Friday, January 29, 2010

ಫೈನಲ್ ಕಟ್




ಅರವಿಂದ ಅಡಿಗ ‘ದ ವೈಟ್ ಟೈಗರ್’ ಬರೆದು ಸುಮಾರು ದಿನ ಅದನ್ನು ಪ್ರಕಟಮಾಡುವ ಉದ್ದೇಶವನ್ನೆ ಹೊಂದಿರಲಿಲ್ಲ. ನಂತರ ಅದನ್ನು ಮತ್ತೆ ಪರಿಷ್ಕರಿಸಿ ರೆದಾದ ಮೇಲೆ ಅದನ್ನು ತನ್ನ ಏಜೆಂಟಿಗೆ ಕಳಿಸಿದಾಗ ಆ ಏಜೆಂಟು ಅದನ್ನು ಓದಿದ ನಂತರ ಸಂಪಾದಕ ಮಂಡಳಿಗೆ ಕೊಟ್ಟ. ಅದನ್ನು ಓದಿದ ಸಂಪಾದಕರೊಬ್ಬರು ಇಡೀ ಕಾದಂಬರಿಯನ್ನು ಉತ್ತಮ ಪುರುಷದಲ್ಲಿ ಬರೆದುಕೊಟ್ಟರೆ ಇದನ್ನು ಪ್ರಕಟಿಸುವ ಸಾಧ್ಯತೆಯಿದೆ ಎಂದಿದ್ದರು. ಕಾದಂಬರಿ ಪ್ರಕಟಣೆಯಾಗಲು ಬೇರೆ ದಾರಿಯೇ ಇವೆಂದು ಗೊತ್ತಾದ ಮೇಲೆ ಅಡಿಗ ಕಾದಂಬರಿಯನ್ನು ಕೇವಲ ಒಂದು ತಿಂಗಳಲ್ಲಿ ಉತ್ತಮ ಪುರುಷದಲ್ಲಿ ಬರೆದುಕೊಟ್ಟನಂತೆ. ಈ ಉತ್ತಮ ಪುರುಷದ ನಿರೂಪಣೆ ಇಡೀ ಕಾದಂಬರಿಗೆ ಒಂದು ಅಧಿಕೃತತೆಯನ್ನು ಕೊಡುತ್ತದೆ ಎಂದು ಪರಿಷ್ಕರಣ ಮಂಡಲಿಯ ಒಮ್ಮತದ ಅಭಿಪ್ರಾಯವಾಗಿತ್ತು. ಅದನ್ನು ‘ಲೇಖಕನ ಸ್ವಾತಂತ್ರ್ಯ’ ಎಂಬ ಹಟಕ್ಕೆ ಬಿದ್ದು ಅಡಿಗ ಪರಿಷ್ಕರಿಸದೇ ಹೋಗಿದ್ದರೆ ಕಾದಂಬರಿ ಪ್ರಕಟವಾಗಿಯೂ ಇರುತ್ತಿರಲಿಲ್ಲ. ನಂತರದ ಬೂಕರ್ ಇತ್ಯಾದಿಗಳು ಕನಸಾಗಿಯೇ ಉಳಿಯುತ್ತಿದ್ದವು.

ಇಂಗ್ಲಿಶ್ ಕಾದಂಬರಿಗಳ ಮಾರ್ಕೆಟಿಂಗ್ ಜಾಲವೇ ಬಹಳ ದೊಡ್ಡದು. ಈ ಹಸ್ತಪ್ರತಿಯನ್ನು ಓದುವ, ತಿದ್ದುವ, ಪೂರಾ ಬದಲಿಸುವ ಅಥವಾ ತಿರಸ್ಕರಿಸುವ ಒಂದು ದೊಡ್ಡ ಗುಂಪೇ ಪುಸ್ತಕದ ಪ್ರಕಟಣೆಯನ್ನು ಹಿಡಿತದಲ್ಲಿಟ್ಟುಕೊಂಡಿರುತ್ತದೆ. ಎಲ್ಲದರ ಮುಖ್ಯವಾದ ಉಸಿರಿರುವುದು ಮಾರುಕಟ್ಟೆಯ ನಾಡಿಬಡಿತ. ಇಂಥ ಪುಸ್ತಕವನ್ನು ಬರೆದರೆ ಪ್ರಾಯಶಃ ಓದುಗರು ಓದುತ್ತಾರೆ ಎನ್ನುವ ನಂಬಿಕೆ. ಅಂದರೆ ಈ ಪ್ರಕಾಶಕ ಮಂಡಲಿಗೆ ಕೃತಿಯ ವಸ್ತು, ಸಮಕಾಲೀನತೆ ಮತ್ತು ಬರೆಯುವ ಶೈಲಿ ಎಲ್ಲವೂ ಆ ಕೃತಿಯನ್ನು ಮಾರುತ್ತದಾ ಅನ್ನುವುದು ಬಹಳ ಮುಖ್ಯವಾಗುತ್ತದೆ. ಒಂದು ಜಗತ್ತು ‘ಇಂಡಿಯಾ ಈಸ್ ಶೈನಿಂಗ್’ ಎಂದು ಹೇಳಿ ಮೆರೆಯುತ್ತಿರಬೇಕಾದರೆ, ಪಾನು ಜಗಿಯುವ ಕೀಳು ಜಾತಿಯ ಬಿಹಾರಿಮೂಲದ ಬಲರಾಮ ಹಲವಾಯಿಯ ಕಥನ ಉತ್ತಮಪುರುಷದಲ್ಲಿರುವುದು ಇನ್ನೊಂದು ಇಂಡಿಯಾದ ಅಧಿಕೃತ ಚಿತ್ರಣ ಎಂದು ಈ ಸಂಪಾದಕ ಮಂಡಳಿಗೆ ಅನಿಸಿದ್ದಿರಬಹುದು. ಇನ್ನೂ ಹೆಚ್ಚಾಗಿ ಇಂಥ ಇಂಡಿಯಾದ ಬಗ್ಗೆಯೇ ಇಂಗ್ಲಿಶ್ ಓದುಗರಿಗೆ ಆಸಕ್ತಿಯಿರುವುದು ಹೊರತು ಅಮಿತವ್ ಘೋಷನ ‘ಸೀ ಆಫ಼್ ಪಾಪೀಸ್’ ನ ತ್ರಿವಳಿಯಲ್ಲ ಎಂಬ ಮಾರುಕಟ್ಟೆಯ ಅಂಶವೂ ಈ ಕೃತಿಯ ಆಯ್ಕೆ, ಪರಿಷ್ಕರಣ ಮತ್ತು ಪ್ರಕಾಶನದಲ್ಲಿ ಕೆಲಸ ಮಾಡಿರುತ್ತದೆ.

ಕಾದಂಬರಿಯನ್ನೋ, ಕತೆಯನ್ನೋ ಬರೆದಾದಮೇಲೆ ಅದರ ಪರಿಷ್ಕರಣದ ಕಾರ್ಯವನ್ನು ಯಾರು ಮಾಡಬೇಕು? ಕನ್ನಡದಲ್ಲಿನ ಸದ್ಯದ ಪರಿಸ್ಥಿತಿಯಲ್ಲಿ ಹೆಚ್ಚಿನ ಮಟ್ಟಿಗೆ ಕೃತಿಕಾರನೇ ಕೃತಿಯ ಪರಿಷ್ಕರಣವನ್ನೂ ಮಾಡಿರುತ್ತಾನೆ. ಕನ್ನಡದ ಸೀಮಿತ ಮಾರುಕಟ್ಟೆಯಲ್ಲಿ ಈ ಪರಿಷ್ಕರಣ ಕಾರ್ಯಕ್ಕೆ ವೃತ್ತಿಪರತೆ ತರಲಿಕ್ಕಾಗುತ್ತದೆಯಾ? ಅಂದರೆ ಅಡಿಗನ ಕಾದಂಬರಿಯಂತೆ ಮಾರುಕಟ್ಟೆ ಪ್ರಣೀತ ಪರಿಶ್ಕರಣವಲ್ಲದಿದ್ದರೂ ಕಾದಂಬರಿಯ ಕೊನೆಯ ಪರಿಜನ್ನು ವೃತ್ತಿಪರವಾಗಿ ಪರಿಷ್ಕಾರ ಮಾಡಲು ಸಾಧ್ಯವಿದೆಯಾ? ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೇಳುವುದಎಂದರೆ ಹೀಗೆ ಬೇರೊಬ್ಬರಿಂದ ಪರಿಷ್ಕೃತವಾದ ತಮ್ಮ ಕೃತಿಯನ್ನು ಪ್ರಕಟಿಸಲು ನಮ್ಮ ಕಾದಂಬರಿಕಾರರು ಸಿದ್ಧರಿದ್ದಾರಾ?

ಕತೆ, ಕಾದಂಬರಿ ಬರೆಯುವ ಕ್ರಿಯೆ ಒಬ್ಬೊಬ್ಬರಿಗೆ ಒಂದೊಂದು ರೀತಿ ಒಲಿದಿರುತ್ತದೆ. ಒಮ್ಮೆಲೇ ಮೂರುಮೂರು ಕತೆಗಳನ್ನು ಒಟ್ಟೊಟ್ಟಿಗೇ ಬರೆಯುವವರಿದ್ದಾರೆ. ಒಂದು ಕತೆಯನ್ನು ಬರೆಂiiಲು ಕೂತರೆ ಮುಗಿಯುವ ತನಕ ಅದನ್ನು ಬಿಡದೆ ಮುಗಿಸದೇ ಇರುವವರೂ ನಮ್ಮಲ್ಲಿದ್ದಾರೆ. ಬಹಳಷ್ಟು ಜನ ಒಂದು ಕಾಲದಲ್ಲಿ ಒಂದು ಕತೆಯನ್ನೋ ಕಾದಂಬರಿಯನ್ನೋ ಮಾತ್ರ ಬರೆಯುತ್ತಿರುತ್ತಾರೆ. ದೀರ್ಘ ಕಾಲದ ಬರವಣಿಗೆಗೆ ಪರಿಷ್ಕರಣ ಕಾರ್ಯ ಬಹಳ ಮುಖ್ಯ. ಅದೊಂದು ಮನೆ ಕಟ್ಟಿಯಾದ ಮೇಲೆ ಕೊನೆಯ ಕೊಂಕುಗಳನ್ನು ತಿದ್ದಿ ಒಪ್ಪ ಮಾಡಿದಂತೆ. ಈ ಕಾದಂಬರಿ ಬರೆಯುವ ಕ್ರಿಯೆಯನ್ನು ಈ ರೀತಿ ಒಡೆದು, ಕೆಡವಿ ಕೊನೆಗೆ ಒಪ್ಪ ಮಾಡುವ ಕ್ರಿಯೆಯ ಮೇಲೆ ನಂಬಿಕೆಯಿರದೆ ಮೊದಲ ಪರಿಜೇ ಕೊನೆಯ ಪರಿಜು ಎಂದು ತಿಳಕೊಂಡ ಲೇಖಕರಿಗೆ ಇವೆಲ್ಲ ಮುಖ್ಯವಾಗುವುದೇ ಇಲ್ಲ.

ಕನ್ನಡದ ಬೇರೆಬೇರೆ ಲೇಖಕರು ಬರೆಯುವ ಕ್ರಿಯೆಯನ್ನು ನೋಡಿದರೆ ಈ ಪರಿಷ್ಕರಣ ಕ್ರಿಯೆ ಬೇರೆಬೇರೆಯವರಿಗೆ ಬೇರೆಬೇರೆ ರೀತಿಯಲ್ಲಿ ಒದಗಿಬಂದಿರುವಂತೆ ಕಾಣುತ್ತದೆ. ಶಿವರಾಮಕಾರಂತರಂತರವರು ಬರೆಯುವ ಸಂದರ್ಭದಲ್ಲಿ ಎಲ್ಲಾದರೂ ಹೋಗಿ ಯಾರದೋ ಮನೆಯಲ್ಲಿ ಕೂತು ಒಂದೇ ಏಟಿಗೆ ಬರೆದು ಮುಗಿಸುತ್ತಿದ್ದರಂತೆ. ಅವರ ಅತ್ಯುತ್ತಮ ಕಾದಂಬರಿಗಳಾದ ಬೆಟ್ಟದ ಜೀವ, ಅಳಿದ ಮೇಲೆ ನಂತಹ ಕಾದಂಬರಿಗಳು ಕೇವಲ ಒಂದು ವಾರವೋ ಹದಿನೈದು ದಿನಗಳಲ್ಲಿಯೋ ಬರೆಸಿಕೊಂಡಿವೆ. ಸರಸಮ್ಮನ ಸಮಾಧಿಯ ಭಾಷೆ, ತಂತ್ರ ಇಂದಿಗೂ ಆಕರ್ಷಕವೆನ್ನಿಸುತ್ತದೆ. ಕಾರಂತರು ತಮ್ಮ ಕಾದಂಬರಿಯನ್ನು ಬರೆಯುವುದೂ ಪರಿಷ್ಕರಿಸುವುದೂ ಒಟ್ಟಿಗೆ ಮಾಡುತ್ತಿದ್ದರಂತೆ. ಒಮ್ಮೆ ಬರೆದು ಮುಗಿಸಿದೆ ಎಂದಾದ ಮೇಲೆ ಈ ಪರಿಷ್ಕರಣ ಕಾರ್ಯ ನಂತರ ಅವರಿಗೆ ಯಾವತ್ತೂ ಸಮಸ್ಯೆಯಾಗಿರಲೇ ಇಲ್ಲ.

ಈ ಪರಿಷ್ಕರಣ ಕಾರ್ಯಕ್ಕೆ ವೃvತಿಪರತೆ ತರುವ ವಿಚಾರ ಗೋಪಾಲಕೃಷ್ಣಪೈರವರ ‘ಸ್ವಪ್ನ ಸಾರಸ್ವತ’ ಕಾದಂಬರಿಯನ್ನು ಓದುತ್ತಿದ್ದಾಗ ನನ್ನ ಮನಸ್ಸಿನಲ್ಲಿ ಮೂಡಿ ಬಂದಿತು. ಏಳು ತಲೆಮಾರಿನ ಕಥನವನ್ನು ಹೇಳುವ ಈ ಕಾದಂಬರಿ ತನ್ನ ಹರಹನ್ನು ಸುಮಾರು ನಾಲ್ಕುನೂರು ವರ್ಷದವರೆವಿಗೂ ವಿಸ್ತರಿಸಿಕೊಂಡಿದೆ. ಇಲ್ಲಿ ಯಾರೂ ನಾಯಕರಿಲ್ಲ. ಕೇಳು ಜನಮೇಜಯ ಎನ್ನುವ ರೀತಿಯಲ್ಲಿ ಮೊಮ್ಮಗನಿಗೆ ತಾತ ಹೇಳುವ ಕತೆ ಮುಂದುವರೆದುಕೊಂಡು ಹೋಗುತ್ತದೆ. ಕಾದಂಬರಿಯ ಪ್ರತಿಪುಟದಲ್ಲಿಯೂ ಅದರ ಹಿಂದಿನ ಆಳವಾದ ಅಧ್ಯಯನ ಎದ್ದು ಕಾಣುತ್ತದೆ. ಒಂದೊಂದು ಕಾಲಘಟ್ಟ ಜಿಗಿದಾಗಲೂ ಅದರಲ್ಲಿ ಆಗುವ ಪಲ್ಲಟಗಳು, ಪಾತ್ರಗಳ ಬದಲಾಗುವ ಆಶಯಗಳು ಅಪರೂಪವೆನ್ನುವಂತೆ ವ್ಯಕ್ತವಾಗುತ್ತಾ ಹೋಗಿವೆ. ಆದರೆ, ನನಗೆ ಅನಿಸಿದ್ದು ಈ ಕಾದಂಬರಿಯನ್ನು ಇನ್ನೂ ಪರಿಷ್ಕರಿಸಲು ಸಾಧ್ಯವಿತ್ತಾ, ಎಂದು. ಕಾದಂಬರಿಯನ್ನು ಬರೆದ ಪೈ ಯವರ ಪರಿಶ್ರಮದ ಬಗ್ಗೆ ನನಗೆ ಅಪಾರವಾದ ಗೌರವವಿದೆ. ಪ್ರಾಯಶಃ ಇತ್ತೀಚಿನ ದಿನಗಳಲ್ಲಿ ನಾನೋದಿದ ಒಂದು ಅತ್ಯುತ್ತಮ ಪುಸ್ತಕವೂ ಇದು ಹೌದು. ಆದರೂ ಹೀಗೆ ನನಗನಿಸಿದ್ದೇಕೆ ಎಂದು ನಾನೇ ಕೇಳಿಕೊಳ್ಳುತ್ತೇನೆ.

ದೀರ್ಘ ಬರವಣಿಗೆಯ ಮುಖ್ಯ ಸವಾಲೆಂದರೆ ಕಾದಂಬರಿ ಶುರುವಾದ ಟೆಂಪೋವನ್ನು ಕೊನೆಯತನಕ ಉಳಿಸಿಕೊಂಡು ಹೋಗುವುದು. ಸುಮಾರು ಏಳೆಂಟು ವರ್ಷಗಳ ಕಾಲ ಬರೆಸಿಕೊಂಡ ಬರವಣಿಗೆ ಲೇಖಕನ ಜತೆಗೂ ಬೆಳೆದಿರುತ್ತದೆ. ಕೃತಿಕಾರ ಒಂದು ಕಂಪ್ಯೂಟರ್ ಅಲ್ಲ. ಬೇಕಾದ ಅಧ್ಯಯನ ಸಾಮಗ್ರಿಯನ್ನು ಫ಼ೀಡ್ ಮಾಡಿಬಿಟ್ಟರೆ ಒಂದು ಕಾದಂಬರಿಯನ್ನು ಒಗೆಯುವುದಕ್ಕೆ. ಆತನ ಮೈ, ಮನಗಳಲ್ಲಿ ಆಗುವ ಪಲ್ಲಟಗಳು ಕೃತಿಯಲ್ಲಿಯೂ ಕಾಣಸಿಗುತ್ತದೆ. ವಿಮರ್ಶಕರು ಯಾವಾಗಲೂ ಹೇಳುತ್ತಿರುತ್ತಾರೆ, ಕೃತಿಕಾರನಿಗೆ ಕೃತಿಯ ಕೇಂದ್ರದಿಂದ ಹೊರನಿಂತು ನೋಡುವ ಸಾಕ್ಷೀಪ್ರಜ್ಞೆ ಬಹಳ ಮುಖ್ಯ. ಯಾವ ಪಾತ್ರದ ಮೇಲೆಯೂ ಕೃತಿಕಾರ ತನ್ನ ನಂಬಿಕೆಗಳನ್ನು ಹೇರಿಸಬಾರದು, ಪಾತ್ರಗಳನ್ನು ತಂಪಾಡಿಗೆ ತಾವು ಬೆಳೆಯಲು ಬಿಡಬೇಕು ಎಂದು. ಆದರೂ ಯಾವುದೇ ಕೃತಿಯಲ್ಲಿ ಕೃತಿಕಾರನ ಪೂರ್ವಗ್ರಹಗಳು ಎಲ್ಲಿಯಾದರೂ ಒಂದು ಮಟ್ತದಲ್ಲಿ ಕೆಲಸ ಮಾಡಿಯೇ ಇರುತ್ತದೆ. ಕೃತಿಕಾರನಿಗೆ ಈ ದೀರ್ಘಕಾಲಘಟ್ಟದಲ್ಲಿ ಕೆಲವು ಪಾತ್ರಗಳ ಮೇಲೆಯೋ, ಕಾಲದ ಮೇಲೆಯೋ, ಘಟನೆಯ ಮೇಲೆಯೋ ಇನ್ನಿಲ್ಲದ ಪ್ರೀತಿಬೆಳೆದಿರುತ್ತದೆ. ಹಾಗಾಗಿ ಗೊತ್ತಿದ್ದೋ ಗೊತ್ತಿಲ್ಲದೆಯೋ ಆ ಪಾತ್ರಗಳು, ಘಟನೆಗಳು ಅಗತ್ಯಕ್ಕಿಂತಾ ಹೆಚ್ಚಾಗಿಯೇ ಬರೆಸಿಕೊಂಡಿರುತ್ತವೆ. ಯಾಕೆಂದರೆ ಕೃತಿಕಾರ ಈ ಕಾದಂಬರಿ ಬರೆಯುವ ಜತೆಜತೆಗೂ ತಾನೂ ಬದುಕುತ್ತಾ ಹೋಗಿರುತ್ತಾನೆ.

ಇದಕ್ಕೆ ಇರುವ ಒಂದೇ ಒಂದು ಪರಿಹಾರವೆಂದರೆ ವೃತ್ತಿಪರ ಪರಿಷ್ಕರಣ. ನಮ್ಮ ಎಲ್ಲ ಲೇಖಕರಿಗೆ ತಮ್ಮ ಕೃತಿಯ ಬಗ್ಗೆ, ತಮ್ಮ ಸೃಜನಶೀಲತೆಯ ಬಗ್ಗೆ ಅಪಾರವಾದ ಮೋಹವಿರುತ್ತದೆ, ಅಷ್ಟೇ ಈ ಕಾದಂಬರಿ ಅಥವಾ ಈ ಕಥೆ ನನ್ನ ಕೂಸು. ಈ ಕತೆಯನ್ನು ನನಗಿಂತ ಚೆನ್ನಾಗಿ ಬೇರೆ ಯಾರೂ ಬರೆಯುವುದು ಸಾಧ್ಯವಿಲ್ಲ ಎಂಬ ನಂಬಿಕೆಯಿರುತ್ತದೆ. ಹೀಗಿದ್ದಾಗ ಒಬ್ಬ ಲೇಖಕ ಒಂದು ಕಾದಂಬರಿ ಬರೆದಾದ ಮೇಲೆ ಏನು ಮಾಡಬಹುದು? ತನ್ನ ಸಹ ಲೇಖಕರ ಬಳಗಕ್ಕೆ ಮೊದಲ ಓದಿಗೆ ಕೊಡುತ್ತಾನೆ. ಈ ಬಳಗದಲ್ಲಿ ಹೆಚ್ಚಿನವರು ಲೇಖಕರು ಇಲ್ಲವೇ ವಿಮರ್ಶಕರು. ಓದಿದವರು ಯಾರೂ ಕಾದಂಬರಿ ಕೆಟ್ಟದಾಗಿದೆ ಎಂದು ಹೇಳುವುದಿಲ್ಲ, ಯಾವುದೋ ಭಾಗವನ್ನು ಕೊಂಚ ಪರಿಷ್ಕರಿಸಿದ್ದರೆ ಚೆನ್ನಾಗಿತ್ತು ಅಂತಲೋ, ಅಥವಾ ಈ ಪಾತ್ರಕ್ಕೆ ಒತ್ತು ಹೆಚ್ಚಾಯಿತು ಎಂತಲೋ ಹೇಳುತ್ತಾರೆ.

ಈ ಲೇಖಕ ಅಥವಾ ವಿಮರ್ಶಕ ಮಿತ್ರರನ್ನು ಹಸ್ತಪ್ರತಿಯನ್ನು ಓದಿ ಅಭಿಪ್ರಾಯ ಕೇಳುವುದು ಲೇಖಕನಿಗೆ ಒಂದು ಲಿಟ್‌ಮಸ್ ಟೆಸ್ಟ್ ಇದ್ದಹಾಗೆ. ಇಲ್ಲಿ ಆತನ ಟೆಸ್ಟ್ ಓದುಗರು ಸಾಮಾನ್ಯ ಓದುಗರಲ್ಲ. ಪಂಡಿತರು. ಅವರ ಹೇಳಿಕೆಯ ಮೇಲೆ ಕೃತಿಯನ್ನು ಪರಿಷ್ಕರಿಸುವುದು ಅವರ ಅಭಿಪ್ರಾಯವನ್ನು ಮನ್ನಿಸಿದ ಹಾಗೆ ಮಾತ್ರ. ಓದುಗ ಏನನ್ನು ಅಪೇಕ್ಷಿಸುತ್ತಾನೆ ಎನ್ನುವ ಲಕ್ಷ್ಯ ಇಲ್ಲಿ ಬರಹಗಾರನ ಗಮನದಲ್ಲಿಯೇ ಇಲ್ಲ ಎನ್ನುವುದನ್ನು ಗಮನಿಸಿ

ಒಂದು ಸಾವಿರ ಪ್ರತಿಯನ್ನು ಪ್ರಕಟಿಸಿ ಅದರಲ್ಲಿ ಬಿಡುಗಡೆಯ ದಿನ ಇನ್ನೂರು ಪ್ರತಿಗಳನ್ನು ಮಾರಾಟ ಮಾಡಿ, ಇನ್ನೊಂದಿನ್ನೂರು ಪ್ರತಿಗಳನ್ನು ಮಿತ್ರರಿಗೆ ಸಹಿಹಾಕಿ ಕೊಟ್ಟು, ಇನ್ನೊಂದಿಷ್ಟನ್ನು ಟಾಪ್ ಟೆನ್ ಪಟ್ಟಿಯ ಆಧಾರದ ಮೇಲೆ ಮಾರಿ ಉಳಿದದ್ದನ್ನು ಲೈಬ್ರರಿಗೆ ತಳ್ಳಿಬಿಡುವ ನಮ್ಮ ಪುಸ್ತಕೋದ್ಯಮದ ಮಾರುಕಟ್ಟೆಯ ವ್ಯವಹಾರ ತೀರ ವಿಚಿತ್ರವಾದದ್ದು. ಇಲ್ಲಿ ಓದುಗ ಒಂದು ರೀತಿಯಲ್ಲಿ ಗೌಣನಾಗಿದ್ದಾನೆ. ಮಾರುಕಟ್ಟೆಯನ್ನು ನೋಡಿ ಕಾದಂಬರಿ ಬರೆಯಬೇಕೆಂದು ನಾನು ಹೇಳುತ್ತಿಲ್ಲ. ಆದರೆ, ಬರಹಗಾರನಿಗೆ ಕೂಡ ಓದುಗ ಮುಖ್ಯನಾಗುತ್ತಿಲ್ಲ. ಆತನ ಕಾದಂಬರಿ ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಎಲ್ಲಿ ಸಲ್ಲುತ್ತದೆ ಎನ್ನುವುದನ್ನು ನಿರ್ಧರಿಸುವುದು ಓದುಗನನ್ನು ಹೊರತಾದ ಅನೇಕ ವೇರಿಯಬಲ್‌ಗಳು. ಮಾರುಕಟ್ಟೆ ಒಂದು ಪುಸ್ತಕವನ್ನು ಪುರಸ್ಕರಿಸಿದಾಗಲೀ ಅಥವಾ ನಿರಾಕರಿಸಿದಾಗಲೀ ಲೇಖಕನಿಗೆ ಯಾವ ಲಾಭವೂ, ನಷ್ಟವೂ ಆಗದೇ ಇದ್ದಾಗ ಕೇವಲ ಕೆಲವು ಓದುಗರಿಗೆ ಮಾತ್ರ ತಟ್ಟುವ ಬರವಣಿಗೆಯ ಶೈಲಿಯನ್ನು ಆಯ್ಕೆಮಾಡಿಕೊಳ್ಳುವ ಅನಿವಾರ್ಯತೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಲೇಖಕನಿಗಾಗಿರುತ್ತದೆ.

ಈ ಪರಿಷ್ಕರಣ ಕ್ರಿಯೆಯೂ ಅಷ್ಟೇ, ಜತೆಯ ಬರಹಗಾರರೂ ಮತ್ತು ಕೆಲವು ಪಂಡಿತ ವಿಮರ್ಶಕರೂ ಓದಿ ಕತೆಯನ್ನು ಕಾದಂಬರಿಯನ್ನು ಹೀಗೆ ಪರಿಷ್ಕರಿಸಿ ಪ್ರಕಟಮಾಡು ಎಂಬ ಅಭಿಪ್ರಾಯವನ್ನು ಮುಂದಿಟ್ಟುಕೊಂಡು ಕೃತಿಕಾರನೇ ಕೂತು ಪರಿಷ್ಕರಿಸುತ್ತಾನೆ. ಆದರೆ, ಕೃತಿಕಾರ ಮಾಡುವ ಪರಿಷ್ಕರಣ ಕೃತಿಕಾರನ ಪೂರ್ವಗ್ರಹಗಳಿಂದ ಬಚಾವಾಗುವುದು ಅಷೃ ಸುಲಭವಲ್ಲ. ಕೃತಿಕಾರನಿಗೆ ಬಹಳ ಇಷ್ಟವಾದ ಭಾಗಗಳು, ಅತವಾ ಬಹಳ ಸಂಶೋಧನೆ ಮಾಡಿ ಕಷ್ಟಪಟ್ಟು ಬರೆದ ಭಾಗಗಳನ್ನು ಕೃತಿಯಿಂದ ಕಿತ್ತಿಹಾಕಿಬಿಡುವುದು ಅಷ್ಟು ಸುಲಭದ ಮಾತಲ್ಲ. ಹಾಗಾಗಿ ಪರಿಷ್ಕೃತ ಪಠ್ಯ ಯಾವತ್ತೂ ಪರಿಪೂರ್ಣವಾಗುವುದಿಲ್ಲ.

ಕಾದಂಬರಿಯ ಮೊದಲ ಓದುಗ ಯಾರಾಗಿರಬೇಕು? ನನ್ನ ಪ್ರಕಾರ ಆತ ಬರಹಗಾರನಾಗಿರಬಾರದು. ಆತ ಓದಿನಲ್ಲಿ ಅಪಾರವಾದ ಆಸಕ್ತಿಯನ್ನು ಹೊಂದಿರುವನಾಗಿರಬೇಕು. ಓದುತ್ತಾ ಓದುತ್ತಾ ಇಲ್ಲಿ ಇಂತದ್ದು ಬೇಕು, ಬೇಡ ಎನ್ನುವ ಅಭಿಪ್ರಾಯವನ್ನು ಖಂಡತುಂಡವಾಗಿ ಹೇಳುವ ಹಾಗಿರಬೇಕು. ಮುಖ್ಯವಾಗಿ ಆತನಿಗೆ ಇದೊಂದು ಕೆಲಸವಾಗಬೇಕು. (ಕನ್ನಡದ ಮಟ್ಟಿಗೆ ಇದು ಕಷ್ಟ ಎಂಬ ಅರಿವು ನನಗಿದೆ) ಅಂದರೆ, ಬರೇ ಹಸ್ತಪ್ರತಿಗಳನ್ನು ಓದಿ ಅದರ ಕರಡುರೂಪವನ್ನು ತಿದ್ದಿ ಅದಕ್ಕೆ ಒಂದು ರೂಪುಗೊಳಿಸುವ ಕೆಲಸ ಅವನದಾಗಬೇಕು. ಪ್ರಕಾಶಕರು ಹೀಗೆ ಈ ಕಾದಂಬರಿಯ ‘ಸಂಪಾದಕರ’ನ್ನು ಕೆಲಸಕ್ಕಿಟ್ಟುಕೊಂಡು ಯಾವ ಲೇಖಕರೇ ಬರೆದ ಕೃತಿಗಳಾಗಲೀ ಅವರಿಂದ ಪರಿಷ್ಖ್ರುತವಾಗಿ ಬಂದರೆ ಮಾತ್ರ ಪ್ರಕಟಿಸಿವುದು ಎಂಬ ನಿಯಮವನ್ನು ಹಾಕಿಕೊಳ್ಳಬೇಕು. ಬೇರೆ ಬೇರೆ ಪ್ರಕಾರದ ಕಾದಂಬರಿಗಳಿಗೆ ಬೇರೆ ಬೇರೆ ರೀತಿಯ ಸಂಪಾದಕರು, ಪರಿಷ್ಕರಣಗಾರರು ಇರಬೇಕು

ಆದರೆ, ಒಮ್ಮೆಗೆ ಸಾವಿರ ಪ್ರತಿಗಳನ್ನು ಮಾತ್ರ ಮುದ್ರಿಸುವ ಮತ್ತು ಅದರಿಂದ ಬರುವ ಲಾಭ ಮತ್ತು ಲೈಬ್ರರಿಗಳಿಗೆ ವ್ಯಾಪಾರವಾಗುವ ಪುಸ್ತಕಗಳಿಂದ ನಿರ್ಧರಿತವಾಗುವ ಕನ್ನಡ ಪುಸ್ತಕೋದ್ಯಮ ಲೇಖಕರಿಗೇ ಒಂದು ಕೈಯೆಣಿಕೆಯಲ್ಲಿ ಸಂಭಾವನೆಯನ್ನು ಕೊಡುತ್ತಿರುವಾಗ, ಬರಹ ಒಂದು ಪ್ಯಾಶನ್ ಅಥವಾ ಹವ್ಯಾಸವಾಗಿ ಮಾತ್ರ ಉಳಕೊಳ್ಳುತ್ತಿರುವ ಈ ದಿನಗಳಲ್ಲಿ ಈ ಪುಸ್ತಕದ ಪರಿಷ್ಕಾರವನ್ನು ಯಾವುದೇ ಸಂಭಾವನೆಯಿಲ್ಲದೇ ವೃತ್ತಿಪರವಾಗಿ ಮಾಡಿಸಲು ಹೇಗೆ ಸಾಧ್ಯ?ಪ್ರತಿ ಬರಹಗಾರರಿಗೆ ಒಂದು ಕೃತಿಯ ಸ್ವಾಮ್ಯವಿರುತ್ತದೆ. ಆ ಸ್ವಾಮ್ಯದ ಜತೆಗೇ ಕೃತಿ ಕೊಡಿಸಿಕೊಂಡು ಬರುವ ಅನೇಕ ಧನ ಋಣಗಳಿಗೆ ಆತ ಹೊಣೆಗಾರಿಕೆಯನ್ನು ಹೊತ್ತಿರುತ್ತಾನೆ. ಆದರೆ, ಯಾವುದೇ ಸಂಭಾವನೆಯಿಲ್ಲದೆ ಈ ಕೃತಿಯನ್ನು ಪರಿಷ್ಕಾರ ಮಾಡಿಕೊಡು ನಂತರದ ಕ್ರೆಡಿಟ್ ಎಲ್ಲ ಲೀಖಕನಿಗೇ ಎಂದು ಹೇಳಿದಲ್ಲಿ ಯಾವ ವ್ಯಕ್ತಿಯೂ ಇದಕ್ಕೆ ಸಿದ್ಧನಾಗಲಾರನೇನೋ.

ಪುಸ್ತಕದ ವಿನ್ಯಾಸಕ್ಕೆ, ಮುಖಪುಟಕ್ಕೆ, ಒಳರೇಖಾಚಿತ್ರಗಳಿಗೆ ನಾಲ್ಕಾರು ಸಾವಿರ ರೂಪಾಯಿಗಳನ್ನು ಖರ್ಚುಮಾಡುವ ಪ್ರಕಾಶಕರು ಕೃತಿಯನ್ನು ಪರಿಷ್ಕರಿಸುವವರಿಗೆ ಇನ್ನೊಂದೆರಡು ಸಾವಿರ ರೂಪಾಯಿಗಳನ್ನು ಖರ್ಚುಮಾಡುವುದು ಸಾಧ್ಯವಿಲ್ಲವೇ?

ಪ್ರತಿಯೊಬ್ಬ ಲೇಖಕರಿಗೂ ಕಾದಂಬರಿಯ ಮೊದಲ ಓದುಗ ಒಬ್ಬ ಇರಬೇಕು. ಆತ ಬರೇ ಓದುಗನಲ್ಲದೆ ಕಾದಂಬರಿಯ ಪರಿಷ್ಕಾರವನ್ನೂ ಮಾಡತಕ್ಕವನಾಗಬೇಕು. ಮತ್ತು ಹೀಗೆ ಮಾಡುವುದು ಕಾದಂಬರಿಯ ಒಟ್ಟಾರೆ ಗುಣಮಟ್ತಕ್ಕಾಗಿ ಎನ್ನುವ ನಂಬಿಕೆ ಕಾದಂಬರಿಕಾರನಿಗೂ ಇದ್ದರೆ ನಾವು ಕೊಂಚ ವೃತ್ತಿಪರತೆಯನ್ನು ನಮ್ಮ ಸಾಹಿತ್ಯಕ್ಕೆ ತರಬಹುದು.

2 comments:

  1. ಸರ್ ನಿಮ್ಮ ಆಲೋಚನೆ ಮೆಚ್ಚತಕ್ಕದ್ದು ನೀವು ಅಂದ ಹಾಗೆ ಕನ್ನಡದಲ್ಲಿ ಪ್ರೂಫೆಶನಲಿಸಂ ಕೊರತೆ ಇದೆ ಆದರೆ ಮೊದಲ ಓದುಗ
    ನಿಷ್ಪಕ್ಷಪಾತಿಯಾಗಿರಬೇಕು ಇದು ಸಧ್ಯದ ಸ್ಥಿತಿಯಲ್ಲಿ ಸ್ವಲ್ಪ ಅಸಾಧು ಅನ್ನಬಹುದೇನೋ....

    ReplyDelete
  2. ತುಂಬಾ ಉತ್ತಮ ಬರಹ
    ಕನ್ನಡದ ಬಗೆಗಿನ ಕಾಳಜಿ ಶ್ಲಾಘನೀಯ

    ReplyDelete