Saturday, July 25, 2009

ನಾನು, ನೀನು ಮತ್ತು ಅವನು

ಒಂದು ಕತೆ ಬರೆಯುವಾಗ ಅಥವಾ ಓದುವಾಗ, ಕತೆ ಹೇಳುತ್ತಿರುವ ನಿರೂಪಕ ಯಾರು ಎಂಬುದು ನಮಗೆ ಮುಖ್ಯವಾಗುತ್ತದಾ? ಮುಖ್ಯವಾಗಬೇಕಾ? ನಾನು ಹೇಳುತ್ತಿರುವುದು ಕತೆಗಾರನಲ್ಲ, ಬರೆಯುವ ವ್ಯಕ್ತಿಯ ಹೆಸರೂ ಅಲ್ಲ. ಕತೆಯನ್ನು ಉತ್ತಮ ಅಥವಾ ಪ್ರಥಮ ಪುರುಷದಲ್ಲಿ ಬರೆಯುವುದು, ಬರೆದುದನ್ನು ಅರ್ಥಮಾಡಿಕೊಳ್ಳುವುದು ಎಷ್ಟು ಮುಖ್ಯ?

ಬಹಳ ಕತೆ, ಕಾದಂಬರಿಗಳು ಪ್ರಥಮ ಅಥವಾ ಉತ್ತಮ ಪುರುಷದಲ್ಲಿ ಬರೆಯಲ್ಪಟ್ಟಿರುತ್ತವೆ, ನಿರೂಪಿಸಲ್ಪಟ್ಟಿರುತ್ತವೆ. ಪ್ರಥಮ ಪುರುಷದಲ್ಲಿ ಬರೆದ ಕತೆಗಳು ಮುಖ್ಯವಾಗಿ ಲೇಖಕನಿಗೆ ಮುಖ್ಯನಿರೂಪಕನಾಗಿ ಎಲ್ಲ ಪಾತ್ರಗಳನ್ನೂ "ಅವನು" "ಅವಳು" ಎಂದು ನಿರಪೇಕ್ಷವಾಗಿ ನೋಡುವ, ಬರೆಯುವ ಸಾಧ್ಯತೆಗಳನ್ನು, ಸ್ವಾತಂತ್ರ್ಯವನ್ನು ಕೊಟ್ಟಿರುತ್ತದೆ. ಇದು ಸಾಧ್ಯತೆಯೂ ಹೌದು, ಜವಾಬ್ದಾರಿಯೂ ಹೌದು, ಮಿತಿಯೂ ಹೌದು. ಯಾವುದೇ ಒಬ್ಬ ಲೇಖಕನೂ ತನ್ನ ಸುತ್ತಲಿನ ಪ್ರಪಂಚವನ್ನು ತನ್ನದೇ ಆದ ದೃಷ್ಟಿಯಿಂದ ನೋಡುತ್ತಿರುವುದರಿಂದ ಯಾವುದೇ ಪಾತ್ರವನ್ನು ಆತ ಚಿತ್ರಿಸುತ್ತಿದ್ದಾಗ ಅವನ ಪೂರ್ವಗ್ರಹಗಳ, ನಂಬಿಕೆಗಳ ಛಾಪು ಆಯಾ ಪಾತ್ರಗಳ ಮೇಲೆ ಗೊತ್ತಿದ್ದೋ, ಗೊತ್ತಿಲ್ಲದೆಯೋ ಬಿದ್ದೇ ಇರುತ್ತವೆ. ನಂಬಿಕೆಗಳನ್ನು ಪೂರಾ ತೊರೆದು ಪಾತ್ರಗಳನ್ನು ತಾವಾಗಿಯೇ ಆಯಾ ಪಾತ್ರಗಳ ಶಕ್ತಿಗೆ ಅನುಸಾರವಾಗಿ ಬೆಳೆಸುವುದು ಒಂದು ದೊಡ್ಡ ಸವಾಲು. ಪ್ರಪಂಚದ ಅತಿದೊಡ್ಡ ಕಾದಂಬರಿಕಾರರ ಜಾಣ್ಮೆ ತಾವು ಪಾತ್ರಗಳ ಹೊರಗಿದ್ದುಗೊಂಡು ತಾವು ಕಂಡದ್ದನ್ನು ಪಾತ್ರಗಳ ಮೂಲಕ ಅತ್ಯಂತ ಸಮರ್ಥವಾಗಿ ನಿರೂಪಿಸುವುದರಲ್ಲಿ ವ್ಯಕ್ತವಾಗಿದೆ. ಹೀಗೆ ಹೊರಗೆ ನಿಂತು ಕಾಣುವುದೂ ಒಂದೇ ಆಯಾಮದಲ್ಲಿದ್ದಾದುದರಿಂದ ಪೂರಾ ನಿರಪೇಕ್ಶವಾಗಿ ಈ ಪಾತ್ರಗಳನ್ನು ನೋಡುವುದು, ಚಿತ್ರಿಸುವುದು ಅಷ್ಟು ಸುಲಭದ ಕೆಲಸವಲ್ಲ. ಯಾವಾಗ ನಿರೂಪಕ ತಾನೇ ಸೃಷ್ಟಿಕರ್ತ ಎಂದುಕೊಂಡು ಈ ಪಾತ್ರಗಳನ್ನು ಶೂನ್ಯದಿಂದ ಸೃಷ್ಟಿಸುವ ಕೆಲಸದಲ್ಲಿ ತೊಡಗುತ್ತಾನೋ ಆಗ ನಿರಪೇಕ್ಷತೆ ಹೊರಟುಹೋಗುತ್ತದೆ. ಯಾವಾಗ ಈ ಸೃಷ್ಟಿ ಲೇಖಕನ ಅನುಭವದ ವಿಸ್ತ್ರುತ ಪ್ರಕ್ರಿಯೆಯಾಗುತ್ತದೆಯೋ, ಆಗ ಆತನಿಗೆ ಈ ಪಾತ್ರಗಳ ಸೃಷ್ಟಿ, ಸ್ಥಿತಿ, ಲಯದ ಮೇಲೆ ಎಷ್ಟು ಹಕ್ಕಿರುತ್ತದೋ ಅಷ್ಟೇ ಈ ಪಾತ್ರಗಳ ಸ್ವತಂತ್ರ ಅಸ್ತಿತ್ವದ ಬಗ್ಗೆ ಕಾಳಜಿಯೂ ಇರುತ್ತದೆ.

ಓದುಗರಾದ ನಮ್ಮ ಅದೃಷ್ಟವೆಂದರೆ ಪ್ರಪಂಚದ ಮುಖ್ಯ ಕಾದಂಬರಿಗಳೆಲ್ಲ ಈ ರೀತಿ ಪ್ರಥಮ ಪುರುಷದಲ್ಲಿಯೇ ನಿರೂಪಿತವಾಗಿರುವುದು.

ಅದೇ ಉತ್ತಮ ಪುರುಷ ನಿರೂಪಣೆಯಲ್ಲಿ ಲೇಖಕನೇ ಒಂದು ಪಾತ್ರವಾಗಿಬಿಟ್ಟಿರುವುದರಿಂದ ಈ "ನಾನು" ಇಲ್ಲಿ ಅನೇಕ ಸ್ತರದಲ್ಲಿ ಕೆಲಸ ಮಾಡುತ್ತದೆ. ತೇಜಸ್ವಿಯವರ "ಕರ್ವಾಲೋ" ಶಾಂತಿನಾಥ ದೇಸಾಯರ ಸಂಬಂಧ" ಇಂತ ಕಾದಂಬರಿಗಳಲ್ಲಿ ಈ ನಿರೂಪಣೆ ಅಥೆಂಟಿಸಿಟಿಯ ಜತೆ ಒಂದು ಆಪ್ತತೆಯನ್ನೂ ಕೊಡುತ್ತದೆ. ಕುಂವೀಯವರ ಕತೆಗಳಲ್ಲಂತೂ ನಿರೂಪಕ ಸೃಷ್ಟಿಕರ್ತನೇ ಆಗಿಬಿಟ್ಟಿರುತ್ತಾನೆ. ಈ ಆಪ್ತತೆ ಯಾಕೆಂದರೆ, ಇಲ್ಲಿ ಕತೆಯ ನಿರೂಪಕನಿಗೂ ಮತ್ತೆ ಬರಹಗಾರನಿಗೂ ನಡುವೆ ಒಂದು ಗ್ಯಾಪ್ ಇದೆ ಎಂದು ನಾವು ಭಾವಿಸುವುದಿಲ್ಲ. ಹಾರುವ ಓತಿಯಾಗಲೀ, ಮಂದಣ್ಣನಾಗಲೀ ಅಥವಾ ಕರ್ವಾಲೋರವರಾಗಲೀ ಎಲ್ಲರೂ ತೇಜಸ್ವಿಯವರ ಜತೆಗೇ ಸಂವಹಿಸುತ್ತಿದ್ದಾರೆ ಎಂಬ ಭಾವನೆಯಲ್ಲಿಯೇ ನಾವು ಕತೆ ಓದುತ್ತೇವೆ. ಕೊನೆಗೆ ಕತೆ ಮುಗಿದಾಗಲೂ, ಈ ಹಾರುವ ಓತಿಯ ಒಂದು ಮಿಂಚಿನ ದರ್ಶನವಾಗಿ ಮಂದಣ್ಣನ ಕೈಯನ್ನು ಸಣ್ಣಗೆ ಸ್ಪರ್ಶಿಸಿ ನಂತರ ಈ ಸೃಷ್ಟಿಯ ಅನಂತತೆಯಲ್ಲಿ ಮಾಯವಾದ ಈ ವಿಸ್ಮಯವನ್ನು ನಿರೂಪಿಸುವ ನಿರೂಪಕ ಬೇರಲ್ಲ, ತೇಜಸ್ವಿಯವರು ಬೇರೆ ಅಲ್ಲ ಎಂದು ನಮಗನಿಸುತ್ತದೆ. ಕತೆಯ ಗಟ್ಟಿತನ ಹಾಗೂ ಉತ್ತಮ ಪುರುಷದ ನಿರೂಪಣೆ ಒಂದಕ್ಕೊಂದು ಪೂರಕವಾಗಿ ಮಾಡುವ ಅನುಕೂಲ ಇದು. ಇದೇ ಅನುಭವ ಕತೆಯಲ್ಲಿ ಇಂಥವನಿಗೊಬ್ಬನಿಗಾಯಿತು ಎಂದು ತೇಜಸ್ವಿಯವರು ಬರೆದಿದ್ದರೆ ಇದರ ದಿವ್ಯ ಅನುಭವ ಪ್ರಾಯಶಃ ಆಗುತ್ತಿತ್ತೋ ಇಲ್ಲವೋ ಗೊತ್ತಿಲ್ಲ. ಇದನ್ನೇ ಕಾರಂತರ "ಅಳಿದ ಮೇಲೆ" ಹಾಗೂ "ಬೆಟ್ಟದ ಜೀವ"ದ ನಿರೂಪಕನಿಗೂ ಹೇಳಬಹುದು. (ಕಾರಂತರ ಈ ಕಾದಂಬರಿಗಳಲ್ಲಿ ನಿರೂಪಕನ ಹೆಸರೂ ಶಿವರಾಮ ಎಂದೇ ನಿರೂಪಿತವಾಗಿದ್ದು ಅದಕ್ಕೆ ಒಂದು ರೀತಿ ಆತ್ಮಕಾಥಾನಕ ರೂಪವನ್ನೂ ಕೊಟ್ಟಿಬಿಡುತ್ತದೆ). ಇದೇ ಮಾತನ್ನು ನಾವು ಬಹಳಷ್ಟು ಬರಹಗಾರರ ವಿಷಯದಲ್ಲಿಯೂ ಹೇಳಬಹುದು.

ಸಲ್ಮಾನ್ ರಶ್ದೀಯ "ಮಿಡ್‌ನೈಟ್ಸ್ ಚಿಲ್ಡ್ರನ್" ನ ಇಡೀ ಕಾದಂಬರಿ ಉತ್ತಮ ಪುರುಷದಲ್ಲಿಯೇ ನಿರೂಪಿತವಾಗಿದೆ. ಇಲ್ಲಿ ಸಲೀಮ್ ಸೈನಾಯಿ ಅನ್ನುವ ನಿರೂಪಕ ತನ್ನ ಕತೆಯಿರಲಿ, ತನ್ನ ಅಜ್ಜಿ, ಅಜ್ಜರಿಂದ ಹಿಡಿದು ಎಲ್ಲರ ಕತೆಯನ್ನೂ ಉತ್ತಮ ಪುರುಷದಲ್ಲಿಯೇ ಮಾಡುತ್ತಾನೆ. ಆದರೆ, ಇಲ್ಲಿ ಪಾತ್ರಗಳು ತಮ್ಮ ಕತೆಯನ್ನು ಹೇಳುವುದಿಲ್ಲ. ಬದಲಿಗೆ ನಿರೂಪಕ ಎಲ್ಲವನ್ನೂ "ನನ್ನಜ್ಜಿ, ನನ್ನಜ್ಜ, ಅಕ್ಕ, ಅಮ್ಮ" ಎಲ್ಲರ ಕತೆಯನ್ನೂ ಹೇಳುತ್ತಾ ಹೋಗುತ್ತಾನೆ. ಇಲ್ಲಿ ಆಯಾ ಪಾತ್ರಗಳ ಜತೆ ಅವನ ಸಂಬಂಧ "ನನ್ನಜ್ಜ" ಎಂದು ಹೇಳುವ ಬದಲು ಆತನ ನಿಜವಾದ ಹೆಸರಾದ "ಆಡಮ್ ಸೈನಾಯ್" ಎಂದು ಹೇಳಿದ್ದರೆ ಕಥೆಗೆ ಬೇರೆ ಆಯಾಮಗಳು ಒದಗಿಬರುತ್ತಿತ್ತು ಎಂದು ಹೇಳಲಾಗುವುದಿಲ್ಲ. ಇದೇ ಸಮಸ್ಯೆ ತೇಜಸ್ವಿಯವರ ಮಾಯಾಲೋಕದಲ್ಲಿಯೂ ಇದೆ. ಅಲ್ಲಿಯೂ ನಿರೂಪಕನ ಅನುಪಸ್ಥಿತಿಯಲ್ಲಿ ಆಗುವ ಘಟನೆಗಳನ್ನೂ ನಿರೂಪಕ ಹೇಳುವುದರಿಂದ ಉತ್ತಮ ಪುರುಷ ನಿರೂಪಣೆಯ ಪ್ರತಿ ಸಾಧ್ಯತೆಯನ್ನು ಕಾದಂಬರಿಕಾರ ಇಲ್ಲಿ ಉಪಯೋಗಿಸಿಕೊಂಡಿದ್ದಾನೆ ಎಂದು ಹೇಳಲಾಗುವುದಿಲ್ಲ. ಯಾಕೆಂದರೆ, ಇಲ್ಲಿ ನಿರೂಪಕನ ಹೊರತಾಗಿಯೂ ಆಯಾ ಪಾತ್ರಗಳು ಸ್ವತಂತ್ರವಾಗಿ ಜೀವಿಸಿದ್ದಾವೆ. ರಶ್ದೀಯಂತೂ ತಾನು ಹೇಗೆ ಹುಟ್ಟಿದೆ ಎಂಬುದಿರಲಿ, ತನ್ನಪ್ಪ ಅಮ್ಮನ ಪ್ರೇಮಪ್ರಕರಣಗಳು, ತಾನು ಅಮ್ಮನ ಗರ್ಭದಲ್ಲಿ ಭ್ರೂಣವಾಗಿದ್ದು, ಹುಟ್ಟಿದ್ದು ಎಲ್ಲವನ್ನೂ ಹೇಳುತ್ತಾ ಹೋಗುತ್ತಾನೆ. ಇದು ಅತಿವಾಸ್ತವತೆಯನ್ನು ಕೊಡುತ್ತದೆ ಹೊರತು ನಿಜವಾದ ಉತ್ತಮ ಪುರುಷದ ನಿರೂಪಣೆಯ ಅನುಕೂಲವನ್ನು ಕೊಡುವುದಿಲ್ಲ.

ನಿಜವಾಗಿ ಉತ್ತಮ ಪುರುಷದ ಸವಾಲಿರುವುದೆಂದರೆ ತಮ್ಮ ವೈಯುಕ್ತಿಕ ಅನುಭವದಾಚೆಯ ಪಾತ್ರಗಳ ಕಥೆಯನ್ನು ನಿರೂಪಿಸುವುದಾಗ ಅದನ್ನು "ನನ್ನ ಕತೆ"ಯೆನ್ನುವ ಹಾಗೆ ಹೇಳುವುದು. ಇದಕ್ಕೆ ಉತ್ತಮ ಉದಾಹರಣೆ, ಲಂಕೇಶರ "ಅಕ್ಕ" ಹಾಗೂ ಇತ್ತೀಚೆಗೆ ಬಂದ ಅರವಿಂದ ಅಡಿಗನ "ವೈಟ್ ಟೈಗರ್" ಕೊಳೆಗೇರಿಯ ಕ್ಯಾತ ಅಥವಾ ಕೃಷ್ಣ ಎಂಬ ಹುಡುಗ ತನ್ನ ಕಥೆಯನ್ನು "ಅಕ್ಕ" ಕಾದಂಬರಿಯಲ್ಲಿ ಹೇಳುತ್ತಾ ಹೋಗುತ್ತಾನೆ. ಹಾಗೆಯೇ, ಬಲರಾಮ್ ಹಲವಾಯಿ ಎಂಬ ಬಿಹಾರದ ಕೀಳುಜಾತಿಯ ವ್ಯಕ್ತಿಯೊಬ್ಬ ತನ್ನ ಕಥೆಯನ್ನು ಹೇಳುವುದನ್ನು ಇಂಗ್ಲಿಶಿನಲ್ಲಿ ಬರೆಯುತ್ತಾ ಹೋಗುತ್ತಾನೆ, ಅರವಿಂದ ಅಡಿಗ. ಎರಡೂ ಕಥನದಲ್ಲಿ ಮುಖ್ಯವೆನಿಸುವುದು ಏನೆಂದರೆ, ಬರಹಗಾರ ತಾನು ಕಂಡ ಲೋಕವನ್ನು ತನ್ನದೇ ಲೋಕವೆಂಬಂತೆ ಹೇಳುತ್ತಿದ್ದಾನೆ. ಇಲ್ಲಿ ಮುಖ್ಯವಾಗಿ ಕಂಡುಬರುವುದು ನಿರೂಪಕನಿಗೆ ಮತ್ತು ಬರಹಗಾರನಿಗೆ ನಡುವೆ ಇರುವ ಗ್ಯಾಪ್. ಈ ಗ್ಯಾಪ್ ಅನ್ನು ಕಾಪಾಡಿಕೊಳ್ಳದಿದ್ದರೆ ಬರಹಗಾರನ ಕಾಳಜಿಗಳು ನಿರೂಪಕನ ಕಾಳಜಿಗಳೂ ಆಗಿಬಿಡುತ್ತವೆ. ಇದರಿಂದ ತಪ್ಪಿಸಿಕೊಳ್ಳುವುದು ಬಹಳ ಕಷ್ಟ.

"ಅಕ್ಕ" ಕಾದಂಬರಿಯ ನಿರೂಪಕ ಕೊಳೆಗೇರಿಯ ಹುಡುಗ. ಆತ ಹಿಂದೆಂದೋ ಆಗಿರುವ ತನ್ನ ಕತೆಯನ್ನು, ಕೇವಲ ನೆನಪಿನಿಂದ ಮಾತ್ರ ಹೇಳುತ್ತಿದ್ದಾನೆ, ಅಲ್ಲ ಬರೆಯುತ್ತಿದ್ದಾನೆ. ಯಾಕೆ ಬರೆಯುತ್ತಿದ್ದಾನೆ ಹೇಗೆ ಬರೆಯುತ್ತಿದ್ದೇನೆ ಅನ್ನುವುದಕ್ಕೆ ಸಮಜಾಯಿಷಿಗಳನ್ನು ಕತೆಯ ಆರಂಭದಲ್ಲಿಯೇ ಕೊಡುತ್ತಾನೆ, ಆತ- "ನಂದು ಕೆಟ್ಟ ತಲೆ ಸಾರ್. ಅದರ ತುಂಬಾ ಒಂದಕ್ಕೊಂದು ತಗುಲಿಕೊಂಡು ಕಿತ್ತಾಡೋ ಐಟಂಗಳೇ. ನಾನು ನಾಲ್ಕು ಸಾಲು ಬರೆದರೆ ಒಂದು ಬೈಗುಳ ಬರುತ್ತೆ. ಅದಕ್ಕೇ ನಾನು ಬರೆದುಬಿಟ್ರೆ ಕನ್ನಡಮ್ಮನಿಗೆ ನೋವಾದೀತು ಅಂತ ಸುಮ್ಮನೇ ಇದ್ದೆ. ಆದ್ರೆ ಜೀವ ತಡೀಲಿಲ್ಲ ಸಾರ್. .ನನ್ನ ಮಾತೂ ಹಂಗೇಯ. ಯೋಚಿಸಿ ನೋಡಿದ್ರೆ ಅದು ಮಾತೇ ಅಲ್ಲ. ನರಸಿಂಹ ಮೇಸ್ತ್ರಿ, ಖಡವಾ ಇಂತವ್ರನೆಲ್ಲಾ ಬಯ್ದರೆ ಅದು ಬಯ್ಗಳ. ನಮ್ಮ ಪದ್ದಿ, ಮಾದೇವಿ, ಸಂಪೂರ್ಣಮ್ಮನ್ನ ಬೈದರೆ ಅದು ಬೈಗುಳ ಅಲ್ಲ. ಇದು ದಯವಿಟ್ಟು ತಮ್ಮ ಗಮನದಿಲ್ಲರಲಿ. ನಾನು ಬೈದದ್ದು ಬೈದಂಗಲ್ಲ ಅನ್ನಿಸಿದರೆ ಕತೆಯ ಮಜಾ ಕೆಡುತ್ತಲ್ವಾ ಸಾರ್. ... ನಾನು ತುಂಬಾ ಅವಸರದೋನು. ಒಂದು ಹೇಳೋಕೆ ಹೋಗಿ ಎರಡು ಹೇಳೋದೂ ಈ ಅವಸರದಲ್ಲೇ. ಅದು ಅಪಾಯವಿಲ್ಲ. ಎರಡು ಹೇಳಬೇಕಾದಾಗ ಒಂದೇ ಹೇಳಿ ಕಂಬಿ ಕಿತ್ತೋದು ನನ್ನ ಚಾಳಿ. ಆವಾಗ ನೀವು ಕಲ್ಪಿಸಿಕೊಳ್ಳಬೇಕಾಗುತ್ತೆ. ಸಾಹಿತ್ಯ ಅಂದ್ರೆ ಅದೇ ಅಂತ ಮೈಸೂರುಕಡೆ ಸಾಹಿತಿಗಳು ಈಚೆಗೆ ಹೇಳ್ತಿದ್ದಾರಂತೆ. ಒಮ್ದು ಸೀನ್ ಕೊಟ್ರೆ ಎರಡು ಸೀನ್ ನಿಮ್ಮ ತಲೇಲಿ ಬಂದ್ರೆ ನಂಗೂ ಒಳ್ಲೇದು, ನಿಮಗೂ ಮಜಾ."

ಓದುಗನಿಗೆ ಇಂಥಾ ಒಂದು ಕಾದಂಬರಿಯಿಂದ ಏನನ್ನು ನಿರೀಕ್ಷಿಸಬಹುದು ಅನ್ನುವುದನ್ನು ತಮ್ಮ ಪೀಠಿಕೆಯಂತಿರುವ ಮೊದಲ ಅಧ್ಯಾಯದಲ್ಲಿಯೇ ಹೇಳುತ್ತಾರೆ, ಲಂಕೇಶ್. ಇದರಲ್ಲಿ ಕ್ಯಾತ ತಾನು ಕೊಳೆಗೇರಿಯಲ್ಲಿದ್ದಾಗಿನ ಬದುಕನ್ನು ಕೇವಲ ನೆನಪಿನಿಂದ ಮಾತ್ರ ಹೇಳುತ್ತಿರುವಾಗ ಘಟನೆಗಳ ತುಣುಕಷ್ಟೇ ನಮ್ಮ ಮುಂದೆ ಇಡಬಹುದು. ಅದನ್ನು ಜೋಡಿಸಿಕೊಂಡು, ಖಾಲಿ ಇದ್ದಲ್ಲಿ ತುಂಬಿಸಿಕೊಂಡು ಮಧ್ಯೆ ಊಹಿಸಿಕೊಂಡು ನಮಗೆ ಬೇಕಂತೆ ಕಥೆ ಕಟ್ಟಿಕೊಳ್ಳುವ ಜವಾಬ್ದಾರಿ ಓದುಗರದ್ದು ಕೂಡ. ಇಲ್ಲಿ ಲಂಕೇಶರು ತಮ್ಮ ಅರಿವಿಗೆ ಬಂದ ಕೊಳೆಗೇರಿಯ ಬದುಕನ್ನು ಮಾತ್ರ ಅನಾವರಣ ಮಾಡಲಿಕ್ಕೆ ಈ ಉತ್ತಮ ಪುರುಷ ನಿರೂಪಣೆ ಮಾತ್ರವಲ್ಲ, ನೆನಪಿನಾಳದಿಂದ ಕತೆಯನ್ನು ಹೆಕ್ಕಿಕೊಳುವ ತಂತ್ರವನ್ನೂ ಬಹಳ ಜಾಣತನದಿಂದ ಉಪಯೋಗಿಸಿಕೊಂಡಿದ್ದಾರೆ. ಲಂಕೇಶರ ಅರಿವಿಗೆ ಬರದ ಕೊಳೆಗೇರಿಯ ಇನ್ನೊಂದು ರೂಪ ಕ್ಯಾತನಿಗೂ ಬಂದಿಲ್ಲ, ಅಥವಾ ಅದನ್ನು ಆತ ಹೇಳಲು ಮರೆತಿದ್ದಾನೆ.

ಹಾಗೆ ನೋಡಿದರೆ, ಲಂಕೇಶರ "ಮುಸ್ಸಂಜೆಯೆ ಕಥಾ ಪ್ರಸಂಗ" ಲಂಕೇಶರಿಗೆ ತೀರ ಪರಿಚಯವಿರುವ ಲೋಕ. ಅವರು ಹುಟ್ಟಿ ಬೆಳೆದ ಕೊನಗವಳ್ಳಿಯನ್ನೇ ಹೋಲುವ ಕಂಬಳ್ಳಿಯಂಥ ಊರಿನ ಬಗ್ಗೆ ಬರೆಯಬೇಕಾದರೆ ಉತ್ತಮ ಪುರುಷದ ನಿರೂಪಣೆಯನ್ನು ಮಾಡಿದ್ದರೆ ನಿರೂಪಣೆಗೆ ಒಂದು ಆಪ್ತತೆ ಸಿಕ್ಕುತ್ತಿತ್ತೇನೋ. ಆದರೆ ಲಂಕೇಶರಿಗೆ ಈ ಬಗೆಯ ನಿರೂಪಣೆಯ ಬಗ್ಗೆ ಸಂಶಯವಿದೆ. ತಮ್ಮ ಪರಿಚಿತ ಲೋಕವನ್ನು ಉತ್ತಮ ಪುರುಷದಲ್ಲಿ ಹೇಳಿದಾಗ ಈ ನಿರೂಪಕ ಮತ್ತು ನಾಯಕನ ನಡುವಿನ ಬಿರುಕನ್ನು ನಿಭಾಯಿಸುವುದು ತೀರ ದುಸ್ಸಾಧ್ಯವೆಂದು ಅವರಿಗೆ ಅರಿವಿದೆ. ಆದ್ದರಿಂದಲೇ ಇಲ್ಲಿ "ಕ್ಯಾತ" ನ ಲೋಕದಲ್ಲಿ ಪರಕಾಯ ಪ್ರವೇಶ ಮಾಡಲು ಪ್ರಯತ್ನಿಸಿದ್ದಾರೆ. ಅಲ್ಲಲ್ಲಿ ಕ್ಯಾತನ ಬದಲಾಗಿ ಲಂಕೇಶ್ ಬರಹಗಾರನಾಗಿ ಇಣುಕಿದರೂ ಬಹುಮಟ್ಟಿಗೆ ಈ ರೀತಿಯ ನಿರೂಪಣೆ ಲಂಕೇಶರ ಸಹಾಯಕ್ಕೆ ಬರುತ್ತದೆ.

ಹಾಗೆಂದು ಇಡೀ ಕಾದಂಬರಿ ಬರೇ ಉತ್ತಮ ಪುರುಷದಲ್ಲಿ ನಿರೂಪಿತವಾಗಿಲ್ಲ. ಕ್ಯಾತ ತನ್ನ ಕಥೆಯನ್ನು ಹೇಳುತ್ತಿರುವಾಗ ಅಲ್ಲಲ್ಲಿ ಅವನನ್ನು ನಾನು ಎಂದು ಹೇಳಿಕೊಳ್ಳದೇ ಕ್ಯಾತ ಎಂದೇ ಕರಕೊಳ್ಳುತ್ತಾನೆ. ಈ ಕೆಳಗಿನ ಸಾಲುಗಳನ್ನು ನೋಡಿದರೆ ಇದು ಇನ್ನೂ ಸ್ಪಷ್ಟವಾಗಬಹುದು.
"ಬಲು ಜೋರಾಗಿದ್ದಾಳಲ್ಲ ಪದ್ದಿ ಅಂತ ಮನಸ್ಸಿನಲ್ಲೇ ಮೆಚ್ತಾ ಕಾರಿನ ಮೂಲೇಲಿ ಕೂತ ಕ್ಯಾತ."
"ಯೋಚ್ನೆ ಮಾಡ್ತಾ ಮಾಡ್ತಾ ಕ್ಯಾತನಿಗೆ ಒಂತರಾ ಆಯಿತು"

ಕತೆಯನ್ನು ನಮಗೆ ಹೇಳುತ್ತಿರುವ ಕ್ಯಾತ ಮತ್ತು ಕತೆಯಲ್ಲಿರುವ ಕ್ಯಾತನಿಗೂ ನಡುವೆ ಒಂದು ಗ್ಯಾಪ್ ಇದೆ ಅನ್ನುವುದನ್ನು ನಮಗೆ ಸೂಚಿತವಾಗಿಸುತ್ತಾರೆ. ಈ ಪ್ರಥಮ-ಉತ್ತಮ ಪುರುಷದ ನಡುವಿನ ಜಿಗಿತ ಎಷ್ಟು ಸಲೀಸಾಗಿ ನಡೆಯುತ್ತದೆಯೆಂದರೆ ಅದು ಕಥೆಯ ಓಟಕ್ಕೆ ಎಲ್ಲೂ ಭಂಗವನ್ನು ತರುವುದೇ ಇಲ್ಲ. ಮತ್ತೆ "ನನ್ನಂತವನ ಕತೆ ಕೇಳೋಕೆ ನೀವೇನು ನನ್ನಂಗೆ ಕ್ಯಾತನಾ ಸರ್" ಎಂದು ಮತ್ತೆ ಮತ್ತೆ ಕೇಳುವ ನಿರೂಪಕ ಕ್ಯಾತ ಬಹಳ ಬಾರಿ ತನ್ನ ಮತ್ತು ತನ್ನ ವಾಚಕವರ್ಗಕ್ಕಿರುವ ಬಿರುಕನ್ನು ಹೇಳುತ್ತಲೇ ಇರುತ್ತಾನೆ.

ಉತ್ತಮ ಪುರುಷದ ನಿರೂಪಣೆಯ ಮುಖ್ಯ ಸಮಸ್ಯೆ ಅಥವಾ ತಪ್ಪುಗ್ರಹಿಕೆಯೆಂದರೆ- ಬರಹಗಾರ ಮತ್ತು ಓದುಗ ಇಬ್ಬರೂ ಕತೆಯ ನಿರೂಪಕನನ್ನೇ ಕತೆಯ ಬರಹಗಾರ ಎಂದು ತಿಳಿಯುವುದು. ಇದು ಬಹಳಷ್ಟು ಮಟ್ಟಿಗೆ ಸತ್ಯವಾದರೂ, ನಾವ್ಯ್ ಅರಿಯಬೇಕಾದ ಸತ್ಯವೆಂದರೆ ಕಥೆಯ ನಿರೂಪಕನೇ ಬೇರೆ, ಬರಹಗಾರನೇ ಬೇರೆ. ಇವರಿಗಿರುವ ಮುಖ್ಯ ವ್ಯತ್ಯಾಸವೆಂದರೆನಿರೂಪಕನಿಗೆ ಕತೆ ಅಥವಾ ಕಾದಂಬರಿಯ ಹೊರಗೆ ಎಂತ ಅಸ್ತಿತ್ವವೂ ಇಲ್ಲ, ಆದರೆ, ಬರಹಗಾರನಿಗೆ ಈ ಕತೆಯ ಹೊರಗೂ ರಕ್ತ, ಮಾಂಸ ತುಂಬಿದ ಅಸ್ತಿತ್ವವಿದೆ. ಈ ಗ್ಯಾಪ್ ಅನ್ನು ನಿಭಾಯಿಸುವುದು ಬಹಳ ಕಷ್ಟಕರವಾದ ವಿಷಯ,

ಈ ವ್ಯತ್ಯಾಸವನ್ನು ಬಹಳ ಪಳಗಿದ ಬರಹಗಾರರೂ ರೂಢಿಸಿಕೊಳ್ಳುವುದು ಕಷ್ಟ. ಹಾಗಾಗಿಯೇ ಕತೆ ಹಾಗೂ ಪ್ರಬಂಧಗಳು ಕೆಲವೊಮ್ಮೆ ಒಂದೇ ಮಾದರಿಯಲ್ಲಿ ಕಾಣುತ್ತವೆ.

ಕತೆಗಳನ್ನು ಉತ್ತಮ ಪುರುಷದಲ್ಲಿ ಬರೆಯುವುದು ಎಷ್ಟು ಕಷ್ಟವೋ, ಪ್ರಬಂಧಗಳನ್ನು ಉತ್ತಮ ಪುರುಷದ ಹಂಗಿಲ್ಲದೇ ಬರೆಯುವುದೂ ಅಷ್ಟೇ ಕಷ್ಟ. ಆಗಲೇ ಅವಕ್ಕೆ ನುಡಿಚಿತ್ರಗಳ, ಹೆಚ್ಚು ಹೆಚ್ಚು ಪ್ರತಿಮೆಗಳನ್ನು ಉಪಯೋಗಿಸಿ ಲಿರಿಕಲ್ ಆಗುವ, ಅಥವಾ ಮ್ಯೂಸಿಂಗ್‌ಗಳ ರೂಪ ಕೊಟ್ಟಾಗ ಸಾಧ್ಯ ಅನಿಸುತ್ತದೆ. ಇದರ ಉತ್ತಮ ಉದಾಹರಣೆ ಜಯಂತರ "ಬೊಗಸೆಯಲ್ಲಿ ಮಳೆ"

Saturday, July 11, 2009

ಸಾಹಿತ್ಯವೆಂಬ ಚಪ್ಪೆಹುಳು

ಪ್ರತಿಯೊಬ್ಬ ಬರಹಗಾರನೂ ಒಂದಲ್ಲ ಒಂದು ಬಾರಿ ಈ ಪ್ರಶ್ನೆಗೆ ಉತ್ತರಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ನಾನೇಕೆ ಬರೆಯುತ್ತೇನೆ? ಬರೆಯುವುದರಿಂದ ನನಗಾಗುವ ಲಾಭವೇನು? ಬರೆಯದೇ ಇದ್ದರೆ ನಷ್ಟವೇನು. ಬರಹವೆನ್ನುವುದು ಚಟವಾ, ಪ್ರೀತಿಯಾ. ಹಣಕ್ಕಾಗಿಯಾ? ಖ್ಯಾತಿ, ಪ್ರಶಸ್ತಿಗಳಿಗಾಗಿಯಾ.

ನಾವು ಒಬ್ಬೊಬ್ಬರೂ ಒಂದೊಂದು ಉತ್ತರವನ್ನು ಕೊಡಬಹುದು. ಆದರೆ, ಬರೆಯುವ ಪ್ರತಿಯೊಬ್ಬರಿಗೂ ಗೊತ್ತು, ತಾವು ಬರೆಯುವುದು ತಮ್ಮ ಬರವಣಿಗೆಯ ಮೇಲಿನ ಪ್ರೀತಿಗಾಗಿ. ಕೇವಲ ಪ್ರೀತಿಯಿಂದ ಮಾತ್ರ ಎಂತದೂ ಸೃಷ್ಟಿಯಾಗಬಹುದು.ನಾನು ಹಣಕ್ಕಾಗಿ ಬರೆಯುತ್ತೇನೆ, ನನ್ನ ಓದುಗರಿಗಾಗಿ ಬರೆಯುತ್ತೇನೆ, ನನಗೋಸ್ಕರ ಬರೆದುಕೊಳ್ಳುತ್ತೇನೆ, ಬರೆಯುವುದನ್ನು ಬಿಟ್ಟರೆ ನನಗೇನೂ ಬರುವುದಿಲ್ಲ ಎನ್ನುವವರೂ ನಿಜವಾಗಿ ಬರೆಯುವುದು ಬರವಣಿಗೆಯ ಮೇಲಿನ ಪ್ರೀತಿಯಿಂದ ಮಾತ್ರ. ಈ ಪ್ರೀತಿ ಇಲ್ಲದ ಮೇಲೆ ಬರವಣಿಗೆಗೆ ಯಾವ ಅರ್ಥವೂ ಇಲ್ಲ. ದುಡ್ಡು ಮಾಡಲು ಅನೇಕ ವಿಧಾನಗಳಿದ್ದಾವೆ. ಬರವಣಿಗೆಯಿಂದ ದುಡ್ಡು ಮಾಡುವವರೂ ಕೂಡ ಇದಕಿಂತ ಹೆಚ್ಚು ದುಡ್ಡನ್ನು ನಾನು ಬೇರೆ ಕೆಲಸ ಮಾಡುವುದರಿಂದ ಗಳಿಸಬಹುದು. ಅದು ಅವರಿಗೂ ಗೊತ್ತಿದೆ. ಆದರೂ ಬರೆಯುತ್ತಾ ಹೋಗುತ್ತಾರೆ. ಬೇಕಾದಷ್ಟು ದುಡ್ಡು ಮಾಡಿದ ಮೇಲೂ ಬರೆಯುತ್ತಾಲೇ ಹೋಗುತ್ತಾರೆ. ಬರವಣಿಗೆಯಿಂದ ಒಂದು ನಯಾಪೈಸ ಗಳಿಸದಿದ್ದವರೂ ಬರೆಯುತ್ತಾ ಹೋಗುತ್ತಾರೆ. ಈ ಬರವಣಿಗೆ ಕೊಡುವ ಇಷ್ಟಾನಿಷ್ಟಗಳ ಜತೆಗೆ. ಬರವಣಿಗೆಯಿಂದ ದುಡ್ಡುಮಾಡಿದವರೂ, ಕೀರ್ತಿ ಪಡೆದವರೂ ಪ್ರಶಸ್ತಿ ಪಡೆದುಕೊಂಡವರೂ, ವಾದವಿವಾದಗಳಿಗೆ ಸಿಲುಕಿದವರೂ ಒಪ್ಪಿಕೊಳ್ಳುವುದು ಒಂದು ಸಾರ್ವತ್ರಿಕ ಸತ್ಯವನ್ನು-ಸ್ವರತಿಯೆನ್ನಿಸಿದರೂ ಸರಿ, ಇವರ ಬರವಣಿಗೆಯ ಮೇಲೆ ಇವರಿಗೆ ಅಂತರಾಳದಲ್ಲಿ ಬಹಳ ಪ್ರೀತಿಯಿದೆ. ಬರವಣಿಗೆಯ ಫಲಕ್ಕಿಂತಾ ಬರೆಯುವ ಕ್ರಿಯೆಯನ್ನು ಇವರು ಅಪಾರವಾಗಿ ಮೋಹಿಸುತ್ತಾರೆ.

ಡಿ ಆರ್ ನಾಗರಾಜ್‌ರವರು ಹೇಳಿದ್ದರು "ಅಳಿಸಲಾಗದ ಲಿಪಿಯನ್ನು ಬರೆಯಲೂ ಬಾರದು" ಇದು ಬರವಣಿಗೆಯ ಪ್ರೀತಿಯ ಜತೆಗೆ ಅದಕ್ಕಿರಬೇಕಾದ ಶ್ರಮ, ಪರಿಶ್ರಮ ಮತ್ತು ಶ್ರದ್ಧೆ ಎಷ್ಟು ಮುಖ್ಯ ಎಂಬುದನ್ನು ಸೂಚಿಸಬಹುದು. ಆದರೆ, ಈ ಅಳಿಸಲಾಗದ್ದನ್ನು ಬರೆಯುವಾಗಲೂ ಬರಹಗಾರ ಅದನ್ನು ಪ್ರೀತಿಯಿಂದಲೇ ಬರೆದಿರುತ್ತಾನೆ. ಅಳಿಸಲಾಗದ್ದು ಎಂದು ಗೊತ್ತಾಗುವುದು ಬರೆದನಂತರ ತಾನೇ. ನಂತರ ಓದುಗರು ಸ್ವೀಕರಿಸಲಿಲ್ಲ ಅಥವಾ ಕೆಟ್ಟ ವಿಮರ್ಶೆಗಳು ಬಂದವು- ಇದನ್ನು ಬರೆಯಬಾರದಿತ್ತು ಅನಿಸಬಹುದು, ಆದರೂ ಆ ಸಮಯದಲ್ಲಿ ಪಿಚ್ಚೆನಿಸಿದರೂ ಕೊಂಚ ಹಿಂದೆ ಹೋಗಿ ನೋಡಿದಾಗ ಆ ರೀತಿ ಬರೆಯುವಾಗಲೂ ಅದರ ಮೇಲೆ ಪ್ರೀತಿಯಿದ್ದೇ ಇರುತ್ತದೆ. ಹಾಗೆ ಬವಂತಕ್ಕೋ, ಅಥವಾ ಇನ್ನಿತರ ಒತ್ತಡಕ್ಕೋ ಸಿಕ್ಕಿ ಬರೆದರೆ ಅದರಲ್ಲಿ ಬರಹಗಾರ ತನ್ನನ್ನು ಪೂರ್ತಿ ತೊಡಗಿಸಿಕೊಳ್ಳದಿರುವುದು ಗೊತ್ತಾಗಿಹೋಗುತ್ತದೆ. ಯಾಕೆಂದರೆ ಪ್ರೀತಿಯ ಸತ್ಯಕ್ಕೆ ಆ ಶಕ್ತಿ ಇರುತ್ತದೆ.

ಆದರೂ ಎಲ್ಲರೂ ಇಂಥ ಒಲ್ಲದ ಕೆಲಸವನ್ನು ಒಂದಲ್ಲ ಒಂದು ದಿನ ಮಾಡಿರುವವರೇ ಅಲ್ಲವೇ? ಇದು ಬಹುಶಃ ಮಾಗುವ ಕ್ರಿಯೆ, ಕಾಯುವ ಕ್ರಿಯೆ.

ರಿಲ್ಕೆ ಹೇಳುತ್ತಾನೆ ಒಬ್ಬ ಯುವಕವಿಗೆ "ನೀನು ಬರೆಯಲೇ ಬೇಕೇ, ಯಾಕೆ ಎಂಬ ಕಾರಣವನ್ನು ಹುಡುಕಿಕೊ, ಬರೆಯಲೇಬೇಕೆಂಬ ಆಸೆ ಹೃದಯದ ಆಳದಲ್ಲಿ ಬೇರುಬಿಟ್ಟಿದೆಯೋ, ಬರೆಯುವ ಅವಕಾಶ ನಿನಗೆ ದೊರೆಯದಿದ್ದರೆ ಸಾಯುತ್ತೀಯೋ- ನೋಡಿಕೋ." ಅಂದರೆ ಬರೆಯದೇ ಬದುಕುವುದಕ್ಕೆ ಸಾಧ್ಯವಾ ಎಂಬ ಪ್ರಶ್ನೆಯನ್ನು ನಾವು ನಮಗೇ ಕೇಳಿಕೊಂಡರೆ ಅದಕ್ಕೆ ಉತ್ತರ ಹೌದು, ಬದುಕಬಲ್ಲೆವು ಎಂಬ ಉತ್ತರ ಎಲ್ಲೋ ಅಂತರಾಳದಲ್ಲಿ ದೊರಕಿದರೂ. ಬರೆಯದೇ ಇರಬಲ್ಲೆ ಎಂದು ಅನಿಸಿದರೆ ಬರೆಯುವುದು ನಿಷ್ಪ್ರಯೋಜನಕಾರಿ.

ಬಹಳ ದೊಡ್ಡ ಮಾತು. ಬರವಣಿಗೆಯನ್ನು ಚಳುವಳಿಗಳ ಉಪೋತ್ಪನ್ನಗಳು ಅಂದುಕೊಂಡ ಇಸಮ್ಮುಗಳಿಗೆ ಇದನ್ನು ಜೀರ್ಣಿಸಿಕೊಳ್ಳುವುದು ಕಷ್ಟ. ಇದನ್ನೇ ಮಾಸ್ತಿಯವರು ಸ್ವಲ್ಪ ಬೇರೆ ರೀತಿ "ಬರವಣಿಗೆ ಒಂದು ಪುಣ್ಯದ ಕೆಲಸ"ವೆಂದು ಹೇಳಿದ್ದರು. ಯಾವ ಕೆಲಸ ಮಾಡುವುದರಿಂದ ಪುಣ್ಯ ಬರುತ್ತದೆಂದು ನಾವು ತಿಳಿಯುತ್ತೇವೋ, ಬರೇ ಪುಣ್ಯದ ಕೆಲಸವನ್ನು ಮಾತ್ರ ಮಾಡುವುದು ನಮ್ಮ ಗುರಿಯಾಗುತ್ತದೆಯೋ ಆ ಕೆಲಸವನ್ನು ಬಹಳ ಪ್ರೀತಿಯಿಂದ ಮಾಡುತ್ತೇವೆ. ಆ ಕೆಲಸಕ್ಕೆ ಒಂದು ಪಾವಿತ್ರ್ಯ ಬಂದುಬಿಡುತ್ತದೆ. ಮುಖ್ಯವಾಗಿ ಈ ಕೆಲಸ ಮಾಡಿದರೆ ಪುಣ್ಯ ಬರುತ್ತದೆಯೆಂಬ ನಂಬಿಕೆ ಇರಬೇಕು. ಆ ನಂಬಿಕೆಯೇ ಇಲ್ಲದಿದ್ದರೆ ನಂಬದ ದೇವರಿಗೆ ಮಾಡುವ ಪೂಜೆ, ಪುನಸ್ಕಾರಗಳಂತೆ ಬರೇ ಹೊರಮೈನ ರಿಚುಯಲ್‌ಗಳು ಮಾತ್ರ ಇವಾಗಿ ಹೂರಣವಿಲ್ಲದ ಬರಹಗಳನ್ನು ಮಾತ್ರ ಬರೆಯಲಾಗಬಹುದು. ತನ್ನ ಸ್ವಂತ ಪ್ರಾಣವನ್ನು ಉಳಿಸಿಕೊಳ್ಳುವ ಮತ್ತು ಅಂತ ಪುಣ್ಯದ ಕೆಲಸವಾಗುವ ಮಹಿಮೆಯಿರುವ ಬರವಣಿಗೆಯನ್ನು ಬರಹಗಾರ ಬರೆಯುವಾಗ ಅದು ಪ್ರೀತಿಯಿಲ್ಲದೇ ಹೇಗೆ ಸಾಧ್ಯ. ಆದ್ದರಿಂದ ಅದರಲ್ಲಿ ಹಣ,ಖ್ಯಾತಿ ಮತ್ತು ಮುಖ್ಯವಾಗಿ ಚಟವನ್ನಾಗಿ ಮಾಡಿಕೊಳ್ಳುವ ಗುಣ ಹೊರಟುಹೋಗುತ್ತದೆ.

* * * *

ಇಂಥ ಬರವಣಿಗೆ ಯಥಾರ್ಥ ಪುಣ್ಯದ ಕೆಲಸವಾಗುವಾಗ ಬರಹಗಾರ ತಾನು ಬರವಣಿಗೆಯನ್ನು ಪೂರಾ ಆಸ್ಥೆಯಿಂದ ಮಾಡಬಲ್ಲೆ ಅಥವಾ ಇದನ್ನು ನಾನು ವೃತ್ತಿಯಾಗೋ, ಪ್ರವೃತ್ತಿಯಾಗೋ ಸ್ವೀಕರಿಸಬಲ್ಲೆ ಎಂದು ಅರ್ಥಮಾಡಿಕೊಳ್ಳುವುದು ಯಾವ ಘಟ್ಟದಲ್ಲಿ? ಈ ಬರವಣಿಗೆ ಬೇಡುವ ಸವಾಲುಗಳನ್ನು ಸ್ವೀಕರಿಸಲು ಸಿದ್ಧವಾಗುವುದು ಯಾವಾಗ?. ಜೀವನದಲ್ಲಿ ಬರೆಯದೇ ಬದುಕಿರಲಾರೆ ಎಂದು ಆತ ಅರ್ಥ ಮಾಡಿಕೊಳ್ಳುವುದು ಯಾವಾಗ?

ಅನೇಕ ಮಹಾನುಭಾವರು ಅನೇಕ ರೀತಿ ವ್ಯಾಖ್ಯಾನಿಸುತ್ತಾರೆ. ಆದರೆ, ಎಲ್ಲರೂ ಒಪ್ಪುವುದು ಒಂದು ಸ್ಪಷ್ಟ ವಿಷಯವನ್ನು. ಬರವಣಿಗೆ ಒಂದು ಜೀವನ ಶೈಲಿ. ಒಬ್ಬ ವ್ಯಕ್ತಿ ತಾನು ಇಂಜಿನಿಯರ್, ಡಾಕ್ಟರ್, ಲಾಯರ್ ಆಗುತ್ತೇನೆಂಬ ವೃತ್ತಿಪರ ಆಯ್ಕೆಗಳನ್ನಾಗಲೀ, ಸ್ಟ್ರೈಟ್, ಗೇ ಎಂಬ ಜೀವನಶೈಲಿಯ ಆಯ್ಕೆಗಳನ್ನಾಗಲೀ, ಇಂಥಾ ಊರಲ್ಲಿ ಇರುತ್ತೇನೆ ಅಥವಾ ಇರುವುದಿಲ್ಲ ಎಂಬ ಆಯ್ಕೆಗಳನ್ನಾಗಲೀ ಮಾಡಿಕೊಳ್ಳುವುದು ಸುಮಾರು ಪಡ್ಡೆ ವಯಸ್ಸು ಮುಗಿದು ಇನ್ನೇನು ಎಳೇ ವಯಸ್ಕನಾಗುತ್ತಿದ್ದಾಗ. ಮೀಸೆ ಚಿಗುರುತ್ತಿದ್ದಾಗ. ಕನಸುಗಳು ಅರಳುತ್ತಿದ್ದಾಗ. ಸರಿಸುಮಾರು ಇಂಥ ವಯಸ್ಸಿನಲ್ಲಿಯೇ ಆತನಲ್ಲಿ ಅವನಿಗೆ ಈ ಬರವಣಿಗೆಯ ಶಕ್ತಿ ಇದೆ ಎಂಬ ಅರಿವಿನ ಮಿಂಚು ಕೊಂಚವಾದರೂ ಆಗಿರುತ್ತದೆ. ಅಂದರೆ ಈ ಎಳೇ ವಯಸ್ಸಿನಲ್ಲಿಯೇ ಆತ ಎಂತದೋ ದೊಡ್ಡದನ್ನು ಬರೆದುಬಿಡುತ್ತಾನೆ ಎಂದಲ್ಲ. ಆತ ಆಗಷ್ಟೇ ಅಲ್ಲ ಜೀವನಪೂರ್ತಿ ಏನನ್ನೂ ಬರೆಯದೇ ಇರಲೂಬಹುದು. ಎಷ್ಟೋ ಜನ ತಮ್ಮ ಇಳಿವಯಸ್ಸಿನಲ್ಲಿ ಬರೆದು ದೊಡ್ಡದಾದದ್ದನ್ನು ಸಾಧಿಸಿರುವುದೂ ಇದೆ.

ಆದರೆ, ಈ ಬರವಣಿಗೆಗೆ ಬೇಕಾದ ಸೂಕ್ಷ್ಮತೆ, ವಿವರಗಳನ್ನು ಮನದಟ್ಟುಮಾಡಿಕೊಳ್ಳುವ ಕಲೆ-ಒಟ್ಟಾರೆ ಪ್ರಪಂಚದ ಗ್ರಹಿಕೆ ಎಲ್ಲವೂ ಬೇರೆಯೇ ಆಗಿರುತ್ತದೆ. ಈತ ಆ ಘಟ್ಟದಲ್ಲಿಯೇ ಲೋಕವನ್ನು ತನ್ನ ಕವಿಯ ದೃಷ್ಟಿಯಿಂದಲೋ, ಇಲ್ಲವೇ ಕಾದಂಬರಿಕಾರನ ದೃಷ್ಟಿಯಿಂದಲೋ, ವಿಮರ್ಶಕನಾಗಿಯೋ ನೋಡುತ್ತಿರುತ್ತಾನೆ. ಆತನ ಪ್ರತಿ ಯೋಚನೆ, ತಲ್ಲಣ, ತವಕಗಳು, ಪ್ರೀತಿ, ದ್ವೇಶ, ಸಿಟ್ಟು, ಮದುವೆ, ಮಕ್ಕಳು, ಸಂಸಾರ, ಸಾವು ಎಲ್ಲವೂ ಆತನ ಬರವಣಿಗೆಗೆ ಪೂರಕವಾಗಿಯೇ ಇರುತ್ತದೆ.

ಇದನ್ನೇ ಪೆರುವಿನ ಸ್ಪಾನಿಶ್ ಬರಹಗಾರ ಮಾರಿಯೋ ವಾರ್ಗಾಸ್ ಇಯೋಸ ಬಹಳ ಚೆನ್ನಾಗಿ ವಿವರಿಸುತ್ತಾನೆ. ಕವಿ ರಿಲ್ಕೆ ಒಬ್ಬ ಯುವ ಕವಿಗೆ ಬರೆದ ಪತ್ರಗಳ ಹಾಗೆ ತನ್ನ ಕಲ್ಪಿತ ಬರಹದ ಆಶಯಗಳನ್ನೆಲ್ಲಾ ಆತ ಒಬ್ಬ್ಬ ಯುವ ಕಾದಂಬರಿಕಾರನಿಗೆ ಪತ್ರ ಬರೆದು ಹೇಳಿದ್ದಾನೆ. (Letters to a young novesist) ಆತ ಹೇಳುವ ರೂಪಕಗಳು ಬಹಳ ಅರ್ಥಪೂರ್ಣವಾಗಿವೆ. ಹತ್ತೊಂಬತ್ತನೆಯ ಶತಮಾನದಲ್ಲಿ ಪ್ಯಾರಿಸ್‌ನಲ್ಲಿ ಹೆಂಗಸರು ತಾವು ತೆಳ್ಳಗೆ ಸುಂದರವಾಗಿ ಕಾಣಲೆಂದು ಚಪ್ಪೆಹುಳುವನ್ನು ನುಂಗಿಬಿಡುತ್ತಿದ್ದರಂತೆ. ಈ ಚಪ್ಪೆಹುಳು ಒಂದು ಪರಾವಲಂಬಿ ಜೀವಿ. ಇದು ತಿಂದವರ ಹೊಟ್ಟೆಯಲ್ಲಿ ಉಳಿದುಕೊಂಡು ಆ ವ್ಯಕ್ತಿಯ ಆಹಾರದ ಮೇಲೆಯೇ ತನ್ನ ಜೀವ ಹಿಡಿದುಕೊಂಡಿರುತ್ತದೆ. ಆ ವ್ಯಕ್ತಿ ತಿನ್ನುತ್ತಿದ್ದದ್ದನ್ನೆಲ್ಲಾ ತಾನು ತಿನ್ನುತ್ತಿತ್ತಂತೆ. ಈಗಿನ "ಸ್ಟಮಕ್ ಸ್ಟೇಪ್ಲಿಂಗ್" "ಬ್ಯಾಂಡಿಂಗ್" ಆಪರೇಷನ್ನುಗಳ ಚಾರಿತ್ರಿಕ ಪಳೆಯುಳಿಕೆ ಈ ಚಪ್ಪೆಹುಳು. ಮನುಷ್ಯನಲ್ಲಿ ಪರಾವಲಂಬಿಯಾಗಿ ಉಳಿದುಕೊಂಡು ಆತನ ಆಹಾರವನ್ನೆಲ್ಲ ಅದರ ಸತ್ವವನ್ನೆಲ್ಲಾ ಹೀರಿಕೊಂಡು ತಾನು ಪುಷ್ಟಿಕರವಾಗಿ ಬೆಳೆದುಬಿಡುತ್ತದೆ. ಈಕೆ ಎಷ್ಟು ತಿನ್ನುತ್ತಾಳೋ ಅದು ಅಷ್ಟು ಬೆಳೆಯುತ್ತದೆ. ಆದರೆ ಆ ಹೆಂಗಸರು ತೆಳ್ಳಗೆ ಉಳಿಯಿತ್ತಿದ್ದರಂತೆ.

ಇಯೋಸ ಹೇಳುವುದೂ ಇಷ್ಟೇ. ಈ ಸಾಹಿತ್ಯವನ್ನು ನನ್ನ ಪ್ರವೃತ್ತಿಯನ್ನಾಗಿ ತೆಗೆದುಕೊಂಡು ಬಿಡುತ್ತೇನೆ ಎಂದು ನಿರ್ಧರಿಸಿರುವವರು ಬಹಳ ಮುಂಚೆಯೇ ಈ ರೀತಿ ಸಾಹಿತ್ಯವೆಂಬ ಚಪ್ಪೆಹುಳವನ್ನು ನುಂಗಿಬಿಡಬೇಕು. ಇದು ನಮ್ಮೆಲ್ಲ ಜೀವನಾನುಭವಗಳು, ಓದು, ಬರಹ, ಗ್ರಹಿಕೆ, ಸಿಟ್ಟು, ಕಾಮ, ಪ್ರೀತಿ, ಸಾವು, ವಿರಹ ಎಲ್ಲವನ್ನೂ ತನ್ನೊಳಗೆ ನುಂಗಿಕೊಂಡು ತಾನು ಸಂತುಷ್ಟವಾಗಿ ಬೆಳೆಯುತ್ತದೆ. ನಿಜವಾಗಿ ಹೇಳುವುದೆಂದರೆ ಬರಹಗಾರ ತನ್ನ ಪ್ರತಿಯೊಂದು ಅತಿ ಕ್ಷುಲ್ಲಕ ಅನುಭವವನ್ನೂ ಅನುಭವವನ್ನೂ ಈ ಅವನ ಚಪ್ಪೆಹುಳಕ್ಕೇ ಉಣಿಸುತ್ತಿರುತ್ತಾನೆ.

ನಾನು ಬರೆದದ್ದನ್ನು ಮಾತ್ರ ಓದಿ, ನನ್ನ ಜೀವನ ನನ್ನ ಸ್ವಂತ ವಿಷಯ, ನಾನು ಜೀವಿಸಿದ ಹಾಗೆ ನೀವು ಜೀವಿಸುವುದು ಬೇಡ ಎಂದು ಬರಹಗಾರ ಅನ್ನುವುದು ಇಲ್ಲಿ ಕೊಂಚ ತಕರಾರಿನ ಮಾತಾಗುತ್ತದೆ. ಅಲ್ಲಿ ಮುಚ್ಚಿಟ್ಟುಕೊಳ್ಳುವ ಮಾತಿಲ್ಲ. ಬರಹ ಬದುಕಿಗೆ ಕನ್ನಡಿಯಾಗುತ್ತದೆ. ಬರವಣಿಗೆ ಒಂದು ಜೀವನ ಶೈಲಿ, ಅದೊಂದು ಹವ್ಯಾಸವಲ್ಲ, ಆಟವಲ್ಲ, ಸಮಯ ಕಳೆಯುವ ಮನರಂಜನೆಯಲ್ಲ, ಬರಹಗಾರ ಬರೆಯುವುದಕ್ಕೋಸ್ಕರ ಜೀವಿಸುತ್ತಾನೆ, ಜೀವಿಸುವುದಕ್ಕಾಗಿ ಬರೆಯುವುದಿಲ್ಲ. ಆದ್ದರಿಂದ ಬದುಕಿಗೂ ಬರಹಕ್ಕೂ ವ್ಯತ್ಯಾಸವಿಲ್ಲ. ಬರೆದಂತೆ ಬದುಕದವನು ಅಥವಾ ಬದುಕಿದಂತೆ ಬರೆಯದವನು ಬರಹಕ್ಕೆ ಅಥವಾ ತನ್ನ ಬದುಕಿಗೆ-ಎರಡರಲ್ಲಿ ಒಂದಕ್ಕೆ ಮೋಸಮಾಡಿಕೊಳ್ಳುತ್ತಿರುತ್ತಾನೆ.

ಕೆಟ್ಟ ಬರವಣಿಗೆಗಿಂತ ಕೆಟ್ಟ ಬದುಕು ಮೇಲಾ? ಕೆಟ್ಟ ಬದುಕಿಗಿಂತಾ ಕೆಟ್ಟ ಬರವಣಿಗೆ ಮೇಲಾ. ಒಂದು ಐಡಿಯಲ್ ಸಮಾಜದಲ್ಲಿ ಇದು ಸುಂದರ ಕಲ್ಪನೆ.

ನಾವೆಲ್ಲರೂ ಸಾಮಾನ್ಯ ಮನುಷ್ಯರು. ನಮ್ಮೆಲ್ಲರ ಬದುಕಿನ ಜಂಜಾಟದ ಮಧ್ಯವೇ ಬರೆದುಕೊಂಡೂ ಹೋಗುತ್ತಿದ್ದೇವೆ. ಆಗ ಈ ಮಹಾನುಭವರ ಹೇಳಿಕೆಗಳೆಲ್ಲ ನಮಗೆಷ್ಟು ಸಂಗತವಾಗುತ್ತದೆ ಎಂದು ಕೇಳಿಕೊಂಡಾಗ ನಾವು ನಿರಾಶರಾಗಬೇಕಿಲ್ಲ. ಯಾಕೆಂದರೆ, ನಾನೊಬ್ಬ ಬರಹಗಾರ ಎಂಬುದನ್ನು ನಿಸ್ಸಂದೇಹವಾಗಿ ಒಪ್ಪಿಕೊಂಡರೆ ಬರಹಕ್ಕೆ ಬದ್ಧತೆ ಬರುತ್ತದೆ. ನಾನೊಬ್ಬ ಡಾಕ್ಟರು, ನಾನೊಬ್ಬ ಇಂಜಿನಿಯರು ಅಥವಾ ನಾನೊಬ್ಬ ಲಾಯರು ಎಂಬಷ್ಟು ಸುಲಭವಾಗಿ ನಾವು ನಾನೊಬ್ಬ ಬರಹಗಾರ ಎಂಬುದನ್ನು ನಾವು ಒಪ್ಪಿಕೊಳ್ಳುವುದಿಲ್ಲ. ಅದನ್ನು ಒಪ್ಪಿಕೊಳ್ಳುವಷ್ಟು ಪ್ರೀತಿಯಿದ್ದರೆ ಸಾಕು ಈ ಚಪ್ಪೆಹುಳವನ್ನು ಕೊಂಚವಾದರೂ ನಾವು ನುಂಗಲು ಪ್ರಯತ್ನಮಾಡಬಹುದು.

ಈ ಬರವಣಿಗೆ ಎಂಬ ಮಾತು ಬಹಳಮಟ್ಟಿಗೆ ಸೃಜನಶೀಲ ಸೃಷ್ಟಿಕ್ರಿಯೆಗೆ ಮಾತ್ರ ಅನ್ವಯವಾಗುತ್ತದಾ. ಉಳಿದ ಪ್ರಕಾರಗಳ ಗತಿಯೇನು? ಉದಾಹರಣೆಗೆ ಈ ಅಂಕಣ ಬರೆಯಲು ಸಹ ಇಂತಹ ಬರವಣಿಗೆಯನ್ನು ಪ್ರೀತಿಸುವುದು ಬೇಡವಾ? ಅಥವಾ ಇದೊಂದು ವಾರವಾರ ನಡೆಯುವ ಪ್ರೀತಿ ರುಟೀನ್ ಆದ ಸಂಸಾರವಾ?

ನಿಯಮಿತವಾಗಿ ಬರೆಯುವ ಈ ಕೆಲಸದ ಬಗ್ಗೆ ಎಷ್ಟೇ ಪ್ರೀತಿಯಿದ್ದರೂ ಆ ಪ್ರೀತಿಯ ಪ್ರಾಡಕ್ಟ್ ಒಂದು ಘಟ್ತದಲ್ಲಿ ಸಂಸಾರಸುಖದಂತೆ ತನ್ನ ಮಸಾಲೆಗಳನ್ನು ಕಳಕೊಂಡು ಹಳತಾಗಬಹುದಲ್ಲವೇ? ಬರಹಗಾರನಿಗೆ ಅವನ ಬರಹದ ಮೇಲೆ ಪ್ರೀತಿಯಿರಬಹುದು. ಅದೇ ಪ್ರೀತಿ ಓದುಗರಿಗೂ ಅವನ ಬರಹದ ಮೇಲೆ ಇರಬೇಕಲ್ಲ.

ಹಾಗಾಗಿ ಅಂಕಣ ಎಂಬ ಈ ಬಂಧ ಕೊನೆಗೂ ಅನಿವಾರ್ಯವಾಗಿ ಅಂಕಣಕಾರನಿಗೂ ಓದುಗನಿಗೂ ಡೈವೊರ್ಸಿನಲ್ಲಿ ಕೊನೆಗೊಳ್ಳುವ ಸಂಬಂಧವೇ. ಇದಕ್ಕೆ ಯಾರೂ ಹೊರತಲ್ಲ. ಇಲ್ಲಿನ ಸಂಸಾರ ಅಲ್ಪಾಯುಷಿ. ಅದು ಎಷ್ಟುಕಾಲ ಬದುಕುತ್ತದೆಂಬುದು ಅವರವರ ಶಕ್ತಿಗೆ, ಸಾಮರ್ಥ್ಯಕ್ಕೆ ಬಿಟ್ಟಿದ್ದು. ಆದರೆ, ಅಂಕಣ ಬರೆಯುವ ಮೊದಲೇ ಈ ಒಡಂಬಡಿಕೆ ನೇರವಾಗಿದ್ದರೆ, ಇದನ್ನು ಇಬ್ಬರೂ ಅರ್ಥಮಾಡಿಕೊಂಡಿದ್ದರೆ ಪ್ರೀತಿಯ ಅಂತ್ಯ ಅಷ್ಟು ಕಷ್ಟಕರವಾಗಲಾರದು. ಕೊನೆಗೆ ಘನತೆಯಿರುತ್ತದೆ. ಕೊನೆಗೊಳ್ಳುತ್ತದೆ, ಕೊನೆಗೊಳ್ಳಲೇಬೇಕು

...ಪ್ರೀತಿ ಚಟವಾಗುವ ಮುನ್ನ