಿಯ ಹೊದಿಕೆಯ ಮೇಲೆ ಇರುವ ಚಿತ್ರವಾದರೆ ಅದು ಚೆನ್ನಾಗಿರಬೇಕು. ಯಾವುದೋ ಸಾಪ್ತಾಹಿಕಕ್ಕಲ್ಲವಾ, ಒಂದು ದಿನ ಇರೋದು ತಾನೇ. ಅದಕ್ಕೆ ಇಷ್ಟೊಂದು ಕಷ್ಟಯಾಕೆ?, ಬೇಗ ಮುಗಿಸಿ ಎಂದು ಹೆಂಡತಿ ಅವಸರ ಮಾಡುತ್ತಾಳೆ. ಬಕ್ಕತಲೆಯವರಿಗೆ ಪ್ರೊಫೈಲೇ ಚಂದ ಎಂದು ಮಗಳು ನಿಧಾನವಾಗಿ ಈಕಡೆ ತಿರುಗಿಸಿ ನಿಲ್ಲಿಸುತ್ತಾಳೆ. ಹೊರಗೆ ಬಿಸಿಲು ಚೆನ್ನಾಗಿದೆ. ಒಂದು ನಾಲ್ಕು ಐದು ಬೇರೆಬೇರೆ ಪೋಸಿನಲ್ಲಿ ತೆಗೆದುಬಿಡೋಣ ಎಂದು ಹೇಳಿ, ನಾಲ್ಕು ಫೋಟೋಗಳನ್ನು ತೆಗೆಯುತ್ತಾಳೆ. ಎಸ್ಸೆಲ್ಲಾರ್ ಇದ್ದಿದ್ದರೆ ಅದರ ಮಜಾನೇ ಬೇರೆ, ಏಯ್ಮ್ ಅಂಡ್ ಶೂಟ್‌ನ ಹಣೆಬರಹವೇ ಇಷ್ಟು ಎಂದು ತನಗೆ ಒಳ್ಳೆಯ ಕ್ಯಾಮೆರಾ ಕೊಡೆಸದಿದ್ದಕ್ಕೆ ನನ್ನನ್ನೇ ಮೂದಲಿಸುತ್ತಾಳೆ. ಬಿಸಿಲು ನನ್ನ ಹಣೆಯ ಮೇಲೆ ಬೆವರಹನಿಗಳನ್ನು ಪೋಣಿಸುತ್ತದೆ. ತೆಗೆದ ಫೋಟೋಗಳನ್ನು ತಾನೇ ನೋಡಿ ಸಮಾಧಾನವಾಗದೇ ಒಳಗೆ ಹೋಗಿ ಎರಡು ಜತೆ ಶರಟನ್ನು ತರುತ್ತಾಳೆ. ಬದಲಿಸಿ, ಬದಲಿಸಿ ಮತ್ತೆ ತೆಗೆಯುತ್ತಾಳೆ. ಫೋಟೋ ಸುಮಾರಾಗಿ ಬಂದಿದೆ, ಎಂದನಿಸುತ್ತದೆ, ನನಗೆ. ಮಗಳೇ ‘ಇದು ಸರಿಯಾಗಿದೆ.’ ಎಂದು ನಿರ್ಧರಿಸಿ ಅಪ್‌ಲೋಡ್ ಮಾಡುತ್ತಾಳೆ. ಅದನ್ನು ಕಳಿಸುತ್ತೇನೆ.

ಮಾರನೆಯ ದಿನ ಮ್ಯಾಗಜೀನಿನಿಂದ ಒಂದು ಇಮೈಲ್ ಬರುತ್ತದೆ. ಬಹಳ ವಿನಮ್ರವಾದ ಪತ್ರ ‘ಸರ್, ನೀವು ಅಮೆರಿಕಾದಲ್ಲಿರುವುದೇ ಈ ಫೋಟೋದಿಂದ ಗೊತ್ತಾಗುವುದಿಲ್ಲವಲ್ಲ ಸರ್. ಸ್ವಲ್ಪ ಅಮೆರಿಕಾದ ಬ್ಯಾಕ್‌ಗ್ರೌಂಡಿನಲ್ಲಿರುವ ಒಂದು ಫೋಟೋ ಕಳಿಸಿ’ ಎಂದಿದೆ. ಅಮೆರಿಕಾದ ಬ್ಯಾಕ್‌ಡ್ರಾಪೆಂದರೆ ಏನು ಎಂದು ಯಾವುದೋ ಕನ್ನಡದ ಇಂಟರ್ನೆಟ್ ಪೋರ್ಟಲನ್ನು ತೆಗೆದು ನೋಡುತ್ತೇನೆ. ಎಲ್ಲತರದ ಚಿತ್ರಗಳೂ ಕಾಣಿಸುತ್ತವೆ. ಒಬ್ಬಾತ ಸನ್‌ಗ್ಲಾಸಸ್ ಹಾಕಿಕೊಂಡಿದ್ದಾನೆ. ಇನ್ನೊಬ್ಬಾಕೆ ನಯಾಗಾರ ಜಲಪಾತದ ಮೈಡ್ ಆಫ್ ದ ಮಿಸ್ಟ್ ನಲ್ಲಿ ಒದ್ದೆಯಾಗದಂತೆ ರೈನ್‌ಕೋಟು ಗೌನುಗಳನ್ನು ಹಾಕಿಕೊಂಡು ಕೂತಿದ್ದಾಳೆ. ಅಪ್ಪ, ಅಮ್ಮ ಮಕ್ಕಳು ಮತ್ತು ನಾಯಿಮರಿಯ ಜತೆ ಯುನಿವರ್ಸಲ್ ಸ್ಟುಡಿಯೋದ ಮುಂದಿರುವ ಒಂದು ಫೋಟೋವನ್ನು ಇನ್ನೊಬ್ಬಾಕೆ ಕಳಿಸಿದ್ದಾಳೆ. ಸಿಯರ್ಸ್ ಟವರ್, ಎಂಪೈರ್ ಸ್ಟೇಟ್ ಬಿಲ್ದಿಂಗ್, ಗ್ರಾಂಡ್ ಕೆನ್ಯನ್, ಲಾಸ್ ವೆಗಾಸ್, ಇನ್ನೂ ಇತರೇ ಅಮೆರಿಕಾದ ಸ್ಮಾರಕಗಳು ಇಡೀ ಪೋರ್ಟಲ್ಲಿನಲ್ಲಿ ಕಾಣಿಸಿಕೊಂಡಿವೆ. ಜತೆಗೇ ಅವರು ಬರೆದ ಕವನಗಳು, ಪ್ರವಾಸದ ಅನುಭವಗಳು, ಕತೆ, ಅಂಕಣ ॒ಇತ್ಯಾದಿ.

ಇನ್ನೊಂದಿಷ್ಟು ಕಡೆ ಅಡ್ದಾಡಿದಾಗ ಕುಂವೀಯವರು ನ್ಯೂಯಾರ್ಕಿನ ಬೀದಿಯಲ್ಲಿ ನಿಂತಿರುವ ಫೋಟೋ ಕೂಡ ಕಾಣುತ್ತದೆ. ಜಯಂತ ಅಮೆರಿಕಾಕ್ಕೆ ಬಂದಾಗ ಒಂದು ಜ್ಯಾಕೆಟ್ಟನ್ನು ಹಾಕಿಕೊಂಡು ಅಥಿತಿಯೊಬ್ಬರ ಮನೆಯ ಲಾನಿನ ಮೇಲೆ ಕೂತಿರುವ ಫೋಟೊ ಕಾಣಿಸುತ್ತದೆ. ತಮ್ಮ ಬುಲ್ಗಾನಿನ್ ಗಡ್ಡದಿಂದ ಮಿಂಚುತ್ತಿರುವ ಜೋಗಿ, ಮೊಬೈಲನ್ನು ಕಿವಿಗೆ ಹಿಡಿದು ಯಾರದೋ ಜತೆ ಮಾತಾಡುತ್ತಿರುವ ವಸುಧೇಂದ್ರ, ಅಪರ್ಣಾರೊಂದಿಗೆ ಕುತ್ತಿಗೆಗೆ ಸ್ಕಾರ್ಫ್ ಹಾಕಿಕೊಂಡು ಯಾವುದೋ ಕೆತ್ತನೆಯ ಕಂಭದ ಮುಂದೆ ನಿಂತಿರುವ ವಸ್ತಾರೆ, ಮಂಕಿಕ್ಯಾಪಿನಲ್ಲಿ ಚೆಗುವಾರನ ತರ ಕಾಣುವ ದೇವನೂರು ಮಹದೇವ, ಉದ್ದಕೂದಲಿನ ಶ್ರೀರಾಮ್ ಎಲ್ಲರೂ ಕಾಣುತ್ತಾರೆ. ನನ್ನದೂ ಹೆಸರನ್ನು ಹಾಕಿ ಗೂಗಲ್ ಇಮೇಜಸ್‌ನಲ್ಲಿ ಹುಡುಕುತ್ತೇನೆ. ಒಂದೆರಡು ಫೋಟೋಗಳು ಕಾಣುತ್ತವೆ.

ಮನೆಯೊಳಗೆ ಬಂದು ಲ್ಯಾಪ್‌ಟಾಪಿನಲ್ಲಿ ಹುಡುಕುತ್ತೇನೆ. ಈ ಅಮೆರಿಕೆಯ ಬ್ಯಾಕ್‌ಡ್ರಾಪಿನಲ್ಲಿ ನಾನೊಬ್ಬನೇ ಇರುವ ಒಂದೂ ಫೋಟೋ ಕಾಣಿಸುವುದಿಲ್ಲ. ಯಾವುದೋ ಸಣ್ಣ ದ್ವೀಪಕ್ಕೆ ಹೋದಾಗ ಬರ್ಮ್ಯುಡಾ ಹಾಕಿಕೊಂಡು ಕಾಲಮೇಲೆ ಕಾಲು ಹಾಕಿಕೂತಿದ್ದ ಫೋಟೋವನ್ನು ಕಳಿಸುತ್ತೇನೆ. ಈ ಚಿತ್ರದ ಮುಖವನ್ನು ಮಾತ್ರ ಕತ್ತರಿಸಿ ಹಾಕಿ, ಬರ್ಮ್ಯುಡಾ ಬೇಡ ಎಂದು ರಿಪೋರ್ಟರನಿಗೆ ಬರೆದು ಹೇಳಿದ್ದೇನೆ. ಆದರೆ, ನನ್ನ ಇಡೀ ಫೋಟೋ ಪತ್ರಿಕೆಯಲ್ಲಿ ಪ್ರಕಟವಾಗುತ್ತದೆ. ಬರ್ಮ್ಯುಡಾ ಸಮೇತ ಫೋಟೋ ಪ್ರಕಟವಾದದ್ದಕ್ಕೆ ಅಷ್ಟೇನೂ ಬೇಜಾರಾಗಿಲ್ಲ.

ಆಸ್ಪತ್ರೆಯಲ್ಲಿ ನಾನು ಯಾವುದೋ ಒಂದು ಹೊಸ ಪ್ರೋಟೋಕಾಲನ್ನು ಮೊಟ್ಟಮೊದಲಿಗೆ ಉಪಯೋಗಿಸಿ ಐವತ್ಮೂರರ ಒಬ್ಬ ವ್ಯಕ್ತಿ ಬದುಕಿದ್ದಾನೆ. ಆತನ ಮೇಲೆ ಈ ಪ್ರೋಟೋಕಾಲನ್ನು ಉಪಯೋಗಿಸುವ ಧೈರ್ಯಮಾಡಿದ್ದಕ್ಕೆ ಮತ್ತು ಆತನ ಜೀವ ಉಳಿಸಿದಕ್ಕಾಗಿ ಸ್ಥಳೀಯ ಪತ್ರಿಕೆ ನನ್ನದೊಂದು ಸಣ್ಣ ಸಂದರ್ಶನ ಮಾಡಲು ನಿರ್ಧರಿಸಿದೆ. ‘Doctor’s perseverance saves local plumber’ ಎನ್ನುವ ಹೆಡ್‌ಲೈನಿನಡಿಯಲ್ಲಿ ನನ್ನಿಂದ ಉಳಕೊಂಡ ಆ ವ್ಯಕ್ತಿಯ ಫೋಟೋವನ್ನು ನನ್ನಕೂಡ ಪ್ರಕಟಿಸುವುದಕ್ಕಾಗಿ ಆ ಪತ್ರಿಕೆ ನಿರ್ಧರಿಸಿದೆ. ಆತನನ್ನೂ ಪತ್ರಿಕೆ ಸಂದರ್ಶಿಸುತ್ತದೆ. ಸಂದರ್ಶನದ ಮಧ್ಯೆ ಆತ ‘ಈ ಭಾರತೀಯ ಡಾಕ್ಟರುಗಳೇ ಹಾಗೆ, ಸುಲಭಕ್ಕೆ ಬಿಟ್ಟುಕೊಡುವುದಿಲ್ಲ. ನನಗೆ ನೆನಪಿದೆ. ನನಗೆ ಹಿಂದೊಮ್ಮೆ ಸರ್ಜರಿಯಾಗಿದ್ದಾಗ ನಾನು ಭಾರತೀಯ ಡಾಕ್ಟರೊಬ್ಬ ನನಗೆ ಕೇರ್ ಮಾಡುತ್ತಾ ಇದ್ದ. ಸಿಕ್ಕಾಪಟ್ಟೆ ಕಾಂಪ್ಲಿಕೇಟ್ ಆದಾಗ ಎಲ್ಲರೂ ಅಂದುಕೊಂಡಿದ್ದರು, ನಾನು ಸತ್ತೇ ಹೋಗುತ್ತೇನೆ ಎಂದು ಆದರೆ ನನ್ನನ್ನು ಆತ ಸಾಯಲಿಕ್ಕೆ ಬಿಡಲಿಲ್ಲ’ ಎನ್ನುತ್ತಾನೆ.

ಇದ್ದಕ್ಕಿದ್ದ ಹಾಗೆ ಆ ಸಂದರ್ಶಕನಿಗೆ ನನ್ನ ಭಾರತೀಯತೆಯನ್ನು ಬಿಂಬಿಸುವುದಕ್ಕೆ ನನ್ನ ಸುತ್ತ ಏನಾದರೂ ಭಾರತೀಯವಾದದ್ದು ಇದ್ದರೆ ಚೆನ್ನಾಗಿರುತ್ತದೆ ಎನಿಸುತ್ತದೆ. ನಾನು ಹೇಳುತ್ತೇನೆ. ‘ನನ್ನ ನೋಡಿದರೆ ಸಾಕು, ಯಾರು ಬೇಕಾದರೂ ಹೇಳಬಹುದು ನಾನು ಭಾರತೀಯ ಎಂದು.’ ಆದರೆ, ಆತ ಬಿಡುವುದಿಲ್ಲ. ‘ಡಾಕ್ಟರ್, ಭಾರತೀಯ, ನೇಪಲೀಸ್, ಪಾಕಿಸ್ತಾನಿ, ಕೆಲವೊಮ್ಮೆ ಮೆಕ್ಸಿಕನ್ನರು ಕೂಡ ಹೀಗೇ ಕಾಣುತ್ತಾರೆ’ ಎನ್ನುತ್ತಾನೆ, ನಮ್ಮ ಆಸ್ಪತ್ರೆಯಲ್ಲಿ ಭಾರತೀಯವಾಗಿರುವುದು ಏನೂ ಇಲ್ಲ. ಆತನಿಗೆ ಒಂದು ಐಡಿಯಾ ಇದ್ದಕ್ಕಿದ್ದ ಹಾಗೆ ಹೊಳೆಯುತ್ತದೆ. ನನ್ನ ಲ್ಯಾಪ್‌ಟಾಪಿನಲ್ಲಿರುವ ನನ್ನ ಫೋಟೋ ಆಲ್ಬಮ್ಮಿನಲ್ಲಿ ನಾನು ಶೆರ್ವಾನಿ ಹಾಕಿಕೊಂಡಿರುವ ನಾನು ಮತ್ತು ಸೀರೆಯುಟ್ಟಿಕೊಂಡಿರುವ ನನ್ನ ಹೆಂಡತಿಯ ಫೋಟೋವನ್ನು ಇಡೀ ಸ್ಕ್ರೀನಿನ ತುಂಬಾ ಹಾಕುತ್ತಾನೆ. ನನ್ನ ಬ್ಯಾಗಿನಲ್ಲಿದ್ದ ‘ಲೈಫ್ ಆಫ್ ಪೈ’ ಮತ್ತು ಕನ್ನಡದ ಇನ್ನೊಂದೆರಡು ಪುಸ್ತಕಗಳನ್ನು ಕಂಪ್ಯೂಟರಿನ ಪಕ್ಕದಲ್ಲಿಟ್ಟು ಫೋಟೋ ತೆಗೆಯುತ್ತಾನೆ. ಏನೋ ಸಮಾಧಾನ ಅವನ ಮುಖದಲ್ಲಿ ಇಣುಕುತ್ತದೆ.

ಸಲ್ಮಾನ್ ರಶ್ದೀ ತನ್ನ ಒಂದು ಪ್ರಬಂಧ ‘ ಆನ್ ಬೀಯಿಂಗ್ ಫೋಟೋಗ್ರಾಫ್‌ಡ್’ ಎನ್ನುವ ಪ್ರಬಂಧದಲ್ಲಿ ಬರೆದಿರುವ ಈ ಸಾಲುಗಳು ಬಹಳ ಮಾರ್ಮಿಕವಾಗಿವೆ. ‘ಈ ಫೋಟೋಗ್ರಫಿ ಅನ್ನುವ ಕಲೆಯಲ್ಲಿಯೇ ಒಂದು ರೀತಿಯ ಬೇಟೆಯ ಛಾಯೆಯಿದೆ. ನನ್ನಜ್ಜಿಗೆ ಯಾರೂ ಕ್ಯಾಮೆರಾ ಹಿಡಿದುಕೊಂಡು ಆಕೆಯ ಬಳಿಬರುವುದು ಇಷ್ಟವಾಗುತ್ತಲೇ ಇರಲಿಲ್ಲ. ಅವಳ ಯಾವುದೋ ಒಂದು ಖಾಸಗೀಭಾಗವನ್ನು ಈ ಪೆಟ್ಟಿಗೆ ಶಾಶ್ವತವಾಗಿ ಕದ್ದುಕೊಂಡಹಾಗೆ ಆಕೆಗೆ ಎಂದೂ ಅನಿಸುತ್ತಿತ್ತು. ಆಕೆ ಕಳಕೊಂಡರೆ ಮಾತ್ರ ಅದು ಫೋಟೋಗ್ರಾಫರಿನಿಗೆ ಸಿಕ್ಕುತ್ತದೆ ಎಂದು ಆಕೆ ಬಲವಾಗಿ ನಂಬಿದ್ದಳು. ನನಗನಿಸುತ್ತದೆ, ಕ್ಯಾಮೆರಾ ಒಂದು ಅಯುಧ, ಚಿತ್ರ ತೆಗೆಯುವ ಕ್ರಿಯೆಯೇ ಬೇಟೆ, ನಾನೇ ಶಿಕಾರಿ. ಫ್ಲಾಶ್ ಹೊಡೆದಾಗ ಗುಂಡು ಹೊಡೆದಂತೆ, ಶಿಕಾರಿ ನಿಶ್ಯಬ್ದವಾಗಿ ಚಲನೆಯಿಲ್ಲದೆ ನಿಂತಿರುತ್ತದೆ. ನಂತರ ಪ್ರಿಂಟಾದ ಪೊರ್ಟ್ರಾಯಿಟ್ ಶಿಕಾರಿಯ ಹುಲ್ಲುಹಸೆ ತುಂಬಿದ ತಲೆಯಿದ್ದಂತೆ. ಅದನ್ನು ನೀಟಾಗಿ ಕ್ಲೀನ್ ಮಾಡಿ ಗೋಡೆಯ ಮೇಲೆ ನೇತುಹಾಕಿಕೊಳ್ಳಬಹುದು.’

ಪೋರ್ಟ್ರಾಯಿಟ್ ತೆಗೆಯುವ ಕಲಾವಿದ ತನ್ನ ಮುಂದಿರುವ ಮುಖವನ್ನು ಹೇಗೆ ಸುಂದರಮಾಡಬೇಕೆಂದು, ಅಥವಾ ಭಿನ್ನಮಾಡಬೇಕೆಂದು ಯೋಚಿಸುತ್ತಲೇ ಇರುತ್ತಾನೆ. ಸಾಹಿತಿಗಳ ಚಿತ್ರವನ್ನು ತೆಗೆಯುವವರಿಗಂತೂ ಇದೊಂದು ಬೇರೆಯೇ ಸವಾಲು. ಸಾಹಿತಿಗಳ ಅಸಾಹಿತ್ಯಿಕ ವಿಶೇಷವಾದ ಮುಖವನ್ನು ಬೇಟೆಯಾಡಲು ಅವರು ಹೊಂಚುಹಾಕುತ್ತಲೇ ಇರುತ್ತಾರೆ. ಹಾಗಾಗಿಯೇ ಯಾವುದೋ ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ ಉಪ್ಪಿಟ್ಟನ್ನು ತಿನ್ನುತ್ತಿರುವವ ಟಿ ಎನ್ ಸೀತಾರಾಮ್‌ರ ಚಿತ್ರ, ಮೂವಿಕ್ಯಾಮೆರಾದ ಮೂಲಕ ನೋಡುತ್ತಿರುವ ಅನಂತಮೂರ್ತಿಯವರು, ನಗುತ್ತಿರುವ ಭೈರಪ್ಪನವರ ಚಿತ್ರ, ಬೀಡಿ ಸೇದುವ ಶಿವರಾಮಕಾರಂತರ ಚಿತ್ರ ಸ್ಟಡಿರೂಮಿನಲ್ಲಿರುವ ಅವರದೇ ಚಿತ್ರಕ್ಕಿಂತ ಮುಖ್ಯವಾಗುತ್ತದೆ. ಅದೇ ಶ್ರೀನಿವಾಸ ವೈದ್ಯರದ್ದಾದರೆ ಅವರು ಲೈಬ್ರರಿಯಲ್ಲಿ ಕೂತಿರುವ ಚಿತ್ರವೇ ಬೇಕಾಗುತ್ತದೆ. ಏಕೆಂದರೆ ಶ್ರೀನಿವಾಸ ವೈದ್ಯರ ಅಸಾಹಿತ್ಯಿಕ ಜೀವನಕ್ಕೆ ಬೇರೆಯವರಿಗಿದ್ದಂತೆ ಗ್ಲಾಮರ್ರೂ, ಮಣ್ಣಿನವಾಸನೆಯೂ ಅಥವಾ ಫೋಟೋಗಳಲ್ಲಿ ಹಿಡಿಯಬಹುದಾದ ಯಾವುದೇ ಫೋಟೋಜೆನಿಕ್ ‘ಭಿನ್ನ’ ಛಾಯೆಯೂ ಇರುವುದಿಲ್ಲ.

ನಾನು ಬೆಳೆಯುತ್ತಿದ್ದಾಗ ಧಾರವಾಡ, ಶಿವಮೊಗ್ಗಾದ ಕಡೆ ಯರ ಮನೆಗೆ ಹೋದರೂ ಸರಿ, ಬೊಚ್ಚುಬಾಯಿಯ ತುಂಬಾ ನಗೆ, ತಲೆಗೊಂದು ಸಣ್ಣ ಟೋಪಿ, ಕಿವಿಯಿಂದ ಹೊರಬಂದ ಕೂದಲು, ಗುಂಡುಫ್ರೇರೇಮಿನ ಸಣ್ಣಕನ್ನಡಕ, ಕುತ್ತಿಗೆಗೊಂದು ಸಣ್ಣ ಮಫ್ಲರು ಮತ್ತು ಒಂದು ಕರೀಕೋಟಿನ ಚಿತ್ರವೊಂದಿರುತ್ತಿತ್ತು. ಕೆಳಗೆ ಅಂಬಿಕಾತನಯದತ್ತ ಎಂಬ ಸಹಿಯೂ ಇರುತ್ತಿತ್ತು. ನಾನು ನೋಡಿರುವ ಸಾಹಿತಿಯ ಅತಿ ಸುಂದರ ಪೋರ್ಟರೈಟ್ ಅದೇ ಅನಿಸುತ್ತದೆ. ಸರಳ ಸುಂದರ ನಗು, ಸಣ್ಣ ತುಂಟಾಟ, ಕಣ್ಣುಗಳಲ್ಲಿನ ಹೊಳಪು ಎಲ್ಲ ಸೇರಿ ಒಂದು ಪ್ರಕಾಂಡ ಕಳೆ ಆ ಚಿತ್ರಕ್ಕಿತ್ತು.

ಈ ಸಾಹಿತಿಗಳ ಫೋಟೋವನ್ನು ತೆಗೆಯಬೇಕಾದರೆ, ಫೋಟೋ ತೆಗೆಯುವವನಿಗೆ ಇವರು ಬರೆಯುತ್ತಾರೆ ಎನ್ನುವುದನ್ನು ಬಿಟ್ಟು ಬೇರೇನೂ ಗೊತ್ತಿಲ್ಲದಿದ್ದಾಗ ಮತ್ತು ಸಾಹಿತಿಗೆ ತಾನು ಆದಷ್ಟು ನೈಜತೆಗೆ ಹತ್ತಿರವಿದ್ದುಕೊಂಡು ಪೋಸುಕೊಡುತ್ತಿದ್ದೇನೆ ಎಂದು ಮನಸ್ಸಿಗೆ ಬಂದುಬಿಟ್ಟಾಗ ಗೊತ್ತಿಲ್ಲದೇ ಒಂದು ಕೃತಕತೆ ಅಲ್ಲಿ ಇಳಿದುಬಿಡುತ್ತದೆ. ಅದರಲ್ಲಿಯೂ ಈ ಫೋಟೋಗಳು ಇಂತಹ ಕೃತಕತೆಯನ್ನು ಎದ್ದುತೋರಿಸುವುದರಲ್ಲಿ ಬಹಳ ಪರಿಣಾಮಕಾರಿಯಾಗಿರುತ್ತದೆ. ಇದು ಫೋಟೋ ತೆಗೆಯುವಾತನ ದುರಾಸೆ ಅಥವಾ ಸಾಹಿತಿಯ ಪ್ರಚಾರಪ್ರಿಯತೆಯನ್ನು ತೋರಿಸುತ್ತದೆ ಎಂದುಬಿಟ್ಟರೆ ವಿಷಯವನ್ನು ತುಂಬಾ ಸರಳೀಕರಿಸಿದ ಹಾಗಾಗುತ್ತದೆ.

ಒಂದು ಸಣ್ಣ ಉದಾಹರಣೆಯನ್ನು ಕೊಡುತ್ತೇನೆ.ಒಂದು ಪುಸ್ತಕಬಿಡುಗಡೆಯ ಸಂದರ್ಭ. ಅಲ್ಲಿ ಸಾಹಿತಿಗಳೆಲ್ಲರೂ ಸೇರಿರುತ್ತಾರೆ. ಅಲ್ಲಿ ಒಬ್ಬ ಫೋಟೋಗ್ರಾಫರನೂ ಇರುತ್ತಾನೆ. ಇಬ್ಬರು ಸಾಹಿತಿಗಳು ನಿಂತು ಮಾತಾಡಹತ್ತಿದಾಗ ಈ ಫೋಟೋಗ್ರಾಫರು ಒಂದು ಚಿತ್ರ ತೆಗೆಯಲು ಪ್ರಯತ್ನಿಸುತ್ತಾನೆ. ಮಾತಾಡುವುದನ್ನು ಬಿಟ್ಟು ಅವರಿಬ್ಬರೂ ಫೋಸು ಕೋಡಲು ಪ್ರಯತ್ನಿಸುತ್ತಾರೆ. ‘ಇರಲಿ ಸಾರ್, ನೀವು ಮಾತಾಡಿ. ಹಾಗೇ ನ್ಯಾಚುರಲ್ ಆಗಿ ಕಾಣುತ್ತೆ’ ಎಂದು ಹೇಳಿ ಒಂದು ಫೋಟೋ ಹೊಡೆಯುತ್ತಾನೆ. ಇವರಿಬ್ಬರಿಗೂ ಗೊತ್ತಿದೆ, ತಮ್ಮ ಫೋಟೋ ತೆಗೆಯಲ್ಪಡುತ್ತಿದೆ ಎಂದು. ಆದರೂ ಮಾತಾಡುವುದನ್ನು ಮುಂದುವರೆಸುತ್ತಾರೆ. ಆ ಸಂಭಾಷಣೆಯ ಕೃತಕತೆ, ಫೋಸಿನ ಕೃತಕತೆ ಎರಡನ್ನೂ ಕ್ಯಾಮೆರಾ ಬಹಳ ಪರಿಣಾಮಕಾರಿಯಾಗಿ ತನ್ನಲ್ಲಿ ಸೆರೆಹಿಡಿದುಕೊಂಡಿರುತ್ತದೆ. ಒಂದು ನಿರಪಾಯಕಾರಿ ಕ್ರಿಯೆ ತನಗೆ ಗೊತ್ತಿಲ್ಲದೇ ಒಂದು ಸಣ್ಣ ಢೋಂಗಿ ಘಟನೆಗೆ ಸಾಕ್ಷಿಯಾಗುತ್ತದೆ.

ಆದರೆ, ಫೋಟೋಕ್ಕೆಂತಲೇ ನಿಂತು ತೆಗೆಸಿಕೊಂಡಿರುವ (ಅದು ಇಂಥ ಸಂದರ್ಭಕ್ಕೆಂದು ತೆಗೆದಿಲ್ಲದೇ ಇದ್ದರೂ, ಉದಾಹರಣೆಗೆ ಒಂದು ಯರ್ಮುಂಜೆ ರಾಮಚಂದ್ರರವರ ಲಭ್ಯವಿರುವ ಒಂದೇ ಪಾಸ್‌ಪೋರ್ಟ್ ಫೋಟೋ) ಫೋಟೋಗಳಲ್ಲಿ ಒಂದು ರೀತಿಯ ನೈಜತೆ ಕಂಡುಬಿಡುತ್ತದೆ. ಆದಷ್ಟು ನೈಜವಾಗಿ ಬರಲಿ ಎಂದು ಫೋಟೋ ತೆಗೆಯುವುದೇ ಗೊತ್ತಿಲ್ಲದೇ ಇದ್ದೂ ತೆಗೆದಾಗಲೂ ಈ ಸಾಹಿತಿಗಳ ಫೋಟೋಗಳಲ್ಲಿ ಕೂಡ ಈ ನೈಜತೆ ಕಾಣದೇ ಇರುವುದು ಒಂದು ಐರನಿ. ಸಾಹಿತಿ, ತನ್ನ ಸಾಹಿತಿಯ ಪಟ್ಟವನ್ನು ಬಿಟ್ಟು ಬೇರೇನೋ ಆಗಿ ಪೋಸುಕೊಡುವುದೂ ಮತ್ತು ಈ ಅಸಾಹಿತ್ಯಿಕ ಆಂಬಿಯೆನ್ಸಿನಿಂದ ಆತನ ಇನ್ನೊಂದು ಮುಖದ ಪರಿಚಯವಾಗುತ್ತದೆ ಎನ್ನುವ ಅನಿಸಿಕೆಯನ್ನು ಮೂಡಿಸಲು ಪ್ರಯತ್ನಿಸುವುದು ಇವುಗಳಿಂದ ಇಡೀ ಕ್ರಿಯೆಯೇ ತನ್ನ ಉದ್ದೇಶವನ್ನು ಕಳಕೊಳ್ಳುತ್ತದೆ.

ಅಂದರೆ ಫೋಟೋಕ್ಕೂ ಒಂದು ಘನತೆಯಿದೆ. ಪ್ರಪಂಚವೆಲ್ಲ ಡಿಜಿಟಲ್ ಆದಮೇಲೆ, ಡಿಜಿಟಲ್ ಕ್ಯಾಮೆರಾದಲ್ಲಿ ಎಷ್ಟು ಬೇಕಾದರೂ ಅಷ್ಟು ಫೋಟೋಗಳನ್ನು ತೆಗೆದು ಬೇಕಾದನ್ನು ಹಾಕಿ ಬೇಡದದ್ದನ್ನು ಅಳಿಸಿಹಾಕುವ ಮತ್ತು ಬ್ಲಾಗಿನಿಂದ ಬ್ಲಾಗಿಗೆ, ಜಾಲದಿಂದ ಜಾಲಕ್ಕೆ ತೆಗೆದುಹಾಕುವ ಸೌಲಭ್ಯವಿರುವ ಈ ಕಾಲದಲ್ಲಿ ಫೋಟೋ ತೆಗೆಸಿಕೊಳ್ಳುವವನಿಗೆ ಅಥವಾ ತನ್ನ ಫೋಟೋವನ್ನು ಎಲ್ಲೆಡೆ ತಾನೇ ಹಾಕಿಕೊಳ್ಳುವನಿಗೆ ತಾನು ತನ್ನ ಇಡೀ ಪ್ರಪಂಚಕ್ಕೆ ತೋರಿಸುವ ಮುಖ ಇದು ಎನ್ನುವ ಒಂದು ಕನಿಷ್ಠ ಜವಾಬ್ದಾರಿ ಇರಬೇಕಾಗುತ್ತದೆ.

ಇಲ್ಲದಿದ್ದರೆ ರಶ್ದೀ ಹೇಳಿದ ಶಿಕಾರಿಯ ತಲೆಯಂತೆ ಎಲ್ಲರ ಚಿತ್ರಗಳೂ ಟ್ರೋಫಿಯಾಗಿ ಗೋಡೆಗಳ ಮೇಲೆ ನಿಲ್ಲಬೇಕಾಗುತ್ತವೆ.

Monday, May 4, 2009

ಎಬಿಸಿಡಿ ಮತ್ತು ಎನ್ನಾರೈ

೧. ಆತ ಅಮೆರಿಕಾದಲ್ಲಿಯೇ ಹುಟ್ಟಿದ್ದು ಮತ್ತು ಬೆಳೆದಿರುವುದು, ಹುಟ್ಟಿದಂದಿನಿಂದ ಭಾರತಕ್ಕೆ ಬಂದಿಲ್ಲ. ಅಜ್ಜಿ ಕೂಡ ಅಮೆರಿಕಾದಲ್ಲಿ ಇವನ ಕುಟುಂಬದ ಜತೆಗೇ ಇದ್ದಾಳೆ. ಆಕೆಗೆ ಮಾರಣಾಂತಿಕ ಕಾಯಿಲೆ. ಆದರೆ, ಅವಳು ಅಮೆರಿಕಾದಲ್ಲಿ ಸಾಯಲು ಸಿದ್ಧಳಿಲ್ಲ. ಅವಳನ್ನು ಮತ್ತೆ ವಾಪಸ್ಸು ಭಾರತಕ್ಕೆ ಬಿಟ್ಟುರುವ ನೆವದಲ್ಲಿ ಭಾರತಕ್ಕೆ ಹೋಗುತ್ತಾನೆ. ಅಲ್ಲಿ ಆತ ಬಂದಿಳಿಯುವುದು ದೆಹಲಿ-೬ (ಚಾಂದನೀ ಚೌಕ)ಕ್ಕೆ. ಅಲ್ಲಿ ಆತ ‘ಚಾಳ್’ ನ ಜನಗಳ ಸಂಬಂಧ, ಪ್ರೀತಿ, ದ್ವೇಷ, ರಗಳೆಗಳನ್ನು ನೋಡಿ ಪುಳಕಗೊಳ್ಳುತ್ತಾನೆ. ಅವರ ಮುಗ್ಧತೆ ನೋಡಿ ಆಶ್ಚರ್ಯಪಡುತ್ತಾನೆ, ರಾಮಲೀಲಾ ಉತ್ಸವದಲ್ಲಿ ದೇವರುಗಳೂ ರಾಜಕಾರಣಿಗಳಿಗೆ ಕೈಮುಗಿದು ನಮಸ್ಕರಿಸುವುದನ್ನು ನೋಡಿ ಬೆರಗಾಗುತ್ತಾನೆ. ಅಲ್ಲಿನ ಅಣ್ಣತಮ್ಮಂದಿರ ಜಗಳ, ಮನೆಯ ಮಧ್ಯದಲ್ಲಿರುವ ಗೋಡೆ, ಓರಗಿತ್ತಿಯರ ಪ್ರೀತಿ, ಹೆಗಲಮೇಲೆ ‘ಮಸಕ್ಕಲಿ’ಯನ್ನು ಕೂರಿಸಿಕೊಂಡು ತಾರಸಿಯ ಮೇಲೆ ಹಾಡುವ ಬಿಟ್ಟೂ ಎಲ್ಲವೂ ಒಂದು ಸ್ತರದಲ್ಲಿ ಅವನನ್ನು ಮುಟ್ಟುತ್ತದೆ.

ಆದರೆ, ಇವು ಯಾವುವೂ ಪೂರಕ್ಕೆ ಪೂರ ಆತನ ಮನಸ್ಸಿನ ಒಳಪದರಗಳನ್ನು ಮುಟ್ಟಿ ತೀರ ಭಾವುಕನೂ ಆಗುವುದಿಲ್ಲ. ಹಾಗಿದ್ದರೂ ಯಾವುದೋ ಒಂದು ತುಡಿತ ಇದು ತನ್ನದು ಎಂದು ಹೇಳುತ್ತಿರುತ್ತದೆ. ಆದರೆ ಎಲ್ಲವನ್ನೂ ಮೂವತ್ತುಸಾವಿರ ಅಡಿಗಳ ಮೇಲಿಂದ ಮುಟ್ಟಿದಂತೆ, ಕೋಲಿನ ಈ ತುದಿಯ ಸ್ಪರ್ಶ ಮಾತ್ರ ಆತನ ಅನುಭವಕ್ಕೆ ಬರುತ್ತದೆ. ಹೀಗಿದ್ದಾಗ ಆತ ಇದ್ದಕಿದ್ದ ಹಾಗೆ ಈ ಸ್ಥಳೀಯ ರಾಜಕಾರಣದಲ್ಲಿ ಮತ್ತು ದೆಹಲಿಯಲ್ಲಿ ಚಲಾವಿನಲಿದ್ದ ಕಾಲಾ ಬಂದರ್ ನ ಪ್ರಕರಣದಲ್ಲಿ ತನ್ನನ್ನನ್ನು ತಾನು ತೊಡಗಿಸಿಕೊಳ್ಳಬೇಕಾಗುತ್ತದೆ. ಇದ್ದಕ್ಕಿದ್ದಂತೆ ಇದು ಅವನಿಗೆ ತನ್ನ ಸಮಸ್ಯೆಯಾಗುತ್ತದೆ.

೨. ಆತ ನಾಸಾದಲ್ಲಿ ದೊಡ್ಡ ಇಂಜಿನಿಯರ್. ಆತನಿಗೆ ಅಲ್ಲಿ ಒಳ್ಳೆ ಗೌರವ, ಸಂಬಳ ತರುವ ಕೆಲಸವಿದೆ. ಅವನೂ ಹದಿನಾಲ್ಕು ವರ್ಷದ ನಂತರ ಒಮ್ಮೆ ಇದ್ದಕ್ಕಿದ್ದ ಹಾಗೆ ತನ್ನ ಬಾಲ್ಯದ ಅಮ್ಮ ‘ಕಾವೇರಿಯಮ್ಮ’ ನನ್ನು ನೋಡಲು ಭಾರತಕ್ಕೆ ಬರುತ್ತಾನೆ. ಉತ್ತರಪ್ರದೇಶದ ಒಂದು ಕುಗ್ರಾಮದಲ್ಲಿಯ ಜನಕ್ಕೆ ಅಲ್ಲಿನ ಸಮಸ್ಯೆಗಳಿಗೆ ತನ್ನನ್ನು ಒಡ್ಡಿಕೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ. ಅವರೆಲ್ಲರ ಸಂತೋಷವನ್ನೂ, ದುಃಖವನ್ನೂ ಅನುಭವಿಸುವ ಸಂದರ್ಭ ಬರುತ್ತದೆ. ನಂತರ ಅವನಿಗೆ ತನ್ನ ನಾಸಾದ ಈ ಕೆಲಸವನ್ನು ಬಿಟ್ಟು ವಾಪಸ್ಸು ಇಂಡಿಯಾಕ್ಕೆ ಬರುವುದೋ ಅಥವಾ ತಾನು ಅಮೆರಿಕಾದಲ್ಲಿಯೇ ಇರುವುದೋ ಅನ್ನುವ ಜಿಜ್ಞಾಸೆಯಲ್ಲಿ ಒದ್ದಾಡಿ ನಂತರ ಹುಟ್ಟಿದ ಭೂಮಿಯ ಸಲುವಾಗಿ ಹುಟ್ಟಿದ ಊರಿನಲ್ಲಿ ಒಂದು ಬಲ್ಬನ್ನು ಹತ್ತಿಸುವ ಸಣ್ಣ ಕೆಲಸವಾದರೂ ಸರಿ ಅದರಲ್ಲಿ ಸಾರ್ಥಕ್ಯ ಪಡೆಯುತ್ತೇನೆಂದು ವಾಪಸ್ಸು ಭಾರತಕ್ಕೆ ಬರುತ್ತಾನೆ.

ಚಿತ್ರಪ್ರೇಮಿಗಳಿಗೆ ಮೊದಲನೆಯ ಕತೆ ಇತ್ತೀಚೆಗೆ ಬಿಡುಗಡೆಯಾದ ರಾಕೇಶ್ ಓಮ್‌ಪ್ರಕಾಶ್ ಶರ್ಮಾನ ಡೆಲ್ಲಿ-೬ ಅನ್ನುವ ಚಿತ್ರದ ಕಥೆಯ ಸ್ಥೂಲಹಂದರ ಎಂದು ಗೊತ್ತಾಗದೇ ಇರದು, ಹಾಗೆಯೇ ಎರಡನೆಯದು ಕೆಲವುವರ್ಷ ಹಿಂದೆ ಬಿಡುಗಡೆಯಾಗಿದ್ದ ಅಶುತೋಶ್ ಗೌರೀಕರನ ‘ಸ್ವದೇಸ್’ ಚಿತ್ರದ ಕತೆ. ಇಲ್ಲಿ ಗಮನಿಸಬೇಕಾಗಿರುವುದೇನೆಂದರೆ ಎರಡೂ ಚಿತ್ರಗಳು ನಮ್ಮ ಸದ್ಯದ ಕಾಳಜಿಗಳಾದ ಜಾಗತೀಕರಣ ಮತ್ತು ಅದರ ಟ್ರಿಕಲ್ ಡೌನ್ ಪರಿಣಾಮ, ರಾಜಕಾರಣ, ಪೋಲೀಸು ವ್ಯವಸ್ಥೆ ಮತ್ತು ಎಲ್ಲದರ ನಡುವೆ ಕಲಷದಂತಿರುವ ಧರ್ಮದಂತ ವಸ್ತುಗಳನ್ನು ಕೇಂದ್ರದಲ್ಲಿಟ್ಟು ನೋಡುವುದರ ಜತೆಗೆ ಆ ಸಮಸ್ಯೆಗಳಿಗೆ ಕೊಂಚಮಟ್ಟಿಗಾದರೂ ಏಲಿಯನ್ ಅನ್ನಿಸುವ ಈ ಭಾರತದಿಂದ ಆಚೆ ವಾಸಿಸುತ್ತಿರುವ ಎರಡು ಮನಸ್ಸುಗಳು ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದನ್ನು ಜೀವಂತವಾಗಿ ಸೆರೆಹಿಡಿಯಲು ಪ್ರಯತ್ನಿಸಿವೆ.

ಇಲ್ಲಿ ಎಬಿಸಿಡಿ ಎನ್ನುವ ಪ್ರತ್ಯಯ ಕ್ಲೀಶೆಯಾದದ್ದು. ಅಮೆರಿಕಾದಲ್ಲಿಯೇ ಹುಟ್ಟಿ ಬೆಳೆಯುವ ಆದರೆ ಭಾರತೀಯ ಸಂಜಾತ ಅಪ್ಪ ಅಮ್ಮಂದಿರ ಮಕ್ಕಳಾದ ಎರಡನೇ ಜನಾಂಗವನ್ನು ಅಮೆರಿಕನ್ ಬಾರ್ನ್ ಕನ್‌ಫ್ಯೂಸ್ಡ್ ದೇಸಿಗಳು ಎಂದು ಕರೆಯುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತು. ಈ ಹುಡುಗರಿಗೆ ಭಾರತವೆಂದರೆ ಅಪ್ಪ, ಅಮ್ಮನ ತೆಳು ಗ್ರಹೀತಗಳ ಆಗರ. ಅಪ್ಪ, ಅಮ್ಮಂದಿರುಗಳು ಮನೆಯಲ್ಲಿಟ್ಟುಕೊಂಡು ಪೂಜಿಸುವ ಎಲ್ಲ ದೇವರುಗಳಿಗೂ ಇವರೂ ಕೈಮುಗಿಯುತ್ತಾರೆ. ದೇವಸ್ಥಾನಗಳಲ್ಲಿ ಅಗಾಗ್ಗೆ ಆಗಾಗ್ಗೆ ನಡೆಯುವ ಪೂಜೆ,ಪಾರ್ಟಿಗಳಲ್ಲಿ ತಾವೂ ಗಾಗ್ರಾ ಚೋಲಿಯನು ಹಾಕಿಕೊಂಡು ಅಥವಾ ಕುರ್ತ ಶರ್ವಾನಿ ಹಾಕಿಕೊಂಡು ಐಪಾಡಿನಲ್ಲಿ ಕಿವಿ ಹುದುಗಿಸಿಕೊಂಡು ಕೂತಿರುತ್ತಾರೆ, ಅಥವಾ ‘ನಧೀಂಧೀಂತನಾ’ ಗೆ ಹೆಜ್ಜೆ ಹಾಕುತ್ತಾರೆ. ಅಜ್ಜಿ, ಅಜ್ಜಂದಿರ ಜತೆ ‘ಹೌ ಆರ್ ಯು ಅಜ್ಜಾ’ ಎಂದು ಮಾತಾಡಲು ಬರುತ್ತೆ. ‘ಐ ಡೋಂಟ್ ಲೈಕ್ ಪಾಯಸಾ, ಇಟ್ ಟೇಸ್ಟ್‌ಸ್ ಲೈಕ್ ರೈಸ್ ಪುಡ್ಡಿಂಗ್. ಬಟ್ ಐ ಲವ್ ದಟ್ ಚಿರೋಟಿ ಸ್ಟಫ್’ ಎನ್ನುವಷ್ಟು ಕನ್ನಡ ಮಾತಾಡುತ್ತಾರೆ. ಅವರುಗಳಿಗೆ ಇಂಡಿಯಾವೆಂದರೆ, ಟೀವಿಯ ಸಾರೆಗಮಪ ಅಥವಾ ಬೂಗಿ ವೂಗಿ ಕಾರ್ಯಕ್ರಮಗಳು, ಇಂಗ್ಲಿಶ್ ಸಬ್‌ಟೈಟಲ್ಲುಗಳಿರುವ ಬಾಲಿವುಡ್ ಸಿನೆಮಾಗಳು, ಸಮೋಸ ಮತ್ತು ಹಿತ್ತಾಳೆಯ ನಟರಾಜನ ವಿಗ್ರಹ. ಇಂಡಿಯಾಕ್ಕೆ ಬಂದರೆ ಬಾಟಲಿ ನೀರು ಮತ್ತು ಏಸಿಕಾರುಗಳಲ್ಲಿ ಹೋಗಿಬರುವ ದೇವಸ್ಥಾನಗಳು, ಹೆಚ್ಚೆಂದರೆ ತಾಜ್‌ಮಹಲ್, ತಂದೂರಿ ಚಿಕನ್ನು. ಈ ನಡುವೆ ಹೆಚ್ಚೆಂದರೆ ಕೆಲವರು ಸ್ಯಟಿಲೈಟ್ ಟೆಲಿವಿಷನ್ ನೋಡಿ ಕ್ರಿಕೆಟ್ ಆಡಬಹುದು.

ಇಂಥ ಹುಡುಗನೊಬ್ಬ ಇದ್ದಕ್ಕಿದ್ದಂತೆ ಚಾಂದಿನಿ ಚೌಕಕ್ಕೆ ಬಂದು ಅಲ್ಲಿನ ದೈನಿಕದಲ್ಲಿ ತನ್ನನ್ನು ತೊಡಗಿಸಿಕೊಂಡಾಗ ಹೇಗಾಗಬಹುದು. ಇವನಿಗೆ ಈ ಹಿಂದೂ, ಮುಸ್ಲಿಮ್ ಸಂಬಂಧದ ಅಥವಾ ವೈಷಮ್ಯದ ಸೂಕ್ಷ್ಮಗಳಿರಲಿ, ಅಲ್ಲಿನ ಕುಟುಂಬದ ಇನ್ನಿತರ ಸಂಬಂಧಗಳು ಮತ್ತು ಹುಡುಗಿಯೊಂದಿಗಿನ ಸಂಬಂಧ ಮತ್ತು ಪ್ರೀತಿಯೂ ದಕ್ಕುವುದು ಒಂದು ಪದರದಲ್ಲಿ ಮಾತ್ರ. ಅವನಿಗೆ ಈ ಬ್ಲಾಕ್ ಮಂಕಿಯ ( ಈ ಕರಿಮಂಗ ನಮ್ಮಲ್ಲೇ ಇದ್ದಾನೆ ಅನ್ನುವ ಅಮೂರ್ತ ಸಿದ್ಧಾಂತವನ್ನು ಬಿಟ್ಟರೂ) ಪ್ರಕರಣ ಅಷ್ಟು ಸಂಗತವಾಗಿ ಆಗಿ ಆತ ಭಾರತದಲ್ಲಿ ಉಳಕೊಂಡು ಈ ಸಮಸ್ಯೆಗೆ ಸ್ಪಂದಿಸುತ್ತಾನೆಂಬುದನ್ನು ಗ್ರಹಿಸಲು ಕೊಂಚ ಕಷ್ಟ. ಇಂದಿರಾನಗರದಲ್ಲಿಯೇ ಹುಟ್ಟಿ ಬೆಳೆದು, ಬಿಷಪ್ ಕಾಟನ್‌ನಲ್ಲಿ ಓದಿದ ಹುಡುಗನೊಬ್ಬ ಯಾವುದೋ ಎನ್‌ಜೀ‌ಓ ಮೂಲಕ ಬಿಜಾಪುರದ ಒಂದು ಹಳ್ಳಿಯ ಜೀರ್ಣೋದ್ದಾರಕ್ಕೆ ಹೋದಷ್ಟೇ ಪ್ರಸ್ತುತ. ಅವನಿಗೆ ಸಮಸ್ಯೆಯ ಮೂಲವೇ ಅರಿವಿಲ್ಲದಿರುವಾಗ ಅದನ್ನು ಸರಿಪಡಿಸಲು ಆತ ಹುಡುಕುವುದು ಈ ಸಮಸ್ಯೆಯಿಂದಾಗುವ ಕೈಮೈತಟ್ಟುವ ಭೌತಿಕ ಪರಿಣಾಮಗಳನ್ನು ಮಾತ್ರ. ಇದನ್ನು ರಾಕೇಶ್ ಓಂಪ್ರಕಾಶ್ ಮೆಹ್ರ ಬ್ಲಾಕ್ ಮಂಕಿಯ ರೂಪಕದಲ್ಲಿ ತೋರಿಸಿದ್ದರೂ,ಇದು ಎಷ್ಟೇ ಕ್ಲೀಶೆಯ ಕಲ್ಪನೆಗೂ ಸಿಕ್ಕದೇ ನಂಬಲಿಕಾಗದೇ ಹೋಗುತ್ತದೆ. ಕೊನೆಗೆ ಅಭಿಷೇಕನನ್ನು ಜನ ಹೊಡೆದು ಹಣ್ಣುಗಾಯಿ, ನೀರುಗಾಯಿ ಮಾಡುತ್ತಿದ್ದಾಗ ‘ಓ ಕಮಾನ್’ ಎನಿಸುತ್ತದೆ. ಇಲ್ಲಿ ಈ ಸುಧಾರಕ ಈ ವೈಷಮ್ಯದ ವಿಕ್ಟಿಮ್ ಅನಿಸದೇ ಸಮಸ್ಯೆಯನ್ನು ಅರಿಯಲಾಗದ ಮುಗ್ಧ ಅಥವಾ ಪೆದ್ದ ಅನ್ನಿಸಿದರೂ ಅನಿಸಬಹುದು.

ರಾಕೇಶ್ ತಪ್ಪಿರುವುದೇ ಇಲ್ಲಿ. ಈತನಿಗೆ ಕತೆ ಹೇಳುವ ಕಲೆಯಿದೆ. ದೃಶ್ಯಗಳನ್ನು ಚಿತ್ರಿಕರಿಸುವುದರಲ್ಲಿ, ಅದನ್ನು ಎಡಿಟ್ ಮಾಡುವುದರಲ್ಲಿ ಆತ ನಿಷ್ಣಾತ. ಸಮಕಾಲೀನ ಇಂಡಿಯಾದ ಬೇರೆಬೇರೆ ಮುಖಗಳ ಸಂಕೀರ್ಣತೆಯ ಪರಿಚಯವೂ ಆತನಿಗಿದೆ. ಈ ಬ್ಲಾಕ್ ಮಂಕಿ ಅನ್ನುವುದು ಇಲ್ಲವೇ ಇಲ್ಲ ಅದು ನಮ್ಮೆಲ್ಲರಲ್ಲಿಯೂ ಇದೆ ಅನ್ನುವ ಉದಾತ್ತ ಆದರೆ ಸಾಮಾನ್ಯ ಪ್ರೇಕ್ಷಕನಿಗೆ ದಕ್ಕದಿರುವ ಒಂದು ಅಮೂರ್ತ ಸಿದ್ಧಾಂತವನ್ನು ಆತ ಮನರಂಜನೆಯ ಮೂಲ ಅಂಶಗಳನ್ನು ಬಿಡದೇ ಹೇಳಬೇಕು ಅನ್ನುವ ಸವಾಲನ್ನು ತನಗೆ ತಾನೇ ಹಾಕಿಕೊಳ್ಳುತ್ತಾನೆ. ಇದನ್ನು ಆತ ಹೇಳಿಸುವುದು ಒಬ್ಬ ಎಬಿಸಿಡಿಯಿಂದ. ಭಾರತಕ್ಕೆ ಹುಟ್ಟಿದಾಗಿನಿಂದ ಒಮ್ಮೆಯೂ ಬರದೇ ಈಗ ಬಂದ ಕೆಲವೇ ದಿನಗಳಲ್ಲಿ ಇಲ್ಲಿರುವ ಜನಗಳಿಗೆ ಅರ್ಥವಾಗದ ಈ ಸತ್ಯವನ್ನು ಈತ ಅರಿತುಕೊಂಡ ಅಂದರೆ ಅದನ್ನು ನಂಬುವುದು ಹೇಗೆ?

ರಾಕೇಶ್ ಬೆಳೆದದ್ದು ಈ ನೆರೆಹೊರೆಯಲ್ಲಿ. ತಾನು ಬೆಳೆದ ದೆಹಲಿ-೬ ಅನ್ನು ಎಲ್ಲರೂ ಅನುಭವಿಸುತ್ತಾರೆ, ಅಲ್ಲಿನ ಜಿಲೇಬಿಯ ಸವಿ ಉಣ್ಣುತಾರೆ, ರಾಮಲೀಲಾದಲ್ಲಿ ಪಾಲ್ಗೊಂಡು ಸಂತೋಷಪಡುತ್ತಾರೆ ಅನುವ ಒಂದು ಸಾರ್ವತ್ರಿಕ ನಂಬಿಕೆಯಲ್ಲಿ ಆತ ಚಿತ್ರ ಮಾಡಿದ್ದಾನೆ, ನಿರ್ದೇಶಕ ತನ್ನನ್ನು ತನ್ನ ನಂಬಿಕೆಯನ್ನು ಒಬ್ಬ ಹೊರಗಿನವನ ಕಣ್ಣಲ್ಲಿ ಕಾಣಿಸುವ ಮೂಲಕ ತನ್ನ ನಂಬಿಕೆಗಳು ಸಾರ್ವತ್ರಿಕ ಅಷ್ಟೇ ಏಕೆ ಜಾಗತಿಕ ಅನ್ನುವುದನ್ನು ಪ್ರೂವ್ ಮಾಡಲು ಪ್ರಯತ್ನಿಸುತ್ತಾನೆ, ಆದರೆ, ಇದರಲ್ಲಿ ದಯನೀಯವಾಗಿ ಸೋತು, ಚಿತ್ರ ಇತ್ತ ಭಾರತೀಯರಿಗೂ, ಅತ್ತ ಎನ್ನಾರೈಗಳಿಗೂ ಮತ್ತೆ ಎಬಿಸಿಡಿಗಳಿಗೂ ದಕ್ಕದೇ ಹೋಗುತ್ತದೆ. ಬಿಡಿಬಿಡಿಯಾಗಿ ಸಂಗೀತ, ದೃಶ್ಯವೈಭವ, ನಟನೆ ಎಲ್ಲದರಲ್ಲಿಯೂ ಚೆನ್ನಾಗಿ ಕಾಣುವ ಈ ಚಿತ್ರ ಒಟ್ಟು ಏನನ್ನೂ ಮೆಸೇಜನ್ನೂ ಕೊಡದೇ ಹೋಗುತ್ತದೆ. ಕೊನೆಗೆ ಉಳಿಯುವುದು ‘ವಾಟ್ ಅ ವೇಸ್ಟ್’ ಎನ್ನುವ ಒಂದು ಭಾವನೆ.

ಅದೇ ಸ್ವದೇಸ್‌ನಲ್ಲಿನ ನಾಯಕನ ಬೇರುಗಳು ಬಲವಾದದ್ದು. ಕಾರಣಾಂತರಗಳಿಂದ ಊರೂರುಗಳಲ್ಲಿ, ದೇಶವಿದೇಶಗಳಲ್ಲಿ ಹಂಚಿಹೋಗಿರುವ ನಾವೆಲ್ಲರೂ ಬಿಟ್ಟುಬಂದ ನಮ್ಮ ಸಣ್ಣ ಹಳ್ಳಿಗಳನ್ನು, ತಾಲೂಕುಗಳನ್ನು, ಅಥವಾ ಸಣ್ಣ ಊರುಗಳನ್ನು ನೆನೆಸುತ್ತಲೇ ಇರುತ್ತೇವೆ. ಈಗ ಪ್ರಪಂಚ ಸಣ್ಣದಾಗಿದೆ, ಬೆಂಗಳೂರಿಗೂ ಅಮೆರಿಕಾಕ್ಕೂ ನಡುವೆ ಏನೂ ವ್ಯತ್ಯಾಸವೇ ಇಲ್ಲ ಎಂದು ಹೇಳುವವರಿಗೂ ಒಮ್ಮೆ ದೇಶ ಬಿಟ್ಟು ಹೊರಗೆ ಬಂದು ಜೀವಿಸತೊಡಗಿದಲ್ಲಿ ಈ ಖಂಡಾಂತರ ದ ವ್ಯತ್ಯಾಸದ ಅರಿವಿದ್ದೇ ಇದೆ. ಈ ಡಯಾಸ್ಪೊರವನ್ನು ಪ್ರತಿನಿತ್ಯ ಕಾಡುವ, ಕಾಯುವ ಭಾವನೆ ಈ ಮನೆಯ ನೆನಪು. ಎಷ್ಟೇ ಬಿಡಿಸಿಕೊಳ್ಳುತ್ತೇನೆ ಎಂದರೂ ಬಿಡದ ಈ ಮಾಯೆ ಎಲ್ಲರ ಹೃದಯದಲ್ಲೂ ಸಣ್ಣದಾಗಿ ಉರಿಯುತ್ತಲೇ ಇರುತ್ತದೆ. ಸ್ವಲ್ಪ ಭಾವುಕ ಅನ್ನುವಂತ ಮಾತಿರಬಹುದು, ಇದು- ಎಂಥ ಕಾರಣದಿಂದ ಊರನ್ನು ಬಿಟ್ಟುಬಂದವನೂ ಒಂದಲ್ಲ ಒಂದು ದಿನ ನಾನು ವಾಪಸ್ಸು ಊರಿಗೆ ವಾಪಸಾಗುತ್ತೇನೆ ಅನ್ನುವ ಭಾವನೆಯಲ್ಲಿ ಇದ್ದೇ ಇರುತ್ತಾನೆ. ಬಹಳ ಜನರಿಗೆ ಈ ವಾಪಸಾಗುವಿಕೆ ಕನಸೇ ಇರಬಹುದು. ಇದರಿಂದ ತಪ್ಪಿಸಿಕೊಳ್ಳಲು ಅವರು ಕಂಡುಕೊಳ್ಳುವ ಒಂದು ಉಪಾಯವೆಂದರೆ ಈ ಸಮಸ್ಯೆಯತ್ತ ಮುಖವನ್ನೇ ಮಾಡದಿರುವುದು. ಅಂದರೆ, ಊರುಬಿಟ್ಟವರು ವಾಪಸ್ಸು ಎಷ್ಟೋ ವರ್ಷಗಟ್ಟಲೇ ಊರಿಗೇ ಹೋಗದಿದ್ದರೆ, ಆಗ ಇರುವ ಊರಲ್ಲೇ ಬಿಳಲು ಬಿಟುಕೊಂಡು ಅಲ್ಲಿಯೇ ಸ್ವಸ್ಥವಾಗಿ ನೆಲಸಿಬಿಡಬಹುಸು ಅನ್ನುವ ವಿಶ್‌ಫುಲ್ ಆಲೋಚನೆಯೂ ಇರಬಹುದು. ಗೌರೀಕರನ ಸ್ವದೇಸ್‌ನಲ್ಲಿ ಆಗುವುದೂ ಹೀಗೆಯೇ. ಈ ನಾಯಕ ಸುಮಾರು ವರ್ಷಗಳಿಂದ ಭಾರತಕ್ಕೆ ಹೋಗದೇ ಇದ್ದರೂ ಈಗ ಯಾವುದೋ ಕಾರಣದಿಂದ ಹೋದಾಗ, ಅತನಿಗೆ ದೇಜಾವೂ ರೀತಿ ಅಲ್ಲಿನ ಸಮಸ್ಯೆಗಳೆಲ್ಲವೂ ತನ್ನ ಸಮಸ್ಯೆಗಳಾಗಿ ಕಾಣತೊಡಗುತ್ತದೆ. ನಾಸಾದ ವಿಜ್ಞಾನಿಯೊಬ್ಬ ಒಂದು ಸಣ್ಣ ಹಳ್ಳಿಗೆ ಕರೆಂಟು ಕೊಡಿಸಲು ಬಂದ ಅನ್ನುವ ತೀರ ಬಾಲಿಶ ರೂಪಕವೂ ನಿಜವೇನೋ ಅನ್ನಿಸುತ್ತದೆ. ಅದನ್ನು ನಾವ್ಯಾರೂ ಪ್ರಶ್ನಿಸದೇ ಒಪ್ಪಿಕೊಳ್ಳುತ್ತೇವೆ. ಏಕೆಂದರೆ, ಅಶುತೋಶನ ಶಾರೂಕಿನಲ್ಲಿ ಇಂದಿನ ನಮ್ಮೆಲ್ಲರನ್ನೂ, ಊರು ಬಿಟ್ಟ ನಮ್ಮನ್ನು, ಬೇರುಗಳನ್ನು ಕಳಕೊಂಡ ನಮ್ಮನ್ನು, ಮುಖ್ಯವಾಗಿ ವಾಪಸ್ಸು ಹೋಗುವ ದೈರ್ಯವಿರುವ ಮತ್ತು ಭಾರತದಲ್ಲಿ ಮತ್ತೆ ಬದುಕಬಹುದಾದ ನಮ್ಮನ್ನು ನಾವು ಕಂಡು ಖುಷಿಪಡುತ್ತೇವೆ. ಹಾಗೆಯೇ, ಈ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳದೇ ಹೊಡೆತ ತಿಂದು ಒದ್ದಾಡುವ ಅಭಿಷೇಕ ನಮ್ಮ ಮುಂದಿನ ಜನಾಂಗದ ಪ್ರತಿನಿಧಿಯಾಗಿ ಕಂಡು ನಿರಾಶೆಯನ್ನು ಹುಟ್ಟಿಸುತ್ತಾನೆ.

ರಾಕೇಶ್ ಓಮ್‌ಪ್ರಕಾಶ್ ಶರ್ಮಾನ ಸಮಸ್ಯೆಯ ಗ್ರಹೀತ ಮತ್ತು ಅದರ ಮಂಡನವನ್ನು ಕೊಂಚ ಗಮನಿಸಿದರೆ, ಈತ ಈ ಏಬಿಸಿಡಿಯ ಏಲಿಯನ್ ಭಾವನೆಯನ್ನು ಗ್ರಹಿಸಿಯೇ ಇಲ್ಲ ಅಂತ ಹೇಳುವುದು ತಪ್ಪಾಗಬಹುದೇನೋ.. ಎಬಿಸಿಡಿ ಅಂದರೆ ಬರೇ ಇಂಡಿಯಾಕ್ಕೆ ಬಂದರೆ ಕಕ್ಕಸ್ಸಿಗೆ ಹೋಗದೇ, ಬಾಟಲಿಯ ನೀರನ್ನು ಕುಡಿಯುವ ಹೊರರೂಪವನ್ನಷ್ಟೇ ಆತ ಚಿತ್ರಿಸಿಲ್ಲ. ಅಭಿಷೇಕನ ಈ ಅಂಡರ್‍ಪ್ಲೇಡ್ ನಟನೆಯಲ್ಲಿ ಅವನ ವ್ಯಕ್ತಿತ್ವ ಮತ್ತು ಅದರ ಹೊರಪದರದ ಸುಳಿಯಲ್ಲಿ ಮಾತ್ರ ಆತನಿಗೆ ದಕ್ಕುವ ಇಂಡಿಯಾದ ಚಿತ್ರಣವಿದೆ. ಚಿತ್ರದಲ್ಲಿ ಒಂದು ದೃಶ್ಯವಿದೆ. ಅಭಿಷೇಕ ತನ್ನ ಅಜ್ಜಿಗೆ ಸೀರಿಯಸ್ ಎಂದು ಸೈಕಲ್ ರಿಕ್ಷಾದಲ್ಲಿ ಕರೆದೊಯ್ಯುತ್ತಿದ್ದಾರೆ. ಕರೆದಿದ್ದಾನೆ. ಆದರೆ ದೆಹಲಿಯ ಟ್ರಾಫಿಕ್ಕಿನಲ್ಲಿ ಈ ಸೈಕಲ್ ರಿಕ್ಷಾ ಸಿಕ್ಕಿದೆ. ರಸ್ತೆಯ ಮಧ್ಯೆ ಒಂದು ಹಸು ಕರುವನ್ನು ಹಾಕುತ್ತಿದೆ. ಈ ಪವಿತ್ರ ದೃಶ್ಯವನ್ನು ನೋಡಲು ಇಡೀ ಜನಸ್ತೋಮ ಕಿಕ್ಕಿರಿದು ನಿಂತಿದ್ದು ಟ್ರಾಫಿಕ್ ಜ್ಯಾಮ್ ಆಗಿದೆ. ಇದನ್ನು ಕಂದು ಸಿಟ್ಟಿಗೆದ್ದ ಈ ಅಭಿಷೇಕ ಬಚ್ಚನ್ ಹೋಗಿ ತನ್ನ ತುರ್ತನ್ನು ಎಲ್ಲರಿಗೂ ವಿವರಿಸಿ ಹೇಳಿ ಸಫಲವಾಗದೇ ಎಲ್ಲರ ಮೇಲೆ ಕೂಗಾಡಲು ತೊಡಗುತ್ತಾನೆ. ಆಗ ಇವನಿಗಾಶ್ಚರ್ಯವಾಗುವಂತೆ ಅವನಜ್ಜಿಯೇ ವಾಹನದಿಂದ ಎದ್ದುಬಂದು ಆ ಹಸುವನ್ನು ಪೂಜಿಸುತ್ತಾ ನಿಂತಿರುತ್ತಾಳೆ. ಈ ವಿಷಯ ವೈಪರೀತ್ಯಕ್ಕ ತರ್ಕಾತೀತವಾದ ಈ ಸಂಗತಿಗಳಿಗೆ ಒಂದು ವಿಸ್ಮಯದ ನಗುವನ್ನು ಬಿಟ್ಟು ಅಥವಾ ‘ಅಮೇಜಿಂಗ್ ಅಥವಾ ಹಾರಿಬಲ್’ ಎಂಬ ವಿವರಣೆಯೊಂದಿಗೆ ಮಾತ್ರ ಈ ಘಟನೆಯ ಜತೆಗಿನ ಅವನ ಪ್ರಸ್ತುತತೆ ಮುಕ್ತಾಯವಾಗುತ್ತದೆ.

ಈ ಜಾಗತೀಕರಣದ ಉಪೋತ್ಪನ್ನವಾದ ವಲಸೆಯಿಂದ ನಮಗೆ ದಕ್ಕಿರುವ ಎರಡು ಪಡಿಕಟ್ಟುಗಳಾದ ಈ ಮೊದಲ ಮತ್ತು ಎರಡನೇ ಜನಾಂಗದ ನಡುವಿನ ಅಂತರ ಅಮೇಜಿಂಗ್ ಮತ್ತು ಹಾರಿಬಲ್ ನಡುವಿನ ಅಂತರ ಮಾತ್ರ ಅಲ್ಲ. ಇಲ್ಲಿ ತಾನು ಬೆಳೆದ ಊರನ್ನು ನೆನೆಸಿಕೊಂಡು ಹಪಾಪಿಗೊಳ್ಳುವ ಜೀವಗಳಿದ್ದಾವೆ, ಮಕ್ಕಳನ್ನು ಬೇರೊಂದು ಸಂಸ್ಕೃತಿಗೆ ಬಿಟ್ಟುಕೊಡದೇ ತಮ್ಮದರಲ್ಲಿಯೂ ಉಳಿಸಿಕೊಳ್ಳದೇ ತಮಗಿಂತ ಹೆಚ್ಚು ಗೊಂದಲಪಡುತ್ತಿರುವ ಅವರನ್ನು ನೋಡುವ ಮೊದಲ ಜನಾಂಗವೂ ಇದೆ. ಇವು ಬೆಂಗಳೂರಿನ ಟ್ರಾಫಿಕ್ ಜಾಮನ್ನು ನೋಡಿ, ತಾನು ಇಪ್ಪತ್ತುವರ್ಷದ ಹಿಂದೆ ಓಡಿಯಾಡಿದ, ಕುಂಟೋಬಿಲ್ಲೆಯಾಡಿದ ರಸ್ತೆಯನ್ನು ಇಂದು ದಾಟಲು ಪರದಾಡುತ್ತವೆ. ಮತ್ತು ಈ ಪರದಾಟವನ್ನು ವಿಚಿತ್ರವಾಗಿ ನೋಡಿ, ‘ಅಮೇಜಿಂಗ್ ದಟ್ ಯು ಡು ದಿಸ್ ನೌ. ಯು ಡಿಡ್ ಗ್ರೋ ಅಪ್ ಹಿಯರ್’ ಅನ್ನುವ ಮಗಳ ವಿಸ್ಮಯಕ್ಕೆ ಅಥವಾ ಕುಚೇಷ್ಟೆಗೆ ಉತ್ತರ ಕೊಡಲಾಗದ ಸಂಕಟವಿದೆ.

ಬೇರೆ ದೇಶದಲ್ಲಿ ಹುಟ್ಟಿ ಬೆಳದವರು ಭಾರತಕ್ಕೆ ಬಂದು ನಮ್ಮ ಸಮಸ್ಯೆಗಳಿಗೆ ಪ್ರಸ್ತುತವಾಗಿಯೇ ಇಲ್ಲವೇ ಅನ್ನುವ ಪ್ರಶೆ ಬರಬಹುದು (ಸೋನಿಯಾ ಗಾಂಧಿಯಿಂದ ಹಿಡಿದು ಕಿಟೆಲ್ ಅಥವಾ ಹಿಗಿನ್ಸ್‌ರ ಉದಾಹರಣೆಯು ನಮಗೆ ಸಿಗಬಹುದು) ಇವರಿಗೆ ವಲಸೆ ಅಥವಾ ಇಂಡಿಯಾ ಕೇವಲ ಹೊಟ್ಟೆಪಾಡಿಗಿಂತ, ಮಧ್ಯಮವರ್ಗದ ಜೀವನಶೈಲಿಗಿಂತ ಹೆಚ್ಚಿನ ಕಾರಣಕ್ಕೆ ದಕ್ಕಿದೆ. ಆದ್ದರಿಂದಲೇ ಜಾಕೀರ್ ಹುಸೇನ್ ಅಥವಾ ಪಂಡಿತ್ ರವಿಶಂಕರ್‌ಗೆ ಕ್ಯಾಲೊಫೋರ್ನಿಯಾ ಆಗಲೀ ಬಾಂಬೆಯಾಗಲೀ ಬೇರೆಯಾಗುವುದಿಲ್ಲ. ನೋರಾ ಜೋನ್ಸ್ ಮತ್ತು ಅನೂಷ್ಕಾ ಇಬ್ಬರೂ ಬೇರೆ ಅನ್ನಿಸುವುದಿಲ್ಲ.

Tuesday, April 21, 2009

ಕಾದಂಬರಿ ಬರೆಯುವುದು ಎಂದರೆ

ಕಾದಂಬರಿ ಒಂದು ನೀಳ್ಗತೆಯಲ್ಲ. ಕಾದಂಬರಿಕಾರನಿಗೆ ಬದುಕಿನ ಬಗ್ಗೆ ಒಂದು ವಿಶಾಲವಾದ ನೋಟವಿರಬೇಕು, ಪಾತ್ರಗಳ ಜತೆಗೆ ದಿನಗಟ್ಟಲೆ, ತಿಂಗಳುಗಟ್ಟಲೆ ಕೆಲವೊಮ್ಮ ವರ್ಷಗಟ್ಟಲೆ ಬದುಕುವ ಸಾವಧಾನವಿರಬೇಕು. ಪ್ರತಿಪಾತ್ರಗಳ ನೋವನ್ನೂ ಖುಷಿಯನ್ನೂ, ಹುರುಪನ್ನೂ, ಮುಗ್ಧತೆಯನ್ನೂ ಹಾಗೆಯೇ ತಳಮಳವನ್ನೂ ಅನುಭವಿಸುವ ಶಕ್ತಿಯಿದ್ದವನಾಗಿರಬೇಕು. ಕಾದಂಬರಿಕಾರ ಎಲ್ಲಿಯೂ ಮೂಗುತೂರಿಸದೇ ಪಾತ್ರಗಳನ್ನು ಅವಾಗಿಯೇ ಬೆಳೆಯಲು ಬಿಟ್ಟರೆ ಪಾತ್ರಗಳು ಅವೇ ದೊಡ್ಡದಾಗಿ ಕಾದಂಬರಿಕಾರನನ್ನೂ ಮೀರಿ ಬೆಳೆಯುತ್ತವೆ. ಅವನ ಆಶಯಕ್ಕೂ ಮೀರಿ ನಿಂತುಬಿಡುತ್ತವೆ. ಇದೊಂದು ಆಕಸ್ಮಿಕವೇ ಹೊರತು ಇದನ್ನು ಬಲವಂತವಾಗಿ ಬೆಳೆಸಲಾಗದು. ಬರೇ ತಂತ್ರವೊಂದರಿಂದ ಅಥವಾ ಲಿರಿಕಲ್ ಸರ್ಕಸ್ಸುಗಳಿಂದ ಕಾದಂಬರಿಯನ್ನು ಬೆಳೆಸಲಾಗದು. ಅದು ಒಂದು ಜೀವನ ದರ್ಶನ -ಇವೆಲ್ಲಾ ಕಾದಂಬರಿಕಾರರು, ವಿಮರ್ಶಕರು, ಕಾದಂಬರಿ ಎನ್ನುವುದು ಹೇಗಿರಬೇಕೆಂದು ಹೇಳಿರುವ ಮಾತುಗಳು.

ಒಂದು ಕಾದಂಬರಿ ಹೇಗೆ ಹುಟ್ಟುತ್ತದೆ? ಕಾದಂಬರಿಕಾರ ಒಂದು ಕಾದಂಬರಿಯನ್ನು ಯಾಕೆ ಬರೆಯುತ್ತಾನೆ. ಜಾರ್ಜ್ ಆರ್ವೆಲ್ ಒಂದು ಕಡೆ ‘ಒಂದು ಪುಸ್ತಕ ಬರೆಯುವುದೆಂದರೆ ಒಂದು ದೀರ್ಘಕಾಲದ ರೋಗವನ್ನು ಅನುಭವಿಸಿ ಚೇತರಿಸಿಕೊಂಡ ಹಾಗೆ’ ಎಂದು ಹೇಳುತ್ತಾನೆ. ಬರೆಯುವುದು ಒಂದು ಕಾಯಿಲೆಯಾದರೆ ಜನ ಯಾಕೆ ಆ ಕಾಯಿಲೆಯನ್ನು ಅನುಭವಿಸಲು ಇಷ್ಟಪಡುತ್ತಾರೆ? ಕೀರ್ತಿಗಾ? ಹಣಕ್ಕಾ (ಕನ್ನಡದ ಸಂದರ್ಭದಲ್ಲಿ ಇದು ಸಾಧ್ಯವೇ?) ಅಥವಾ ಬರೆಯುವ ಖುಷಿಗಾ? ಕಾದಂಬರಿಕಾರ ಬದುಕನ್ನು ಶೋಧಿಸುವುದೇ ಬರಹದಿಂದ ಅನ್ನುವ ಉದಾತ್ತತೆಯನ್ನು ಒಪ್ಪಿಕೊಂಡರೂ ಈ ಶೋಧಕ್ಕೆ ಆತ ತನ್ನನ್ನು ಮತ್ತು ತನ್ನ ಓದುಗರನ್ನು ತಯ್ಯಾರು ಮಾಡಿಕೊಳ್ಳುವುದು ಹೇಗೆ? ಈ ಬರೆಯುವ ಕ್ರಿಯೆ ಬೇರೆಬೇರೆ ಕಾದಂಬರಿಕಾರನಲ್ಲಿ ಹೇಗೆ ಕೆಲಸ ಮಾಡಿದೆ ಅನ್ನುವುದು ಕುತೂಹಲಕರವಾದ ಪ್ರಶ್ನೆ.

ಕಾದಂಬರಿಕಾರನಿಗೆ ಕಥೆಯ ಎಳೆ ಮಾತ್ರ ಗೊತ್ತಿದ್ದು ಬರೆಯುತ್ತಾ ಹೋದಹಾಗೆ ಈ ಪಾತ್ರಗಳು ಬೆಳೆದುಕೊಂಡು ಹೋಗುತ್ತವೆ ಅನ್ನುವ ಮಾತನ್ನು ನಾವು ಯಾವಾಗಲೂ ಕೇಳುತ್ತೇವೆ. ಹಾಗಾದರೆ ಕಥೆ ಹೇಗೆ ಮುಂದುವರಿಯಬೇಕು ಎಂದು ಕಾದಂಬರಿ ಬರೆಯುವ ಮುನ್ನ ಒಂದು ನೀಲನಕ್ಷೆ, ಒಂದಿಷ್ಟು ಟಿಪ್ಪಣಿಗಳನ್ನು ಮಾಡಿಟ್ಟುಕೊಳ್ಳುವುದು ತಪ್ಪಾ? ಕಾದಂಬರಿ ಹೀಗೇ ಮುಂದುವರೆಯಬೇಕು, ಹೀಗೇ ಕೊನೆಗೊಳ್ಳಬೇಕು ಎಂದು ಬರೆಯುವ ಮುನ್ನವೇ ಗೊತ್ತಿದ್ದರೆ ಅದು ಗಮ್ಯ ಗೊತ್ತಿರುವ ಬೆರಗಿಲ್ಲದ ಪಯಣವಾ? ಪಾತ್ರಗಳನ್ನು ಅನುಭವಿಸುವುದು ಅಂದರೇನು. ಈ ಪಾತ್ರಗಳನ್ನು ಮನದಲ್ಲಿ ರೂಪಿಸಿಕೊಳ್ಳುವುದು ಸಾಧ್ಯವೇ. ಅಥವಾ ಬರೆಯುತ್ತಾ ಬರೆಯುತ್ತಾ ಅವುಗಳ ಜತೆಗೆ ಬದುಕುತ್ತಾ ಹೋಗುವುದೇ?

ಈ ಪ್ರಶ್ನೆಗಳು ಯಾಕೆ ಬರುತ್ತಿವೆಯೆಂದರೆ, ಬಹಳ ಬಾರಿ ನಾವು ಸಾಹಿತ್ಯವಲಯದಿಂದ ಕೆಲವು ಮಾತುಗಳನ್ನು ಕೇಳುತ್ತೇವೆ. ‘ಗೊತ್ತಿದ್ದುಕೊಂಡು ಬರೆಯುವ ಕಾಲ ಮುಗಿದಿದೆ. ಬರೆಯುತ್ತಾ ಗೊತ್ತುಮಾಡಿಕೊಳ್ಳುವುದು, ಬರೆಯುತ್ತಾ ಈ ಜೀವನವನ್ನು ಅರ್ಥಮಾಡಿಕೊಳ್ಳುವುದು ನಮಗೆ ಮುಖ್ಯ’ ಎಂದು . ಗೊತ್ತಿಲ್ಲದೇ ಬರೆಯುವುದು ಅಂದರೇನು? ಏನು ಬರೆಯಬೇಕು ಎನ್ನುವ ಕಿಂಚಿತ್ ಆಲೋಚನೆಯೂ ಮನಸ್ಸಿನಲ್ಲಿ ಇರದೇ ಸುಮ್ಮನೇ ಖಾಲಿಕಾಗದ ಪೆನ್ನು ಹಿಡಿದು ಕೂತರೆ ತನ್ನಂತಾನೇ ಬರೆಸಿಕೊಳ್ಳುವುದೇ ಬರಹ ಅಂದರೆ ಅದು ಬರಹವನ್ನು ತೀರ ಉಡಾಫೆ ಮಾಡಿದ ಹಾಗಲ್ಲವೇ? ಧ್ಯಾನಸ್ಥ ಸ್ಥಿತಿ ಅಂದರೇನು? ಚಿತ್ತಾಲರು ಕೇಂದ್ರ ವೃತ್ತಾಂತವನ್ನು ಬರೆಯುವಾಗ ಕೇಂದ್ರ, ವೃತ್ತ, ಪರಿಧಿ, ಒಂದು ವೃತ್ತದ ಪರಿಧಿಯಲ್ಲಿರುವ ಒಂದು ಬಿಂದು ಇನ್ನೊಂದು ವೃತ್ತದ ಕೇಂದ್ರ ಹೇಗೆ ಆಗಬಹುದು ಎಂದು ಗ್ರಾಫಿಕ್ ಆಗಿ ಬರೆದು ತೋರಿಸುತ್ತಿದ್ದರಂತೆ. ಹಾಗೆಯೇ ಈ ಕಾದಂಬರಿಯ ಕಡೆಯ ವಾಕ್ಯ ಇದೇ ಆಗಿರುತ್ತದೆ ಅನ್ನುವುದನ್ನೂ ಅವರು ಪ್ಲಾನ್ ಮಾಡಿರುತ್ತಿದ್ದರಂತೆ. ಇದಕ್ಕೆ ಗೊತ್ತಿದ್ದುಕೊಂಡು ಬರೆಯುವುದು ಎಂದು ಹೇಳಲಾಗುವುದೇ?

ಆದರೆ, ಕಾದಂಬರಿಯ ವಿವರಗಳನ್ನು ದಟ್ಟವಾಗಿ ಪ್ಲಾಟ್ ಮಾಡುತ್ತಾ ಹೋದಾಗ ಕಾದಂಬರಿಯ ಪಾತ್ರಗಳು ಇಂಥ ಸಮಯದಲ್ಲಿ ಇಂಥವನ್ನೇ ಮಾಡಬೇಕು ಎನ್ನುವುದನ್ನೂ ಮೊದಲೇ ತಿಳಕೊಂಡುಬಿಟ್ಟಿದ್ದರೆ ಅಥವಾ ನಿರ್ಧರಿಸಿಬಿಟ್ಟಿದ್ದರೆ ಅದೊಂದು ರಿಪೋರ್ಟ್ ಆಗಬಹುದು. ಪಾತ್ರಗಳ ಪ್ರತಿಯೊಂದು ಕ್ರಿಯೆಯನ್ನೂ ಯೋಜನಾಬದ್ಧವಾಗಿ ರೂಪಿಸಲಿಕ್ಕೆ ಹೋದರೆ ಕ್ರಿಯೆಗೆ ಪ್ರತಿಕ್ರಿಯೆಗಳು ಹುಟ್ಟಿ ಎಲ್ಲವನ್ನೂ ಸರಾಸರಿಗೊಳಿಸಿ ಸರಿಸಮಮಾಡಿಸಿದಲ್ಲಿ ಅದು ಲೆಕ್ಕಾಚಾರ ಹಾಕಿಬರೆದ ಒಂದು ಸಂಶೋಧನಾವರದಿಯಾಗುತ್ತದೆ, ಫಿಕ್ಷನ್ ಅಲ್ಲ. ಕಲ್ಪನೆಯೆನ್ನುವ ಪರಿಕಲ್ಪನೆಯಲ್ಲಿಯೇ ಒಂದು ರೀತಿಯ ‘ಅ’ವಾಸ್ತವವಿದೆ. ಕಣ್ಮುಂದೆ ನಡೆದ ಘಟನೆಯನ್ನೂ ಕತೆಮಾಡಲು ಒಂದು ಮ್ಯಾಜಿಕ್ ಬೇಕು. ಶಾಂತಿನಾಥ ದೇಸಾಯಿಯವರು ಅವರ ಸಂಬಂಧ ಎನ್ನುವ ಕಾದಂಬರಿಯಲ್ಲಿ ಹೆನ್ರಿ ಮಿಲ್ಲರನ ಟ್ರಾಪಿಕ್ ಆಫ್ ಕ್ಯಾನ್ಸರ್ ಬಗ್ಗೆ ಬರೆಯುತ್ತಾರೆ. ‘ಗ್ರೇಟ್ ಅನ್ನಿಸ್ತು. ಅದರಲ್ಲಿಯೂ ತುಂಬ ಸೆಕ್ಸಿದೆ. ಏನೇನೋ ಅಶ್ಲೀಲವಾದ ವರ್ಣನೆಗಳಿವೆ. ಆದರೆ ಪುಸ್ತಕದ ಕೇಂದ್ರದಲ್ಲಿ ಒಂದು ಅತ್ಯಂತ ಪ್ರಭಾವಶಾಲಿಯಾದ ಸಂವೇದನೆಯಿದೆಯಲ್ಲ- ಅದೇ ಜಾದೂ ಅದೇ ಮಂತ್ರ’ ಈ ಮಂತ್ರ ಏನು ಎಂದು ಅರಿತುಕೊಳ್ಳುವುದು ಪ್ರಾಯಶಃ ಸ್ವತಃ ಬರಹಗಾರನಿಗೂ ಸಾಧ್ಯವಿಲ್ಲ. ಅದು ಅವನಿಗೆ ದಕ್ಕುವುದು ಮತ್ತು ಆ ಜಾದೂ ಅವನಿಗೆ ದಕ್ಕಿದೆ ಎಂದು ಜನಕ್ಕೆ ಅರ್ಥವಾಗುವಂತೆ ಅದನ್ನು ಅಕ್ಷರಗಳ ಮೂಲಕ ರವಾನಿಸುವುದು ಆ ಬರೆದವನ ಅದೃಷ್ಟ.

ತಾನು ಕಾದಂಬರಿಯನ್ನು ಹೇಗೆ ಬರೆಯುತ್ತೇನೆ ಎಂದು ಟರ್ಕಿಯ ಬರಹಗಾರ ಆರ್ಹನ್ ಪಮುಕ್ ಹೇಳುತ್ತಾನೆ. ‘ನನ್ನ ಕನಸುಗಳನ್ನು ಮೂಡಿಸುವ ನನ್ನ ಕಾಮನೆಗಳಿಗೆ ಒಂದು ಧ್ವನಿ ಕೂಡಲು ನಾನು ಬರೆಯುತ್ತೇನೆ. ಈ ಕನಸುಗಳು ಏನಂತ ನನಗೆ ಅರ್ಥವಾಗದಿದ್ದರೂ, ಎಲ್ಲಿಂದ ಬಂತೆಂದು ಗೊತ್ತಿಲ್ಲದಿದ್ದರೂ ಬರೆಯಲು ಕೂತಾಗ ಈ ಕನಸುಗಳೇ ನನ್ನಲ್ಲಿ ಉಸಿರು ತುಂಬುತ್ತವೆ. ಹಾಯಿದೋಣಿ ನಡೆಸುತ್ತಿರುವ ನಾವಿಕ ಬರುವ ಗಾಳಿಯ ದೆಸೆಯನ್ನು ಹಿಡಿದು ಹೊರಟಹಾಗೆ ಎತ್ತ ಹೋಗುತ್ತಿದ್ದೀನೆಂದು ಗೊತ್ತಿಲ್ಲದಿದ್ದರೂ ಪಯಣವನ್ನು ಶುರುಮಾಡಿರುತ್ತೇನೆ. ಆದರೆ, ನನ್ನ ಮನಸ್ಸಿನ ಯಾವುದೋ ಮೂಲೆಯಲ್ಲಿರುವ ನಕ್ಷೆಯಲ್ಲಿ ನಾನೀಗ ಇರುವ ತಾಣವೂ ಮತ್ತು ನನ್ನ ಗಮ್ಯವೂ ನನಗೆ ಚೆನ್ನಾಗಿ ಗೊತ್ತಿದೆ. ಗಾಳಿಗೆ ನಾನು ಆ ಕ್ಷಣದಲ್ಲಿ ಶರಣಾದರೂ ನನಗೆ ನಾನು ಎಲ್ಲಿಗೆ ಹೋಗುತ್ತಿದ್ದೇನೆ ಎಂದು ಗೊತ್ತಿರುತ್ತದೆ. ಯಾಕೆಂದರೆ ಪಯಣ ಶುರುಮಾಡುವ ಮುನ್ನ ನಾನು ಎಲ್ಲಿಗೆ ಹೋಗುತ್ತಿದ್ದೀನೆಂದು ಚೆನ್ನಾಗಿ ಅರಿತುಕೊಂಡಿರುತ್ತೇನೆ. ಕಥೆಯ ಅಧ್ಯಾಯ ಎಲ್ಲಿ ಶುರುವಾಗಬೇಕು, ಮುಗಿಯಬೇಕು ಎಂದು ವಿಂಗಡಿಸಿಕೊಂಡಿದ್ದಾಗಿದೆ. ನನ್ನ ದೋಣಿ ಎಂಥ ಕಡೆ ನಿಲ್ಲಬೇಕು, ಎಲ್ಲಿ ಎಷ್ಟು ಲಗೇಜನ್ನು ಇಳಿಸಬೇಕು ಮತ್ತು ನನ್ನ ಅಂತಿಮ ತಾಣಕ್ಕೆ ನಾನು ಹೋಗಬೇಕಾದರೆ ಎಷ್ಟು ದಿನ ಬೇಕು ಅಂತಲೂ ನನಗೆ ಗೊತ್ತಿದೆ. ಒಂದುವೇಳೆ ಇದ್ದಕ್ಕಿದ್ದಂತೆ ಗೊತ್ತಿಲ್ಲದೇ ಬಿರುಗಾಳಿಯೆದ್ದು ನನ್ನ ಹಾಯಿದೋಣಿಯ ಪಥ ದಿಕ್ಕೆಟ್ಟರೆ ನಾನು ಅದನ್ನು ತಡೆಯಹೋಗುವುದಿಲ್ಲ. ಏಕೆಂದರೆ ನನ್ನ ಹಾಯಿಯನ್ನು ಪೂರಕ್ಕೆ ಪೂರ ಬಿಚ್ಚಿಡದಿದ್ದರೆ ಅದಕ್ಕೆ ಬಿರುಗಾಳಿಗೆ ತನ್ನನ್ನು ಒಡ್ಡಿಕೊಳ್ಳಲೂ ಗೊತ್ತಾಗುವುದಿಲ್ಲ, ಅದರಿಂದ ತಪ್ಪಿಸಿಕೊಳ್ಳುವುದೂ ಗೊತ್ತಿರುವುದಿಲ್ಲ. ನಾನು ಸಾಗರದಲ್ಲಿ ಎಲ್ಲ ನದಿಗಳೂ ಒಂದಕ್ಕೊಂದು ಶಾಂತವಾಗಿ ಸೇರುವ, ಎಲ್ಲವೂ ಒಂದರೊಳಗೊಂದು ಒಂದಾಗುವ, ಎಲ್ಲವೂ ಒಂದಕ್ಕೊಂದು ಹೆಣೆದುಕೊಂಡಿರುವ ಶಾಂತಸಾಗರವನ್ನು ಹುಡುಕುತ್ತಿದ್ದೇನೆ. ಅಲ್ಲಿ ಸೇರಿದಾಗ, ಆ ಬಿರುಗಾಳಿ ಶಾಂತವಾಗಿ ಎಲ್ಲವೂ ಸ್ಠಬ್ಧವಾಗಿರುವ ನಿಶ್ಚಲ ತಾಣದಲ್ಲಿ ನಾನು ನಾವೆಯಲ್ಲಿ ತೇಲುತ್ತಿರುತ್ತೀನೆ. ನಾನು ಸಾವಧಾನದಿಂದಿದ್ದರೆ ಈ ಎಲ್ಲ ಏರುಪೇರುಗಳಿಗೂ ನನ್ನನ್ನು ನಾನು ಒಡ್ಡಿಕೊಂಡೂ ನಾನು ಗಮ್ಯವನ್ನು ಮುಟ್ಟುತ್ತೇನೆ ಅನ್ನುವುದು ನನಗೆ ಗೊತ್ತು.

ಕಾದಂಬರಿಗೆ ಈ ‘ಎಲ್ಲವೂ ಎಲ್ಲದರ ಜತೆ ಒಂದಾಗುವ’ ಕ್ರಿಯೆ ಎಷ್ಟು ಮುಖ್ಯ ಅನ್ನುವುದನ್ನು ಪಮುಕ್ ಬಹಳ ಚೆನ್ನಾಗಿ ವಿವರಿಸಿದ್ದಾನೆ. ಇಲ್ಲಿ ಪ್ರತಿ ಘಟನೆ, ಸನ್ನಿವೇಶ ಮತ್ತು ಪಾತ್ರ ಪ್ರತಿ ಪಾತ್ರವೂ ಒಂದು ಘಟ್ಟದಲ್ಲಿ ಎಲ್ಲವೂ ಎಲ್ಲದರಳೊಗೊಂದಾಗಬೇಕು. ಒಂದು ಘಟ್ಟದಲ್ಲಿ ಎಲ್ಲವೂ ಒಂದೇ ಕೊಂಡಿಯಲ್ಲಿ ಬೆಸೆದುಕೊಳ್ಳಬೇಕು. ಅದನ್ನು ಬಲವಂತವಾಗಿ ಮಾಡಿಸಬೇಕಾಗಿಲ್ಲ. ಕಾದಂಬರಿಯನ್ನು ಈ ‘ಒಂದಾಗುವ ಕ್ರಿಯೆಯವರೆಗೂ’ ಬೆಳೆಸುವ ಸಾವಧಾನವಿದ್ದರೆ ಅದು ತಾನಾಗಿಯೇ ಸಿದ್ಧಿಸುತ್ತದೆ. ಇದು ಕೆಲವರಿಗೆ ನೂರೇ ಪುಟದಲ್ಲಿ ಆಗಬಹುದು, ಕೆಲವ್ರು ನಾನೂರು ಐನೂರು ಪುಟಗಳವರೆಗೂ ಕಾಯಬೇಕಾಗಬಹುದು. ಅಲ್ಲಿಯವರೆಗೆ ಕಾದಂಬರಿಕಾರನಿಗೆ ಪಾತ್ರಗಳ ಜತೆ ಸಾವಧಾನದಿಂದ ಸಂಸಾರ ಮಾಡುವ ಗುಣ ಬಹಳ ಮುಖ್ಯವಾಗುತ್ತದೆ. ಇದಕ್ಕೆ ಬರಹಗಾರನಿಗೆ ತನ್ನ ಅಹಂಕಾರವನ್ನು ತಡೆದುಕೊಳ್ಳುವ ಮತ್ತು ಆ ಪಾತ್ರದ ಪ್ರಾಮುಖ್ಯವನ್ನು ಆ ಪಾತ್ರವೇ ಕಂಡುಕೊಳ್ಳುವುದಕ್ಕೆ ಬಿಡುವ ಔದಾರ್ಯವಿರಬೇಕು.

ಒಂದು ಮನೆ ಅಥವಾ ಮದುವೆ ಉಳಿಯಬೇಕಾದರೆ ಅಲ್ಲಿ ಸಾವಧಾನ ಎಷ್ಟು ಮುಖ್ಯ. ಕಾದಂಬರಿಯನ್ನು ಬರೆಯುವುದೆಂದರೆ ಇಲ್ಲಿನ ಅನೇಕ ಪಾತ್ರಗಳ ಜತೆ ಒಟ್ಟಿಗೇ ಸಂಸಾರ ಮಾಡಿದಹಾಗೆ. ನಿಮ್ಮ ಸಿಗ್ನಿಫಿಕೆಂಟ್ ಅದರ್ ನಿಮ್ಮಷ್ಟೇ ಅಥವಾ ನಿಮಗಿಂತ ಮುಖ್ಯ ಎಂದು ತಿಳಿಯುವ ವಿನಯವಿದ್ದರೆ ಅದು ಕೊನೆಗೆ ನಿಮ್ಮನ್ನೂ ಮುಖ್ಯವಾಗಿಸುತ್ತದೆ. ಇಲ್ಲಿ ಯಾರು ಬೇಕಾದರೂ ತಪ್ಪುಮಾಡಬಹುದು, ನಿಮ್ಮ ಪಾತ್ರಗಳು ಮುನಿಸಿಕೊಳ್ಳಬಹುದು, ಕೆಲವೊಮ್ಮೆ ಮನಸ್ತಾಪ, ಹತಾಶೆ, ಘಟಸ್ಫೋಟಗಳೂ ಆಗಬಹುದು. ಆಗ ತಾಳ್ಮೆಯಿಂದ ಪ್ರತಿಪಾತ್ರಕ್ಕೂ ಇರುವ ಅದರದೇ ಆದ ಅಸ್ತಿತ್ವವನ್ನು ಅದಕ್ಕೆ ಮನಗತಮಾಡಿಕೊಳ್ಳುವುದರ ಮೂಲಕ ಕಾದಂಬರಿಕಾರನು ತನ್ನ ಪಾತ್ರವೇನೆಂಬುದನ್ನು ಅರಿತುಕೊಳ್ಳುತ್ತಾನೆ. ಯಾವುದೇ ಸಂಸಾರವನ್ನು ಹೀಗೇ ಮಾಡುವುದು ಎಂದು ಯಾರೂ ಹೇಳಿಕೊಳ್ಳಲಾಗದಲ್ಲ. ಹಾಗೆ ಮಾಡಿದರೆ, ಸಂಬಂಧಗಳು ಪ್ರೊಟೋಕಾಲುಗಳಿಂದ ನಿಂತಿದ್ದರೆ ಆಗ ಅದು ಮ್ಯಾನೇಜ್‌ಮೆಂಟ್ ಆಟವಾಗುತ್ತದೆ ಅಥವಾ ರಿಯಾಲಿಟಿ ಶೋ ಆಗುತ್ತದೆ. ಸಂಸಾರವಾಗುವುದಿಲ್ಲ. ಹಾಗೆಯೇ ಕಾದಂಬರಿ ಒಂದು ಸುದೀರ್ಘ ವರದಿಯಾಗುತ್ತದೆ.

ಇದೇ ಇರಬಹುದು ಧ್ಯಾನಸ್ಥ ಸ್ಥಿತಿ. ಈ ಧ್ಯಾನಸ್ಥ ಸ್ಥಿತಿ ಬೇರೆಬೇರೆಯವರಿಗೆ ದಕ್ಕುವುದು ಬೇರೆಬೇರೆ ರೂಪದಲ್ಲಿ. ಮತ್ತೆ ಪಮುಕನ ಉದಾಹರಣೆಯನ್ನು ತೆಗೆದುಕೊಂಡರೆ ಅವನಿಗೆ ಈ ಸ್ಥಿತಿ ಸಿಗುವುದು ಹೆಚ್ಚುಹೆಚ್ಚು ಬರೆಯುವುದರಿಂದ. ಆತ ದಿನಕ್ಕೆ ಹತ್ತುಗಂಟೆಗಳ ಕಾಲ ಬರೆಯುತ್ತಾನಂತೆ. ಬರೆದದ್ದರಲ್ಲಿ ಕೇವಲ ಅರ್ಧಪುಟ ಮಾತ್ರ ಬರೆಯಲು ಯೋಗ್ಯವಾಗಿರುತ್ತದೆಂದು ಆತ ನಿರ್ಧರಿಸುತ್ತಾನೆ. ಅಂದರೆ, ಬರೆಯುವ ಕ್ರಿಯೆಗಿಂತಲೂ ಆತನಿಗೆ ಮುಖ್ಯವಾಗಿರುವುದು ಅದರ ಪರಿಷ್ಕರಣ. ಬರೆದದ್ದನ್ನು ತಾನೇ ಓದುತ್ತಾನೆ, ತಿದ್ದುತ್ತಾನೆ. ಕೆಲವು ಭಾಗಗಳನ್ನು ಮತ್ತೆ ಬರೆಯುತ್ತಾನೆ. ಕೆಲವನ್ನು ಸಾಯಿಸುತ್ತಾನೆ, ಕೆಲವನ್ನು ಹುಟ್ಟಿಸುತ್ತಾನೆ.

ಈ ಪರಿಷ್ಕರಣ, ತಿದ್ದುವಿಕೆ ಎಷ್ಟಿರಬೇಕೆಂಬುದು ದೊಡ್ಡ ಪ್ರಶ್ನೆ. ಬಹಳ ಜನ ಕಾದಂಬರಿಕಾರರು ಕಾದಂಬರಿಯನ್ನು ಬರೆಯುವ ಕಾಲಕ್ಕೆ ಒಂದೇ ಸಲ ಕೂತು ಬರೆದಿರುತ್ತಾರೆ. ಶಿವರಾಮಕಾರಂತರು ಅವರು ಬರೆದದ್ದನ್ನು ಮತ್ತೆ ತಿರುಗಿ ನೋಡುತ್ತಿರಲಿಲ್ಲವಂತೆ. ಅವರಿಗೆ ಈ ಪರಿಷ್ಕರಣ ಕಾರ್ಯದ ಮೇಲೆ ನಂಬಿಕೆಯೇ ಇರಲಿಲ್ಲ. ಜಯಂತ ಕಾಯ್ಕಿಣಿಯವರು ಒಮ್ಮೆ ಬರೆದದ್ದನ್ನು ಮತ್ತೆ ತಿದ್ದುವ ಕೆಲಸವೆಂದರೆ ‘ಸರಿಯಾಗಿ ಹೊಲೆಯದ ಪ್ಯಾಂಟನ್ನು ಒಂದು ಚೂರು ಹಾಗೂ ಹೀಗೂ ಮಾಡಬಹುದಷ್ಟೇ. ತೀರ ಹೆಚ್ಚು ಕಮ್ಮಿ ಮಾಡಲು ಹೋದರೆ ಪ್ಯಾಂಟು ಹೋಗಿ ಚಡ್ಡಿಯಾದೀತು’ ಅಂದಿದ್ದರು. ಕಾದಂಬರಿಯನ್ನು ಶುರುಮಾಡಿ ಧಾರಾವಾಹಿಯಂತೆ ಒಂದೊಂದೇ ಅಧ್ಯಾಯವನ್ನು ಬರೆಯುತ್ತಾ ಪ್ರಕಟಿಸುತ್ತಾ ಹೋದಾಗ ಈ ಪರಿಷ್ಕರಣ, ತಿದ್ದುವಿಕೆ ಸಾಧ್ಯವೇ ಇಲ್ಲವಲ್ಲ. ಅದೂ ಇಷ್ಟೇ ಪದಮಿತಿಯಲ್ಲಿ ಇಷ್ಟೇ ಅಧ್ಯಾಯಗಳಲ್ಲಿ ಕಾದಂಬರಿ ಮುಗಿಯಬೇಕು ಎಂದರೆ ಮೊದಲನೇ ಪರಿಜೇ ಕೊನೆಯ ಪರಿಜೂ ಕೂಡ. ಇನ್ನು ಬೇರೆಬೇರೆ ಅಧ್ಯಾಯವನ್ನು ಬೇರೆ ಬೇರೆ ಲೇಖಕರು ಬರೆದರಂತೂ ಇವನ್ಯಾವುದನ್ನೂ ಚರ್ಚಿಸುವ ಅವಕಾಶವೂ ಇರುವುದಿಲ್ಲ.

ಕಾದಂಬರಿ ಬರೆಯುವವನಿಗೆ ಬರೆಯುವುದಷ್ಟೇ ಸತ್ಯ. ಅಲ್ಲಿ ಅವನ ಪಾತ್ರಗಳೊಂದಿಗೆ ಅವನ ಸಖ್ಯ, ಜಗಳಗಳು ಆಗಷ್ಟೇ ಅನುಭವಿಸಿದ ಸತ್ಯ. ದಾಂಪತ್ಯದ ಜಗಳವಿದ್ದಂತೆ ನಂತರ ಹೋಗಿ ಕೊಂಚ ತೇಪೆ ಹಾಕಬಹುದೇ ಹೊರತು ಪೂರ ಬದಲಾಯಿಸುವುದಕ್ಕೆ ಸಾಧ್ಯವಿಲ್ಲ. ಆದ್ದರಿಂದ ಸಂಸಾರಕ್ಕೆ, ದಾಂಪತ್ಯಕ್ಕೆ ಒಂದಿಷ್ಟು ಅಲಿಖಿತ ಗ್ರೌಂಡ್‌ರೂಲ್‌ಗಳಿದ್ದಂತೆ ಕಾದಂಬರಿ ಬರೆಯುವ ಮುಂಚೆಯೂ ಇಂತ ಒಂದು ಸಾಮಾನ್ಯ ಸಿದ್ಧತೆ ಮುಖ್ಯ ಅನಿಸುವುದಿಲ್ಲವೇ? ಹಾಗೆ ಒಂದು ನಿಯಮಗಳನ್ನು ಹಾಕಿಕೊಂಡು ಈ ನಿಯಮಗಳಿರುವುದೇ ಮುರಿಯುವುದಕ್ಕೆ ಅನ್ನುವ ಅರಿವೂ ಇದ್ದಾಗ, ಏನನ್ನು ಮುರಿಯುತ್ತಿದ್ದೇವೆ, ಮತ್ತು ಅದರಿಂದಾಗುವ ಪರಿಣಾಮಗಳೇನು ಎಂದು ತಿಳಕೊಂಡಾಗ ಇದು ಸಾಧುವೂ ಹೌದು. ಕಾದಂಬರಿಗೆ ಗಮ್ಯ ಅಥವಾ ಗುರಿ ಮುಖ್ಯವಾಗಬಾರದು. ಅದು ಗೊತ್ತಿದ್ದರೆ ತಪ್ಪೂ ಅಲ್ಲ. ಅಲ್ಲಿನ ಪಯಣ ಮತ್ತು ಆ ಪಯಣದಲ್ಲಿ ಸಿಗುವ ಸುಖವೇ ಮಜ.

Saturday, April 4, 2009

ಭರಿಸಲಾಗದ ಇರವಿನ ಹಗುರ

‘ನಮ್ಮ ವಿಜ್ಞಾನ, ಕಲೆಯಾಗಲೀ ಅಥವಾ ತತ್ವಶಾಸ್ತ್ರದಂತಹ ಮಾನವಿಕ ಶಾಸ್ತ್ರಗಳಾಗಲೀ ಮಾನವನ ಕೂಸಾಗಿಯೇ ಹುಟ್ಟಿದರೂ ಭಸ್ಮಾಸುರನಂತೆ ಅವನನ್ನು ಮೀರಿ ಬೆಳೆದಿವೆ. ವಿಪರ್ಯಾಸವೆಂದರೆ ಈ ವಿಷಯಗಳನ್ನು ಮನುಷ್ಯ ಹೆಚ್ಚುಹೆಚ್ಚು ಅರ್ಥಮಾಡಿಕೊಂಡಷ್ಟೂ ಪ್ರಪಂಚವನ್ನು ಮತ್ತು ತನ್ನನ್ನು ಸ್ಪಷ್ಟವಾಗಿ ಅರಿತುಕೊಳ್ಳ್ಳಲಾಗುತ್ತಿಲ್ಲ. ಅಷ್ಟೇ ಅಲ್ಲ, ಆಧುನಿಕ ಮನುಷ್ಯ ಚರಿತ್ರೆ, ವಿಜ್ಞಾನ, ರಾಜಕೀಯ ಮತ್ತು ತಂತ್ರಜ್ಞಾನದ ಶಕ್ತಿ ಬೆಳೆದಂತೆಲ್ಲಾ ಅವುಗಳ ಮೇಲೆ ತನ್ನ ನಿಯಂತ್ರಣವನ್ನು ಕಳಕೊಂಡಿದ್ದಾನೆ. ಎಲ್ಲವಕ್ಕೂ ತನ್ನನ್ನು ಅರ್ಪಿಸಿಕೊಂಡು ಈ ಶಕ್ತಿಗಳನ್ನು ಹೇಗೆ ಬೆಳೆಯಲಿಕ್ಕೆ ಬಿಟ್ಟಿದ್ದಾನೆಂದರೆ ಇವುಗಳು ಮನುಷ್ಯನನ್ನು ತೀರ ಕುಬ್ಜನನ್ನಾಗಿಸಿವೆ. ಮನುಷ್ಯ ತಾನೇ ಅವೆಲ್ಲದರೊಳಗೊಂದಾಗಿ ಹೋಗಿಬಿಟ್ಟಿದ್ದಾನೆ. ಆದರೆ ಈ ಶಕ್ತಿಗಳಿಗೆ ಮನುಷ್ಯನ ಇರವಿನ ಬಗ್ಗೆ ಆಸಕ್ತಿಯಾಗಲೀ, ಬೆಲೆಯಾಗಲೀ ಇಲ್ಲ. ಮಾನವನ ಇರವನ್ನು ಈ ಶಕ್ತಿಗಳು ಮರೆತೇ ಬಿಟ್ಟಿವೆ. ಈ ಮಾನವನ ಇರವು ‘ತೀರ ಹಗುರ’ ಭರಿಸಲಾಗದಷ್ಟು ಹಗುರ.’

ಹುಟ್ಟುವುದೊಂದೇ ಸಾರಿ, ಸಾಯುವುದೊಂದೇ ಸಾರಿ. ನಡುವೆ ಇರುವುದೊಂದೇ ಬದುಕು. ಯಾವುದೂ ಪುನರಾವರ್ತಿತವಾಗುವುದಿಲ್ಲ. ಆದ್ದರಿಂದ ಈ ಬದುಕಿಗೆ ಅಂಥ ಮಹತ್ವವನ್ನು ಕೊಡುವುದರಲ್ಲಿ ಅರ್ಥವಿಲ್ಲ. ನಮ್ಮ ನಿರ್ಣಯಗಳಿಗೂ ಮತ್ತು ಅದಕ್ಕೆ ಪೂರಕವಾದ ಯಾವ ಕ್ರಿಯೆಗಳಿಗೂ ಅಷ್ಟೊಂದು ಪ್ರಾಮುಖ್ಯ ಕೊಡಬೇಕಾಗಿಲ್ಲ. ಆದ್ದರಿಂದ ಈ ಜೀವನವನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸದೇ ತೀರ ಹಗುರವಾಗಿ, ಲಘುವಾಗಿ ಬಿಡುಬೀಸಾಗಿ ಬದುಕಬಹುದು. ಆದರೆ ಹೀಗೆ ಅಮುಖ್ಯವಲ್ಲದ ಅಷ್ಟೇನೂ ಗಂಭೀರವಲ್ಲದ ತೀರ ಹಗುರವಾದ ನಮ್ಮ ನಿರ್ಣಯಗಳು ರೂಪಿಸುವ ನಮ್ಮ ಜೀವನ, ನಮ್ಮ ಅಸ್ತಿತ್ವ ದುರ್ಭರ. ಅದೇ ಭರಿಸಲಾಗದಷ್ಟು ಭಾರ. ಅಂದರೆ ಯಾವುದು ಹಗುರವಾಗಿರಬೇಕೆಂದುಕೊಂಡಿದ್ದೇವೋ ಅದೇ ಭಾರ.

ಈ ವಿರೋಧಾಭಾಸಗಳು ಅನ್ನುವಂತೆ ಕೂಡಿದ ತಾತ್ವಿಕ ನೆಲೆಗಟ್ಟಿನ ಮೇಲೆ ತನ್ನ ಕಾದಂಬರಿಗಳನ್ನು, ಪಾತ್ರಗಳನ್ನು ರೂಪಿಸುತ್ತಾನೆ, ಚೆಕ್ ಮೂಲದ ಈಗ ಫ್ರೆಂಚ್ ಭಾಷೆಯಲ್ಲಿ ಬರೆಯುತ್ತಿರುವ ಕಾದಂಬರಿಕಾರ ಮಿಲನ್ ಕುಂದೇರ.

ನಮ್ಮ ಅರಿವನ್ನು ನಮ್ಮ ಮನದಂತರಾಳದ ನೋವು, ನಲಿವು ಅಥವಾ ನಮ್ಮ ಚಿಂತನಾಶಕ್ತಿ ಮೂಡಿಸುತ್ತದಾ ಅಥವಾ ನಮ್ಮ ಸುತ್ತಲೂ ನಡೆಯುವ ದೈನಂದಿನ ಘಟನೆಗಳು ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತದೆಯಾ? ಹಾಗೆಯೇ ನಾವು ಬರೆಯುವುದು ಇಂಥದ್ದು ಮತ್ತು ಹೀಗೆ ಅನ್ನುವುದನ್ನು ನಿರ್ಧರಿಸುವುದು ನಮ್ಮ ಆಂತರಿಕ ತಲ್ಲಣವೋ ಅಥವಾ ನಮ್ಮ ಸುತ್ತಲೂ ನಡೆಯುತ್ತಿರುವ ವಿದ್ಯಮಾನಗಳಾ? ಹೀಗೆ ನಮ್ಮ ನಿಯಂತ್ರಣದಲ್ಲಿರದೇ ನಮ್ಮ ಸಾಕ್ಷಿಪ್ರಜ್ಞೆ ರೂಪಿಸದೇ ಇರುವ ನಮ್ಮ ಅರಿವು ನಮ್ಮದಾ? ಮನುಷ್ಯ ಸೃಷ್ಟಿಸಿದ ಈ ಕಂಪ್ಯೂಟರ್, ಸಿನೆಮಾ, ಯಾರೋ ಬರೆದ ಪುಸ್ತಕಗಳು, ಯಾರೋ ಹೇಳಿದ ಮಾತುಗಳನ್ನು ಕೇಳಿಕೊಂಡು ನಮ್ಮ ಪ್ರಜ್ಞೆ ರೂಪಿತವಾದಲ್ಲಿ ಅಂತ ಅಸ್ತಿತ್ವ ಎಷ್ಟು ಲಘುವಾದದ್ದು ಅದೇ Unbearable lighness of being.

ಇಂಥ ಅನೇಕ ತಾತ್ವಿಕ ಪ್ರಶ್ನೆಗಳನ್ನು ಕಾದಂಬರಿ ಬರೆಯುವ ಮೊದಲೇ ಹಾಕಿಕೊಂಡು ರೂಪಿಸುವಾಗ ಕಾದಂಬರಿ ತಾನು ಕಾಣದಿದ್ದನ್ನು ಶೋಧಿಸಲು ಸಾಧ್ಯವಾಗುತ್ತದಾ? ಹಾಗೆ ಗಮ್ಯ ಗೊತ್ತಿರುವುದು ತಪ್ಪಾ? ಕುಂದೇರನ ಉತ್ತಮ ಕೃತಿಯೆಂದು ಬಿಂಬಿತವಾಗಿರುವ, ಆಧುನಿಕ ಕ್ಲಾಸಿಕ್ ಎಂದೇ ಕರೆಯಲ್ಪಡುವ Unbearable lighness of being. ನಲ್ಲಿ ಈ ಆಶಯದ ಪಾತ್ರಗಳನ್ನೇ ಚಿತ್ರಿಸುತ್ತಾನೆ. ಮುಖ್ಯ ಭೂಮಿಕೆಯಲ್ಲಿರುವ ಟೊಮಸ್ ಒಬ್ಬ ವೈದ್ಯ, ತನ್ನ ಕೆಲಸದ ಮೇಲೆ ಆತನಿಗೆ ಎಷ್ಟು ಶ್ರದ್ಧೆಯಿದೆಯೋ ಅಷ್ಟೇ ಲಂಪಟ, ಆತ. ಆತನಿಗೆ ಕಾಮ ಮತ್ತು ಪ್ರೀತಿ ಎರಡು ಬೇರೆಬೇರೆ ಕ್ರಿಯೆಗಳು. ಆತ ತನ್ನ ಹೆಂಡತಿ ಟೆರೆಜಳನ್ನು ಪ್ರೀತಿಸುತ್ತಾನೆ ಆದರೆ ಬೇರೆ ಎಲ್ಲರನ್ನೂ ಕಾಮಿಸುತ್ತಾನೆ. ವಿಚಿತ್ರವೆಂದರೆ, ಆತನ ಹೆಂಡತಿ ಟೆರೆಜ ಅವನ ವಿರುದ್ಧ ಸಿಟ್ಟಿಗೇಳದೇ ಮತ್ತು ಹಾಗೆ ಸಿಟ್ಟಿಗೇಳಲಿಕ್ಕಾಗದ ತನ್ನ ದೌರ್ಬಲ್ಯವನ್ನು ಒಂದು ವ್ಯಸನವನ್ನಾಗಿ ಮಾಡಿಕೊಳ್ಳುತ್ತಾಳೆ, ಅದು ಅವಳಿಗೆ ಒಂದು ಹುತಾತ್ಮತೆಯನ್ನು ಕೊಡುತ್ತದೆ. ಈ ದೌರ್ಬಲ್ಯದ ವ್ಯಸನವೊಂದು ಬಹಳ ಪ್ರಬಲವಾದದ್ದೆಂದು ಹೇಳುತ್ತಾನೆ, ಕುಂದೇರ. ಆ ದೌರ್ಬಲ್ಯ ಒಂದು ಅರ್ಪಣಾಭಾವವನ್ನು ಕೊಡುತ್ತದೆ. ಇದಕ್ಕೆ ವಿರುದ್ಧವಾಗಿ ಟೊಮಸ್‌ನ ಗೆಳತಿ ಸಬ್ರೀನಾಳ ಪಾತ್ರವನ್ನು ಆಧುನಿಕ ಹೆಣ್ಣಾಗಿ ಅಭಿಪ್ರಾಯ ಸ್ವಾತಂತ್ರ್ಯವುಳ್ಳ ಒಬ್ಬ ಚಿತ್ರಕಾರಳಾಗಿ ಸೃಷ್ಟಿಸುತ್ತಾನೆ, ಕುಂದೇರ.

ಹೀಗೆ ಒಂದು ಸಿದ್ದಾಂತವನ್ನು ಇಟ್ಟುಕೊಂಡು ಕಾದಂಬರಿಯನ್ನು ಬರೆಯಬೇಕಾದಾಗ ಅದಕ್ಕೆ ಅನುಗುಣವಾಗಿ ಪಾತ್ರಗಳನ್ನೂ ಸೃಷ್ಟಿಸಬೇಕಾಗುತ್ತದೆ. ತನ್ನ ಲಘುತ್ವದ ಸಿದ್ಧಾಂತವನ್ನು ಬಿಂಬಿಸಲೆಂದೇ ಕಾಮ,ಲಂಪಟತನ ಇವುಗಳ ಪ್ರತಿಪಾದಕನಾಗಿ ಒಂದು ಪಾತ್ರವನ್ನು ಸೃಷ್ಟಿಸಬೇಕಾಗುತ್ತದೆ. ನಂತರ ಅದಕ್ಕೆ ವಿರುದ್ಧವಾದ ಪಾತ್ರ ಬೇಕಾಗುತ್ತದೆ. ಆಗ ಟೆರೆಜಾ ಸೃಷ್ಟಿಯಾಗುತ್ತಾಳೆ, ಆದರೆ ಅವಳು ಶಕ್ತಿಶಾಲಿಯಾದರೆ ಕಾದಂಬರಿಯ ಮೂಲ ಆಶಯಕ್ಕೆ ಹೊಡೆತ ಬೀಳುತ್ತದೆ. ಆದ್ದರಿಂದ ಅವಳು ತನ್ನ ದೌರ್ಬಲ್ಯವನ್ನು ಪ್ರೀತಿಸುತ್ತಾಳೆ. ಇಂತಹ ಪಾತ್ರವನ್ನು ಮತ್ತು ವ್ಯಸನವನ್ನು ವಿವರಿಸುತ್ತಾ ಕುಂದೇರಾ ಇದನ್ನು ತನ್ನ ಪ್ರಬಂಧ Dialogue on the art of novel ನಲ್ಲಿ ‘ವರ್ಟಿಗೊ’ (ತಡೆಯಲಾಗದ ಪಾತಳಿಗೆ ಬೀಳುವ ಮತ್ತು) ಎನ್ನುತ್ತಾನೆ. ಆಗ ಸ್ತ್ರೀತ್ವ, ನೈತಿಕತೆ ಮುಂತಾದ ಪ್ರಶ್ನೆಗಳಿಗೆ ಉತ್ತರಿಸಲೆಂದೇ ಇನ್ನೊಂದು ಪಾತ್ರ ಸೃಷ್ಟಿಯಾಗುತ್ತದೆ. ಇದು ಒಂದು ರೀತಿ ಲಾ ಆಫ್ ಆವರೇಜಿಂಗ್- ಕರಿಬಿಳಿ ಪಾತ್ರಗಳನ್ನು ನೇರವಾಗಿ ಸೃಷ್ಟಿಸದೇ ಕಂದಿನ ಛಾಯೆಗೆ ಅಕ್ಕಪಕ್ಕ ಸೃಷ್ಟಿಸಿ ಎರಡೂ ಒಂದೇ ಅಂತ ನಂಬಿಸುವುದು, ಹಾಗೇ ಸೂಕ್ಷ್ಮವಾಗಿ ನೊಡಿದರೆ ಎರಡೂ ಬೇರೆ ಅಂತ ಕೂಡ ಅನ್ನಿಸಬೇಕು.

ಕುಂದೇರನಿಗೆ ಈ ಬದುಕಿನ ಪರಿಪೂರ್ಣತೆಯ ಬಗ್ಗೆ ನಂಬಿಕೆಯಿಲ್ಲ. ಆತನ ಪಾತ್ರಗಳನ್ನು ಚಿತ್ರಿಸುವಾಗ ಆತನಿಗೆ ಪಾತ್ರಗಳ ಹೊರರೂಪಗಳ ಬಗ್ಗೆ ಅಷ್ಟು ಆಸಕ್ತಿಯಿಲ್ಲ. ಅಷ್ಟೇ ಅಲ್ಲ ಅವುಗಳ ಅಂತರಂಗದ ಕಾಳಜಿಗಳ ಬಗ್ಗೆಯೂ ಇವನಿಗೆ ಆಸಕ್ತಿಯಿದೆಯೇ ಇಲ್ಲವೇ ಎಂದು ಅನುಮಾನ ಬರುತ್ತದೆ. ತನ್ನ ಕಾದಂಬರಿಯ ಕೇಂದ್ರಪಾತ್ರಗಳು ನೋಡುವುದಕ್ಕೆ ಹೇಗಿದೆ ಅನ್ನುವುದನ್ನೂ ಆತ ವರ್ಣಿಸುವುದಿಲ್ಲ. ಕಾದಂಬರಿಯನ್ನು ಓದಿದ ಮೇಲೆಯೂ ಒಂದು ಖಾಲಿಭಾವ ಉಳಕೊಂಡರೆ ಅದು ಉದ್ದೇಶಪೂರ್ವಕವಾದದ್ದೇ ಎಂದು ಆತ ವಾದಿಸುತ್ತಾನೆ. ಒಂದು ಉತ್ತಮ ಓದು ಒಬ್ಬ ಉತ್ತಮ ಓದುಗನನ್ನೂ ಆಶಿಸುತ್ತದೆ ಅನ್ನುವುದು ಆತನ ವಾದ. ಈತನ ಪಾತ್ರಗಳನ್ನು ಇರಲಿ ಈತನ ಒಂದು ಕಾದಂಬರಿಯನ್ನು ಮಾತ್ರ ಓದಿದರೆ ಏನೂ ಅರ್ಥವಾಗದು. ಒಂದೊಂದು ಕಾದಂಬರಿಯೂ ಒಂದೊಂದು ಥೀಮನ್ನು ಪ್ರತಿಬಿಂಬಿಸುವುದರಿಂದ ಇವನ ಕಾದಂಬರಿಗಳು ಇನ್ನೂ ಬೆಳೆಯುವ ಹಂತದಲ್ಲಿಯೇ ಪೂರ್ಣವಾಗಿಬಿಡುತ್ತವೆ. ಈತ ಜೀವನ ಪೂರ ಬರೆದರೂ ಎಲ್ಲವೂ ಒಂದೇ ಕಾದಂಬರಿಯ ಪಾತ್ರಗಳಾಗಬಹುದು.

ಆಧುನಿಕ ಮನುಷ್ಯನ ಬದುಕನ್ನು ಈತ ಸರಳ ಎಂದು ಎಲ್ಲಿಯೂ ನಂಬುವುದಿಲ್ಲ. ಈತನ ಒಂದು ಕಾದಂಬg The book of Laughter and forgetting ನ ಏಳು ಅಧ್ಯಾಯಗಳೂ ಒಂದೊಂದು ಬೇರೆಯೇ ಕಾದಂಬರಿಯಾಗಬಹುದು ಎಂದು ವಾದಿಸಿದವರಿಗೆ ‘ನಾನು ಹಾಗೆ ಮಾಡಿದ್ದರೆ ಆಧುನಿಕ ಮನುಷ್ಯನ ಬದುಕನ್ನು ತೀರ ಸರಳೀಕರಿಸಿದ ಹಾಗಾಗಿಬಿಡುತ್ತಿತ್ತು ಅಂದಿದ್ದಾನೆ. ಒಂದೊಂದು ಪುಸ್ತಕವೂ ಒಂದೊಂದು ಗುಣವನ್ನು ಪ್ರತಿಪಾದಿಸಿದಲ್ಲಿ ಇಡೀ ಪುಸ್ತಕ ಒಬ್ಬ ಮನುಷ್ಯನಾಗಬಹುದು.’ ಅನ್ನುವುದು ಅವನ ವಾದ.

ಕುವೆಂಪುರವರ ‘ಮಲೆಗಳಲ್ಲಿ ಮದುಮಗಳು’ಕಾದಂಬರಿಯನ್ನು ನಾನು ಓದಿದಾಗ ಆದದ್ದು ಒಂದು ಪರಿಪೂರ್ಣ ಅನುಭವ. ಆದರೆ ಕುಂದೇರನ ನಾನು ಓದಿರುವ ಯಾವುದೇ ಪುಸ್ತಕದಲ್ಲಿಯೂ ಈ ಅನುಭವ ಸಿಕ್ಕಿಲ್ಲ. ಒಂದು ಸಮುದಾಯದ ಕತೆಗೆ ಈ ಸಿದ್ಧಾಂತಗಳ ಭಾರವಿಲ್ಲ. ಗುತ್ತಿ, ಪೀಂಚಲು, ತಿಮ್ಮಿ, ತಿಮ್ಮಪ್ಪ ಹೆಗಡೆ, ಐತು, ಸಣ್ಣಬೀರ, ದೊಡ್ಡಬೀರ, ಪುಟ್ಟಬೀರ, ಧರ್ಮು, ಹುಲಿಯ, ಇಂಥ ಅಸಂಖ್ಯ ಪಾತ್ರಗಳಲ್ಲಿ ಯಾವುದೇ ಪಾತ್ರಗಳು ಪರಿಪೂರ್ಣವೋ ಇಲ್ಲವೋ ಎಂದು ಅಕೆಡಿಮಿಕ್ ವಿಮರ್ಶಕರು ತಲೆಕೆಡಿಸಿಕೊಳ್ಳಬಹುದೇನೋ. ಆದರೆ, ಇವರ ತೀರ ಸಾಮಾನ್ಯ ಬದುಕಿನ ಅಸಾಮಾನ್ಯ ಕ್ಷಣಗಳನ್ನು ಆ ದೇಶ, ಕಾಲದ ಸೊಡರಿನಲ್ಲಿ ಕುವೆಂಪು ಹಿಡಿದು ಕೇವಲ ಒಂದೇ ಕಾದಂಬರಿಯಿಂದ ಮನುಕುಲದ ಚಿತ್ರಣವನ್ನು ನಮ್ಮಮುಂದೆ ಹಿಡಿದಿದ್ದಾರೆ. ಕುಂದೇರನನ್ನು ಓದಿದಾಗ ಅವನನ್ನು ಓದುತ್ತಿದ್ದೇವೆ ಅನ್ನುವ ಎಚ್ಚರ ಪ್ರತಿಕ್ಷಣದಲ್ಲಿಯೂ ನನಗೆ ಇತ್ತು. ಮತ್ತು ಅವನನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಅವನದೇ ವ್ಯಾಖ್ಯೆಗಳನ್ನೂ ಓದಬೇಕಾಯಿತು. ಆದರೆ ಮಲೆಗಳಲ್ಲಿ ಓದುತ್ತಿದ್ದಾಗ ಕುವೆಂಪುರವರು ನನ್ನ ಮನಸ್ಸಿನಿಂದ ಮರೆಯಾಗಿದ್ದರು. ಅಲ್ಲಿ ಗುತ್ತಿಯಿದ್ದ, ತಿಮ್ಮಿಯಿದ್ದಳು, ಮಲೆನಾಡಿತ್ತು, ಜನರ ರಾಗ, ದ್ವೇಷಗಳಿತ್ತು, ಶತಮಾನದ ಹಿಂದೆ ಹೋಗಿದ್ದೆ. ಕುವೆಂಪು ಮರೆಯಾಗಿ ಗೆದ್ದಿದ್ದರು.

ಮಹಾಕಾದಂಬರಿಗಳ ಓದಿನ, ಮತ್ತು ನೆನಪಿನ ಶಕ್ತಿಯ ಬಗ್ಗೆ ಕುಂದೇರನ ವಾದವೊಂದಿದೆ. ಕಾದಂಬರಿಯ ವಸ್ತು ಮತ್ತು ವಾಸ್ತು ಹಂದರದಲ್ಲಿ ಸಂಕೀರ್ಣವಾದಂತೆ ಅದರ ಗಾತ್ರವೂ ದೊಡ್ದದಾಗುತ್ತ ಹೋಗುತ್ತದೆ. ಪ್ರತಿಪಾತ್ರಗಳನ್ನೂ ಪರಿಪೂರ್ಣಗೊಳಿಸಲು ಹೋದಾಗ ಈ ಸಮಸ್ಯೆ ಏಳುತ್ತದೆ. ಮುಖ್ಯವಾಗಿ ಟಾಲ್‌ಸ್ಟಾಯ್ ಅಥವಾ ಹೋಮರನನ್ನು ಕುರಿತು ಈ ಮಾತನ್ನು ಆತ ಹೇಳಿರಬಹುದಾಗಿದ್ದರೂ ನಮ್ಮ ‘ಮಲೆಗಳಲ್ಲಿ.. ‘ಗೂ ಅದನ್ನು ವಿಸ್ತರಿಸಬಹುದು. ಅವನ ವಾದ, ಒಂದು ದೊಡ್ಡ ಅರಮನೆಯ ವಾಸ್ತುಶಿಲ್ಪದ ಸಂಕೀರ್ಣತೆಯನ್ನು ಒಂದೇಸಾರಿ ಹೇಗೆ ಅನುಭವಿಸಲು ಸಾಧ್ಯವಿಲ್ಲವೋ ಹಾಗೆಯೇ ಕಾದಂಬರಿಯನ್ನು ಓದಿ ಮುಗಿಸಿದಾಗ ಕಾದಂಬರಿ ಹೇಗೆ ಶುರುವಾಯಿತು ಅನ್ನುವುದೇ ಮರೆತುಹೋಗಿದ್ದರೆ ಕಾದಂಬರಿ ಲೇಖಕನ ಪರಿಕಲ್ಪನೆಯಲ್ಲಿ ಸಂಪೂರ್ಣವಾಗಿದ್ದರೂ ಓದುಗ ಈ ಪಾತ್ರಗಳ ಸಂಬಂಧಗಳಲ್ಲಿ ಕಳೆದುಹೋಗಿರುತ್ತಾನೆ. ಅವನು ಇದನ್ನು ವಿವರಿಸುವುದು ನಮ್ಮ ನೆನಪಿನ ಶಕ್ತಿಯ ಮಿತಿಯಿಂದ. ಒಬ್ಬ ಸಾಮಾನ್ಯ ಓದುಗನಿಗೆ ಎಂಟುನೂರ ಪುಟದ ಕಾದಂಬರಿಗಳನ್ನು ಜೀವನದಲ್ಲಿ ಎಷ್ಟು ಬಾರಿ ಓದಲು ಸಾಧ್ಯ ಎನ್ನುವವರಿಗೆ ಇವನ ವಾದ ಸರಿ ಎನ್ನಿಸಲೂ ಬಹುದು. ಅದಕ್ಕೇ ಏನೋ, ಆತನ ಎಲ್ಲ ಕಾದಂಬರಿಗಳೂ ಸೇರಿ ಒಂದು ಕತೆಯಾಗಬಹುದು ಎನ್ನುವ ಹಲವರ ವಾದ ಸರಿಯೇನೋ..

ನಾನು ಕುಸುಮಬಾಲೆಯನ್ನು ಓದಿದಾಗ ಅಲ್ಲಿನ ಪಾತ್ರಗಳ ಹೆಸರುಗಳನ್ನು ಮತ್ತು ಅವುಗಳ ಸಂಬಂಧಗಳನ್ನು ಒಂದು ರೀತಿಯ ವಂಶವೃಕ್ಷದಂತೆ ಒಂದು ಹಾಳೆಯಲ್ಲಿ ಬರೆದುಕೊಂಡಿದ್ದೆ. ಮಾರ್ಕ್ವೆಜ್‌ನ ‘ಒನ್ ಹಂಡ್ರೆಡ್ ಇಯರ್ಸ್ ಆಫ್ ಸೊಲಿಟ್ಯೂಡ್’ ನಲ್ಲಿ ಕಾದಂಬರಿಯ ಶುರುವಿನಲ್ಲಿ ಒಂದು ವಂಶವೃಕ್ಷವಿದೆ. ಗ್ರಾಮಾಯಣದ ಹೊಸ ಮುದ್ರಣದಲ್ಲಿ ಪಾತ್ರಗಳ ಪರಿಚಯವಿದೆ. ಪಮುಕನ ‘ಮೈ ನೇಮ್ ಈಸ್ ರೆಡ್’ ನಲ್ಲಿ ಆಟೊಮನ್ ಸಾಮ್ರಾಜ್ಯದ ನಕ್ಷೆಯಿದೆ.

ವಿಸ್ತಾರವಾದ ಓದಿಗೆ ನಮಗೆ ಸಮಯವಿಲ್ಲದೆ ಕಾದಂಬರಿಯನ್ನು ಪೂರಾ ಅನುಭವಿಸಬೇಕಾದಾಗ ಹೀಗೆ ಅಡ್ಡದಾರಿಗಳನ್ನು ಹಿಡಿದರೆ ಅದು ನಮ್ಮ ತಪ್ಪೋ ಅಥವಾ ಕೃತಿಕಾರನ ತಪ್ಪೋ? ಹೀಗೆ ಹಗುರವಾಗಿ ಜೀವಿಸುವುದನ್ನಲ್ಲವೇ ಕುಂದೇರ ಕರೆದದ್ದು ‘ಅನ್‌ಬೇರಬಲ್’ ಎಂದು.

Saturday, March 21, 2009

ಒಬಾಮಾ ಎಂಬ ದೊಡ್ಡ ಬಜೆಟ್ ಚಿತ್ರ.

ನವೆಂಬರ್ ಆರು, ೨೦೦೮ರಂದು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದೆ. ಹಿಂದಿನ ದಿನವಷ್ಟೇ ಅಮೆರಿಕಾದ ಚುನಾವಣಾ ಫಲಿತಾಂಶ ಹೊರಬಿದ್ದಿತ್ತು. ಬರಾಕ್ ಹುಸೇನ್ ಒಬಾಮ ತನ್ನ ಪ್ರತಿಸ್ಪರ್ಧಿ ಮೆಕೇನನ್ನು ಭಾರಿ ಅಂತರದಿಂದ ಸೋಲಿಸಿದ್ದ. ಶಿಕಾಗೋದ ಗ್ರಾಂಟ್ ಪಾರ್ಕಿನಲ್ಲಿ ಎರಡೂವರೆಲಕ್ಷ ಜನರ ಮುಂದೆ ತನ್ನ ವಿಜಯವನ್ನು ಸಂಭ್ರಮಿಸಿದ್ದ. ಹೆಂಡತಿ ಮಿಶೇಲ್ ಮತ್ತು ಮಕ್ಕಳಾದ ಮಲಿಯ ಮತ್ತು ತಾಶಾರ ಜತೆಗೆ ವೇದಿಕೆಯಮೇಲೆ ಓಡಿಯಾಡಿ ಖುಷಿಪಟ್ಟಿದ್ದ. ಅತ್ತ ಫೀನಿಕ್ಸಿನಲ್ಲಿ ಜಾನ್ ಮಕೇನ್ ವೀರೋಚಿತವಾಗಿ ತನ್ನ ಸೋಲನ್ನೊಪ್ಪಿಕೊಂಡಿದ್ದ.

ಅಮೆರಿಕಾ ಬದಲಾವಣೆಗೆ ಸಿದ್ಧವಿದೆ ಎಂದು ಪ್ರಪಂಚಕ್ಕೆ ತೋರಿಸಿತ್ತು

ಮಾರನೆಯ ದಿನ ಆಸ್ಪತ್ರೆಗೆ ಕೆಲಸಕ್ಕೆ ಬಂದಾಗ ಒಂದು ರೀತಿಯ ದಿವ್ಯ ಮೌನ. ಯಾರೂ ಮಾತಾಡುತ್ತಿಲ್ಲ. ಒಬಾಮಾ ಗೆದ್ದ ಸಂಭ್ರಮವನ್ನು ವಾಟರ್ ಕೂಲರ್ ಮಾತುಕತೆಯಾಗಿಯಾದರೂ ಸಿಕ್ಕವರೊಂದಿಗೆ ಗಾಸಿಪ್ ಮಾಡುವುದರ ‘ಪೊಲಿಟಿಕಲ್ ಕರೆಕ್ಡೆಡ್‌ನೆಸ್’ ಬಗ್ಗೆ ಯೋಚಿಸುತ್ತಿದ್ದೆ. ಬರೇ ಕಕೇಶಿಯನ್ನರ ನಡುವೆ ಒಬ್ಬನೇ ನನ್ನಂತವನು ಸೇರಿಕೊಂಡುಬಿಟ್ಟಾಗ ಇಂತಹ ಕೆಟ್ಟ ಪಿರಿಪಿರಿಯನ್ನು ನಾನು ಅನುಭವಿಸಿದ್ದೇನೆ. ಇಂಗ್ಲಿಷ್ ಅರ್ಥವಾಗದ ಗುಜರಾತಿಗಳೋ ಮೆಕ್ಸಿಕನ್ನರೋ ರೋಗಿಗಳು ಬಂದಾಗ ದುಭಾಶಿಗಳನ್ನು ಆಸ್ಪತ್ರೆಗೆ ಕರೆಸುವ ಕಿರಿಕಿರಿಯನ್ನು ತಡೆಯದೆ ಎಷ್ಟೋ ಜನ ನನ್ನ ಸಹಕೆಲಸಗಾರರು ನನ್ನ ಮುಂದೆಯೇ ‘ಈ ಜನಕ್ಕೆ ಇಂಗ್ಲಿಶ್ ಕಲಿಯಲು ಏನು ಬಂದಿರುವುದು, ರೋಗ?’ ಎಂದು ಗೊಣಗಿ, ನನ್ನನ್ನು ನೋಡಿ ತಕ್ಷಣ ಎಚ್ಚತ್ತುಕೊಂಡು ‘ಸಾರಿ’ ಎಂದು ತುಟಿಕಡಿದುಕೊಳ್ಳುತ್ತಾರೆ. ಇಂತಹ ರೇಸಿಸ್ಟ್ ಕಮೆಂಟುಗಳಿಂದ ನನಗಾದ ಅಸಹನೆಯನ್ನು ನಾನು ಕೊಂಚ ತೋರಿಸಿಕೊಂಡಲ್ಲಿ ‘ಹೇ ನಾವಿಲ್ಲಿ ರೇಸ್ ಬಗ್ಗೆ ಮಾತಾಡುತ್ತಿಲ್ಲ, ಡಾಕ್ಟರ್. ಇಂಗ್ಲಿಶನ್ನು ಕಲಿಯದೇ ಇರುವ ಕಾರಣ ಆಗುವ ಅನನುಕೂಲ ಮತ್ತು ಚಿಕಿತ್ಸೆಯಲ್ಲಿನ ವಿಳಂಬ ಮತ್ತು ದುಭಾಷಿಗಳಿಗೆ ಕೊಡಬೇಕಾದ ಸಂಬಳದಿಂದ ಆಸ್ಪತ್ರೆಗೆ ಹಾಗೂ ತೆರಿಗೆದಾರನಿಗಾಗುವ ಖರ್ಚನ್ನಷ್ಟೇ ಗಮನದಲ್ಲಿಟ್ಟುಕೊಂಡರೂ ಇದು ಸರಿ ಅನ್ನಿಸುವುದಿಲ್ಲ ಅಲ್ಲವೇ ಅಂದು ‘You do not worry doc, You are pretty much white’ ಎಂದು ನನ್ನನ್ನು ಸಮಾಧಾನಪಡಿಸಿಯೂ ಇದ್ದಾರೆ. ನಾನು ನಕ್ಕು ನನ್ನ ಕೆಲಸವನ್ನು ಮುಂದುವರೆಸುತ್ತಾ, ನನ್ನ ವೃತ್ತಿಯ ವತಿಯಿಂದ ನನ್ನ ಬಣ್ಣಕ್ಕೆ ದೊರೆತಿರುವ ‘ಟೂ ಶೇಡ್ ಲೈಟ್’ ಅನ್ನು ಕೊಂಚ ಖುಷಿಯಿಂದಲೇ ಸ್ವೀಕರಿಸಿದ್ದೇನೆ.

ಆದರೆ, ಅಂದು ಮಧ್ಯಾಹ್ನ ಹನ್ನೆರಡಾದರೂ ಇಡೀ ಜಗತ್ತೇ ಮಾತಾಡುತ್ತಿರುವ ಈ ಚಾರಿತ್ರಿಕ ವಿಜಯದ ಬಗ್ಗೆ ಹಾಹೂ ಎಂದೂ ಅನ್ನದಿದ್ದಾಗ ನಾನು ಕೆಲಸ ಮಾಡುತ್ತಿರುವುದು ಇಂತಾ ರೆಡ್‌ನೆಕ್‌ಗಳ ಜತೆಗಾ ಅನ್ನುವ ಅನುಮಾನ ಜಾಸ್ತಿಯಾಗುತ್ತಾ ಹೋಗಿತ್ತು. ಇಡೀ ಜಗತ್ತೇ ಸಂಭ್ರಮಿಸುತ್ತಿದೆ ಅನ್ನುವ ಮತ್ತು ಟೀವಿ ಚಾನೆಲ್‌ಗಳ ಬಿತ್ತರಿಕೆ ಬರೀ ಭ್ರಮೆಯಾ ಅನ್ನಿಸಿತ್ತು.

ಸಂಜೆ ಏಳುಗಂಟೆಗೆ ಪಾಳಿಬದಲಿಸುವ ಸಮಯ. ಆಗತಾನೇ ಬಂದ ನರ್ಸೊಬ್ಬಳು ತನ್ನ ಕೆಲಸದಲ್ಲಿ ತೊಡಗಿಕೊಳ್ಳುತ್ತಲೇ ಇದ್ದಳು. ಆದರೆ, ನನ್ನನ್ನು ಕಾಡಿದಂತೆ ಅವಳಿಗೂ ಈ ಸೂತಕದ ವಾತಾವರಣ ಕಾಡಿತೇ ಗೊತ್ತಿಲ್ಲ-ಒಂದೈದು ನಿಮಿಷ ತಡೆಯುವಷ್ಟು ತಡೆದು- ‘ವೆಲ್, ನಾನು ಬಂದಂದಿನಿಂದ ನೋಡುತ್ತಲೇ ಇದ್ದೇನೆ. ಯಾರೂ ಏನೂ ಮಾತಾಡುತ್ತಿಲ್ಲ. ನಾನೇ ಮಾತಾಡುತ್ತೇನೆ. ನಾನು ಶಿಕಾಗೋದವಳು. ಒಬಾಮ ಗೆದ್ದಿದ್ದಾನೆ. ಅಷ್ಟಕ್ಕಾದರೂ ಖುಷಿಪಡಲೇಬೇಕು ಅಂದವಳೇ ‘ಒಬಾಮ, ಒಬಾಮ..’ ಎಂದು ತನ್ನ ವಿಜಯದ ಸೂಚಕದಂತೆ ಒಂದು ಸಣ್ಣ ಟ್ವಿಸ್ಟ್ ಅನ್ನು ಮಾಡಿ, ‘ಹುರ್ರೇ’ ಅಂದು ನನಗೆ ಹೈಫೈ ಮಾಡಿ ಮತ್ತೆ ತನ್ನ ಕೆಲಸದಲ್ಲಿ ನಿರತಳಾದಳು.

ನಾನು ನೋಡಿದ ಈ ಒಂದು ಪ್ರಹಸನ ಇಡೀ ಅಮೆರಿಕಾವನ್ನು ಪ್ರತಿನಿಧಿಸುತ್ತದೆ ಎಂದು ಹೇಳುವುದು ಸರಿಯಲ್ಲವೇನೋ? ಹೀಗೇಕೆ? ಎಂದು ಒದ್ದಾಡುತ್ತಿದ್ದ ನನ್ನ ತಳಮಳವನ್ನರಿತುಕೊಂಡಂತೆ ಆ ಸಂಜೆ ಆ ನರ್ಸು ಹೇಳಿದಳು. ‘ಒಬಾಮಾ ಗೆದ್ದುದಕ್ಕೆ ಬಹಳ ಮಂದಿ ನಿಜವಾಗಿಯೂ ಖುಷಿಪಟ್ಟಿದ್ದಾರೆ. ಒಬಾಮಾ ಅನ್ನುವುದು ಒಂದು ಶಕ್ತಿಯಾಗಿ ಈ ಚುನಾವಣೆಯಲ್ಲಿ ಹೊರಬಂದಿದೆ. ಈ ದೇಶ ಕರಿ ಮತ್ತು ಬಿಳಿ ಎಂದು ಧ್ರುವೀಕೃತವಾದಷ್ಟು ಬೇರೆ ಎಲ್ಲಿಯೂ ಆಗಿಲ್ಲ. ಜೆಸ್ಸಿ ಜ್ಯಾಕ್‌ಸನ್ ನೋಡು. ತನ್ನ ಕರಿಯ ಓಟುಗಳ ಬೆಂಬಲದಿಂದಲೇ ಗೆಲ್ಲುತ್ತೇನೆ ಎಂದು ತಿಳಿದು ಅದನ್ನೇ ತನ್ನ ಪ್ರಚಾರದ ಅಸ್ತ್ರವಾಗಿ ಮಾಡಿಕೊಂಡಿದ್ದ. ಹ್ಯಾಲಿ ಬೆರ್ರಿಗೆ ಆಸ್ಕರ್ ಬಂದರೆ ‘ಬಣ್ಣದ ಹುಡುಗಿ’ಯ ಯಶಸ್ಸಿದು ಎಂದು ಎಲ್ಲರೂ ಬೀಗುತ್ತಾರೆ. ಆದರೆ, ಒಬಾಮ ಹಾಗೆ ಮಾಡಲಿಲ್ಲ, ಎಂದೂ ತನ್ನ ಮೈಬಣ್ಣವನ್ನು ಚುನಾವಣಾ ಪ್ರಣಾಳಿಕೆಯಾಗಿ ಬಳಸಿಕೊಳ್ಳಲಿಲ್ಲ. ಹವಾಯಿಮೂಲದ ಅಮ್ಮ, ಕೀನ್ಯಾದ ಮೂಲದ ಅಪ್ಪ, ಅಪ್ಪ ಸತ್ತಾಗ ಅಮ್ಮ ಮದುವೆಯಾದದ್ದು ಇಂಡೊನೇಷ್ಯಾದ ಮೂಲದ ವಿದ್ಯಾರ್ಥಿಯೊಬ್ಬನನ್ನು. ‘ನಮ್ಮ ಮನೆಯ ಹಬ್ಬದೂಟಗಳು ವಿಶ್ವಸಂಸ್ಥೆಯ ಊಟದಮನೆಯನ್ನು ನೆನಪು ಮಾಡುತ್ತದೆ’ ಎಂದು ತನ್ನ ವೈವಿಧ್ಯ ‘ವರ್ಣರಂಜಿತ’ ಭೂತದ ಒಬಾಮಾನನ್ನು ಕಂಡು ಕರಿಯ ಪ್ರಜೆಗಳೂ ಈತ ತಮ್ಮ ಜನಾಂಗವನ್ನು ಪ್ರತಿನಿಧಿಸುವಷ್ಟು ಕರಿಯನೇ? (Is he black enough?)ಎಂದು ಅನುಮಾನ ಪಟ್ಟಿದ್ದೂ ನಿಜ. ಈಗ ಒಬಾಮಾನನ್ನು ಇಷ್ಟಪಡುವ ನಮಗೂ ಇವನ ಗೆಲುವಿನ ಬಗ್ಗೆ ಒಂದು ಚೂರೂ ಅನುಮಾನವಿಲ್ಲದವರಿಗೂ ಈಗ ದೇಶದ ಮೊದಲ ಕುಟುಂಬವಾಗಿ ಒಬ್ಬ ಕರಿಯಮನುಷ್ಯನನ್ನು ಒಪ್ಪಿಕೊಳ್ಳಲು ಕಣ್ಣುಗಳು ಏಕ್‌ದಂ ನಿರಾಕರಿಸುತ್ತವೆ. ಅವನ ಗಟ್ಟಿ ಉಚ್ಚಾರವನ್ನು ಕೇಳಲು ಕಿವಿಗಳು ನಿರಾಕರಿಸುತ್ತವೆ. ಬಯಸಿ, ಬಯಸಿ ಮನೆ ಬದಲಾಯಿಸಿದರೂ, ಮನೆಯನ್ನು ನಿನಗೆ ಬೇಕಾದ ಹಾಗೆ ಕಟ್ಟಿದ್ದರೂ ಮತ್ತು ಆ ಮನೆ ಕಟ್ಟುವುದು ಈಗ ತೀರ ಅವಶ್ಯಕ ಅನ್ನಿಸಿದ್ದರೂ ಆ ಮನೆಯಲ್ಲಿ ಇರುವುದಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ ನೋಡು, ಹಾಗೆಯೇ, ಇದೂ ಕೂಡ. ಎಲ್ಲ ಸರಿಹೋಗುತ್ತದೆ, ನೋಡು’ ಎಂದಳು.

ಚುನಾವಣೆಯ ಮುಂಚಿದ್ದುದು ಈ ಚುನಾವಣೆಯನ್ನು ಒಬಾಮಾ ಗೆದ್ದಲ್ಲಿ ಇದೊಂದು ಚಾರಿತ್ರಿಕ ವಿಜಯವಾಗುತ್ತದೆ ಅನ್ನುವ ದೊಡ್ಡ ಕನಸು, ಹಂಬಲ. ರಿಪಬ್ಲಿಕನ್ನರ ಯುದ್ಧನೀತಿ ಮತ್ತು ಸೋತು ಸುಣ್ಣವಾಗಿದ್ದ ಅಮೆರಿಕಾದ ಆರ್ಥಿಕ ನೀತಿ ಬಯಸಿದ್ದು ಬದಲಾವಣೆಯನ್ನು. ಈ ಬದಲಾವಣೆಗೆ ಒಬಾಮಾ ಮಾದರಿಯಾಗಿ ಕಂಡದ್ದು ಆಶ್ಚರ್ಯವೇನೂ ಅಲ್ಲ. ಯಾವುದೇ ರೀತಿ ನೋಡಿದರೂ ಮೆಕೇನ್ ಒಬಾಮಾನಿಗಿಂತಲೂ ಮುತ್ಸದ್ದಿ ರಾಜಕಾರಣಿ ಅನ್ನುವುದರಲ್ಲಿ ಸಂಶಯವಿರಲಿಲ್ಲ. ಆದರೆ, ತನ್ನ ಅಸ್ಖಲಿತ ವಾಕ್ಚಾತುರ್ಯದಿಂದ ಮತ್ತು ಜನ ಬಯಸುತ್ತಿರುವ ‘ಬದಲಾವಣೆ’ಯ ಪ್ರತಿನಿಧಿಯಾಗಿ ತನ್ನ ಚುನಾವಣಾ ಪ್ರಣಾಳಿಕೆಗಳ ಅನನ್ಯತೆಯಿಂದ ಒಬಾಮಾ ಗೆದ್ದ.

ಒಬಾಮಾ ಚುನಾವಣೆಯಲ್ಲಿ ಗೆದ್ದಿದ್ದು ಒಂದು ದೊಡ್ಡ ಬಜೆಟ್ ಸಿನೆಮಾ ತನ್ನೆಲ್ಲ ಪ್ರಚಾರತಂತ್ರಗಳನ್ನುಳಿಸಿಕೊಂಡು ಬಿಡುಗಡೆಗೆ ಸಿದ್ಧವಾದಂತೆ ಇತ್ತು. ರಾಜಕೀಯ ಪಂಡಿತರ ಪ್ರಕಾರ ಈತನ ಈವರೆಗಿನ ರಾಜಕೀಯ ಸಾಧನೆಗಳು ಹೇಳಿಕೊಳ್ಳುವಂತದ್ದೇನೂ ಇಲ್ಲದಿದ್ದರೂ, ಚುನಾವಣೆಯನ್ನು ಗೆಲ್ಲಲು ಎಲ್ಲವನ್ನೂ ವ್ಯವಸ್ಥಿತವಾಗಿ ಮಾಡಿದ್ದ. ಈತನ ಚುನಾವಣಾಪ್ರಣಾಳಿಕೆಗಳು ಮತ್ತು ಚುನಾವಣೆಯನ್ನು ಗೆಲ್ಲುವ ಪ್ರಚಾರಕ್ರಿಯೆ ಗೆದ್ದಿದೆ. ಬರೇ ಗೆಲ್ಲುವುದಷ್ಟೇ ಸಾಧನೆಯಾಗಿದ್ದ ಕಾಲ ಮುಗಿದಿದೆ. ಒಂದು ಚರಿತ್ರೆಯನ್ನು ಮಾಡಿಯಾಗಿದೆ. ಚುನಾವಣೆ ಗೆದ್ದನಂತರದ ತನ್ನ ಶಿಕಾಗೋದಾ ಭಾಷಣದಲ್ಲಿ ‘ತನ್ನ ಗುರಿ ಮುಟ್ಟಲು ಒಂದು ವರ್ಷ ಆಗಬಹುದು, ತನ್ನ ಆಡಳಿವತಾವಧಿ ಪೂರಾ ಬೇಕಾದರೂ ಬೇಕಾಗಬಹುದು, ಅಥವಾ ಇನ್ನೊಂದು ಬಾರಿ ಅಧಿಕಾರಕ್ಕೆ ಬರಬೇಕಾದರೂ ಪರವಾಗಿಲ್ಲ. ಆದರೆ, ಗುರಿ ಸಾಧಿಸುವುದು ಮಾತ್ರ ಗ್ಯಾರಂಟಿ’ ಎಂದಿದ್ದ ಒಬಾಮಾ. ಅಧಿಕಾರಕ್ಕೆ ಬಂದ ಹದಿನಾರು ತಿಂಗಳಲ್ಲಿ ಇರಾಕಿನಿಂದ ಅಮೆರಿಕಾದ ಸೇನೆಯನ್ನು ವಾಪಸ್ಸು ಕರೆಸಿಬಿಡುತ್ತೇನೆ ಅಂದಿದ್ದಾತ ಈಗ ‘ಆ ಪ್ರಕ್ರಿಯೆಯನ್ನು ಸ್ವಲ್ಪ ರೀಫೈನ್ ಮಾಡಬೇಕಾಗಿದೆ’ ಎಂದು ಜಾಣತನದಿಂದ ಫೀಲ್ಡಿಗಿಳಿದ ರಾಜಕಾರಣಿಯಂತೆ ಮಾತಾಡಿದ್ದ.

ಒಬಾಮಾನ ಮುಂದಿರುವ ಸವಾಲು ಕಠಿಣವಾದದ್ದು ಅನ್ನುವುದರಲ್ಲಿ ಅನುಮಾನವೇನಿಲ್ಲ. ದೊಡ್ಡ ದೊಡ್ಡ ಬ್ಯಾಂಕುಗಳ ಕುಸಿತ, ರಿಯಲ್ ಎಸ್ಟೇಟ್ ಸೋಲು, ಸತ್ತ ಕುದುರೆಗೆ ಛಡಿ ಬಡಿದಂತೆ ಬಡಿದು ಉದ್ದೀಪಿಸಲು ಉತ್ತೇಜನಾ ಪ್ಯಾಕೇಜ್ ಅನ್ನು ಉಪಯೋಗಿಸಲು ಪ್ರಯತ್ನ ಪಡುತ್ತಿರುವ ಕಾರ್ ಕಂಪೆನಿಗಳು, ದಿನೇದಿನೇ ಹೆಚ್ಚಾಗುತ್ತಿರುವ ನಿರುದ್ಯೋಗ, ಈ ಉತ್ತೇಜನಾ ಪ್ಯಾಕೇಜಿನ ದುರುಪಯೋಗ ಮುಂತಾದುವುಗಳಿಂದ ಅಮೆರಿಕಾ ಬಸವಳಿದಿದೆ.

ಆದರೆ, ಈಗ ಸಿನೆಮಾ ಬಿಡುಗಡೆಯಾಗಿದೆಯಷ್ಟೇ. ಇದು ಅಂತಿಂತ ಸಿನೆಮಾ ಅಲ್ಲ. ವರ್ಣರಂಜಿತ ದೊಡ್ಡ ಬಜೆಟ್ ಸಿನೆಮಾ. ಸಿನೆಮಾದ ಯಶಸ್ಸನ್ನು ಕಾದುನೋದಬೇಕಷ್ಟೇ. ಈಗ ಈ ಒಬಾಮಾನ ‘ಉತ್ತೇಜನಾ ಪ್ಯಾಕೆಜ್’ಗೆ ಸಿಕ್ಕಿರುವ ಪ್ರತಿಕ್ರಿಯೆ ನಮ್ಮ ಗಾಂಧಿನಗರದ ನಿರ್ಮಾಪಕರು ‘ಅಮೋಘ ಎರಡನೇ ವಾರ’ ಎಂದು ಹೇಳಿಕೊಳ್ಳುವ ಸಿನೆಮಾದ ಯಶಸ್ಸಿನ ಮಾಪಕದಂತೆಯೇ ಇದೆ. ಯಾರಿಗೂ ಯಾವುದೂ ಸ್ಪಷ್ಟವಿಲ್ಲ.

ಒಬಾಮ ಎಂತಹ ಆಡಳಿತಗಾರ ಅನ್ನುವುದು ಅಷ್ಟು ಸ್ಪಷ್ಟವಾಗಿಲ್ಲದಿರಬಹುದು. ಆದರೆ ಆತ ಚಾಣಾಕ್ಷ ರಾಜಕಾರಣಿಯೆನ್ನುವುದರಲ್ಲಿ ಅನುಮಾನವಿಲ್ಲ. ಇಲ್ಲದಿದ್ದರೆ ಸ್ಟೇಟ್ ಸೆನೆಟರ್ ಆದ ಕೆಲವೇ ವರ್ಷಗಳಲ್ಲಿ ಅಮೆರಿಕಾದಂತ ದೇಶದ ಅಧ್ಯಕ್ಷನಾಗುವುದು ಅಷ್ಟು ಸುಲಭವಲ್ಲ. ಆದರೆ, ಅವನ ಗೆಲುವು ಸೋಲುಗಳು ಅವನ ಬಣ್ಣದಿಂದ ನಿರ್ಧರಿತವಾಗದಿರುವುದರ ಮೇಲೆ ಅಮೆರಿಕದ ಪ್ರಜಾತಂತ್ರದ ಮತ್ತು ವರ್ಣಸಹಿಷ್ಣುತೆಯ ಗೆಲುವಿದೆ.

ಸಿನೆಮಾ ಬಿಡುಗಡೆಯಾದಾಗ ಯಶಸ್ಸಿನ ಬಗ್ಗೆ ಅನುಮಾನವಿದ್ದರೂ ಬಿಡುಗಡೆಯಾದ ದಿನದ ಸಂಭ್ರಮಕ್ಕೆ, ಖುಷಿಗೆ ಬರವೇ?

Sunday, March 8, 2009

ಹೆರೊಯಿನ್, ಗೇಮ್ ಶೋ ಮತ್ತು ಪ್ರಶಸ್ತಿ.

ಮಾದಕವಸ್ತುಗಳ ವ್ಯಸನಿಯಾತ. ಆತನೇನು, ಅದೊಂದು ರೀತಿಯ ಕಲ್ಟ್. ತೊಂಭತ್ತರ ದಶಕದಲ್ಲಿ ಹೆರೊಯಿನ್ ಅನ್ನುವ ‘ವಸ್ತು’ವಿಗೆ ವ್ಯಸನಿಗಳಾದವರು ಎಷ್ಟು ಮಂದಿಯೋ. ಇದಕ್ಕಾಗಿ ಅವರು ತಮ್ಮ ಮನೆ ಮಠ ಕಳಕೊಳ್ಳುತ್ತಾರೆ, ಅತಿ ಹೀನವಾದ ಕಳ್ಳತನಗಳನ್ನು ಮಾಡುತ್ತಾರೆ. ಕಾನೂನನ್ನು ಮುರಿಯುವುದು ಚಟವಾಗುತ್ತದೆ. ವ್ಯಸನವೆಂಬುದೇ ವ್ಯಸನವಾಗುತ್ತದೆ. ಕೊನೆಗೆ, ಒಂದು ದಿನ ತನ್ನ ವ್ಯಸನದಿಂದ ‘ಕೋಲ್ಡ್ ಟರ್ಕಿ’ ಮುಕ್ತವಾಗಲು ಆತ ಪ್ರಯತ್ನಿಸುತ್ತಾನೆ. ಆದರೆ ಅಷ್ಟು ದಿನ ಈ ವಸ್ತುಗಳಿಗೆ ಒಗ್ಗಿದ್ದ ಆ ದೇಹಕ್ಕೆ ಮತ್ತೆ ಮತ್ತೆ ಹೆರೊಯಿನ್ ಬೇಕೆನಿಸುತ್ತದೆ. ಕೆಲವೇ ಕ್ಷಣಗಳಲ್ಲಿ ಅವನ ಕೂದಲು ನಿಮಿರುತ್ತದೆ, ಆಕಳಿಕೆ, ಹೊಟ್ಟೆಯಲ್ಲಿ ಸಂಕಟ, ಕಣ್ಣಲ್ಲಿ ನೀರು, ಮೈಕೈ ನೋವು.. ಮತ್ತು ಬೇಧಿ. ಆಗ ಅವನ ಇನ್ನೊಬ್ಬ ಗೆಳೆಯ ಈತನ ಕಷ್ಟ ನೋಡಲಾರದೇ ಓಪಿಯಮ್‌ನ ಎರಡು ಸಪಾಸಿಟರಿ (ಮಲದ್ವಾರದ ಮೂಲಕ ಇಟ್ಟುಕೊಳ್ಳುವ ಔಷಧಿ) ಯನ್ನು ಕೊಡುತ್ತಾನೆ. ಈತ ಅದನ್ನು ಸಮರ್ಪಕವಾಗಿ ಉಪಯೋಗಿಸುತ್ತಾನೆ, ಕೂಡ. ಆದರೆ ಬೇಧಿಯನ್ನು ತಡಕೊಳ್ಳಲಾರದೇ ಅಲ್ಲಿಯೇ ಇದ್ದ ಟಾಯ್ಲೆಟ್ಟೊಂದಕ್ಕೆ ನುಗ್ಗುತ್ತಾನೆ. ಅದು ಇಡೀ ಎಡಿನ್‌ಬರೋ ಪ್ರಾಂತ್ಯದಲ್ಲಿಯೇ ಇರುವ ಅತೀ ಹೊಲಸು ಟಾಯ್ಲೆಟ್ಟು. ಗೋಡೆ, ನೆಲವೆಲ್ಲಾ ಮಲದಿಂದ ಗಲೀಜು. ಒಳಗೆ ಹೋದರೆ ವಾಕರಿಕೆ ಬರುವಷ್ಟು ಅಸಹ್ಯ. ಅಲ್ಲಿ ತನ್ನ ಕೆಲಸ ಪೂರೈಸಿದ ಮೇಲೆ ಗೊತ್ತಾಗುತ್ತದೆ, ಆತನಿಗೆ ತಾನು ಬೇಧಿಯೊಂದಿಗೆ ಕಳಕೊಂಡದ್ದು ತನ್ನ ಸಪಾಸಿಟರಿಗಳನ್ನು ಕೂಡ ಎಂದು. ತಕ್ಷಣ ಏನೂ ಯೋಚಿಸದೇ ಆ ಮಲದಿಂದ ತುಂಬಿರುವ ಆ ಟಯ್ಲೆಟ್ ಬೌಲಿನಲ್ಲಿ ಇಳಿದು ಈಜುತ್ತಾ ತನ್ನ ಸಪಾಸಿಟರಿಯನ್ನು ತೆಗೆದುಕೊಂಡು ನಿಧಿ ಸಿಕ್ಕಷ್ಟೇ ಖುಷಿಯಿಂದ ‘ನೌ ಐ ಅಮ್ ರೆಡಿ’ ಅನ್ನುತ್ತಾನೆ. ಆತನ ಅಂಗಾಂಗವೆಲ್ಲವೂ ‘ಶೈಟ್ಸ್’

ಇದು ೧೯೯೬ರಲ್ಲಿ ಬಿಡುಗಡೆಯಾದ ‘ಟ್ರೈನ್‌ಸ್ಪಾಟಿಂಗ್’ ಎನ್ನುವ ಈ ಚಿತ್ರದ ಒಂದು ದೃಶ್ಯ. ಇವಾನ್ ಮೆಕ್‌ಗ್ರಿಗರ್ ಪ್ರಧಾನ ಭೂಮಿಕೆಯಲ್ಲಿರುವ ಈ ಚಿತ್ರದ ನಿರ್ದೇಶಕ ಸ್ಲಮ್‌ಡಾಗ್ ಖ್ಯಾತಿಯ ಡ್ಯಾನಿ ಬೊಯ್ಲ್. ಈ ಚಿತ್ರ ಬ್ರಿಟಿಶ್ ಫಿಲ್ಮ್ ಸೊಸೈಟಿಯಿಂದ ಸಾರ್ವಕಾಲಿಕ ಶ್ರೇಷ್ಠ ೧೦೦ ಬ್ರಿಟಿಶ್ ಸಿನೆಮಾಗಳಲ್ಲಿ ಒಂದು ಎಂದು ದಾಖಲೆಯಾಗಿದೆ.

ಇದೇ ಡ್ಯಾನಿ ಬೊಯ್ಲ್‌ನ ಸ್ಲಮ್ ಡಾಗ್ ಮಿಲಿಯೇನರ್ ಚಿತ್ರದಲ್ಲಿ ಒಬ್ಬ ಕೊಳೆಗೇರಿಯ ಹುಡುಗ ಅಮಿತಾಬ್ ಬಚ್ಚನ್‌ನನ್ನು ನೋಡುವ ಮತ್ತು ಆತನ ಒಂದು ಹಸ್ತಾಕ್ಷರವನ್ನು ಪಡೆಯುವ ಸಲುವಾಗಿ ತಾನು ಕೂತಿದ್ದ ಮಲದ ಗುಂಡಿಯ ಹೊಲಸಲ್ಲಿ ಹಾರಿ ಮೈಯೆಲ್ಲಾ ಮಲವಾದರೂ ಅದನ್ನು ಲೆಕ್ಕಿಸದೇ ಸೀದಾ ಹಾಗೆಯೇ ಹೋಗಿ ಅಮಿತಾಬನ ಹಸ್ತಾಕ್ಷರವನ್ನು ಪಡೆದು ಧನ್ಯೋಸ್ಮಿ ಅನ್ನುತ್ತಾನೆ.

ಇಂಥ ಚಿತ್ರಕ ದೃಶ್ಯಗಳು ಕಲೆಗೆ, ಚಿತ್ರದ ಆಶಯಕ್ಕೆ ಪೂರಕವಾಗಿದೆ ಅನ್ನಿಸದೇ ಬಲವಂತವಾಗಿ ತುರುಕಲಾಗಿದೆ ಅನ್ನಿಸಿದರೆ ಅಲ್ಲಿಗೆ ನಿರ್ದೇಶಕ ಸೋಲುತ್ತಾನೆ. ಟ್ರೈನ್‌ಸ್ಪಾಟಿಂಗ್‌ನ ಹಸಿಹಸಿ ಕಾಮಕೇಳಿಗಳೂ, ಅಲ್ಲಿಯ ಪಾತ್ರಗಳ ಭಾಷೆ, ಮಾದಕ ವಸ್ತುಗಳನ್ನು ನೇರ ನಾಡಿಗೇ ಶೂಟ್ ಮಾಡಿಕೊಳ್ಳುವ ಈ ಜಂಕಿಗಳ ಕೊಳಕು ಸಿರಿಂಜು ಮತ್ತು ಸೂಜಿಗಳು, ಅವರ ಅಜಾಕರೂಕತೆಯಿಂದ ಸಾಯುವ ಅವರದೇ ಯಾರದೋ ಒಂದು ಮಗು -ಇವೆಲ್ಲ ಅವರ ಬದುಕಿನ ಒಂದು ಭಾಗ. ವ್ಯಸನವೇ ಮುಖ್ಯವಾದವನಿಗೆ ದಿನಾ ಬೆಳಿಗ್ಗೆ ಯಾಕೆ ಏಳಬೇಕು ಅಂದರೆ ಮತ್ತೊಂದು ಶಾಟ್ ಹೆರೊಯಿನ್‌ಗೆ ಅನ್ನುವುದೇ ಸತ್ಯ. ಸಾಮಾನ್ಯ ಮನುಷ್ಯನಿಗೆ ಅಸಹ್ಯ ತರುವ ಈ ದೃಶ್ಯಗಳು ಆ ಜಂಕಿಗಳ ಜಗತ್ತಿನ ದೈನಿಕ. ನಿರ್ದೇಶಕ ಆದಷ್ಟೂ ವಾಸ್ತವಕ್ಕೆ ಬದ್ಧನಾಗಲು ಪ್ರಯತ್ನಿಸಿದ್ದಾನೆ.

ಟ್ರೈನ್‌ಸ್ಪಾಟಿಂಗ್ ಪ್ರಾಯಶಃ ಸ್ಲಮ್‌ಡಾಗಿಗಿಂತ ಉತ್ತಮ ಚಿತ್ರ, ಆದರೆ ಅದನ್ನು ನೋಡುವುದಕ್ಕೆ ಬೇರೆಯೇ ಮನಸ್ಥಿತಿ ಬೇಕು. ಸ್ಲಮ್‌ಡಾಗ್ ಚಿತ್ರದಲ್ಲಿ ಮಲದಲ್ಲಿ ಬಿದ್ದ ಹುಡುಗನ ನೋಡಿದಾಗ ಒಂದು ಕ್ಷಣ ‘ಶೀ’ ಅನಿಸಿದರೂ ನಂತರವೇ ಇಡೀ ಸನ್ನಿವೇಶದ ಮುಗ್ಧತೆ ಮನಸ್ಸಿಗೆ ಪರಿಣಾಮಕಾರಿಯಾಗಿ ತಟ್ಟುತ್ತದೆ. ಅದೇ ಟ್ರೈನ್‌ಸ್ಪಾಟಿಂಗ್‌ನಲ್ಲಿ ಮಲದಲ್ಲಿ ಬಿದ್ದ ವ್ಯಸನಿಯನ್ನು ನೋಡಿ ಅಸಹ್ಯವಾಗುತ್ತದೆ. ಆದರೆ ಆ ವ್ಯಸನಿಗೆ ಅದು ಅನಿವಾರ್ಯ. ಹೆಚ್ಚು ಕಮ್ಮಿ ಒಂದೇ ಸನ್ನಿವೇಶವನ್ನು ಬೇರೆಬೇರೆ ರೀತಿಯಲ್ಲಿ ಆತ್ಯಂತಿಕವಾಗಿ ಉಪಯೋಗಿಸಿಕೊಂಡಿರುವುದು ನಿರ್ದೇಶಕನ ಜಾಣತನವನ್ನು ತೋರುತ್ತದೆ. ಇಲ್ಲಿ ಇಂಗ್ಲೆಂಡ್ ಭಾರತಗಳು ಸಾಂದರ್ಭಿಕ ಅಷ್ಟೇ.

ಈಗ ಸ್ಲಮ್ ಡಾಗ್ ಎಂಟು ಆಸ್ಕರ್‍ಗಳನ್ನು ಪಡೆದು ಈ ವರ್ಷದ ಅತ್ಯುತ್ತಮ ಚಿತ್ರ ಎಂದು ಹೇಳಲ್ಪಟ್ಟಿದೆ. ಪಶ್ಚಿಮದ ಮಾಧ್ಯಮಗಳು ಈ ಚಿತ್ರವನ್ನು ಹಾಡಿ ಹೊಗಳಿವೆ. ಡ್ಯಾನಿ ಬಾಯ್ಲ್, ಅನಿಲ್ ಕಪೂರ್, ದೇವ್ ಪಟೇಲ್ ಮತ್ತು ಫ್ರೀಡಾರಿಗೆ ಸಂದರ್ಶನ ಕೊಟ್ಟು ಸಾಕಾಗಿದೆ. ಕೊಳೆಗೇರಿಯ ಮಕ್ಕಳು ಲಾಸ್ ಏಂಜಲೀಸ್‌ಗೆ ಹೋಗಿ ರೆಡ್ ಕಾರ್ಪೆಟ್ ಮೇಲೆ ನಡೆದಾಗಿದೆ. ರಹಮಾನ್ ‘ಜೈ ಹೋ’ ಎಂದಿದ್ದಾನೆ.

ಇಂಡಿಯಾದ ಮಾಧ್ಯಮಗಳು ಅಷ್ಟೊಂದೇನೂ ಉದಾರವಾಗಿಲ್ಲ, ಕೊಳೆಗೇರಿಯ ಜೀವನವನ್ನು ವೈಭವೀಕರಿಸಿ ಭಾರತದ ಒಂದು ಮುಖವನ್ನು ಮಾತ್ರ ತೋರಿಸಲಾಗಿದೆ ಎಂದು ಆಕ್ಷೇಪಣೆ ತೆರೆಯಲಾಗಿದೆ. ರಾಷ್ಟ್ರಿಯಾತಾವಾದಿಗಳು ಇದು ಅಪ್ಪಟ ದೇಶದ್ರೋಹ ಎಂದಿದ್ದಾರೆ. ಶ್ಯಾಮ್ ಬೆನೆಗಲ್ ಕೂಡ ‘ನಾನು ಗಾಂಧಿಯನ್ನು ಕುರಿತು ಚಿತ್ರ ಮಾಡಿದ್ದೆ. ನನಗೆ ಒಂದೂ ಆಸ್ಕರ್ ಸಿಗಲಿಲ್ಲ. ಗಾಂಧಿಯ ಬಗ್ಗೆ ಚಿತ್ರ ಮಾಡಿದ ಆಟೆನ್‌ಬರೋಗೆ ಸಿಕ್ಕ ಆಸ್ಕರ್‍ಗಳನ್ನು ನೋಡಿ’ ಎಂಬಂತ ಹೇಳಿಕೆಗಳನ್ನು ಇದೇ ಸಂದರ್ಭದಲ್ಲಿ ಕೊಟ್ಟಿದ್ದಾನೆ.

ಇದು ಹೊರಗಿನವರ ಚಿತ್ರ. ಡ್ಯಾನಿ ಬೊಯ್ಲ್ ಮತ್ತು ದೇವ್ ಪಟೇಲ್ ಇಬ್ಬರೂ ಬ್ರಿಟಿಷ್ ಪ್ರಜೆಗಳು. ಬರೆದ ವಿಕಾಸ್ ಸ್ವರೂಪ್ ಪ್ರೆಟೋರಿಯಾದಲ್ಲಿರುವ ಭಾರತೀಯ ಹೈ ಕಮಿಷನರ್. ಇಲ್ಲಿನ ತಂತ್ರಜ್ಞರೂ ಹೊರಗಿನವರೇ. ನಮ್ಮ ರಹಮಾನ್ ಮತ್ತು ಇತರೇ ತಂತ್ರಜ್ಞರು ಇನ್ನೂ ಒಳ್ಳೆ ಕೆಲಸವನ್ನು ಬೇರೆ ಚಿತ್ರಗಳಲ್ಲಿ ಮಾಡಿದ್ದಾರೆ. ಆದರೆ, ಬೇರೆಯೇ ಕಾರಣಗಳಿಂದ ಅವರುಗಳಿಗೆ ಈ ಜಾಗತಿಕ ಪ್ರಶಸ್ತಿ ಸಿಕ್ಕಿದೆ. ಹೊರಗಿನ ನೋಟ ಹೊರಗಿನವರಿಗೆ ಇಷ್ಟವಾಗಿದೆ ಆದ್ದರಿಂದ ಹೊರಗಿನವರು ಕೊಡುವ ಆಸ್ಕರ್ ಪ್ರಶಸ್ತಿಯೂ ಇದಕ್ಕೆ ಸಿಕ್ಕಿದೆ ಅನ್ನುವುದೂ ಒಂದು ವಾದ.

ಆದರೆ, ಟ್ರೈನ್‌ಸ್ಪಾಟಿಂಗ್‌ಗೆ ಯಾಕೆ ಇಂಥ ಪ್ರಶಸ್ತಿಗಳು ಬರಲಿಲ್ಲ, ಬರುವುದೂ ಇಲ್ಲ. ಯಾಕೆಂದರೆ, ಸ್ಲಮ್‌ಡಾಗಿನಲ್ಲಿರುವ ಜೋಪಡಿಯ ಹುಡುಗನೊಬ್ಬ ಕೋಟ್ಯಾಧಿಪತಿಯಾಗುವ ಫೀಲ್‌ಗುಡ್ ಅಂಶ ಇಲ್ಲಿಲ್ಲ. ಟ್ರೈನ್‌ಸ್ಪಾಟಿಂಗ್ ಕಟು ವಾಸ್ತವವಾದಿ ಚಿತ್ರ.
ಈ ಹೊತ್ತಿನಲ್ಲಿ ನನಗೆ ನೆನಪಿಗೆ ಬರುವುದು ಲಂಕೇಶರ ‘ಅಕ್ಕ’ ಇದು ಕ್ಯಾತ ಅಥವಾ ಕೃಷ್ಣ ಅನ್ನುವ ಕೊಳೆಗೇರಿಯ ಹುಡುಗ ಮುಂದೊಂದು ದಿನ ಹೇಳಿಕೊಳ್ಳುವ ತನ್ನದೇ ಕತೆ. ಲಂಕೇಶರ ಕಾದಂಬರಿಯ ಪಾತ್ರಗಳಾದ ದೇವೀರಿ, ಪದ್ದಿ, ಖಡವಾ, ನಾಗ್ಯಾಗಳಿಗೆ ಸ್ಲಮ್‌ಡಾಗ್‌ನ ಜಮಾಲನಂತೆ ಮಹತ್ತರವಾದ ಆಕಾಂಕ್ಷೆಗಳಿದ್ದರೂ ಇಲ್ಲಿಂದ ಮುಕ್ತಿಯೇ ಇಲ್ಲ. ಅದಕ್ಕೆ ದಾರಿಗಳೂ ಇಲ್ಲ. ಹಾಗೆಯೇ ಕೊಳೆಗೇರಿಯ ಇನ್ನೊಂದು ಚಿತ್ರಣ ಕನ್ನಡದ ‘ಸ್ಲಮ್ ಬಾಲ’ ಅನ್ನುವ ಚಿತ್ರದಲ್ಲಿ ಯಥೋಚಿತವಾಗಿ ನಿರೂಪಣೆಯಾಗಿದೆ. ಅಗ್ನಿ ಶ್ರೀಧರರ ‘ದಾದಾಗಿರಿಯ ದಿನಗಳು’ ಪುಸ್ತಕದ ಕೆಲವು ಭಾಗಗಳನ್ನು ಆಧರಿಸಿ ನಿರ್ಮಿಸಿರುವ ಈ ಚಿತ್ರ ೨೦೦೮ರ ಬೆಂಗಳೂರಿನ ಕೊಳೆಗೇರಿಗಳ ಭೂಗತ ಜೀವನದ ಬಗ್ಗೆ ಬೆಳಕು ಚೆಲ್ಲುತ್ತದೆ. ಕೊಳೆಗೇರಿಯಲ್ಲಿರುವ ರೌಡಿಗಳ ಬಗ್ಗೆ ಮತ್ತು ಅಲ್ಲಿಂದ ಹೊರಗೆ ಬರುವುದು ಎಷ್ಟು ದುಸ್ಸಾಧ್ಯ ಅನ್ನುವ ಬಗ್ಗೆ ಅಥವಾ ಅಲ್ಲಿನ ಕೂಪ ಎಷ್ಟು ಬಲವಾಗಿದೆ ಎಂತಲೇ ಹೇಳುತ್ತಾ‌ಇಂದಿನ ಕೊಳೆಗೇರಿಗಳೂ ಸಹ ಹೇಗೆ ಚದರಡಿಗೆ ಬೆಲೆ ಕೇಳುತ್ತಾ ಬೆಳೆದಿವೆ ಅನ್ನುವ ವಾಸ್ತವ ಚಿತ್ರಣ ಕೊಡುತ್ತದೆ. ಇವೂ ಕೂಡ ಟ್ರೈನ್‌ಸ್ಪಾಟಿಂಗ್‌ನಷ್ಟೇ ವಾಸ್ತವ. (ಸಿನೆಮ್ಯಾಟಿಕ್ ಅಂಶಗಳನ್ನು ನಾನು ಹೋಲಿಸುತ್ತಿಲ್ಲ)

ಸ್ಲಮ್‌ಡಾಗ್‌ನ ಕಲಾವಂತಿಕೆಯ ಬಗ್ಗೆ ಯಾವ ಸಂದೇಹ ಇಲ್ಲದಿದ್ದರೂ ಇದು ಮುಂದಿಡುವ ಒಬ್ಬ ಕೊಳೆಗೇರಿಯ ಹುಡುಗ ತನ್ನ ಬದುಕಿನಿಂದಲೇ ಈ ಸ್ಪರ್ಧೆಯನ್ನು ಯನ್ನು ಗೆಲ್ಲುವ ಪ್ರಶ್ನೆಗಳಿಗೆ ಉತ್ತರ ಹೇಳುವಷ್ಟು ವಿವೇಕವನ್ನು ಪಡೆದಿರುವ ಅಂಶ ಒಂದು ಧನಾತ್ಮಕ ಫ್ಯಾಂಟಸಿಯ ರೂಪಕವಾಗಬಹುದೇ ಹೊರತು ವಾಸ್ತವದಲ್ಲಿ ಅಲ್ಲ. ಇಂಥಾ ರೂಪಕಗಳ ಬಗ್ಗೆಯೂ ನಂಬಿಕೆ ಲಂಕೇಶರಿಗಾಗಲೀ ಅಗ್ನಿ ಶ್ರೀಧರ್‌ರಿಗಾಗಲೀ ಇಲ್ಲ. ಹಾಗಾಗಿ ಕೊಳೆಗೇರಿಗಳ ನೈತಿಕ ಸಾಮಾಜಿಕ ಅಥವಾ ದೈನಿಕದ ಉದ್ಧಾರದ ಕೆಲಸವನ್ನು ತಮ್ಮ ಕೃತಿಗಳು ಮಾಡುತ್ತವೆ ಅನ್ನುವ ನಂಬಿಕೆಯೂ ಅವರಿಗಿಲ್ಲ. ಟ್ರೈನ್‌ಸ್ಪಾಟಿಂಗ್ ಚಿತ್ರಿಸುವಾಗ ಪ್ರಾಯಶಃ ಡ್ಯಾನಿ ಬಾಯ್ಲ್‌ಗೂ ಇರಲಿಲ್ಲವೇನೋ. ಅವರ ಬದುಕನ್ನು ನಮ್ಮ ಮುಂದೆ ಇಡುವುದಷ್ಟೇ ಇವರ ಕೆಲಸ.

ಅನುಭವಜನ್ಯವಾಗಿ ಬರಲೀ ಅಥವಾ ಅದೊಂದು ಕಲ್ಪಿತ ಕಥೆಯಾಗಲೀ, ವಾಸ್ತವವಾದೀ ಲೇಖಕರುಗಳ/ನಿರ್ದೇಶಕರುಗಳ ಈ ಕ್ರೀಟಿಕಲ್ ಇನ್‌ಸೈಡರ್ ಗುಣ ಸ್ಲಮ್‌ಡಾಗ್ ಗಿರುವ ಒಂದು ಸಾಧ್ಯತೆಯನ್ನೇ ಅನುಮಾನದಿಂದ ನೋಡುತ್ತದೆ. ಇಲ್ಲಿ ಯಾವ ರೀತಿಯ ಸಿನೆಮ್ಯಾಟಿಕ್ ಜಸ್ಟೀಸ್‌ಗೆ ಜಾಗವಿಲ್ಲ. ಅಕ್ಕ ಕಾದಂಬರಿಯಲ್ಲಿ ಕ್ಯಾತ ಅನಾಥಾಶ್ರಮದ ಲೆಕ್ಕದ ಪುಸ್ತಕ ಮಾತ್ರ ಬರೆಯುತ್ತಾನೆ, ದೇವೀರಿ ಸೂಳೆಯಾಗುತ್ತಾಳೆ. ಪದ್ದಿ ಮೇಕಪ್ ಮಾಡಿಕೊಂಡು ಹೊಸಾ ಸಿನೆಮಾದ ಅವಕಾಶಕ್ಕಾಗಿ ಕಾಯುತ್ತಿದ್ದಾಳೆ. ಸ್ಲಮ್‌ಬಾಲ ತಾನು ನಂಬಿದ ಪೋಲೀಸ್ ಅಧಿಕಾರಿಯಿಂದಲೇ ಹತನಾಗುತ್ತಾನೆ. ಇಲ್ಲಿ ಕ್ಯಾತ ದೇವೀರಿಯರಿಗೆ ಕಾಮನೆಗಳು, ಆಕಾಂಕ್ಷೆಗಳು ಇವೆಯೇ ಹೊರತು ಅವುಗಳನ್ನು ಕಾರ್ಯರೂಪಕ್ಕೆ ತರಲು ಯಾವುದೇ ಮಾರ್ಗವಿಲ್ಲ. ಪ್ರಾಯಶಃ ಅದು ವಾಸ್ತವ ಕೂಡ,

ಈಗ ನಾವು ಸ್ಲಂಡಾಗ್ ಮಿಲಿಯನೇರ್ ಅನ್ನು ನೋಡುತ್ತಿರುವುದೂ, ಕೊಂಡಾಡುತ್ತಿರುವುದೂ ಕೂಡ ಇಂಥದೇ ಒಂದು willing suspension of disbelief ನಲ್ಲಿಯೇ ಅಲ್ಲವಾ? ಅಥವಾ ಈ ಚಿತ್ರ ನಮ್ಮ ಮುಂದಿಡುವ ಇಚ್ಛಾಶಕ್ತಿ ಅಥವಾ ಹೋಪ್‌ಗೆ ನಿರ್ದೇಶಕನ ಅಥವಾ ಚಿತ್ರದ ಇತರೇ ಅವಗುಣಗಳನ್ನು ಮರೆಸಿಬಿಡುವ ಶಕ್ತಿ ಇದೆಯಾ?

ಅಥವಾ ಡ್ಯಾನಿ ಸರಿಯಾದ ಸಮಯದಲ್ಲಿ ಸರಿಯಾದ ಕಡೆ ಸರಿಯಾದ ಸಿನೆಮಾ ನಿರ್ಮಿಸುವ ಜಾಣನಾ?