Sunday, September 20, 2009

ಹಿಂಸೆಯೆಂಬ ಕಂಡಿಶನ್ಡ್ ರಿಫ್ಲೆಕ್ಸೂ, ತೆನಾಲಿರಾಮನ ಬೆಕ್ಕೂ

ಈ ಜಗತ್ತಿನಲ್ಲಿ ಕೆಟ್ಟದು ಅನ್ನುವುದಿಲ್ಲದಿದ್ದರೆ ಒಳ್ಳೆಯದಕ್ಕೆ ಬೆಲೆ ಬರುತ್ತಿತ್ತಾ? ಒಳ್ಳೆಯದು, ಕೆಟ್ಟದ್ದು ಅನ್ನುವ ಬೈನರಿ ನಿಯಮ ಈ ಪ್ರಪಂಚದಲ್ಲಿ ಇರಲೇಬೇಕು. ಆಗಲೇ ಒಳ್ಳೆಯದು ಒಳ್ಳೆಯದಾಗುವುದು. ಒಂದು ಕ್ರಿಯೆ ‘ಕೆಟ್ಟದ್ದು’ ಅನ್ನುವುದು ಗೊತ್ತಿದ್ದರೂ ಕೆಲವರು ಅದನ್ನು ತಮ್ಮ ಪ್ರವೃತ್ತಿಯಾಗಿ ಆಯ್ದುಕೊಳ್ಳುತ್ತಾರಲ್ಲ. ಅದನ್ನು ನಾವು ಒಪ್ಪಿಕೊಳ್ಳುವುದು ಹೇಗೆ?

ಒಳ್ಳೆಯದು ಕೆಟ್ಟದ್ದು ಎನ್ನುವ ನೈತಿಕ ಧ್ರುವಗಳನ್ನು ನಮಗೆ ಹೊರೆಸಬೇಕಾಗಿರುವುದು ಯಾರು? ನಮ್ಮ ಸಮಾಜವೇ? ನಮ್ಮ ಒಳಗಿನ ಧ್ವನಿಯೇ? ಅಥವಾ ಇಂತದ್ದು ಮಾಡಿದರೆ ನಿನಗೆ ಶಿಕ್ಷೆಯಾಗುತ್ತದೆ ಆದ್ದರಿಂದ ಇದನ್ನು ನೀನುಮಾಡಬಾರದು ಎಂದು ಹೇಳುವ ಸರಕಾರವೇ? ಒಂದು ಕ್ರಿಯೆಯ ಹೊಣೆಗಾರಿಕೆಯಿಂದ, ಅದರ ಪರಿಣಾಮದಿಂದ ಮಾತ್ರ ಅದನ್ನು ಒಳ್ಳೆಯದು, ಕೆಟ್ಟದ್ದು ಎಂದು ಕಪ್ಪುಬಿಳಿಯಾಗಿ ವಿಂಗಡಿಸಬಹುದೇ?

ಸರಕಾರ ಅಥವಾ ಇಂಥ ಯಾವುದೇ ಒಂದು ನೈತಿಕ ಪೋಲಿಸ್ ಆಗಿ ಕಾಯುವ ಸಂಸ್ಥೆ ಒಬ್ಬ ಮನುಷ್ಯ ಮಾಡಿದ ಅಪರಾಧಕ್ಕೆ ಶಿಕ್ಷೆ ಕೊಡಬಹುದೇ ಹೊರತು, ಆತ ಈ ಅಪರಾಧವನ್ನು ಮಾಡದೆಯೇ ಇರುವಂತೆ ತಡೆಯುವುದು ಸಾಧ್ಯವೇ? ಹಾಗೆ ಮಾಡುವುದು ಸಾಧ್ಯವಾದ ಪಕ್ಷದಲ್ಲಿ ಅಂತ ಜಗತ್ತಿನಲ್ಲಿ ಅಪರಾಧವೇ ಇರುವುದಿಲ್ಲವೇ? ಬರೇ ‘ಒಳ್ಳೆ’ಯವರಿಂದಲೇ ತುಂಬಿಹೋಗಿರುತ್ತದೆಯೇ? ಅಥವಾ ಅಪರಾಧ, ಹಿಂಸೆ ಕೂಡ ಒಂದು ಆಯ್ಕೆಯೇ?

ಪಾವ್ಲೋವ್‌ನ ಪ್ರಯೋಗ ಎಲ್ಲರಿಗೂ ಗೊತ್ತೇ ಇದೆ. ಈತ ನಾಯಿಯ ಮಾಂಸತಿನ್ನುವ ಕ್ರಿಯೆಗೆ ಗಂಟಾನಾದವನ್ನು ಜೋಡಿಸಿ ಮಾಂಸವಿಲ್ಲದೇ ಇದ್ದಾಗೂ ಬರೇ ಗಂಟಾನಾದಕ್ಕೆ ನಾಯಿ ಜೊಲ್ಲು ಸುರಿಸುವುದನ್ನು ನಿದರ್ಶಿಸಿ ಕಂಡಿಶನ್ಡ್ ರಿಫ್ಲೆಕ್ಸ್ ಅನ್ನು ವಿವರಿಸಿದ. ನಮ್ಮ ತೆನಾಲಿ ರಾಮನ ದಂತಕತೆಗಳಲ್ಲಿ ಇದನ್ನೇ ಸ್ವಲ್ಪ ಮಾರ್ಪಡಿಸಿ ಬೆಕ್ಕಿಗೆ ಬಿಸಿಹಾಲು ಕುಡಿಸಿ ಬೆಕ್ಕು ಮುಖ ಸುಟ್ಟಿಕೊಂಡಾಗ ಆ ಬೆಕ್ಕು ಹಾಲನ್ನೂ ಕುಡಿಯದ ಹಾಗೆ “ಡಿಕಂಡಿಶನ್’ ಮಾಡಿದ್ದೂ ಈ ಪಾವ್ಲೊವಿನ ಪ್ರಯೋಗದಷ್ಟೇ ಕುತೂಹಲಕಾರಿ.

ಈ ಹಿಂಸೆ ಒಂದು ಮನಸ್ಸಿನ ಈ ರೀತಿಯ ಕಂಡೀಶನ್ಡ್ ರಿಫ್ಲೆಕ್ಸ್ ಆದರೆ ಈ ಹಿಂಸೆಯನ್ನು ತೆನಾಲಿ ರಾಮನ ಬೆಕ್ಕಿಗಾದಂತೆ ‘ಡಿಕಂಡಿಷನ್’ ಮಾಡಲು ಸಾಧ್ಯವೇ? ಅಂದರೆ, ಹಿಂಸೆ ಮಾಡುವವನಿಗೆ ಹಿಂಸಿಸುವ ಕ್ರಿಯೆ ಸಂತೋಷವನ್ನು ಕೊಡುವಂತಿದ್ದರೆ (ಪಾವ್ಲೊವ್‌ನ ಪ್ರಯೋಗದಲ್ಲಿ ಮಾಂಸಕ್ಕೆ ಮತ್ತು ಮಾಂಸ ತಿನ್ನುವ ಮುಂಚಿನ ಗಂಟಾನಾದಕ್ಕೆ ನಾಯಿ ಜೊಲ್ಲು ಸುರಿಸಿದಂತೆ) ಈ ಸಂತೋಷವನ್ನು ಆತನಿಂದ ಕಿತ್ತುಕೊಂಡರೆ, ಆಗ ಆತ ಈ ಹಿಂಸೆಯನ್ನು ಪೂರ್ಣ ಬಿಟ್ಟುಬಿಡುತ್ತಾನೆಯೇ? ( ನಾಯಿ ಮಾಂಸ ತಿನ್ನುವುದನ್ನು ಬಿಟ್ಟಂತೆ ಅಲ್ಲ, ತೆನಾಲಿ ರಾಮನ ಬೆಕ್ಕುಹಾಲು ಕುಡಿಯುವುದನ್ನು ಬಿಟ್ಟಂತೆ)

* * *

ಆತನ ಹೆಸರು ಅಲೆಕ್ಸ್.

ಆತನಿಗೆ ಹಿಂಸೆಯೆಂಬುದು ಒಂದು ಆಟ, ಚಟ, ಕಲೆ. ಆತ ಹಾಲಿನಲ್ಲಿ ಹ್ಯಾಲಿಸಿನೋಜನ್ನುಗಳನ್ನು ಸೇರಿಸಿಕೊಂಡು ಕುಡಿಯುತ್ತಾನೆ, (ಇಲ್ಲಿನ ವಿಪರ್ಯಾಸವನ್ನು ಗಮನಿಸಿ. ಹಾಲು ಮುಗ್ಧತೆಯನ್ನು ಸಂಕೇತಿಸಿದರೆ, ಅದಕ್ಕೆ ಬೆರಸುವ ಮಾದಕವಸ್ತುಗಳ ಮಿಶ್ರಣ ಕಲುಶಿತ ಮುಗ್ಧತೆಯಾ?) ಲೈಬ್ರರಿಯಿಂದ ತಂಪಾಡಿಗೆ ತಾನು ಬರುತ್ತಿದ್ದ ಒಬ್ಬ ಮುದುಕನನ್ನು ಸ್ನೇಹಿತರ ಜತೆ ಸೇರಿ ಸಾಯಬಡಿಯುತ್ತಾನೆ. ಅಪ್ರಾಪ್ತ ವಯಸ್ಸಿನ ಹುಡುಗಿಯರ ಜತೆ ಸುಖಿಸುತ್ತಾನೆ, ಅಂಗಡಿಗೆ ಹೋಗಿ ಕದಿಯುತ್ತಾನೆ, ಮುದಿದಂಪತಿಗಳೆಂದು ಲವಲೇಶ ಕರುಣೆಯಿಲ್ಲದೆ ಸಾಯಬಡಿಯುತ್ತಾನೆ.

ಇವನಿಗೆ ತನ್ನ ಈ ಹಿಂಸೆಯ ಬಗ್ಗೆ ಸ್ವಲ್ಪವೂ ಪಾಪಪ್ರಜ್ಞೆಯಿಲ್ಲ. ಹಿಂಸಿಸುವುದನ್ನು ತನ್ನ ಧರ್ಮದಂತೆ ಆತ ನಡೆಸಿಕೊಂಡು ಬರುತ್ತಾನೆ. ಇದರಿಂದ ಯಾರು ಸತ್ತರೂ ಅವರನ್ನು ಈತನೇ ಸಾಯುವಂತೆ ಹೊಡೆದರೂ ಆತನಿಗೆ ಏನೂ ಅನ್ನಿಸುವುದೇ ಇಲ್ಲ. ಬದಲಿಗೆ ಒಂದು ವಿಲಕ್ಷಣ ಖುಷಿಯಾಗುತ್ತಿರುತ್ತದೆ.

ಇದಕ್ಕೆ ಕುಮ್ಮಕ್ಕು ಕೊಡುವುದಕ್ಕೆ ಅವನದೇ ಒಂದು ಗ್ಯಾಂಗಿದೆ. ವಿಚಿತ್ರವಾದ ಸ್ಲ್ಯಾಂಗುಗಳಲ್ಲಿ ಮಾತಾಡಿಕೊಂಡು, ಚಿತ್ರವಿಚಿತ್ರವಾದ ಬಟ್ಟೆಗಳನ್ನು ಹಾಕಿಕೊಂಡು, ತಮ್ಮ ಮನಸ್ಸಿಗೆ ನೇರವಾಗಿ ಅನಿಸುವುದನ್ನು ಮಾತ್ರ ಮಾಡುತ್ತಾ ರಾಕ್ಷಸರಂತೆ ತಾವು ಬದುಕುತ್ತಿದ್ದಾರೆ.

ವಿರೋಧಬಾಸವೋ, ಹುಚ್ಚೋ, ಅಥವಾ ಕಥಾನುಕೂಲವೋ ಗೊತ್ತಿಲ್ಲ, ಇಂಥವನಿಗೆ ಶಾಸ್ತ್ರೀಯ ಸಂಗೀತ ಅದರಲ್ಲಿಯೂ ಬೀಥೋವೆನ್ನಿನ ‘ಸೆವೆಂಥ್ ಹೆವೆನ್’ ಎಂದರೆ ಪ್ರಾಣ. ಯಾವಾಗಲೂ ಬೀಥೋವೆನ್ನಿನ ಸಂಗೀತವನ್ನು ಕೇಳುತ್ತಿರುತ್ತಾನೆ,

ಇಂಥ ಅಲೆಕ್ಸ್ ಒಮ್ಮೆ ಯಾವುದೋ ಒಂದು ಅಪರಾಧದಲ್ಲಿ ಸಿಕ್ಕಿಬೀಳುತ್ತಾನೆ, ಅವನನ್ನು ಬಂಧಿಸಿ ಅವನಿಗೆ ಹದಿನಾಲ್ಕು ವರ್ಷ ಶಿಕ್ಷೆ ಕೊಡಲಾಗುತ್ತದೆ. ಜೈಲಿನಲ್ಲಿ ಈ ರೀತಿಯ ಅಪರಾಧಿಗಳನ್ನು ಸುಧಾರಿಸಲೆಂದು ಒಂದು ‘ಲುಡೊವಿಕೊ ವಿಧಾನ’ ವೆಂಬ ಹೊಸದೊಂದು ಹಿಂಸೆಯಿಂದ ಡಿಕಂಡಿಷನ್ ಮಾಡುವ ವಿಧಾನವನ್ನು ಕಂಡುಹಿಡಿಯುವ ಪ್ರಯೋಗಕ್ಕೆ ಈತನನ್ನು ಗಿನಿಪಿಗ್ ಆಗಿ ಮಾಡಲಾಗುತ್ತದೆ. ಇವನಿಗೆ ಬಲವಂತವಾಗಿ ಹಿಂಸಾ ದೃಶ್ಯಗಳು ತುಂಬಿರುವ ಸಿನೆಮಾಗಳನ್ನು. ಚಿತ್ರಗಳನ್ನು ತೋರಿಸಲಾಗುತ್ತದೆ. ಆದರೆ, ನಮ್ಮ ತೆನಾಲಿರಾಮ ತನ್ನ ಬೆಕ್ಕಿಗೆ ಮಾಡಿದಂತೆ ಈತನಿಗೆ ಆ ಸಮಯಕ್ಕೆ ಸರಿಯಾಗಿ ಕಸಿವಿಸಿಯಾಗುವಂತೆ, ಹೊಟ್ಟೆಯಲ್ಲಿ ತೀವ್ರವಾಗಿ ಸಂಕಟವಾಗುವಂತೆ, ತೀವ್ರವಾಗಿ ತಲೆನೋಯುವಂತೆ-ಒಟ್ಟು ಆತ ತೆರೆಯ ಮೇಲೆ ನೋಡುತ್ತಿರುವ ಹಿಂಸೆಯನ್ನು ತಾನೇ ಅನುಭವಿಸುವ ಒಂದು ವಿಕೋಪವನ್ನು ಸೃಷ್ಟಿಸುವ ಔಷಧಗಳನ್ನು ಕೊದಲಾಗುತ್ತದೆ.

ಅಲೆಕ್ಸ್ ತನ್ನ ಈ ಸುಸ್ತು, ಸಂಕಟ, ನೋವುಗಳನ್ನು ತಾನು ನೋಡುತ್ತಿರುವ ಹಿಂಸೆಯ ಜತೆ ಸಮೀಕರಿಸಿಕೊಳ್ಳುತ್ತಾನೆ. ಹಾಗಾಗಿ, ಯಾವುದೇ ಹಿಂಸಾತ್ಮಕ ಕ್ರಿಯೆಯನ್ನು ಮಾಡುವುದಿರಲಿ, ನೋಡುವುದಿರಲಿ, ಯೋಚಿಸುವುದು ಕೂಡ ಆತನಿಗೆ ಅಸಾಧ್ಯವಾಗುತ್ತದೆ. ಹೀಗೆ ಯೋಚಿಸಿದ ತಕ್ಷಣ ಆತನಿಗೆ ತೀವ್ರವಾದ ಸಂಕಟವಾಗುತ್ತದೆ, ತಲೆನೋಯುತ್ತದೆ. ಸಿಕ್ಕಾಪಟ್ಟೆ ಒದ್ದಾಡಲಿಕ್ಕೆ ತೊಡಗುತ್ತಾನೆ.

ಆದರೆ, ಇಂಥಾ ಪರಿಣಾಮ ಪ್ರಯೋಗಕ್ಕೊಂದು ಸಣ್ಣ ಸೈಡ್ ಎಫೆಕ್ಟ್ ಇದೆ, ಹಿಂಸೆಯಷ್ಟೇ ಸುಖಿಸುವ, ಖುಷಿಪಡುವ ಬೀಥೊವೆನ್ನಿನ ಸೆವೆಂಥ್ ಹೆವನ್ ಅನ್ನೂ ಈತ ಅನುಭವಿಸುವುದಕ್ಕಗುವುದಿಲ್ಲ. ಯಾವಾಗ ಈತ ಬೀಥೊವೆನ್ ಕೇಳುತ್ತಾನೋ ಆಗಲೂ ಈತನಿಗೆ ಸುಸ್ತು, ಸಂಕಟ, ತಲೆನೋವುಗಳಾಗಿ ತೀವ್ರ ಹಿಂಸೆಯಾಗುತ್ತದೆ. ಆದರೆ, ಸರಕಾರ ಮತ್ತು ಈ ಪ್ರಯೋಗವನ್ನು ಸಜ್ಜುಗೊಳಿಸಿರುವವರು ಇಂಥ ಸಣ್ಣ ಸೈಡ್ ಎಫೆಕ್ಟಿನ ಹೊರತಾಗಿ ತಮ್ಮ ಪ್ರಯೋಗದ ಯಶಸ್ಸೆಂದೇ ನಿರ್ಧರಿಸಿ ಅಲೆಕ್ಸ್ ನನ್ನು ಜೈಲಿನಿಂದ ಬಿಡುಗಡೆ ಮಾಡುತ್ತಾರೆ.

ಹೊರಗೆ ಬಂದ ಈತನಿಗೆ ಗೊತ್ತಾಗುತ್ತದೆ, ತನಗೆ ಈ ಹಿಂಸೆಯೆನ್ನುವ ಪದ ಎಶ್ಟು ಅಸಹ್ಯವನ್ನು ಹುಟ್ಟಿಸುತ್ತದೆಂದರೆ ತನ್ನ ಆತ್ಮರಕ್ಷಣೆಗೂ ಆತ ಯಾರನ್ನೂ ಹಿಂಸಿಸುವ ಹಾಗಿಲ್ಲ. ಹಾಗೆ ಮಾಡಹೊರಟರೆ ಆತನಿಗೆ ವಿಪರೀತಚಾಗಿ ಸುಸ್ತು, ಸಂಕಟಗಳಾಗಿ ಒದ್ದಾಡುತ್ತಾನೆ. ಇದನ್ನರಿತ ಆತನ ಎದುರಾಳಿಗಳು ಅವನನ್ನು ಸಾಯಬಡಿಯುತ್ತಾರೆ.

ಅಷ್ಟೇ ಅಲ್ಲ, ಈತನ ಒಂದೇ ಸುಖವಾದ ಬೀಥೊವೆನ್ನನ್ನೂ ಈತ ಕೇಳಲಾಗದೇ ಹೋಗುತ್ತಾನೆ.

* * *

ಕಥೆ ಹೀಗೇ ಮುಂದುವರೆಯುತ್ತದೆ.

೧೯೬೨ರಲ್ಲಿ ಆಂಥೊನಿ ಬರ್ಗಸ್ ಬರೆದು ೧೯೭೧ರಲ್ಲಿ ಸ್ಟಾನ್ಲಿ ಕುಬ್ರಿಕ್ ನಿರ್ದೇಶಿಸಿದ ‘ಎ ಕ್ಲಾಕ್‌ವರ್ಕ್ ಆರೆಂಜ್’ ಎನ್ನುವ ಕಾದಂಬರಿ/ಸಿನೆಮಾದ ಸೊಗಡಿದು.

ಕತೆಯಲ್ಲಿ ಲೇಖಕ ಮೂಲಭೂತ ಇನ್‌ಸ್ಟಿಂಕ್ಟ್‌ಗಳಾದ ಒಳ್ಳೆಯದು, ಕೆಟ್ಟದರ ವಿಮರ್ಶೆಯನ್ನು, ವ್ಯಾಖ್ಯೆಯನ್ನು ಬೇರೆ ಬೇರೆ ಸ್ತರಗಳಲಿ ಮಾಡಲು ಪ್ರಯತ್ನಿಸುತ್ತಾನೆ. ಮೊದಲನೆಯದಾಗಿ ಒಳ್ಳೆಯದು ಎಂದರೆ ಏನು? ಸಾಮಾಜಿಕ ಮತ್ತು ನೈತಿಕ ನೆಲೆಗಳಲ್ಲಿ ಹಿಂಸೆ, ಬಲಾತ್ಕಾರ, ಕೊಲೆ ಇಂಥ ಕ್ರಿಯೆಗಳನ್ನು ಮಾಡಬಾರದು ಎಂದು ಹೇಳಿದೆ. ಆದರೆ, ಇಲ್ಲಿ ಆಯ್ಕೆಯ ಸ್ವಾತಂತ್ರ್ಯ ಎಷ್ಟು ಮುಖ್ಯ? ಅಂದರೆ, ಒಬ್ಬ ಮನುಷ್ಯ ತನಗೆ ತಾನು ಮಾಡುತ್ತಿರುವುದು ತಪ್ಪು ಎಂದು ಗೊತ್ತಿದ್ದು, ಅದರ ಪರಿಣಾಮವನ್ನು ಅರಿತಿದ್ದೂ ಆ ತಪ್ಪುಮಾಡಿದಲ್ಲಿ ಅದಕ್ಕೆ ಶಿಕ್ಷೆ ಕೊಡುವುದನ್ನು ಬಿಟ್ಟು ನಾವು ಇನ್ನೇನು ಮಾಡಬಹುದು?

ಹೀಗೆ ಡಿಕಂಡಿಶನಿಂಗ್ ಮೂಲಕವೋ ಅಥವಾ ಇನ್ನು ಹೇಗೋ ಕೆಟ್ಟದೆಂಬುವುದನ್ನು ಮಾಡುವುದನ್ನು ಪೂರಾ ತಡೆದುಬಿಟ್ಟರೆ, ಆಗ ಒಳ್ಳೆಯದಕ್ಕೆ ಅರ್ಥವೇ ಇರುವುದಿಲ್ಲ ಇಷ್ಟಕ್ಕೂ ಒಳ್ಳೆಯದು ಎಂದರೆ ಏನು? ಬೇರೆ ಪ್ಯಾರಾಮೀಟರ್‌ಗಳಿಂದ ಈಗ ನಾವು ಒಳ್ಳೆಯದು ಅಂದುಕೊಂಡಿರುವುದು ಮುಂದೆ ಕೆಟ್ಟದಾಗಬಹುದು. ಕೊಲೆಗೆ ಗಲ್ಲು ಶಿಕ್ಷೆಯಾಗುವುದೆನ್ನುವ ಭಯದಿಂದ ಕೊಲೆಗಾರರು ಕಮ್ಮಿಯಾಗುವುದಿಲ್ಲ. ಆದರೆ, ಕೊಲೆ ಮಾಡಲು ಹೋದಾಗಲೆಲ್ಲ ಕೈಎತ್ತಲಾರದೇ ಕೊಲೆಯೇ ಆಗದಿದ್ದರೆ ಆತ ಬೇರೆ ಅಪರಾಧವನ್ನು ಮಾಡಬಹುದು. ಅಥವಾ ಬೇರೆ ಕ್ಷುಲ್ಲಕ ಕ್ರಿಯೆಗಳು ಅಪರಾಧವೆನ್ನುವ ಲಗತ್ತು ಹಚ್ಚಿಸಿಕೊಡು ಈ ಅಪರಾಧಗಳಿಗೆ ಮಿತಿಮೀರಿದ ಶಿಕ್ಷೆಗಳಾಗಬಹುದು. ಸಿಗರೇಟು ಸೇದುವುದು ಅಪರಾಧವಾಗಬಹುದು, ಬಾರಿನಲ್ಲಿ ಹೋಗಿ ಕುಡಿದರೆ ಜೈಲಿಗೆ ಹಾಕಬಹುದು. ಎಲ್ಲಿಯತನಕ ನಾವು ಮನುಷ್ಯರನ್ನು ಡಿಕಂಡಿಶನ್ ಮಾಡಲು ಸಾಧ್ಯ.

ಇದನ್ನೇ ಬರ್ಗಸ್ ವಾದಿಸುತ್ತಾನೆ. ಈ ಪ್ರಪಂಚವಿರುವ ತನಕ ಒಳ್ಳೆಯದು, ಕೆಟ್ಟದು (ಯಾರು ಡಿಫೈನ್ ಮಾಡುತ್ತಾರೆ ಎಂಬುದು ಇನ್ನೂ ವಿವಾದಿತವೇ ಆದರೂ) ಇದ್ದೇ ಇರುತ್ತದೆ. ಸಮಾಜದ ಜವಾಬ್ದಾರಿ ಇಂಥದ್ದು ಒಳ್ಲೆಯದು, ಇಂಥದ್ದು ಕೆಟ್ಟದ್ದು ಎಂದು ಹೇಳುವುದು ಅಷ್ಟೇ. ಅದು ಬಿಟ್ಟು ಒಬ್ಬ ಮನುಷ್ಯನನ್ನು ಬರೇ ಒಳ್ಳೆಯದು ಮಾಡುವ ಹಾಗೆ ಮಾಡುತ್ತೇನೆ ಎಂದು ರೂಪಿಸಲಾಗದು. ಆಯ್ಕೆಯ ಸ್ವಾತಂತ್ರ್ಯವನ್ನು ನಾವು ಯಾರಾಗಲೀ ತಡೆಯಲಿಕ್ಕಾಗುವುದಿಲ್ಲ, ತಡೆಯಕೂಡದು- ಆ ಆಯ್ಕೆ ಕೆಟ್ಟದೆಂದು ನಮಗೆ ಗೊತ್ತಿದ್ದರೂ. ಹೀಗೆ ಮಾಡಿದರೆ ಏನಾಗಬಹುದು ಎನ್ನುವ ಪರಿಣಾಮವನ್ನು ನಾವು ಉತ್ಪ್ರೇಕ್ಷಿತವಾಗಿಯೂ ಪರವಾಗಿಲ್ಲ ಹೇಳಬಹುದಷ್ಟೇ.

ಕತೆಯ ಕೊನೆಯಲ್ಲಿ ಅಲೆಕ್ಸ್ ಆತ್ಮಹತ್ಯೆ ಮಾಡಿಕೊಳ್ಳಲೂ ಆಗುವುದಿಲ್ಲ. ಏಕೆಂದರೆ, ಆತ್ಮಹತ್ಯೆಯೂ ಒಂದು ರೀತಿಯ ಹಿಂಸೆಯೇ?

* * *

ನಾನು ರೆಸಿಡೆನ್ಸಿ ಮಾಡುತ್ತಿರುವಾಗ ಒಂದು ಪ್ರಯೋಗವನ್ನು ಮಾಡಿದ್ದೆವು. ಇಂಟೆನ್ಸಿವ್ ಕೇರ್ ಯುನಿಟ್ಟಿನಲ್ಲಿ ಬಂದು ಭರ್ತಿಯಾಗುವ ಕುಡುಕರಿಗೆ ಕೊಡುವ ಚಿಕಿತ್ಸೆಯ ಎಲ್ಲ ವಿವರಗಳನ್ನೂ ವಿಡಿಯೋ ಚಿತ್ರೀಕರಣ ಮಾಡಲಾಗುತಿತ್ತು. ಇವರು ಮಾಮೂಲೀ ಕುಡುಕರಲ್ಲ. ಜೀವಮಾನವಿಡೀ ಕುಡಿದು ಕುಡಿತದ ಕಾರಣದಿಂದ ತಮ್ಮ ಲಿವರ್ ಅನ್ನು, ಹಾಳುಮಾಡಿಕೊಂಡು ಮೈತುಂಬಾ ಹಳದಿಹಳದಿಯಾಗಿ ಬಂದಿರುತ್ತಿದ್ದರು. ಹೆಚ್ಚಿನವರಿಗೆ ಮೈಮೇಲೆ ಜ್ಞಾನವಿರುತ್ತಿರಲಿಲ್ಲ, ಮೈಯಲ್ಲಿನ ಆಲ್ಕೋಹಾಲಿನ ಪ್ರಮಾಣ ಕಮ್ಮಿಯಾದಂತೆ ಎಷ್ಟೋ ಜನಕ್ಕೆ ಕೈ, ಮೈ ನಡುಕ ಬರುತ್ತಿತ್ತು, ಅದುರುತ್ತಿದ್ದರು, ರಕ್ತ ಕಾರುತ್ತಿದ್ದರು, ಉಬ್ಬಿಕೊಂಡ ಕೈನಲ್ಲಿ ರಕ್ತನಾಳಗಳು ಸಿಗದೆ, ಒಂದು ಐವಿ ಹಾಕಲು ನರ್ಸುಗಳು ಇಪ್ಪತ್ತು ಕಡೆ ಚುಚ್ಚಿರುತ್ತಿದ್ದರು, ಫೋಲಿ ಕೆಥೆಟರ್, ಉಸಿರಾಡಲು, ಹೊಟ್ಟೆಯನ್ನು ಕ್ಲೀನ್ ಮಾಡಲು ಹೀಗೆ ಎಲ್ಲ ಕಡೆ ಟ್ಯೂಬುಗಳು. ಅವರ ಹೆಂಡತಿ ಮಕ್ಕಳ ಆಕ್ರಂದನ, ಡಾಕ್ಟರುಗಳ ಬೆಡ್‌ಸೈಡ್ ಚರ್ಚೆ- ಎಲ್ಲವೂ ಚಿತ್ರೀಕೃತವಾಗುತ್ತಿತ್ತು.

ನಂತರ ಇವರಿಗೆ ಎಚ್ಚರ ಬಂದಮೇಲೆ ಅವರ ರೀಹ್ಯಾಬಿಲಿಟೇಶನ್ನಿಗೋಸ್ಕರ ಈ ವಿಡಿಯೋವನ್ನು ಅವರಿಗೆ ತೋರಿಸಲಾಗುತ್ತಿತ್ತು. ಮೂರು ದಿನ, ನಾಲ್ಕು ದಿನಗಳ ಟೇಪನ್ನು ಆಸ್ಪತ್ರೆಯ ಆಡಿಯೋ ವಿಶುಯಲ್ ವಿಭಾಗದವರು ಸರಿಯಾಗಿ ಸಂಕಲಿಸಿದ ಮೇಲೆ ಅವರಿಗೆ ಕೊಡಲಾಗುತ್ತಿತ್ತು. ಆಲ್ಕೋಹಾಲಿಕ್ ಅವರ್ಶನ್ ಥೆರಪಿ ಎಂಬುದರ ಹೆಸರಿನಲ್ಲಿ ಇದನ್ನು ತೋರಿಸಲೆಂದು ಪ್ಲಾನ್ ಮಾದಲಾಗಿತ್ತು. ಇದರ ಉದ್ದೇಶ ಸ್ಪಷ್ಟ- ತಾನು ಕುಡಿಯುವುದರಿಂದ ಎಂಥ ಪರಿಸ್ಥಿತಿಯಲ್ಲಿ ತನ್ನನ್ನು ತಾನು ಕೆಡವಿಕೊಂಡೆ ಎನ್ನುವುದನ್ನು ಅವರುಗಳಿಗೆ ಚಿತ್ರಕವಾಗಿ ತೋರಿಸಿದಲ್ಲಿ ಕುಡಿತವನ್ನು ಸಂಪೂರ್ಣವಾಗಿ ಬಿಡಬಹುದೇನೋ ಎಂಬ ಸದಾಶಯ.

ಆದರೆ, ಒಂದೆರಡು ಬಾರಿಯ ಪ್ರಯೋಗದ ನಂತರ ಆಸ್ಪತ್ರೆಯ ರಿವ್ಯೂ ಬೋರ್ಡು ಈ ಪ್ರಯೋಗವನ್ನು ಮಾಡಬಾರದೆಂದು ತಡೆಯಿತು. ಕಾರಣ, ಇದು ತುಂಬಾ ಗ್ರಾಫಿಕ್. ಒಬ್ಬ ಮನುಷ್ಯ ಕಾಯಿಲೆಯಾಗಿ, ಮೈಮೇಲೆ ಜ್ಞಾನವಿಲ್ಲದೆ ಅಸಹಾಯಕ ಸ್ಥಿತಿಯಲ್ಲಿದ್ದಾಗ ಅದನ್ನು ವಿಡಿಯೋ ಚಿತ್ರೀಕರಿಸುವುದು ತಪ್ಪು. ಇಶ್ಟಕ್ಕೂ ಕುಡಿತದ ಕೆಡುಕುಗಳ ಬಗ್ಗೆ ಆತನಿಗೆ ಗೊತ್ತಿಲ್ಲದಿರುವುದು ಏನೂ ಇಲ್ಲವಲ್ಲ. ಕುಡಿತ ಆತನ ಆಯ್ಕೆ. ಅದಕ್ಕೆ ಅದರ ಪರಿಣಾಮಕ್ಕೆ ಚಿಕಿತ್ಸೆ ಕೊಡುವುದನ್ನು ಬಿಟ್ಟರೆ ಡಾಕ್ಟರಾದ ನಾವುಗಳು ಇನ್ನೇನೂ ಮಾಡಲಾರೆವು.

ಪೋಲೀಸರು ಕೂಡ ಅಷ್ಟೇ. ಕುಡಿದು ವಾಹನ ನಡೆಸಬೇಡಿ ಎಂದು ಹೇಳಬಹುದಷ್ಟೇ. ಹಾಗೆ ಮಾಡುವವರಿಗೆ ಶಿಕ್ಷಿಸಬಹುದೂ ಕೂಡ. ಆದರೆ, ಆಲ್ಕೋಹಾಲಿನ ಬಗ್ಗೆಯೇ ಈತನಿಗೆ ಅಸಹ್ಯಬರುವ ಹಾಗೆ ಮಾಡಿದರೆ.

ಅದು ಆಯ್ಕೆಯ ಸ್ವಾತಂತ್ರ್ಯವನ್ನೇ ಕಿತ್ತುಕೊಂಡ ಹಾಗೆ.

Sunday, September 6, 2009

ಮಲ್ಟಿಪ್ಲೆಕ್ಸ್ ಎಂಬ ನಂಬುಗಸ್ತ ಕಲ್ಟ್‌ಗಾಗಿ ಧನ್ ಟ ಣಾ..

"ದೊಡ್ದ ಪರದೆಯಲ್ಲಿ ಒಂದು ರೇಸ್ ಅಂಕಣ. ಆ ಪ್ರೇಕ್ಷಕರ ಗ್ಯಾಲರಿಯಲ್ಲಿ ಸುಂದರವಾದ ಹುಡುಗಿಯೊಬ್ಬಳ ಮೇಲೆ ನಿಧಾನವಾಗಿ ಕ್ಯಾಮೆರಾ ನಿಲ್ಲುತ್ತದೆ. ಹಿಂದಿನಿಂದ ಗಾಯವಾದ ತೋಳಿಗೊಂದು ಸ್ಲಿಂಗ್ ಹಾಕಿಕೊಂಡಿರುವ ಉದ್ದಕೂದಲಿನ ಶಾಹಿದ್ ಕಪೂರ್ ನಿಧಾನವಾಗಿ ಬಂದು "ಬ್ಲೂ ಥಂಡರ್" ಎನ್ನುತ್ತಾನೆ. ಆಕೆ, ಸುಮ್ಮನೆ ಮಾದಕವಾಗಿ ನಗುತ್ತಾಳೆ. ಆಗ ಗಾಳಿಯಲ್ಲಿ ಒಂದು ನೋಟು ಹಾರಿಕೊಂಡು ಬರುತ್ತದೆ. ಅದನ್ನು ಹಿಂಬಾಲಿಸಿಕೊಂಡು ಹೋಗಿತ್ತಾನೆ. ನಿಧಾನವಾಗಿ ಆ ದೃಶ್ಯ ಇನ್ನೊಂದು ದೃಶ್ಯದೊಂದಿಗೆ ಲೀನವಾಗುತ್ತದೆ. ಅಲ್ಲಿ ಒಂದು ಟೆಲಿಫೋನು ಬೂತಿನಂತ ಡಬ್ಬದ ಮೇಲೆ "ಚಾರ್ಲೀಸ್ ಡ್ರೀಮ್ಸ್" ಎಂದು ಬರೆದಿದೆ. ಮೇಲಿಂದ ನಿಧಾನವಾಗಿ ದುಡ್ಡು ಮಳೆಯೋಪಾದಿಯಲ್ಲಿ ಕೆಳಗೆ ಬೀಳುತ್ತಿದೆ. ಚಾರ್ಲಿಯ ಕನಸು ಏನು ಎಂಬುದು ಆತನಿಗಲ್ಲ ನಮಗೂ ಸ್ಪಷ್ಟವಾಗಿದೆ.

"ತೊದಲುವ ಶಾಹಿದ್ ಕಪೂರನಿಗೆ ಗೊತ್ತಿರುವ ರಹಸ್ಯ ಭ್ರಷ್ಟ ಪೋಲೀಸನೊಬ್ಬನಿಗೆ ಬೇಕಾಗಿದೆ. ಆದರೆ ಈ ಉಗ್ಗನಿಗೆ ಇಂಥ ಅತಂಕದ ಸನ್ನಿವೇಶಗಳಲ್ಲಿ ತೊದಲಾಟ ಇನ್ನೂ ಜಾಸ್ತಿಯಾಗುತ್ತದೆ. ಈ ಪೊಲೀಸನಿಗೆ ಇವನಿಂದ ತನಗೆ ಬೇಕಾದ ಮಾಹಿತಿಯನ್ನು ಪಡಕೊಳ್ಳಲು ಸಮಯವಿರುವುದು ಮಾರನೆಯ ದಿನ ಎಂಟರ ತನಕ ಮಾತ್ರ. "ಇವನಿಗೆ ಹೀಗೇ ಬಿಟ್ಟರೆ ಇವನ ಹೆಸರು ಹೇಳುವುದಕ್ಕೇ ಬೆಳಿಗ್ಗೆ ಎಂಟರತನಕ ತಗೋತಾನಪ್ಪಾ" ಎಂದುಕೊಂಡು ಅವನ ಹತ್ತಿರ ಬಂದು "ಏಕ್ ಗಾನಾ ಗಾವ್" ಎಂದು ಹಾಡು ಹೇಳಲಿಕ್ಕೆ ಹೇಳುತ್ತಾನೆ. ಯಾಕೆಂದರೆ, ಹಾಡು ಹೇಳಬೇಕಾದರೆ ತೊದಲುವುದಿಲ್ಲವಲ್ಲಾ. ಈತ ತನಗೆ ಗೊತ್ತಿರುವ ರಹಸ್ಯವನ್ನು "ಕಬೀ ಕುಶಿ ಕಬೀ ಗಮ್" ರಾಗದ ಮೂಲಕ ಮೂಲಕ ಹೇಳಿ ಮುಗಿಸುತ್ತಾನೆ.

ವಿಶಾಲ ಭಾರದ್ವಾಜನ ಹೊಸ ಚಿತ್ರ ಕಮೀನೆ ಚಿತ್ರದ ಕೆಲವು ದೃಶ್ಯಗಳಿವು. ಸಿನೆಮಾ ಪ್ರಪಂಚದಲ್ಲಿ ಬಹಳ ವರ್ಷಗಳಿಗೊಮ್ಮೆ ನಟರ ಆಯ್ಕೆ, ನಟನೆ. ಚಿತ್ರಕಥೆ, ಸಂಗೀತ, ಛಾಯಾಗ್ರಹಣ, ಸಂಕಲನ ಎಲ್ಲವೂ ಒಂದಕ್ಕೊಂದು ಪೂರಕವಾಗಿ ವ್ಯಾಪಾರಿ ಚೌಕಟ್ಟಿನೊಳಗೇ ಒಂದು ನೋಡಬಹುದಾದ ಚಿತ್ರ ತಯಾರಾಗುತ್ತದೆ. ಇಂಥ ಒಂದು ಚಿತ್ರ ಕಮೀನೆ.

ಶೇಕ್ಸ್‌ಪಿಯರನ ನಾಟಕಗಳಾದ ಮ್ಯಾಕ್‌ಬೆತ್ ಮತ್ತು ಒಥೆಲೊ ವನ್ನು ಸಿನೆಮಾದ ಸಮಕಾಲೀನಕ್ಕೆ ಅಳವಡಿಸಿ ಮಕ್‌ಬೂಲ್ ಮತ್ತು ಓಂಕಾರ ಎಂಬ ಸಿನೆಮಾಗಳನ್ನು ನಿರ್ದೇಶಿಸಿದ್ದ ವಿಶಾಲ್ ಭಾರದ್ವಾಜ್, ಮಕಡೀ ಮತ್ತು ಬ್ಲೂ ಅಂಬ್ರೆಲಾ ಎಂಬ ನವಿರು ನಿರೂಪಣೆಯ ಸಿನೆಮಾಗಳನ್ನು ನಿರ್ದೇಶಿಸಿದ್ದಾನೆ. ಈತನ ಪಕ್ಕಾ ವ್ಯಾಪಾರೀ ಸಾಹಸ ‘ಕಮೀನೆ’ ಕ್ವಿಂಟಿನ್ ಟರಂಟಿನೋ, ಗೈ ರಿಚೀಗಳ ಕಲ್ಟ್ ಸಿನೆಮಾಗಳ ಸಾಲಿಗೆ ಸೇರಬಹುದಾದ ಸಿನೆಮಾ. ಅತಿ ಬಿಗಿಯಾದ ಚಿತ್ರಕಥೆ, ನಿರೂಪಣೆಯಲ್ಲಿನ ಬಿಗಿ ಮತ್ತು ಪಾತ್ರಗಳಿಗೆ ಬೇಕಾದ ನಟರ ಆಯ್ಕೆ ಮತ್ತು ಆ ನಟರುಗಳಿಂದ ಸರಿಯಾದ ನಟನೆ ತೆಗೆಯುವುದರಲ್ಲಿ ವಿಶಾಲ್ ಭಾರದ್ವಾಜ್ ಯಶಸ್ವಿಯಾಗಿದ್ದಾನೆ. ಬಾಲಿವುಡ್ಡಿನ ಎಲ್ಲ ಬಾಯ್ ಮೀಟ್ಸ್ ಗರ್ಲ್ ಫಾರ್ಮುಲಾಗಳನ್ನು ಮುರಿದು, ಒಂದು ಬುದ್ಧಿವಂತ ಸಿನೆಮಾವನ್ನು ಕೊಡುವುದರಲ್ಲಿ ಯಶಸ್ವಿಯಾಗಿದ್ದಾನೆ. ಇದರ ಮೂಲಕ ತನ್ನದೇ ಆದ ಒಂದು ಛಾಪನ್ನು ಅನ್ನು ಆತ ಬಾಲಿವುಡ್‌ನಲ್ಲಿ ಮೂಡಿಸಿದ್ದಾನೆ..

ತೊಂಭತ್ತರ ದಶಕದ ಮಧ್ಯದಲ್ಲಿ ಶುರುವಾದ ಮಲ್ಟಿಪ್ಲೆಕ್ಸ್ ನೋಡುಗರ ಸಿನೆಮಾದ ಕಲ್ಟ್ ಬಾಲಿವುಡ್ಡಿಗೆ ಬೇರೆಯೇ ಒಂದು ಸೊಗಡನ್ನು ಕೊಟ್ಟಿತು. ಮನಮೋಹನ ದೇಸಾಯಿ, ಪ್ರಕಾಶ್ ಮೆಹ್ರ, ಸುಭಾಶ್ ಗೈಗಳ ಅತಿರಂಜಿತವಾದ ಮೆಲೊಡ್ರಾಮ, ಪ್ರೀತಿ, ಪ್ರೇಮ, ಕಳೆದು ಹೋದ ಅಣ್ಣ ತಮ್ಮಂದಿರ ಸ್ಲೋ ಮೋಷನ್‌ನ ಮಿಲನಗಳ ಭಾರದಲ್ಲಿ sಸೊರಗಿದ್ದ ಬಾಲಿವುಡ್‌ಗೆ ಬದಲಾವಣೆ ಬೇಕಿತ್ತು. ಆಗ ಈ ಹೀರೋಗಳನ್ನು ವೈಭವೀಕರಿಸದೆ, ದೊಡ್ಡ ದೊಡ್ದ ಸೆಟ್ ಗಳನ್ನು ಹಾಕದೆ, ಕಡಿಮೆ ಬಜೆಟ್‌ನಲ್ಲಿ ನಿರೂಪಣೆಯ ಜಾಣ್ಮೆಯಿಂದ ವಸ್ತುವಿಷಯಗಳ ಆಯ್ಕೆಯ ವೈವಿಧ್ಯದಿಂದ ತಾಜಾ ಸಿನೆಮಾಗಳು ತಯಾರಾಗತೊಡಗಿದವು. ರಾಹುಲ್ ಭೋಸ್, ರನ್ವೀರ್ ಶೌರಿ, ಸಂಜಯ್ ಸೂರಿ, ರಜತ್ ಕಪೂರ್ ಮುಂತಾದ ನಟರುಗಳು ಹೀರೋಗಳಾಗತೊಡಗಿದರು. ಯಾವಾಗ ನಾಯಕನಟನಿಗೆ ಇಮೇಜಿನ ಭಾರವಿಲ್ಲದೆಯೇ ಹೋಯಿತೋ, ಆಗ ವಸ್ತುವಿನಲ್ಲಿ ವೈವಿಧ್ಯ ಮತ್ತು ಹೊಸ ಪ್ರಯೋಗಗಳು ನಡೆಯತೊಡಗಿದವು. ಜತೆಗೆ ಜಾಗತೀಕರಣದ ಹೊಳೆಯಲ್ಲಿ ಹೊರಗಿನಿಂದ ಹೂಡಿದ ಬಂಡವಾಳ ಮತ್ತು ಜಾಗತಿಕ ವಿತರಣಾ ವ್ಯವಸ್ಥೆಯಿಂದ ಇಂಥ ಸಿನೆಮಾಗಳಿಗೆ ಮಾರುಕಟ್ಟೆಯಲ್ಲಿಯೂ ಬೇಡಿಕೆ ಹೆಚ್ಚಾಗಿ, ಸಿನೆಮಾಗಳ ನಿರ್ಮಾಣದ ವೈವಿಧ್ಯ ಬಹುಮುಖಿಯಾಗಿತ್ತು. ಹಾಗಾಗಿ ಪಕ್ಕಾ ವ್ಯಾಪಾರಿ ಸಿನೆಮಾಗಳು ತಾವು ಇವಕ್ಕಿಂತ ಬೇರೆ ಎಂದು ತೋರಿಸಲು ಮೂವತ್ತರಿಂದ ನಲವತ್ತು ಕೋಟಿ ರೂಪಾಯಿಗಳನ್ನು ಸುಲಭವಾಗಿ ಒಂದು ಸಿನೆಮಾಕ್ಕೆ ಬಂಡವಾಳ ಹಾಕುವ ವ್ಯವಸ್ಥೆ ಶುರುವಾಯಿತು. ಹಿಂದೀ ಸಿನೆಮಾಗಳ ಹಾಡುಗಳಷ್ತೇ ಅಲ್ಲ, ಇಡೀ ಸಿನೆಮಾಕ್ಕೆ ಸಿನೆಮಾ ದಕ್ಷಿಣ ಆಫ್ರಿಕ, ಅಮೆರಿಕಾ ಇಂಗ್ಲೆಂಡುಗಳಲ್ಲಿ ಚಿತ್ರೀಕರಣವಾಗಲು ಶುರುವಾಯಿತು.

ಈ ರೀತಿಯ ಬಹಳಷ್ಟು ಸಿನೆಮಾಗಾಳು ಮೊದಲವಾರದಲ್ಲಿಯೇ ಹಾಕಿದ್ದ ಬಂಡವಾಳವನ್ನು ವಾಪಸ್ಸು ಪಡೆದು, ಗಲ್ಲಾಪಟ್ಟಿಗೆಂiಲ್ಲಿಯೂ ದುಡ್ಡು ಮಾಡಿಕೊಳ್ಳಹತ್ತಿದವು. ಯಾರಿಗೂ ತಮ್ಮ ಚಿತ್ರವನ್ನು ನೂರುದಿನಗಳು, ಇಪ್ಪತೈದುವಾರಗಳ ಕಾಲ ಓಡಿಸುವ ಇರಾದೆಯಿರಲಿಲ್ಲ. ಮೊದಲ ಮೂರುದಿನಗಳಲ್ಲಿ ಆದಷ್ಟು ಪ್ರಿಂಟುಗಳನ್ನು ಹಾಕಿ, ಎರಡು ಮೂರುವಾರಗಳಲ್ಲಿ ದುಡ್ಡು ಮಾಡುವ ಅನೇಕರು ಇಲ್ಲಿ ಬಂಡವಾಳ ಹೂಡಹತ್ತಿದರು. ಅದರ ಪರಿಣಾಮ ಈಗ "ಕಮೀನೆ" ಯಂಥ ಸಿನೆಮಾವನ್ನು ಮಾಡಿ ಕೂಡ ದುಡ್ಡು ಮಾಡಬಹುದು ಎಂಬ ನಂಬಿಕೆಯನ್ನು ರಾನಿ ಸ್ಕ್ರೂವಾಲನಂಥ ನಿರ್ಮಾಪಕರುಗಳಿಗೆ ಕೊಟ್ಟದ್ದು..

ಬಾಲಿವುಡ್ ಕ್ವಿಂಟನ್ ಟರಂಟಿನೊನಂಥ ನಿರ್ದೇಶಕರಿಂದ ಪ್ರಭಾವಿತವಾದದ್ದು ಹೊಸದೇನಲ್ಲ. ೨೦೦೨ರಲ್ಲಿ ಬಿಡುಗಡೆಯಾದ ಸಂಜಯ್ ಗುಪ್ತಾ ನಿರ್ದೇಶನದ "ಕಾಂಟೆ" ಟರಂಟಿನೋನ "ರೆಸರ್‌ವಾಯ್ರ್ ಡಾಗ್ಸ್" ಚಿತ್ರದಿಂದ ಸ್ಫೂರ್ತಿಪಡೆದದ್ದು. ತನ್ನ ವಿಶಿಷ್ಟ ನಿರೂಪಣೆ ಮತ್ತು ಪಾತ್ರಚಿತ್ರಣಗಳಿಂದ ರೆಸರ್ವಾಯ್ರ್ ಡಾಗ್ಸ್ ಟರಂಟಿನೋನನ್ನು ತನ್ನ ಮೊದಲ ಸಿನೆಮಾದಲ್ಲಿಯೇ ಅತಿ ಎತ್ತರಕ್ಕೆ ಕರೆದೊಯ್ದಿತ್ತು. ಈತ ಕ್ರೈಮ್ ಚಿತ್ರಗಳನ್ನು ಮಾಡಿದರೂ ಈತನ ಹೆಸರು ನೆನಪುಳಿಯುವುದು ಈತ ಮೂರರ ಜತೆ ನಾಲ್ಕನೆಯದು ಎನ್ನಿಸುವಂಥ ಮತ್ತೊಂದು ಕ್ರೈಮ್ ಸಿನೆಮಾ ಮಾಡಿದ್ದರಿಂದಲ್ಲ. ಇವನಿಗೆ ಕ್ರೈಮ್‌ಗಿಂತ ಈ ಕ್ರಿಮಿನಲ್‌ಗಳ ಪಾತ್ರಚಿತ್ರಣ ಬಹಳ ಮುಖ್ಯ. ಆದರೆ, "ಕಾಂಟೆ" ಈ ಸಿನೆಮಾ ಕ್ಷಣಗಳನ್ನು ನಕಲುಮಾಡಲು ಹೋಗಿ ದಯನೀಯವಾಗಿ ಸೋತಿತ್ತು. ನೇರವಾದ ನಿರೂಪಣೆಯಿಲ್ಲದ, ಕತೆ ಹಿಂದುಮುಂದಾಗಿ, ಅಡ್ಡಾದಿಡ್ಡಿಯಾಗಿ ಸರಿದು ಕೊನೆಗೆ ಎಲ್ಲ ಸಡಿಲ ತುದಿಗಳೂ ಒಂದೆಡೆ ಸೇರಿಕೊಂಡು ಗಂಟುಹಾಕಿಕೊಳ್ಳುವುದು ಈತನ ಸಿನೆಮಾಗಳ ಸಾಮಾನ್ಯ ಲಕ್ಷಣ. ಕತೆ ಕಗ್ಗಂಟಾಗಲು, ಹಲವಾರು ವಿಕ್ಷಿಪ್ತ ವೈವಿಧ್ಯಮಯ ಪಾತ್ರಗಳ ಅನ್ವೇಷಣೆಯಲ್ಲಿರುವ ಈ ಚಿತ್ರಗಳಿಗೆ ಈ ಕ್ರೈಮ್ ಪ್ರಪಂಚ ಹುಲುಸಾದ ಸಾಮಗ್ರಿಗಳನ್ನು ಒದಗಿಸಿಕೊಡುತ್ತದೆ. ಬರೇ ಸಾಂಸಾರಿಕತೆ ಅಥವಾ ಪ್ರೇಮಕಥೆಯಲ್ಲಿ ಈ ನಿರೂಪಣೆಯ ಸಾಧ್ಯತೆಗಳ ವೈವಿಧ್ಯವನ್ನು ಕಂಡುಹಿಡಿಯಲು ಇನ್ನೂ ಸಾಧ್ಯವಾಗಿಲ್ಲ.

ಕಮೀನೆಯ ನಿರ್ದೇಶಕ ವಿಶಾಲ್ ಭಾರ್ದ್ವಾಜ್ ಬಾಲಿವುಡ್ ಕಂಡ ಅಪರೂಪದ ಪ್ರತಿಭೆ. ಈತ ಸಂಗೀತ ನಿರ್ದೇಶನ ಮಾಡಿಕೊಂಡು, ಹಾಡು ಹೇಳಿಕೊಂಡು, ಕೆಲವೊಂದು ಸಾಕ್ಷ್ಯಚಿತ್ರಗಳನ್ನು ಮಾಡಿಕೊಂಡು ಇದ್ದ. ಈತ "ಸತ್ಯ" "ಮಾಚೀಸ್" "ಯು ಮಿ ಔರ್ ಹಮ್" ಮತ್ತಿತರ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದನೆಂದು ಈಗ ಹೇಳಿದರೆ ಯಾರೂ ನಂಬಲಿಕ್ಕಿಲ್ಲ. ಪೋಲಿಶ್ ನಿರ್ದೇಶಕ ಕ್ರಿಸ್ಟಾಫ್ ಕಿಸ್ಲೋಸ್ಕಿಯ ನಿರ್ದೇಶನದ ಚಿತ್ರ ಟೆಲಿಡ್ರಾಮಗಳನ್ನು ನೋಡಿ ಪ್ರಭಾವಿತನಾಗಿ ಈತನೂ ಸಿನೆಮಾ ಮಾಡಬೇಕೆಂದು ನಿರ್ಣಯಿಸಿ "ಮಕಡೀ" ಎಂಬ ಒಂದು ಮಕ್ಕಳ ಚಿತ್ರವನ್ನು ನಿರ್ದೇಶಿಸಿದ್ದ. ನಂತರ, ಶೇಕ್ಸಪಿಯರನ ನಾಟಕಗಳನ್ನು ಕ್ರೈಮ್ ಪ್ರಪೆಂಚದ ಹಿನ್ನೆಲೆಯಲ್ಲಿ ಆಧುನಿಕೀಕರಿಸಿ ಮಕ್‌ಬೂಲ್ ಮತ್ತು ಓಂಕಾರ ಎಂಬ ಸಿನೆಮಾಗಳನ್ನು ಚಿತ್ರಿಸಿದ. ಓಂಕಾರ ಈತ ವ್ಯಾಪಾರೀ ಸಿನೆಮಾಗಳನ್ನೂ ಬಹಳ ವಿಭಿನ್ನವಾಗಿ ಮಾಡಿಕೊಟ್ಟೂ ದುಡ್ಡುಮಾಡಬಹುದು ಎನ್ನುವ ನಂಬಿಕೆಯನ್ನು ಸಿನೆಮಾ ನಿರ್ಮಾಪಕರಲ್ಲಿ ಕೊಟ್ಟಿತು. ಪರಿಣಾಮವೇ, ಇಂದಿನ ಕಮೀನೆ.

ಮೇಲಿನೋಟಕ್ಕೆ ಚದುರಿದ ಚಿತ್ರಗಳಂತೆ ಕಾಣುವ ಈ ಚಿತ್ರದ ಕಥೆ ಹೇಳಲು ಸುಲಭವಲ್ಲ. ಹಾಗೆ ನೋಡುತ್ತಾ ಹೋದರೆ, ಕತೆಯಲ್ಲಿ ಯಾವ ಹೆಚ್ಚುಗಾರಿಕೆಯೂ ಇಲ್ಲ. ಚಾರ್ಲಿ ಮತ್ತು ಗುಡ್ಡು ಅನ್ನುವ ತೊದಲುವ ಮತ್ತು ಉಗ್ಗುವ ಇಬ್ಬರು ಅವಳಿಗಳು, ಇಬ್ಬರ ಹಾದಿಯೂ ಬೇರೆ. ಒಬ್ಬ ಮುಂಬಯಿಯ ಭೂಗತ ಸಾಮ್ರಾಜ್ಯದಲ್ಲಿ ಸಣ್ಣ ಗ್ಯಾಂಗ್‌ಸ್ಟರ್. ಇನ್ನೊಬ್ಬ ಯಾವುದೋ ಒಂದು ಸಣ್ಣ ಎನ್‌ಜೀ‌ಓದಲ್ಲಿ ಕೆಲಸ ಮಾಡುತ್ತಾನೆ. ಆದರೆ, ಇಬ್ಬರ ಆಯ್ಕೆಗಳೂ ಬೇರೆಯಾಗಿರುವುದರಿಂದ ಇಬ್ಬರೂ ಪರಸ್ಪರರನ್ನು ದ್ವೇಷಿಸುತ್ತಾರೆ. ಚಾರ್ಲಿ ರೇಸಿನಲ್ಲಿ ಬಾಜಿ ಕಟ್ಟುವವ. ಯಾವುದೋ ರೇಸಿನಲ್ಲಿ ಮೋಸದಿಂದ ದುಡ್ಡು ಕಳಕೊಂಡ ಎನ್ನುವ ಕಾರಣದಿಂದ ಆ ಜ್ಯಾಕಿಯನ್ನು ಹೆದರಿಸಿ ತನ್ನ ದುಡ್ಡನ್ನು ವಾಪಸ್ಸು ಪಡೆದುಕೊಳ್ಳುವ ಪ್ರಯತ್ನದಲ್ಲಿ ಆತ ತನ್ನ ಇತರ ಗ್ಯಾಂಗ್‌ಸ್ಟರ್‍ಗಳ ಸಹಾಯವನ್ನು ಪಡೆಯುತ್ತಾನೆ. ಆದರೆ, ನಂತರವಾಗುವ ಹಲ್ಲಾಗುಲ್ಲಾಗಳ ಸರಣಿಯಲ್ಲಿ ಸುಳ್ಳು, ಮೋಸ, ವಂಚನೆಗಳ ಜಾಲದಲ್ಲಿ ತಮಗೆ ಅರಿವಾಗದ ಕಾರಣಗಳಿಂದ ಇಬ್ಬರೂ ಸಿಕ್ಕಿಬೀಳುತ್ತಾರೆ. ನಂತರ, ಮಾಮೂಲೀ ಫ಼ಾರ್ಮ್ಯುಲಾದಂತೆ ಅಣ್ಣತಮ್ಮಂದಿರಿಬ್ಬರೂ ಈ ಜಗತ್ತಿನಲ್ಲಿ ತಮಗಿರುವುದೇ ತಾವಿಬ್ಬರು ಎನುವುದನ್ನು ಅರಿತುಕೊಳ್ಳುತ್ತಾರೆ. ಅಷ್ಟೇ ಅಲ್ಲ, ಕಳಕೊಂಡಿದ್ದ ತಮ್ಮ ಸಂಬಂಧವನ್ನು ಗಟ್ಟಿಗೊಳಿಸಿಕೊಳ್ಳುತ್ತಾರೆ.

ಇದು ಸ್ಥೂಲವಾಗಿ ಚಿತ್ರಕಥೆ. ಇಷ್ಟೇನಾ, ಇದು ಮಾಮೂಲೀ ಬಾಲಿವುಡ್ ಕಥೆ ಎಂದು ಮೂಗುಮುರಿದರೆ ಒಂದು ಅದ್ಭುತ ಸಿನೆಮಾ ಅನುಭವವನ್ನು ಕಳೆದುಕೊಳ್ಳುತ್ತೀರಿ, ಆದರೆ ಮೊದಲೇ ಹೇಳಿಬಿಡುತ್ತೇನೆ. ಇಂಥಹ ಸಿನೆಮಾ ನೋಡುವುದಕ್ಕೆ ಬೇರೆ ಮನಸ್ಥಿತಿಯಿರಬೇಕು. ರಕ್ತಪಾತ, ಹಿಂಸೆ, ಸ್ಫೋಟಗಳು, ತೀರ ಕಚ್ಛಾ ಎನಿಸುವ ಭಾಷೆ ಮತ್ತು ಕೆಲವೊಮ್ಮೆ ವಿಕೃತ ಎನ್ನುವ ಈ ಪಾತ್ರಗಳ ನಡವಳಿಕೆ. ಇವನ್ನೆಲ್ಲಾ ಸಹಿಸಿಕೊಳ್ಳುವ ಇವುಗಳ ಆಚೆಯ ಆ ಪಾತ್ರಗಳನ್ನು ಮತ್ತು ಸಿನೆಮಾ ಮಾಡುವುದರ ಕುಸುರಿಯ ಬಗ್ಗೆ ನಿಮಗೆ ಆಸಕ್ತಿಯಿದ್ದರೆ ನಿಮಗೆ ಈ ಚಿತ್ರ ಇಷ್ಟವಾಗಬಹುದು. ಮುಖ್ಯವಾಗಿ ವ್ಯಾಪಾರೀ ಸಿನೆಮಾಗಳ ಚೌಕಟ್ಟಿನಲ್ಲಿ ಕಮೀನೆ ಮನಸೆಳೆಯುವುದು ಇದರ ಬಿಗಿಯಾದ ಚಿತ್ರಕಥೆಯಿಂದ ಮತ್ತು ಪ್ರತಿಯೊಬ್ಬರಿಂದ ನಿರ್ದೇಶಕ ತೆಗೆದಿರುವ ನಟನೆಯಿಂದ. ಚಿತ್ರದ ಮುಖ್ಯ ಪಾತ್ರಗಳಾದ ಶಾಹೀದ ಕಪೂರ್ ಮತ್ತು ಪ್ರಿಯಾಂಕ ಚೋಪ್ರ ಇರಲಿ, ಈ ಚಿತ್ರದ ಯಾವ ಪಾತ್ರವನ್ನೂ ಸೊರಗಲು ಬಿಟ್ಟಿಲ್ಲ, ವಿಶಾಲ್ ಭಾರದ್ವಾಜ್. ಮಹಾರಾಷ್ಟ್ರ ಮರಾಠರಿಗೆ ಮಾತ್ರ ಎನ್ನುವ ರಾಜಕಾರಣಿ- ವಿಲನ್ ಅನ್ಮೋಲ್ ಗುಪ್ತೆ (ತಾರೇ ಜಮೀನ್ ಪರ್ ಖ್ಯಾತಿ), ಪಿಸ್ತೂಲಿನ ವ್ಯೂಫೈಂಡರ್ ಸರಿಯಿದೆಯೇ ಎಂದು ಜನ ಕೂತಿರುವ ರೂಮಿನಲ್ಲಿಯೇ ಪರೀಕ್ಷಿಸುವ ಬಂಗಾಲಿಬಾಬುಗಳು, ಕೊಕೈನ್ ಸ್ಮಗ್ಲರ್ ತಾಶಿ, ಪೋಲೀಸರು ಭ್ರಷ್ಟರಾಗುವುದೂ ಎಷ್ಟು ಕಷ್ಟ ಅನಿಸುವಂತೆ ಮಾಡುವ ಇನ್ಸ್‌ಪೆಕ್ಟರ್ , ಹೀಗೆ ಅನೇಕ ಕ್ಯಾರಿಕೇಚರಿಶ್ ಪಾತ್ರಗಳು ನಮ್ಮಮುಂದೆ ಬೆಳೆಯುತ್ತಲೇ ಹೋಗುತ್ತವೆ. ನಿರ್ದೇಶಕನ ಜಾಣ್ಮೆಯಿರುವುದು ತಾನೊಂದು ಬಿಗಿಯಾದ ಒಗಟಿನಂತಹ ಚಿತ್ರಕಥೆಯನ್ನು ಬರೆದಿಟ್ಟು ಅದರಲ್ಲಿ ಈ ಪಾತ್ರಗಳು ತಂಪಾಡಿಗೆ ತಾವು ಹರಿಯಬಿಟ್ಟಿದ್ದಾನೆ. ಎಲ್ಲ ಪಾತ್ರಗಳಿಗೂ ಪರದೆಯ ಮೇಲೆ ಸಮಾನ ಅವಕಾಶವಿದೆ. ಅನೇಕ ಬೇರೆಬೇರೆ ಸ್ತರಗಳ ಕಥೆಗಳು ತಾನಾಗಿಯೇ ಒಂದುಗೂಡುತ್ತವೆ, ಒಂದು ಕಥೆಗೂ ಇನ್ನೊಂದು ಕಥೆಗೂ ಇರುವ ಸಂಂಧವೇನು ಎನ್ನುವುದನ್ನು ಕೂಡ ಆ ಕಥೆಗಳೇ ಪಾತ್ರಗಳೇ ಕಂಡುಕೊಳ್ಳುತ್ತವೆ. ಈ ಆಡ್‌ಬಾಲ್ ಅನ್ನಿಸುವಂಥ ಪಾತ್ರಗಳು ಆಡುವ ಮಾತುಗಳು, ಅವರುಗಳ ಪ್ರಪಂಚ, ಸ ಕ್ಕೆ ಫ ಎಂದು ಉಚ್ಚರಿಸುವ ಚಾರ್ಲಿ ಸೊಫಿಯಗೆ ಈತ ಅನ್ನುವುದು ಫಫಿಯ) ಕಥೆ ಹೇಳುತ್ತಾ ಹೋಗುತ್ತಾನೆ. ಇಲ್ಲಿ ವ್ಯಕ್ತವಾಗುವ ಡಾರ್ಕ್ ಹ್ಯೂಮರ್, (ಕನ್ನಡದಲ್ಲಿ ಇದಕ್ಕೆ ವಕ್ರ ಹಾಸ್ಯವೆನ್ನಬಹುದೇನೋ), ಅನ್ಯೋಕ್ತಿಗಳು, ತೊದಲು, ಉಗ್ಗುಗಳನ್ನು ಹಾಸ್ಯಮಾಡುವ ಪಾಪಪ್ರಜ್ಞೆಯಿಲ್ಲದ ಮನುಷ್ಯ ಪ್ರಜ್ಞೆ ಇವೆಲ್ಲವೂ ನಿಮಗೆ ಖುಷಿ ಕೊಡುವಂತಿದ್ದರೆ ನೀವು ಈ ಸಿನೆಮಾ ನೋಡಿ.

ಇಂಥ ಸಿನೆಮಾಗಳು, ಕ್ರೈಮ್ ಕೇಪರ್‍ಗಳ ನಿರ್ದೇಶಕರುಗಳಿಗೆ ನೋಡುಗರ ಬಗೆ ಕ್ಲೀಶೆಯಾದ ನಂಬಿಕೆಯೊಂದಿದೆ. ಪ್ರೇಕ್ಷಕರುಗಳಿಗೆ ಪ್ರತೀ ಫ್ರೇಮನ್ನೂ ಅರ್ಥಮಾಡಿಸಬೇಕು, ಅದಕ್ಕಾಗಿ ಕೈತುತ್ತು ಹಾಕಬೇಕು, ಪ್ಲಾಟನ್ನು ಹೆಚ್ಚು ಜಗ್ಗಾಡಿದರೆ ಅಥವಾ ತೀರ ಅಮೂರ್ತ ಮಾಡಿದರೆ ಜನಕ್ಕೆ ಅರ್ಥವಾಗುವುದಿಲ್ಲ, ಎಂಬುದು. ಆದರೆ, ಈ ನಂಬಿಕೆಗಳನ್ನೆಲ್ಲ ವಿಶಾಲ್ ಭರದ್ವಾಜ ಗಾಳಿಗೊಗೆದಿದ್ದಾನೆ. ಇಲ್ಲಿ ಯಾರಿಗೂ ಅನವಶ್ಯಕವಾದ ಫ್ಲಾಶ್‌ಬ್ಯಾಕ್‌ಗಳಿಲ್ಲ. ಯಾರಿಗೂ ಚರಿತ್ರೆಯಿಲ್ಲ. ಎಲ್ಲರೂ ಇವತ್ತಿಗಾಗಿ ಅಥವಾ ನಾಳೆಗಾಗಿ ಬದುಕುತ್ತಿರುವವರು. ಇವರಿಗೆ ಇದರ ಬಗ್ಗೆ ಯಾವತ್ತೂ ಪಾಪಪ್ರಜ್ಞೆಯೂ ಇಲ್ಲ. ಹೀಗೆ ಬದುಕುವುದೇ ಅವರಿಗಿರುವ ಆಯ್ಕೆ.

ಚಾಕೊಲೇಟ್ ಪ್ರೇಮಕಥೆ, ಮೆಲೊಡ್ರ್ಯಾಮ, ಅಥವಾ ಅಣ್ನ-ತಂಗಿಯರ ಸೆಂಟಿಮೆಂಟು, ಅಥವಾ ವಿಧೇಯ ನಮ್ರ ಭಾಷೆ ಇವೆಲ್ಲವನ್ನೂ ಅಪೇಕ್ಷಿಸುವ ಕರಣ ಜೋಹರನ ಅಭಿಮಾನಿಗಳಿಗಲ್ಲ, ಈ ಸಿನೆಮಾ.

ಮಕಬೂಲನ ಸಿನೆಮಾದ ಚಿತ್ರಕತೆಯನ್ನು ವಿಶಾಲನ ಜತೆ ಬರೆದಿದ್ದ ಅಬ್ಬಾಸ್ ಟೈರ್‍ವಾಲ ಎಂಬಾತ ಹೇಳಿದ್ದ "ಕಬೀ ಕುಷೀ ಕಭಿ ಗಮ್" ನಂತ ಸಿನೆಮಾ ಮಾಡುವಂಥ ದುಡ್ಡಿನ ಹತ್ತನೇ ಒಂದು ಭಾಗವನ್ನು ಕೂಡ "ದಿಲ್ ಚಾಹ್ತ ಹೈ" ನಂತಹ ಚಿತ್ರಗಳು ಮಾಡಲಾಗುವುದಿಲ್ಲ, ಎಂದು. ನಿಜವಿರಬಹುದು. ಆದರೆ, ಈ "ದಿಲ್ ಚಾಹ್ತ ಹೈ" ನ ಯಶಸ್ಸು ಮುಂದಿನ ಪೀಳಿಗೆಯ ಸಿನೆಮಾಗಳಾದ "ಆಮೀರ್" "ಎ ವೆನ್ಸ್ಡೇ" "ಮುಂಬೈ ಮೇರೀ ಜಾನ್" "ರಾಕ್ ಆನ್" " ಲಕ್ ಬೈ ಚಾನ್ಸ್" ಗಳು ಈ ಮಲ್ಟಿಪ್ಲೆಕ್ಸ್ ಎಂಬ ನಂಬುಗಸ್ಥ ಕಲ್ಟ್ ಅನ್ನು ತಯ್ಯಾರುಮಾಡಿರುವುದು ಬಾಲಿವುಡ್ಡಿನ ಹೆಗ್ಗಳಿಕೆ. ಈ ಕಲ್ಟ್ ಬೆಳೆಯುತ್ತಿರುವುದು ಸಿನೆಮಾಸಕ್ತರ ಪಾಲಿಗೆ ಹಬ್ಬ. ಬುದ್ದಿವಂತ ಸಿನೆಮಾಗಳಿಗಾಗಿ ಅಮೊರೊಸ್ ಪೆರೊಸ್, ಬೆಬೆಲ್ ಗಳಿಗಾಗಲೀ ಅಥವಾ ಅಂತರರಾಷ್ಟ್ರೀಯ ಚಿತ್ರೋತ್ಸವಗಳಿಗಾಗಲೀ ಹೋಗಬೇಕಾಗಿಲ್ಲ.

ಹೋಗಿ, ಕಮೀನೆ ನೋಡಿಬನ್ನಿ.