Monday, February 22, 2010

ಮಾಸ್ತಿ ಎಂಬ ಕೆಟಲಿಸ್ಟ್.

ಮಾಸ್ತಿಯವರ ಕಥಾಸಾಹಿತ್ಯ ನನಗೆ ಮತ್ತು ನನ್ನ ಪೀಳಿಗೆಯವರಿಗೆ ಎಷ್ಟು ಸಂಗತವಾಗುತ್ತದೆ ಎನ್ನುವುದನ್ನು ಅರ್ಥೈಸುವುದು ಅಷ್ಟು ಸುಲಭದ ಕೆಲಸವಲ್ಲ. ಮೌಖಿಕ-ಶ್ರವ್ಯ ಪರಂಪರೆಯ ಕಥನಕ್ರಮ ಎಂದು ಲಿಖಿತ ಕ್ರಿಯೆಯಾಯಿತೋ ಅಲ್ಲಿಗೆ ಮಾಸ್ತಿ ಪರಂಪರೆ ಬೇರೆ ಒಂದು ಮಗ್ಗುಲನ್ನು ಪಡೆದುಕೊಂಡಿತು ಎಂದು ನನಗನಿಸುತ್ತದೆ. ವೈಶಂಪಾಯನನು ಜನಮೇಜನರಾಯನಿಗೆ ಹೇಳಿರಲಿ, ಟಾಂಗಾ ಹುಸೇನ್ ಸಾಬಿ ಮಾಸ್ತಿಯವರಿಗೆ ನಲವತ್ತೈದು ವರ್ಷದ ಹಿಂದೆ ಹೇಳಿದ ಕಥೆಯಿರಲಿ, ಸೌದೆ ಅಂಗಡಿ ಸುಬ್ಬಯ್ಯನವರಾಗಲೀ ಅಥವಾ ಅವರ ಮಿತ್ರ ಲಾಯರೊಬ್ಬರಾಗಲೀ ಹೇಳಿದ ಕಥೆಯನ್ನು ನಮಗೆ ಮುಟ್ಟಿಸುವುದು ಪುಣ್ಯದ ಕೆಲಸ ಎಂದು ಮಾಸ್ತಿಯವರು ಎಂದಿಗೂ ಭಾವಿಸಿದ್ದರು. ಮತ್ತು ಅದನ್ನೇ ಅವರು ಮಾಡಿದ್ದರು, ಕೂಡ.

ಮಾಸ್ತಿಯವರ ಬಾದಶಹನ ನ್ಯಾಯ, ಶ್ರೀಕೃಷ್ಣನ ಅಂತಿಮ ದರ್ಶನ, ಕುಚೇಲನ ಮರಿಮಗ ಅಥವಾ ಅರ್ವಾಚೀನ ಆಂಗ್ಲಶಕುಂತಲೆ ಇಂತಹ ಕತೆಗಳನ್ನು ಮೊಟ್ಟಮೊದಲ ಬಾರಿಗೆ ಓದಿದಾಗ ಪ್ರಾಮಾಣಿಕವಾಗಿ ಬಂದ ನೆನೆಪೆಂದರೆ ನಮ್ಮಜ್ಜ ತಾವು ಕೇಳಿದ, ತಾವು ಓದಿದ ಅಥವಾ ಯಾವುದೋ ವರ್ತಮಾನಪತ್ರಿಕೆಯಲ್ಲಿ ಬಂದ ಸುದ್ದಿಯನ್ನು ಕೂಡ ಚಿಕ್ಕಮಕ್ಕಳಿಗೂ ಅರ್ಥವಾಗುವಂತೆ ಸೊಗಸಾಗಿ ಹೇಳುತ್ತಿದ್ದುದು. ಅಜ್ಜ ಹೇಳಿದ ಮಹಾಭಾರತದ ಪ್ರಸಂಗಗಳಾಗಲೀ, ಮಾಸ್ಟರ್ ಹಾಚಿಕಾರನ್ ಆಗಲೀ, ಸ್ಯಾಂಕೊ ಪ್ಯಾಂಜ಼ನ ಕತೆಯಾಗಲೀ ‘ನೀರೊಳಗಿರ್ದುಂ ಬೆಮರ್ದಂ’ ಅಥವಾ ‘ದ ಮೋಸ್ಟ್ ಅನ್‌ಕೈಂಡೆಸ್ಟ್ ಕಟ್ ಆಫ಼್ ಅಲ್’ ಆಗಲೀ ನನ್ನ ತಲೆಯೊಳಗೆ ಮೂರುದಶಕಗಳ ನಂತರವೂ ಅಳಿಯದೇ ಕೂತಿರುವುದು ಪ್ರಾಯಶಃ ಆ ಕತೆಗಳು, ಆ ವಾಕ್ಯಸರಣಿಗಳು ನನ್ನೊಳಗೇ ಅನುರಣಿಸುವ ಗುಣವನ್ನು ಹೊಂದಿರುವುದರಿಂದ ಅಥವಾ ಅದೇ ಕತೆಗಳನ್ನು ನಾನು ನನ್ನ ಸ್ನೇಹಿತರಿಗೂ ನನ್ನ ಮಕ್ಕಳಿಗೂ ಮತ್ತೆ ಮತ್ತೆ ಹೇಳಬಹುದಾಗಿರುವುದರಿಂದ. ಅಲ್ಲಿಇಂಥದ್ದು ಕತೆಯಾಗಬಲ್ಲದು, ಇಂಥದ್ದು ಕತೆಯಾಗಬಾರದು ಎನ್ನುವ ಒಂದು ಹೊರೆಯಿರುತ್ತಿರಲಿಲ್ಲ. ಕತೆ ಹೇಳುವಾತನಿಗೆ ತನ್ನ ಅನುಭವವನ್ನು ಅಥವಾ ತಾನು ಕಂಡ ಅಥವಾ ಕೇಳಿದ ಘಟನೆಯನ್ನು ಇನ್ನೊಬ್ಬರಿಗೆ ಹಂಚಿಕೊಂಡು ಅದನ್ನು ಮುಂದಕ್ಕೆ ದಾಟಿಸುವುದಷ್ಟೇ ಮುಖ್ಯವಾಗಿತ್ತು.

ಮಾಸ್ತಿಯವರು ಮಾಡಿದ್ದೂ ಇದೇ. ಅವರೇ ಹೇಳಿದಂತೆ ‘ಜೊತೆಯ ಜೀವದ ಜೀವನದಲ್ಲಿ ಸಹಾನುಭೂತಿಯಿಂದ ಬೆರೆತು ಅದರ ಸಂಗತಿಯನ್ನು ಬೇರೆ ಜೀವಕ್ಕೆ ತಿಳಿಸುವ ಆಸೆಯ’ ಆಶಯ ಅವರ ಕಥಾಪ್ರಪಂಚದುದ್ದಕ್ಕೂ ಕೆಲಸಮಾಡಿದೆ. ಇದು ಬಹಳ ಪುಣ್ಯದ ಕೆಲಸ. ಅಂದರೆ ಜತೆಯ ಜೀವವನ್ನು ಸಹಾನುಭೂತಿಯಿಂದ ನೋಡುವುದಷ್ಟೇ ಅಲ್ಲ ಅದನ್ನು ಅಷ್ಟೇ ಸಹಾನುಭೂತಿಯಿಂದ ಮತ್ತೊಬ್ಬರಿಗೆ ತಲುಪಿಸುವುದನ್ನು ಒಂದು ಪುಣ್ಯದ ಕೆಲಸ ಎಂದು ಅವರು ನಂಬಿದ್ದರು. ಮಾಸ್ತಿಯವರು ಇಲ್ಲಿ ಒಂದು ರಾಸಾಯನಿಕ ಕ್ರಿಯೆಯಲ್ಲಿಯ ಕೆಟಲಿಸ್ಟಿನ ಹಾಗೆ ಕ್ರಿಯೆಯ ಅಂದಗೆಡದಂತೆ, ಬಣ್ಣಗೆಡದಂತೆ ಆದರೆ ಕೇಳುಗನನ್ನೂ ಮನಸಿನಲ್ಲಿ ಇಟ್ಟುಕೊಂಡು ಕತೆ ಹೇಳುತ್ತಿದ್ದರು. ಕತೆ ಹೇಳುವುದೇ ಕೇಳುವುದಕ್ಕೋಸ್ಕರ ಎನ್ನುವ ಎಚ್ಚರ ಅವರಲ್ಲಿ ಎಂದಿಗೂ ಜೀವಂತವಾಗಿರುತ್ತಿತ್ತು. ಅವರಲ್ಲಿನ ಕಲಾವಿದ ಕೆಟಲಿಸ್ಟ್‌ನ ಕೆಲಸವನ್ನು ಮಾತ್ರ ಮಾಡುತ್ತಿದ್ದ.

ಒಂದು ಉದಾಹರಣೆಯ ಮೂಲಕ ನೋಡಿದರೆ, ತತ್‌ಕ್ಷಣಕ್ಕೆ ಆಚಾರ್ಯವಂತ ಅಯ್ಯಂಗಾರ್ರು ಕತೆ ನೆನಪಿಗೆ ಬರುತ್ತದೆ. ಒಬ್ಬ ಸಂಪ್ರದಾಯಸ್ಥ ಅಯ್ಯಂಗಾರರು ಒಬ್ಬ ಕ್ರಿಶ್ಚಿಯನ್ ನರ್ಸೊಬ್ಬಳ ಜತೆ ಮದುವೆ ಇತ್ಯಾದಿ ಬಂದನಗಳಿಲ್ಲದೆ ಒಂದೇ ಸೂರಿನಡಿ ಗಂಡಹೆಂಡಿರಂತೆಯೇ ಬದುಕುತ್ತಿದ್ದುದನ್ನು ಮಾಸ್ತಿಯವರು ಇದೊಂದು ದೊಡ್ಡವಿಷಯವೇ ಅಲ್ಲವೇನೋ ಅನ್ನುವಂತೆ ಬರೆಯುತ್ತಾರೆ. ಅಂತದೇ ವಸ್ತುವನ್ನೊಳಗೊಂಡ ನಂತರದ ಪೀಳಿಗೆಯ ಕತೆಗಾರರ ಕತೆಗಳು ಸುಮ್ಮಸುಮ್ಮನೆ ಸಂಕೀರ್ಣವಾಗಿಬಿಟ್ಟವಾ ಎಂದೆನಿಸಬಹುದು. ಆದರೆ, ಈ ಕೆಟಲಿಸ್ಟನ ಮಾದರಿ, ರೂಪಕ, ಅರ್ಥವನ್ನು ಇನ್ನೂ ಒಂದಿಷ್ಟು ಹಿಂಜಿದಲ್ಲಿ ಕೆಟಲಿಸ್ಟು ರಾಸಾಯನಿಕ ಕ್ರಿಯೆಯಲ್ಲಿ ಪಾಲುಗೊಳ್ಳದೇ ಕ್ರಿಯೆಯ ಉತ್ಕರ್ಷವನ್ನು ಹೆಚ್ಚಿಸುತ್ತದೆ ಎಂದೂ ಭಾವಿಸಬಹುದು. ಆಗ ಮಾಸ್ತಿಯವರ ಈ ಜತೆಯಲ್ಲ್ಲಿನ ಜೀವವನ್ನು ಸಹಾನುಭೂತಿಯಿಂದ ನೋಡುವ ಕ್ರಿಯೆ ಆ ಸಹಾನುಭೂತಿಯೊಂದನ್ನು ಬಿಟ್ಟು ಆ ಜೀವಿಯ ಬೇರೆ ಯಾವ ಮಗ್ಗುಲನ್ನೂ ನೋಡದ, ಸೆರೆಹಿಡಿಯದ ಕೆಲವೊಮ್ಮೆ ಮನುಷ್ಯಭಾವನೆಗಳ ಸುಲಭೀಕೃತ ಪರಿಜು ಮಾತ್ರವೇನೋ ಎಂದನಿಸಬಹುದು. ಮಾಸ್ತಿಯವರಿಗೆ ಕೇಳುಗ ಬಹಳ ಮುಖ್ಯವಾಗಿರುವುದರಿಂದ ವಿವಾಹೇತರ ಸಂಬಂಧಗಳು, ಹಾದರ, ಇನ್‌ಸೆಸ್ಟ್ ಇಂಥವುಗಳನ್ನು ಹೇಳುವಾಗ ಕೂಡ ಅವುಗಳನ್ನು ಅನುಭವಿಸುತ್ತಿರುವ ಜತೆಜೀವಿಗಳ ಮೇಲಿನ ಕಂಪ್ಯಾಶನ್ ಮಾತ್ರ ಮುಖ್ಯವಾಗುತ್ತದೆ. ಇದರಿಂದ ಮಾಸ್ತಿ ಅನ್ನುವ ಜೀವಕ್ಕೆ ಆದ ಅನುಭವವೇನು, ಆ ಜೀವ ಈ ಜತೆಜೀವಿಗಳನ್ನು ಸಹಾನುಭೂತಿಯಿಂದ ನೋಡುವುದು, ಬರೆಯುವುದು ಬಿಟ್ಟರೆ ಇನ್ನೇನೂ ಮಾಡಲಾರದೇ ಹೋಯಿತೇ ಎಂದು ಅನುಮಾನ ಬರಬಹುದು.

ನಮ್ಮ ಪೀಳಿಗೆಯವರನ್ನು ಹಿಡಿದು ನಂತರ ಬರೆದ ಅನೇಕ ಕತೆಗಾರರು ಮಾಡಿದ್ದೇನೆಂದರೆ ಈ ರಾಸಾಯನಿಕ ಕ್ರಿಯೆಯನ್ನೇ ಬಹಳ ಸಂಕೀರ್ಣಗೊಳಿಸಿದ್ದು. ಕತೆಯನ್ನು ಹೇಳದೇ ಬರೇ ಬರೆಯತೊಡಗಿದ್ದು. ಈ ಲೇಖನಿ, ಕಾಗದಗಳು ಒಂದು ರೀತಿ ಕತೆಗಾರ ನೇರವಾಗಿ ಕೇಳುಗನನ್ನು ಮುಂದೆ ಕೂರಿಸಿಕೊಂಡು ಕತೆಹೇಳಬೇಕಾದಾಗ ಇರಬೇಕಾದ ಮಾಡೆಸ್ಟಿ ಮತ್ತು ಇನ್‌ಹಿಬಿಷನ್‌ಗಳನ್ನು ತೆಗೆದುಹಾಕಿಬಿಡುತ್ತದೆ. ಎಂದು ಈ ಕ್ರಿಯೆ ಸಂವಾದಿಯಾಗುವುದಿಲ್ಲವೋ ಅಂದು ಕತೆಗಾರನಿಗೆ ನಾನು ನನ್ನ ಓದುಗನಿಗೆ ಬರೆದದ್ದಕ್ಕೆಲ್ಲಾ ಅಕೌಂಟಬಲ್ ಆಗಬೇಕಿಲ್ಲ ಅನ್ನುವ ತುಂಟತನವೊಂದು ತಿಳಿದೋ, ತಿಳಿಯದೋ ಕೆಲಸ ಮಾಡಲು ಶುರುಮಾಡುತ್ತದೆ. ಆಗಾಗ ಅಮೂರ್ತವಾಗುತ್ತೇವೆ, ಪೋಲಿಯಾಗುತ್ತೇವೆ, ಸ್ವಗತವೆಲ್ಲವೂ ಮಾತಾಗುತ್ತದೆ. ಕೇಳಲಾರದ್ದನ್ನು ಓದಿ ತಿಳಿಯುತ್ತಾನೆ ಎನ್ನುವುದು ಅರಿವಾದ ತಕ್ಷಣ ಹೇಳಲಾರದ್ದು ಬರೆಯಲ್ಪಡುತ್ತದೆ. ಮಾಸ್ತಿಯವರ ಜತೆಯಲ್ಲಿನ ಜೀವಿಗಳೇ ನಾವಾಗಿದ್ದೇವೆ, ಹಾಗಾಗಿ ಈ ಜತೆಯ ಜೀವಿ ತನ್ನ ಕತೆಯನ್ನು ತಾನೇ ಹೇಳಿಕೊಂಡಾಗ ಏನಾಗಬಹುದು ಎನ್ನುವುದಕ್ಕೆ ನಂತರದ ಕತೆಗಳು ಸಾಕ್ಷಿಯಾಗಿ ನಿಂತಿವೆ.

ಇಲ್ಲಿ ಏನಾಗಿದೆ ಎಂದರೆ ಕೆಟಲಿಸ್ಟ್ ರಾಸಾಯನಿಕ ಕ್ರಿಯೆಯ ವೇಗವನ್ನು ಉತ್ಕರ್ಷಿಸುವುದಷ್ಟೇ ಅಲ್ಲ ಒಂದು ಹತೋಟಿಯಲ್ಲಿಟ್ತಿರುತ್ತಿತ್ತು. ಈ ಕ್ರಿಯೆಯ ಅಂತ್ಯದ ಬಗ್ಗೆ ಒಂದು ಜವಾಬ್ದಾರಿಯಿರುತ್ತಿತ್ತು, ಹೆಚ್ಚುಕಮ್ಮಿಯಾದರೆ ಆಸ್ಫೋಟವಾಗುತ್ತದೇನೋ ಅನ್ನುವ ಹೆದರಿಕೆಯಿರುತ್ತಿತ್ತೇನೋ.

ಇನ್ನೊಂದು ಮುಖ್ಯವಾದ ಬದಲಾವಣೆಯೆಂದರೆ ಮಾಸ್ತಿಯವರಿಗೆ ಎಂಥವನ್ನೂ ಕತೆಮಾಡುವ ಬಗ್ಗೆ ನಂಬಿಕೆಯಿದ್ದದ್ದು. ಬೇಬಿಲೋನನ ಕುಮಾರಿಯಾಗಲೀ, ಕಿಂಗ್ ಲಿಯರ್ ಆಗಲೀ ಅಥವಾ ಇಂಗ್ಲೆಂಡಿನ ಯಾವುದೋ ಪತ್ರಿಕೆಯಲ್ಲಿ ಬಂದ ಸುದ್ದಿಯಾಗಲೀ ಅದನ್ನು ಕತೆಯಾಗಿ ಮಾಸ್ತಿಯವರು ಹೇಳುತ್ತಿದ್ದರು. ವ್ಯಕ್ತಿಚಿತ್ರಗಳು, ಲಲಿತಪ್ರಬಂದಗಳು, ನುಡಿಚಿತ್ರಗಳು ಅಥವಾ ಹರಟೆಗಳೆಂದು ಈಗಿನ ಪರಿಭಾಶೆಯಲ್ಲಿ ವರ್ಗೀಕರಿಸಬಲ್ಲುವುದೆಲ್ಲಾ ಮಾಸ್ತಿಯವರ ಕೈಯಲ್ಲಿ ಕತೆಯಾಗಿರುವುದು ನಂತರ ಬರೆದವರಿಗೆ ಅದು ಸಾಧ್ಯವಾಗದಿರುವುದು ಒಂದು ವಿಶೇಷ. ಇದಕ್ಕೆ ಕಾರಣ ಮತ್ತೆ ಕತೆಗೆ ಸ್ವ- ಸ್ವರೂಪವನ್ನು ನಾವು ಕತೆಗಾರರು ಅವಲಂಬಿಸಿರುವುದು. ಅಂದರೆ, ನನ್ನ ಜೀವನದಲ್ಲಿ ನನಗೆ ಗಾಡವಾಗಿ ತಟ್ಟದೇ ಇರದಿದ್ದನ್ನು ನಾನು ಕತೆಮಾಡಲಾಗುವುದಿಲ್ಲ ಎನ್ನುವ ಪರಿಕಲ್ಪನೆಯಲ್ಲಿ ನಾವಿರುವುದು. ಈ ಗಾಢವಾಗಿ ತಟ್ಟುವ ಕ್ರಿಯೆಯಲ್ಲಿ ಭೌತಿಕವಾಗಿ ನಾವಿಲ್ಲದೇ ಹೋದರೆ ಅದು ಅನುಭವಶೂನ್ಯವಾದದ್ದು ಎನ್ನುವ ಪೂರ್ವಗ್ರಹವನ್ನು ಮತ್ತು ನಂಬಿಕೆಯನ್ನು ನಾವು ಬೆಳೆಸಿಕೊಂಡಿರುವುದು. ಕೆಲವೊಮ್ಮೆ ನಮ್ಮ ಗಟ್ಟಿ ಚರ್ಮಕ್ಕೆ ಬಹಳಷ್ಟು ಗಾಢವಾಗಿ ತಟ್ಟುವುದೇ ಇಲ್ಲ. ಈ ತಟ್ಟುವ ಕ್ರಿಯೆಗೆ ದೇಶ-ಕಾಲದ ಸಾಮೀಪ್ಯವನ್ನು ನಾವು ಬಯಸುವುದರಿಂದ ಕುಚೇಲನಾಗಲೀ, ಕಿಂಗ್ ಲಿಯರ್ ಅಗಲೀ, ಬೆಬಿಲೋನಿಯವಾಗಲೀ ಇಂಗ್ಲೆಂಡ್ ಆಗಲೀ ಇಂದು ಕಥಾವಸ್ತುವಾದರೆ ಹೆಚ್ಚುಕಮ್ಮಿ ಬಾಲಿಶವೆನಿಸಿಕೊಳ್ಳುವಷ್ಟು ಸತ್ಯವಾಗಿದೆ.

Tuesday, February 9, 2010

ಇಲ್ಲಿ ಸಾವಧಾನವೂ ಅವಸರವೇ

ಶಾಂತಿನಾಥ ದೇಸಾಯಿಯವರು ತಮ್ಮ ಕೊನೆಯ ಕಾದಂಬರಿ ‘ಓಂ ಣಮೋ’ ವನ್ನು ಮೂಗಿನ ನಾಳದಲ್ಲಿ ಆಕ್ಸಿಜನನ್ನು ಇಟ್ತುಕೊಂಡೇ ಬರೆದರಂತೆ. ಅನೇಕ ವರ್ಷಗಳೇ ಬರೆದರೂ ಕೊನೆಯ ಪರಿಜನ್ನು ಪೂರಕ್ಕೆ ಪೂರ ಯಾವಾಗ ಏನಾಗಿಬಿಡುತ್ತದೆಯೋ ಎಂಬ ಅನಿಶ್ಚತತೆಯಲ್ಲಿಯೇ ಬರೆಯಬೇಕಾಗಿ ಬಂತಂತೆ. ಹಾಗೆಯೇ ಎ ಎನ್ ಮೂರ್ತಿರಾಯರು ಚಿಕ್ಕಂದಿನಲ್ಲಿದ್ದಾಗ ಯಾವುದಾದರೂ ಪುಸ್ತಕ ದೊರೆತರೆ ಪುಸ್ತಕ ಓದಿ ಮುಗಿಸುವ ತನಕ ಸಮಾಧನವಿರುತ್ತಿರಲಿಲ್ಲವಂತೆ. ಕಾರಣ ಆ ಪುಸ್ತಕ ಇನ್ನೊಮ್ಮೆ ಸಿಗುವುದಿಲ್ಲವೆಂಬ ಹೆದರಿಕೆ. ಪುಸ್ತಕವನ್ನು ದುಡ್ಡು ಕೊಳ್ಳುವ ತಾಕತ್ತಿರಲಿಲ್ಲ.

ಓದು, ಬರೆಹ ಅನಿವಾರ್ಯವಾಗಿತ್ತು,

* * *

ಕಲೆಯೆಂಬುದು ಒಂದು ಕಾಲದಲ್ಲಿ ಸಾವಧಾನದ ಕ್ರಿಯೆಯಾಗಿತ್ತು. ಹವ್ಯಾಸವಾಗಿತ್ತು. ನಮ್ಮ ವಿರಾಮದ ಸಮಯವನ್ನು ಅದು ತುಂಬುತ್ತಿತ್ತು. ದೈನಿಕಕ್ಕೆ ಜಡ್ಡುಗಟ್ಟಿದ ಮನಸ್ಸು ಒಂದು ಪುಸ್ತಕ ಓದುವುದರಿಂದಲೋ, ಸಿನೆಮಾ ನೋಡುವುದರಿಂದಲೋ ಅಥವಾ ಒಂದು ನಾಟಕ ನೋಡುವುದರಿಂದಲೋ ಮುದಗೊಳ್ಳುತ್ತಿತ್ತು. ಸಿನೆಮಾ ನೋಡುವ ಕ್ರಿಯೆ ಒಂದು ಕುಟುಂಬದ ಇವೆಂಟ್ ಆಗುತ್ತಿತ್ತು. ಮೇಲಾಗಿ ಕಲೆಗೆ, ಸಂಸ್ಕೃತಿಗೆ ಒಂದು ಪ್ರಾದೇಶಿಕತೆ ಇತ್ತು. ಬರೇ ರಾಜಕುಮಾರನ ಸಿನೆಮಾ ಮಾತ್ರ ನೋಡಿ, ಕಾರಂತರ ಅಥವಾ ತ್ರಿವೇಣಿಯವರುಗಳ ಕಾದಂಬರಿಗಳನ್ನು ಓದಿ ಸಂತಸ ಪಡುವ ಕಾಲವಿತ್ತು. ಅಜ್ಞಾನ ವರವಂತೆ.

ನಾವು ಎಂದು ನಮ್ಮನ್ನು ನಾವು ಇಡೀ ಜಗತ್ತಿಗೆ, ಅನೇಕ ಸೃಜನಶೀಲ ಸಾಧ್ಯತೆಗಳಿಗೆಗೆ ತೆರೆದಿಟ್ಟುಕೊಂಡೆವೋ ಅಂದಿನಿಂದ ಶುರುವಾಯಿತು, ಈ ಸಾವಧಾನದಲ್ಲಿ ನಡೆಯಬೇಕಾದ ಕ್ರಿಯೆಗಳು ಒಂದು ರೀತಿ ತಹತಹದ ವಿಷಯವಾಗಿಬಿಟ್ಟವು.

ಈಗ ಮನರಂಜನೆಯೆನ್ನಿ, ವಿರಾಮದ ಓದೆನ್ನಿ, ಸಿನೆಮಾ ಎನ್ನಿ ಪ್ರತಿಯೊಂದರಲ್ಲೂ ವೈವಿದ್ಯಕ್ಕೇ ಪ್ರಾಧಾನ್ಯ. ಈತ ಬೇರೆ ರೀತಿ ಬರೆಯುತ್ತಾನೆ, ಹೊಸಾ ತರಾ ಚಿತ್ರಿಸಿದ್ದೇವೆ, ಎನ್ನುವ ಮಾತುಗಳನ್ನು ನಾವು ಬಹಳ ಕೇಳುತ್ತೇವೆ. ಮುದ್ರಣ ಕ್ರಾಂತಿಯಿಂದ ಪುಸ್ತಕಗಳ ಹಿಂಡುಹಿಂಡೇ ದೊರಕುತ್ತಿವೆ. ಪತ್ರಿಕ ಕಛೇರಿಯ ಸಾದರ-ಸ್ವೀಕಾರ ವಿಭಾಗಕ್ಕೆ ಬಂದುಬೀಳುವ ಪುಸ್ತಕಗಳ ಹೊರೆಯನ್ನು ಸುಮ್ಮನೇ ಕಣ್ಣಾಡಿಸಲೂ ಯಾರಿಗೂ ಸಮಯವಿಲ್ಲ. ಹಾಗಾಗಿ ‘ಒಳ್ಳೆಯ’ ಓದಿನ ಪ್ರಿಸ್ಕ್ರಿಪ್ಷನ್‌ಗೆಂದು ಓದುಗ ಪತ್ರಿಕೆಗಳಲ್ಲಿ ಪ್ರಕಟವಾಗುವ ಪುಸ್ತಕದಂಗಡಿಯವರು ಒದಗಿಸುವ ಟಾಪ್-೧೦ ಅಥವಾ ಅಚ್ಚುಮೆಚ್ಚು ವಿಭಾಗಗಳನ್ನು ನೆಚ್ಚಿಕೊಳ್ಳಬೇಕಾಗಿದೆ. ಅಲ್ಲಿನ ಬೆಸ್ಟ್‌ಸೆಲ್ಲರ್‌ಗಳಿಗೆ ಮಾಪಕ ಯಾವುದು ಎನ್ನುವುದು ಬ್ರಹ್ಮರಹಸ್ಯ.

ಹವ್ಯಾಸವಾಗಿದ್ದ ಓದು ಅವಶ್ಯಕತೆ ಮತ್ತು ಅನಿವಾರ್ಯತೆ ಮತ್ತು ಚಟ ಹೇಗಾಗಿದೆ ಎನ್ನುವುದನ್ನು ನಾವು ಒಮ್ಮೆ ನೋಡಬೇಕಾಗಿದೆ. ಇದು ದೇಸಾಯರ ಅಥವಾ ಮೂರ್ತಿರಾಯರ ಅನಿವಾರ್ಯತೆಗಿಂತ ಭಿನ್ನವಾದದ್ದು ಎಂಬುದನ್ನೂ ನಾವು ಅರಿಯಬೇಕಾಗಿದೆ.

* * *

ಒಂದೇ ನಿಟ್ಟಿನ ಓದು, ಸಾವಧಾನದ ಓದು, ಧ್ಯಾನ ಇರಲಿ, ಓದಿಗೆ ಪುಸ್ತಕ ಬೇಕು ಎನ್ನುವ ನಮ್ಮ ನಂಬಿಕೆಯನ್ನೇ ನಾವು ಮತ್ತೆ ಪರಿಶೀಲಿಸಿ ನೋಡಬೇಕಾಗಿದೆ. ನಾನು ಡ್ರೈವ್ ಮಾಡುತ್ತಿದ್ದಾಗ ಆದಷ್ಟು ಈ ‘ಕೇಳು ಪುಸ್ತಕ’ ಗಳಿಗೆ ಶರಣಾಗುತ್ತೇನೆ. ದುರದೃಷ್ಟವಾತ್, ಕನ್ನಡ ಪುಸ್ತಕಗಳು ಇನ್ನೂ ಆಡಿಯೋ ರೂಪದಲ್ಲಿ ಸಿಗುತ್ತಿಲ್ಲ. ಕಾರಿನಲ್ಲಿ ಸಲ್ಮಾನ್ ರಶ್ದಿ, ಹೆಮಿಂಗ್ವೇ, ಓರ್ವೆಲ್, ಡಾಕ್ಟೊರೋ, ಓಶೊ, ಪಮುಕ್ ಗಳ ಜತೆ ಒನ್ ಆನ್ ಒನ್ ಆಗಲು ಪ್ರಯತ್ನ ಮಾಡುತ್ತೇನೆ. ಈ ನನ್ನ ಸಾಹಿತ್ಯಸಮಯ ಮೊಬೈಲಿನ ಮಿತ್ರರ ಸಂಭಾಷಣೆಯಿಂದ ತುಂಡಾಗುತ್ತದೆ. (ಯಾವುದೋ ಒಬ್ಬ ಕಮೆಡಿಯನ್ ಹೇಳಿದ್ದ. ಕಾರಿನಲ್ಲಿ ಹೋಗುತ್ತಾ ಮೊಬೈಲಿನಿಂದ ಮಾಡುವ ಫೋನಿನ ಸಂಭಾಷಣೆ ಸಂವಹನದ ಅತ್ಯಂತ ಕೀಳುರೂಪವೆಂದು. ಕಾರಿನಿಂದ ಯಾರಿಗಾದರೂ ಫೋನು ಮಾಡಿದರೆ, ‘ನನಗೆ ಮನೆಯಲ್ಲಿ ಮಾತಾಡಲು ಸಮಯವಿಲ್ಲ, ಆದ್ದರಿಂದ ಡ್ರೈವ್ ಮಾಡುತ್ತಾ ನಿನ್ನ ಜತೆಗೆ ಸಂಭಾಷಿಸುತ್ತೇನೆ’ ಎಂದರ್ಥವಂತೆ. ಆದರೆ, ಇದು ಎಷ್ಟು ಅನಿವಾರ್ಯವಾಗಿದೆಯೆಂದರೆ ಇದು ತಪ್ಪೆಂದು ಯಾರಿಗೂ ಅನಿಸುವುದಿಲ್ಲವೇನೋ?) ಎಲ್ಲರೂ ಮಲಗಿರುವ ಕಾಲದಲ್ಲಿ ನಾನು ಕೆಲಸ ಮಾಡುವುದರಿಂದ (ಮತ್ತು ಡ್ರೈವ್ ಮಾಡುವುದರಿಂದ) ಕೆಲವೊಮ್ಮೆ ಕತ್ತಲ ನೀರವದಲ್ಲಿ ಈ ಆಡಿಯೋ ಪುಸ್ತಕಗಳ ಜತೆಗೆ ಏಕಾಂತ ಸಿಗುತ್ತದೆ.

ಆದರೆ, ಈ ಓದು ಕೂಡ ಕಾಲನಿರ್ಣಯಿತ. ಅಂದರೆ, ನಾನೆಷ್ಟು ಕಾಲ ಡ್ರೈವ್ ಮಾಡುತ್ತೇನೋ ಅಷ್ಟು ಕಾಲ ಮಾತ್ರ ನಾನೀ ಪುಸ್ತಕ ಕೇಳಬಹುದು. ಸಂಸಾರಸ್ಥನಾದ ನಾನು ಮನೆಯಲ್ಲಿ ಮಕ್ಕಳೊಂದಿಗೆ ಒಂದಿಷ್ಟು ಸಮಯ ಕಳೆಯಬೇಕಲ್ಲವೇ? ಹಾಗಾಗಿ ಮನೆಯ ಗರಾಜಿನ ಬಾಗಿಲು ತೆಗೆದ ತಕ್ಷಣ ಈ ನನ್ನ ಇಂಗ್ಲಿಶ್ ಗೆಳೆಯರು ಪಾಸ್ ಮೋಡಿನಲ್ಲಿ ಮಾರನೆಯ ದಿನದ ತನಕ ಸ್ವಸ್ತವಾಗಿ ಗ್ಲವ್ ಬಾಕ್ಸ್ ಸೇರುತ್ತಾರೆ.

ನಂತರದ ಮನೆಯ ಓದಿಗೆ, ಮಕ್ಕಳೊಂದಿಗಿರಲು ಬಲವಂತವಾಗಿ ಸಮಯವನ್ನು ‘ಮಾಡಿಕೊಳ್ಳಬೇಕು’. ವಿರಾಮದ, ಸಾವಧಾನದ ಓದಿಗೆ ಸಮಯವನ್ನು ‘ಮಾಡಿಕೊಳ್ಳಬೇಕು’ ಎನ್ನುವುದೇ ಒಂದು ದೊಡ್ಡ ವಿರೋಧಾಭಾಸವಲ್ಲವೇ. ಅದರೆ ಇಲ್ಲಿ ನಾನು ಮಹಾತ್ಮಾ ಗಾಂಧಿಯವರ ಮಾತನ್ನು ಶಿರಸಾವಹಿಸಿ ಪಾಲಿಸುತ್ತೇನೆ. ಅವರು ಹೇಳಿದ್ದರು ‘ಮಾಡುತ್ತಿರುವ ಕೆಲಸ ಬಿಟ್ಟು ಇನ್ನೊಂದು ಕೆಲಸ ಮಾಡಿದರೆ ಅದೇ ವಿರಾಮ’ ಎಂದು. ನಾನೂ ಹಾಗೇ, ಡ್ರೈವ್ ಮಾಡುತ್ತಿರುವಾಗ ಕೇಳುತ್ತಿದ್ದ ಕಾಫ್ಕಾ ಹುಳುವಾಗುವುದಕ್ಕೆ ಬಿಟ್ಟು ಮನೆಗೆ ಬಂದು ಮಗನ ಹೋಮ್‌ವರ್ಕಿನಲ್ಲಿ ನೆರವಾಗುತ್ತೇನೆ. ಹನ್ನೆರಡಕ್ಕೆ ಎರಡು ಸೇರಿಸಿದರೆ ಎಷ್ಟು ಎನ್ನುವುದನ್ನು ಮಗ ಮಾಡಬಲ್ಲ ಎಂಬ ನಂಬಿಕೆಯಿಂದ ಅವನ ಪಕ್ಕದಲ್ಲಿಯೇ ಶ್ರೀಧರ ಬಳಗಾರರನ್ನೋ, ಹುಳಿಯಾರರನ್ನೋ ಓದುತ್ತಾ ಕೂರುತ್ತೇನೆ. ಮಗಳು ಡ್ಯಾನ್ಸ್ ಕ್ಲಾಸಿಗೆ ಡ್ರಾಪ್ ಕೇಳುತ್ತಾಳೆ. ಮಗ ನಾನೂ ಬರುತ್ತೇನೆಂದು ಹಟ ಮಾಡುತ್ತಾನೆ. ಸರಿ ಎಂದು ಇಬ್ಬರಿಗೂ ಕೂಡಿಸಿ ಕಾಫ್ಕಾನನ್ನು ಮತ್ತೆ ಆನ್ ಮಾಡುತ್ತೇನೆ. ಮಕ್ಕಳಿಬ್ಬರೂ ‘ಓ’ ಎಂದು ಮುಖ ಮಾಡುತ್ತಾರೆ. ಮೂರೂ ಜನಕ್ಕೆ ಮೂಡಿದ್ದರೆ ಯಾವುದೋ ಹಾಡನ್ನು ಕೇಳುತ್ತೇವೆ. ಇಲ್ಲದಿದ್ದರೆ ಒಂದೇ ಐಪಾಡಿನ ಎರಡು ಕಿವಿಗಳನ್ನು ತಮ್ಮ ಒಂದೊಂದು ಕಿವಿಗಳಿಗೆ ಸಿಕ್ಕಿಸಿಕೊಂಡು ‘ಐ-ಶೇರ್’ ಪದವನ್ನು ಸಾರ್ಥಕಗೊಳಿಸುತ್ತಾವೆ, ಮಕ್ಕಳು. ಮಕ್ಕಳಿಬ್ಬರೂ ಕ್ಲಾಸಿನೊಳಗೆ ಹೋದಾಗ ಪಾರ್ಕಿಂಗ್ ಲಾಟಿನಲ್ಲಿ ಕಾಫ್ಕನನ್ನು ಆರಿಸಿ ಮತ್ತೆ ಹುಳಿಯಾರರಿಗೆ ವರ್ಗವಾಗುತ್ತೇನೆ. ಡೇವಿಡ್ ಸಾಹೇಬರಿಗೂ ಕಾಫ್ಕಾನ ಅಪ್ಪನಿಗೂ ಕೊಂಚ ಕನ್‌ಫ್ಯೂಸ್ ಆಗಿ ಮತ್ತೆ ಕತೆಯನ್ನು ಮೊದಲಿಂದ ಓದಲು ಶುರುಮಾಡುತ್ತೇನೆ.

ಮನೆಗೆ ಬಂದರೆ ಮತ್ತೆ ಸಾವಧಾನವಾಗಿ ಊಟ ಮಾಡಬೇಕು. ಆದರೆ, ನನ್ನ ಈ ಸಾವಧಾನಕ್ಕಿರುವ ಸಮಯ ಹದಿನೈದು ನಿಮಿಷ. ಮಕ್ಕಳಿಗೆ ಕನಿಷ್ಠ ಎಂಟರಿಂದ ಹತ್ತು ಗಂಟೆ ನಿದ್ದೆ ಬೇಕು. ಮಲಗುವುದಕ್ಕೆ ಕನಿಷ್ಠ ಒಂದು ಗಂಟೆ ಮುಂಚೆ ಊಟ ಮಾಡಬೇಕು. ಕೊಂಚವಾದರೂ ಟೀವಿ ನೋದಬೇಕು. ಹೆಂಡತಿಯ ಆಫೀಸಿನ ಲ್ಯಾಪ್‌ಟಾಪಿನಲ್ಲಿ ಬೆಂಗಳೂರಿನ ಆಫೀಸಿಗೆ ಆಗ ಬಂದ ಸುಧೀರ ಪಾಪ್ ಅಪ್ ಆಗಿ ‘ಒಂದ್ನಿಮಿಷ ಬಂದೆ.ನೀವುಗಳು ಶುರುಮಾಡಿ’ ಎಂದು ಹೇಳಿಸಿದ್ದಾನೆ.

ಪಾಳಿಗಳನ್ನು ಬದಲಿಸಿ ಕೆಲಸ ಮಾಡುವ ನನಗೆ ಕುಟುಂಬದ ಜತೆಗೆ ಊಟಮಾಡಲು ಸಮಯ ಸಿಗುವುದು ವಾರದಲ್ಲಿ ಒಂದೋ ಎರಡೋ ದಿನ ಮಾತ್ರ. ಟೀವಿಯಲ್ಲಿ ಸಾರೆಗಮ ಪ ಲಿಟಲ್ ಚ್ಯಾಂಪ್ಸ್ ಶುರುವಾಗುವ ಮುನ್ನ ಊಟ ಮಾಡಿಬಿಡಬೇಕು. ಇಲ್ಲವಾದರೆ ಯಥಾರ್ಥ್ ರಸ್ತೋಗಿಯ ಹಾಡು ಕೇಳಲು ನನ್ನ ಐದು ವರ್ಷದ ಮಗನೂ ಊಟ ಬಿಟ್ಟು ನೇರ ಟೀವಿಯ ಮುಂದೆ ಹೋಗಿ ಬಿಡುತ್ತಾನೆ. ಈ ಟೀವಿಯ ಮಕ್ಕಳು ಯಾವುದಕ್ಕೆ ಲಿಪ್ ಸಿಂಕಿಸುತ್ತವೆ ಯಾವುದನ್ನು ಹಾಡಿವೆ ಎಂಬ ಬಾಲಿವುಡ್ಡಿನ ಧುನ್‌ಗಳ ಚರ್ಚೆಯೇ ನಮ್ಮ ಕುಟುಂಬವನ್ನು ಒಂದೆಡೆ ಒಂದು ಗಂಟೆ ಒಟ್ಟಿಗೆ ಕೂಡಿಸುವುದು ಎನ್ನುವುದು ಹದಿನಾರಾಣೆ ಸತ್ಯ.

ಊಟ ಮುಗಿಸಿ ಹೆಂಡತಿಯ ಅಡುಗೆಮನೆಯ ಕೆಲಸದಲ್ಲಿ ಕೊಂಚ ಸಹಾಯ ಮಾಡಿದ ನಂತರ ನನ್ನ ಸ್ಟಡಿಯಲ್ಲಿ ಮಗಳು ಡೆಸ್ಕ್‌ಟಾಪಿನ ಮುಂದೆ ಹೋಮ್‌ವರ್ಕಿಗೆಂದು ಪ್ರತಿಷ್ಟಾಪಿಸಿರುತ್ತಾಳೆ. ಒಬಾಮಾನ ಕಾಸ್ಟ್ ಕಟಿಂಗ್ ನಲ್ಲಿ ಪುಸ್ತಕಗಳೆಲ್ಲ ಪೇಪರ್ಲೆಸ್ ಆಗಿ ಮನೆಯಲ್ಲಿ ಎಷ್ಟು ಜನ ಇದ್ದೇವೋ ಅಷ್ಟಕ್ಕೂ ಜಾಸ್ತಿ ಕಂಪ್ಯೂಟರುಗಳು ಬೇಕಾಗಿವೆ. ಪಿಡಿಎಫ್ ನಲ್ಲಿ ಕಂಟ್ರೊಲ್ ಅಲ್ಟ್ ಎಫ್ ಒತ್ತುತ್ತಾ ಬೇಕಾದ್ದನ್ನು ಮಾತ್ರ ಓದುತ್ತಾ ಓದುವ ಕ್ರಿಯೆಯೇ ಹ್ರಸ್ವವಾಗಿದೆ. ಇದೇ ಈಗಿನ ಶೈಲಿ ಎಂದುಕೊಂಡು ಸುಮ್ಮನಾಗುತ್ತೇನೆ.

ಐದು ವರ್ಷದ ಮಗ ಮಲಗಲಿಕ್ಕೆ ಮುಂಚೆ ಕತೆ ಹೇಳೆಂದು ಪೀಡಿಸುತ್ತಾನೆ. ನಮ್ಮ ಸಂಸ್ಕೃತಿಯ ಪರಿಚಯ ಮಾಡಿಸಲು ಮಹಾಭಾರತದ ಅಮರ ಚಿತ್ರಕತೆಯ ಪುಸ್ತಕವನ್ನು ತೆಗೆಯುತ್ತೇನೆ. ಭೀಮನ ಚಿತ್ರವನ್ನು ನೋಡಿ ‘ಡ್ಯಾಡಿ, ಭೀಮನಿಗೂ ಘಜನಿಯ ತರ ಸಿಕ್ಸ್ ಪ್ಯಾಕ್ ಇತ್ತಾ’ ಎಂದು ಕೇಳುವ ಮಗನಿಗೆ ‘ಹೌದು ಪುಟ್ಟಾ’ ಎಂದು ಹೇಳದೇ ವಿಧಿಯಿಲ್ಲ. ‘ಅಶ್ವತ್ಥಾಮೋ ಹತಃ ಕುಂಜರಃ’ ಎನ್ನುವುದನ್ನು ಅವನಿಗೆ ಅರ್ಥ ಮಾಡಿಸಲು ‘’An elephant named Ashvathama is dead’ ಎಂದು ನಾನು ಕೂಗಿ ವಾಕ್ಯದ ಮೊದಲ ಭಾಗಕ್ಕೆ ಟೀವಿಯ ಧ್ವನಿಯನ್ನು ಜಾಸ್ತಿ ಮಾಡಿ ದ್ರೋಣನನ್ನು ಸಾಯಿಸುವ ಮೂಲಕ ಅವತ್ತಿನ ಅಧ್ಯಾಯವನ್ನು ಮುಗಿಸುತ್ತೇನೆ.

ನಾನು ಒಬ್ಬನೇ ನೋಡುವ ಸಿನೆಮಾಗಳೆಂದು ನಾನೇ ಪ್ರತ್ಯೇಕಿಸಿಕೊಂಡ ಒಂದಿಷ್ಟು ಇರಾನೀ, ಫ್ರೆಂಚ್ ಸಿನೆಮಾಗಳ ಡಿವಿಡಿಗಳನ್ನು ಇವತ್ತು ನೋಡಲೇ ಬೇಕೆಂದು ಕೂರುತ್ತೇನೆ. ಕಿಯರೊಸ್ತಾಮಿ, ರೇ, ಕುರಸೋವ, ಟರಂಟಿನೋ, ಎಲ್ಲರೂ ಇಂಟರ್ನೆಟ್ಟಿನ ಡಿವಿಡಿ ಬಾಡಿಗೆಯ ಅಂಗಡಿಯಲ್ಲಿ ನನ್ನನ್ನು ನೋಡು ಎಂದು ದುಂಬಾಲು ಬಿದ್ದಿದ್ದಾರೆ. ಮುಗಿಸಲೇ ಬೇಕು ಎಂದು ಕೂತು ಒಂದು ಸಿನೆಮಾವನ್ನು ಪೂರ್ತಿ ನೋಡುತ್ತೇನೆ. ಮುಗಿಸಿದ ತಕ್ಷಣ ಡಿವಿಡಿಯನ್ನು ಪೋಸ್ಟ್ ಮಾಡಿದರೆ ಮಾರನೆಯ ದಿನವೇ ‘ರನ್ ಲೋಲ್ ರನ್’ ಬರುತ್ತಾಳೆ. ಶ್ಯಾಮ್ ಬೆನೆಗಲ್‌ರ ಹೊಸ ಚಿತ್ರ ನೋಡೆಂದು ಹೇಳಿದ ಗೆಳೆಯನಿಗೆ ಫೋನು ಮಾಡಿದಾಗ ಮಾತಾಡಲೆಂದಾದರೂ ಅ ಸಿನೆಮಾವನ್ನು ನೋಡಲೇ ಬೇಕಾಗಿದೆ. ಆಮೀರ್ ಖಾನನ ೩ ಈಡಿಯಟ್ಸ್ ನೋಡದೇ ಇದ್ದರೆ ಸಿನೆಮಾ ಬಫ್ ಆಗುವುದು ಸಾಧ್ಯವಿಲ್ಲವಾದ್ದರಿಂದ ಅದನ್ನೂ ಥಿಯೇಟರಿನಲ್ಲಿ ನೋಡುತ್ತೇನೆ. ಇದನ್ನು ಚೇತನ್ ಭಗತ್ ಬರೆದನಾ ಎಂದು ಅವನನ್ನೂ ಓದುತ್ತೇನೆ.

ಹೋದ ತಿಂಗಳು ಕಾನ್‌ಫರೆನ್ಸಿಗೆಂದು ಮೂರು ಗಂಟೆಯ ವಿಮಾನದಲ್ಲಿ ಮಯಾಮಿ ಬೀಚಿಗೆ ಹೋಗಿದ್ದೆ. ಎಂದೋ ಓದಿದ್ದ ಕಾರಂತರ ಚೋಮನ ದುಡಿ ಯನ್ನು ಒಂದೇ ಏಟಿಗೆ ವಿಮಾನದಲ್ಲಿ, ಹೋಟೆಲಿನ ರೂಮಿನಲ್ಲಿ ಓದಿದ್ದೆ. ಸತ್ತ ಎಮ್ಮೆಯನ್ನು ಹರಿದು ತಿನ್ನುವ ಚೋಮನ ಕುಟುಂಬದ ಕತೆಯನ್ನು ಓದಲು ನನಗೆ ಪ್ರಶಸ್ತವಾದ ಸ್ಥಳ ಮೂವತ್ತು ಸಾವಿರದಡಿಗಳ ಮೇಲಿನ ಏಕಾಂತ. ಬಹಳವಾಗಿ ಮನಕ್ಕೆ ತಾಕಿದ್ದ ಈ ಕಾದಂಬರಿ ಈಗ ಬಹು ರೊಮ್ಯಾಂಟಿಕ್ ಅನಿಸುತ್ತದೆ. ಅದಕ್ಕೆ ಮಯಾಮಿಯನ್ನು ನಿಂದಿಸುತ್ತೇನೆ.

ಇಲ್ಲಿ ಓದು ಸಿನೆಮಾ ಹವ್ಯಾಸವೇ, ಅವಶ್ಯಕತೆಯೇ ಅಥವಾ ಅನಿವಾರ್ಯವೇ ಎಂದು ನನಗೆ ನಾನೇ ಕೇಳಿಕೊಳ್ಳುತ್ತೇನೆ. ಎಷ್ಟೇ ಇಲ್ಲವೆಂದು ಹೇಳಿಕೊಳ್ಲಬೇಕೆಂದರೂ ಮೊದಲು ಹವ್ಯಾಸವಾಗಿದ್ದ ಸಿನೆಮಾ, ಓದು ಈಗ ಅನಿವಾರ್ಯವಾಗಿದೆ. ನಾನೆಂದೂ ವೃತ್ತಿಪರ ಬರಹಗಾರನಾಗಲಾರೆ ಎಂಬ ಅರಿವು ನನಗಿದ್ದರೂ ಈ ಓದು ನನ್ನ ಜೀವನದ ಪ್ರಮುಖ ಅವಶ್ಯಕತೆಯಾಗಿ ನಂತರ ಕಾಲಕ್ರಮೇಣವಾಗಿ ಅನಿವಾರ್ಯವಾಗಿರುವುದಕ್ಕೆ ಕಾರಣಗಳೇನು ಎಂದು ಯೋಚಿಸಬೇಕಾಗಿದೆ? ಹೀಗೆ ಅನಿವಾರ್ಯವಾಗುವುದರ ಅವಶ್ಯಕತೆ ಎಷ್ಟಿದೆಯೆನ್ನುವುದೂ ಪ್ರಶ್ನಾತ್ಮಕ.

ನಾನೇ ಅವಶ್ಯಕ, ಅನಿವಾರ್ಯ ಎಂದಂದುಕೊಂಡು ಓದಿದ ಎಷ್ಟು ಪುಸ್ತಕಗಳನ್ನು ಓದಿ ಪ್ರಾಮಾಣಿಕವಾಗಿ ಆನಂದ ಪಟ್ಟಿದ್ದೇನೆ ಎಂದು ನಾನೇ ಪ್ರಶ್ನಿಸಿಕೊಳ್ಳುತ್ತೇನೆ? ಮೊದಲು ನನಗೆ ಬೇಕಾದ್ದು ಓದುವ ಸ್ವಾತಂತ್ರ್ಯವಿತ್ತು. ಈಗ ಆ ಸ್ವಾತಂತ್ರ್ಯ ನನಗಿದೆಯೇ? ಲೈಬ್ರರಿಯ ಬುಕ್‌ಕ್ಲಬ್ಬಿನ ಚರ್ಚೆಗೆಂದು ಕೆಲವೊಂದು ಪುಸ್ತಕ ಓದಬೇಕಾಗಿದೆ, ಪತ್ರಿಕೆಗೆ ಬರೆಯಬೇಕೆಂದು ಯಾವುದೋ ಪುಸ್ತಕವನ್ನೂ ಓದಬೇಕಾಗಿದೆ, ಸ್ನೇಹಿತನ ಜತೆ ಸಂಭಾಶಿಸಲು ಇಷ್ಟವೋ ಇಲ್ಲವೋ ಯಾವುದೋ ಪೊಲಿಶ್ ಸಿನೆಮಾ ನೋಡಬೇಕಾಗಿದೆ. ಸಂಸಾರದ ಸ್ವಾಸ್ಥ್ಯಕ್ಕೆ ಇನ್ನೊಂದು ಸಿನೆಮಾ ನೋಡಬೇಕಾಗಿದೆ.

ಅನಿವಾರ್ಯವೆಂದು ಅನಿಸಿದ್ದರಿಂದ ಯಾವುದನ್ನೂ ಬಿಡದೇ ಮಾಡಲೇಬೇಕಾಗಿದೆ ಎಂಬ ಒಂದು ಒತ್ತಡವನ್ನು ನಮಗೆ ನಾವೇ ವಿಧಿಸಿಕೊಳ್ಳುತ್ತಿದ್ದೇವೆ. ಹಾಗಾಗಿ ಜೀವನ ಫಾಸ್ಟ್ ಫಾರ್ವರ್ಡ್ ಮೋಡಿನಲ್ಲಿದ್ದಂತೆ ಅಥವಾ ಹೈವೇಯಲ್ಲಿ ಒಂದು ಲೇನಿನಲ್ಲಿಯೇ ಹೋಗದ ಕಾರು ತನ್ನ ಪಕ್ಕದ ಕಾರುಗಳನ್ನು ದಾಟಲು ಲೇನಿನಿಂದ ಲೇನಿಗೆ ಹಾರುತ್ತಿದ್ದಂತೆ ಭಾಸವಾಗಿದೆ.

ಇದಕ್ಕೆ ಸಮಾಧಾನವೆಂದರೆ ದೀರ್ಘ ಓದು ಅಥವಾ ಮರು ಓದು. ಒಂದು ‘ಮರಳಿ ಮಣ್ಣಿಗೆ’ ಅಥವಾ ಒಂದು ‘ಮಲೆಗಳಲ್ಲಿ ಮದುಮಗಳು’ ಓದಿಗೆ ಎಂಥ ಡಿಕಂಡಿಷನಿಂಗ್ ಶಕ್ತಿಯಿದೆಯೆಂದರೆ ಓದು ಚಟವಲ್ಲ, ಅದು ಅನಿವಾರ್ಯವೂ ಅಲ್ಲ ಅದೊಂದು ಯಾವತ್ತೂ ಆನಂದಿಸಬಲ್ಲ ಅನುಭೂತಿ ಎನ್ನುವ ಭಾವವನ್ನು ಕೊಡುತ್ತದೆ. ಮತ್ತೆ ಮತ್ತೆ ಈ ಪುಸ್ತಕಗಳನ್ನು ಓದುವುದರಿಂದ ಓದು ಯಾವತ್ತೂ ಚಟವಲ್ಲ ಎಂದೆಸುತ್ತದೆ.

ಒಳ್ಲೆಯ ಬರವಣಿಗೆ ಎನ್ನುವುದರ ಒಳ್ಳೆಯತನವನ್ನು ಜತನದಿಂದ ಕಾಪಿಟ್ಟುಕೊಳ್ಳಬೇಕಾಗಿದೆ.